‘ನಮ್ಮ ಜನ ಸಾಯ್ತಿದ್ದಾರೆ’; ಮಿಸ್​ ಯೂನಿವರ್ಸ್​ ಸ್ಪರ್ಧೆಯಲ್ಲಿ ದೇಶಕ್ಕಾಗಿ ಧ್ವನಿ ಎತ್ತಿದ ಮ್ಯಾನ್ಮಾರ್​ ಸುಂದರಿ

Miss Universe 2021: ಮ್ಯಾನ್ಮಾರ್​ನಲ್ಲಿ ಮಿಲಿಟರಿಯು ಅಧಿಕಾರ ವಶ ಪಡಿಸಿಕೊಂಡಿದೆ. ಜನರನ್ನು ಬರ್ಬರವಾಗಿ ನಡೆಸಿಕೊಳ್ಳಲಾಗುತ್ತಿರುವ ಬಗ್ಗೆ ವರದಿ ಆಗುತ್ತಿದೆ. ಜನರಿಂದ ಆಯ್ಕೆಯಾದ ಆ್ಯಂಗ್​ ಸಾನ್​ ಸೂಕಿ ಅವರನ್ನು ಬಂಧಿಸಲಾಗಿದೆ. ಅದರ ವಿರುದ್ಧ ಅಲ್ಲಿನ ಅನೇಕ ಸೆಲೆಬ್ರಿಟಿಗಳು, ನಾಯಕರು ಧ್ವನಿ ಎತ್ತಿದ್ದಾರೆ.

‘ನಮ್ಮ ಜನ ಸಾಯ್ತಿದ್ದಾರೆ’; ಮಿಸ್​ ಯೂನಿವರ್ಸ್​ ಸ್ಪರ್ಧೆಯಲ್ಲಿ ದೇಶಕ್ಕಾಗಿ ಧ್ವನಿ ಎತ್ತಿದ ಮ್ಯಾನ್ಮಾರ್​ ಸುಂದರಿ
ಮಿಸ್ ಯೂನಿವರ್ಸ್ ವೇದಿಕೆಯಲ್ಲಿ ತುಜಾರ್ ವಿಂಟ್ ಲ್ವಿನ್

Updated on: May 17, 2021 | 1:50 PM

69ನೇ ಮಿಸ್​ ಯೂನಿವರ್ಸ್​ ಅಂತಿಮ ಸುತ್ತಿನ ಸ್ಪರ್ಧೆ ಮೇ 16ರಂದು ಫ್ಲೋರಿಡಾದಲ್ಲಿ ನೆರವೇರಿತು. ಮೆಕ್ಸಿಕೋದ ಸುಂದರಿ ಆ್ಯಂಡಿಯಾ ಮೆಜಾ ಅವರು ಮಿಸ್​ ಯೂನಿವರ್ಸ್​ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಸ್ಪರ್ಧೆಯಲ್ಲಿ ಮ್ಯಾನ್ಮಾರ್​ನ ತುಜಾರ್​ ವಿಂಟ್​ ಲ್ವಿನ್​ ಕೂಡ ಭಾಗವಹಿಸಿದ್ದರು. ಅಂತಿಮ ಸುತ್ತಿನ ಹಣಾಹಣಿಗೆ ಅವರು ಆಯ್ಕೆ ಆಗುವಲ್ಲಿ ವಿಫಲರಾದರು. ಹಾಗಿದ್ದರೂ ತಮ್ಮ ದೇಶದ ಪರವಾಗಿ ಧ್ವನಿ ಎತ್ತಿದ ಕಾರಣಕ್ಕಾಗಿ ಅವರು ಗಮನ ಸೆಳೆಯುತ್ತಿದ್ದಾರೆ. ಮ್ಯಾನ್ಮಾರ್​ನ ಸದ್ಯದ ದುಸ್ಥಿತಿ ಬಗ್ಗೆ ಮಾತನಾಡಿರುವ ಅವರು ‘ನಮ್ಮ ಜನ ಸಾಯ್ತಿದ್ದಾರೆ’ ಎಂದು ಹೇಳಿದ್ದಾರೆ.

ಮ್ಯಾನ್ಮಾರ್​ನಲ್ಲಿ ಮಿಲಿಟರಿಯು ಅಧಿಕಾರ ವಶ ಪಡಿಸಿಕೊಂಡಿದೆ. ಜನರನ್ನು ಬರ್ಬರವಾಗಿ ನಡೆಸಿಕೊಳ್ಳಲಾಗುತ್ತಿರುವ ಬಗ್ಗೆ ವರದಿ ಆಗುತ್ತಿದೆ. ಜನರಿಂದ ಆಯ್ಕೆಯಾದ ಆ್ಯಂಗ್​ ಸಾನ್​ ಸೂಕಿ ಅವರನ್ನು ಬಂಧಿಸಲಾಗಿದೆ. ಅದರ ವಿರುದ್ಧ ಅಲ್ಲಿನ ಅನೇಕ ಸೆಲೆಬ್ರಿಟಿಗಳು, ನಾಯಕರು ಧ್ವನಿ ಎತ್ತಿದ್ದಾರೆ. ಅದೇ ರೀತಿ, ತುಜಾರ್​ ವಿಂಟ್​ ಲ್ವಿನ್​ ಕೂಡ ಮಿಸ್​ ಯೂನಿವರ್ಸ್​ ವೇದಿಕೆಯನ್ನು ಬಳಸಿಕೊಂಡು ವಿಶ್ವದ ಗಮನವನ್ನು ಮ್ಯಾನ್ಮಾರ್​ನತ್ತ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

‘ನಮ್ಮ ಜನರು ಸಾಯುತ್ತಿದ್ದಾರೆ. ಮಿಲಿಟರಿಯವರ ಗುಂಡಿಗೆ ಬಲಿಯಾಗುತ್ತಿದ್ದಾರೆ. ಮ್ಯಾನ್ಮಾರ್​ ಬಗ್ಗೆ ಎಲ್ಲರೂ ಮಾತನಾಡಬೇಕು ಎಂದು ನಾನು ಒತ್ತಾಯ ಮಾಡುತ್ತೇನೆ. ಮಿಲಿಟರಿ ಆಡಳಿತ ಶುರು ಆದಾಗಿನಿಂದ ನಾನು ಈ ಬಗ್ಗೆ ನನ್ನಿಂದ ಸಾಧ್ಯವಾದಷ್ಟು ಮಾತನಾಡುತ್ತಿದ್ದೇನೆ’ ಎಂದು ತುಜಾರ್​ ವಿಂಟ್​ ಲ್ವಿನ್ ಅವರು ಹೇಳಿದ್ದಾರೆ. ಅಲ್ಲಿನ ಅನೇಕ ಸೆಲೆಬ್ರಿಟಿಗಳು, ಸೋಶಿಯಲ್​ ಮೀಡಿಯಾದಲ್ಲಿನ ಖ್ಯಾತ ವ್ಯಕ್ತಿಗಳು, ಕ್ರೀಡಾಕ್ಷೇತ್ರದ ಪ್ರಮುಖಕರು ಸಹ ಈ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ.

ಮ್ಯಾನ್ಮಾರ್​ನಲ್ಲಿ ಅಧಿಕಾರವನ್ನು ಮಿಲಿಟರಿಯವರು ವಶಪಡಿಸಿಕೊಂಡಾಗಿನಿಂದ 790ಕ್ಕೂ ಅಧಿಕ ಜನರನ್ನು ಕೊಲ್ಲಲಾಗಿದೆ ಎಂದು ವರದಿ ಆಗಿದೆ. ಅಂದಾಜು 5 ಸಾವಿರ ಜನರನ್ನು ಬಂಧಿಸಲಾಯಿತು. ಕೆಲವು ಸೆಲೆಬ್ರಿಟಿಗಳೂ ಸೇರಿ 4 ಸಾವಿರ ಜನ ಇನ್ನೂ ಮಿಲಿಟರಿಯವರ ವಶದಲ್ಲಿದ್ದಾರೆ. ಈ ಬಗ್ಗೆ ತುಜಾರ್​ ವಿಂಟ್​ ಲ್ವಿನ್ ಮಿಸ್​ ಯೂನಿವರ್ಸ್​ ವೇದಿಕೆಯಲ್ಲಿ ಮಾತನಾಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಚರ್ಚೆ ಆಗುವಂತೆ  ಮಾಡಿದ್ದಾರೆ.

ಮಿಸ್​ ಯೂನಿವರ್ಸ್​ಗೆ ಮ್ಯಾನ್ಮಾರ್​ನಿಂದ ಸ್ಪರ್ಧಿಸಿದ್ದ ತುಜಾರ್​ ವಿಂಟ್​ ಲ್ವಿನ್ ಅವರು ಕೊನೇ ಸುತ್ತಿಗೆ ಆಯ್ಕೆಯಾಗಲಿಲ್ಲ. ಆದರೆ ಬೆಸ್ಟ್​ ನ್ಯಾಷನಲ್​ ಕಾಸ್ಟ್ಯೂಮ್​ ವಿಭಾಗದಲ್ಲಿ ಅವರು ಕಿರೀಟ ಪಡೆದುಕೊಂಡರು. ತಮ್ಮ ದೇಶದ ಕಸ್ಟ್ಯೂಮ್​ ಧರಿಸಿ ರ‍್ಯಾಂಪ್​ ವಾಕ್​ ಮಾಡುವಾಗ ‘ಮ್ಯಾನ್ಮಾರ್​ಗಾಗಿ ಪ್ರಾರ್ಥಿಸಿ’ ಎಂದು ಫಲಕವನ್ನು ಅವರು ಹಿಡಿದಿದ್ದರು.

ಮಿಸ್​ ಯೂನಿವರ್ಸ್​ 2021 ಸ್ಪರ್ಧೆಯಲ್ಲಿ ಬ್ರೆಜಿಲ್​ನ ಜೂಲಿಯಾ ಗಾಮಾ ಅವರು ಮೊದಲ ರನ್ನರ್​ ಅಪ್​ ಆಗಿ ಹೊರಹೊಮ್ಮಿದರು. ಪೆರುವಿನ ಜೆನಿಕ್​ ಮಸೆಟಾ ಅವರು ಎರಡನೇ ರನ್ನರ್​ ಅಪ್​ ಸ್ಥಾನ ಪಡೆದುಕೊಂಡರು. ಭಾರತದಿಂದ ಸ್ಪರ್ಧಿಸಿದ್ದ ಅಡ್ಲಿನ್​ ಕಾಸ್ಟಿಲಿನೋ ಮೂರನೇ ರನ್ನರ್​ ಅಪ್​ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಇದನ್ನೂ ಓದಿ:

Miss Universe 2021 Winner: ಕೊವಿಡ್​ ಸಂಬಂಧಿತ ಪ್ರಶ್ನೆಗೆ ಉತ್ತರಿಸಿ ಮಿಸ್​ ಯೂನಿವರ್ಸ್​ ಕಿರೀಟ ಮುಡಿಗೇರಿಸಿಕೊಂಡ ಆ್ಯಂಡ್ರಿಯಾ ಮೆಜಾ

Manya Singh ಉತ್ತರ ಪ್ರದೇಶದ ಆಟೋ ಚಾಲಕನ ಪುತ್ರಿಗೆ Miss India 2020 ರನ್ನರ್​ ಅಪ್ ‘ಮಾನ್ಯ’ತೆ!

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us