”ಪವನ್ ಕಲ್ಯಾಣ್ ಡ್ರಗ್ಸ್ ತೆಗೆದುಕೊಳ್ಳುತ್ತಾನೆ, ಆತನೊಬ್ಬ ರಾಜಕೀಯ ವ್ಯಭಿಚಾರಿ”

|

Updated on: Jun 21, 2023 | 10:03 PM

Pawan Kalyan: ನಟ, ರಾಜಕಾರಣಿ ಪವನ್ ಕಲ್ಯಾಣ್ ಮಾದಕ ವಸ್ತುಗಳನ್ನು ಸೇವಿಸುತ್ತಾರೆ ಎಂದು ಕಾಕಿನಾಡ ಶಾಸಕ ಆರೋಪಿಸಿದ್ದಾರೆ.

ಪವನ್ ಕಲ್ಯಾಣ್ ಡ್ರಗ್ಸ್ ತೆಗೆದುಕೊಳ್ಳುತ್ತಾನೆ, ಆತನೊಬ್ಬ ರಾಜಕೀಯ ವ್ಯಭಿಚಾರಿ
ಪವನ್ ಕಲ್ಯಾಣ್
Follow us on

ಪವನ್ ಕಲ್ಯಾಣ್ (Pawan Kalyan) ತಮ್ಮ ವಾರಾಹಿ ಯಾತ್ರೆ ಮೂಲಕ ಆಂಧ್ರ ಪ್ರದೇಶ ಆಡಳಿತ ಪಕ್ಷದ ನಿದ್ದೆಗೆಡಿಸುವಲ್ಲಿ ಸಫಲರಾದಂತಿದೆ. ಆಂಧ್ರ ಪ್ರದೇಶದ ಪ್ರಮುಖ ವಿಪಕ್ಷವಾಗಿರುವ ಟಿಡಿಪಿ ಹಾಗೂ ಅದರ ನಾಯಕ ಚಂದ್ರಬಾಬು ನಾಯ್ಡು (Chandra Babu Naidu) ಅನ್ನು ಬಿಟ್ಟು ಆಡಳಿತ ಪಕ್ಷದವರೆಲ್ಲ ಪವನ್ ಕಲ್ಯಾಣ್ ಹಿಂದೆ ಬಿದ್ದಿದ್ದಾರೆ. ಪವನ್ ಕಲ್ಯಾಣ್ ವಿರುದ್ಧ ಒಬ್ಬರ ಹಿಂದೊಬ್ಬರಂತೆ ಥರಹೇವಾರಿ ಹೇಳಿಕೆಗಳ ಸುರಿಮಳೆ ಸುರಿಸುತ್ತಿದ್ದಾರೆ. ಇದೀಗ ವೈಸಿಪಿ ಕಾಂಗ್ರೆಸ್ ಪಕ್ಷದ ಮುಖಂಡರೊಬ್ಬರು ಪವನ್ ಕಲ್ಯಾಣ್ ಮಾದಕ ವಸ್ತು ಸೇವಿಸುತ್ತಾರೆ ಎಂದಿದ್ದಾರೆ ಮಾತ್ರವಲ್ಲದೆ ಕೆಲವು ಸವಾಲುಗಳನ್ನು ಸಹ ಪವನ್​ಗೆ ಎಸೆದಿದ್ದಾರೆ.

‘ಪವನ್ ಕಲ್ಯಾಣ್ ಡ್ರಗ್ಸ್ ಸೇವಿಸುತ್ತಾರೆ ಎಂದು ಚಿತ್ರರಂಗದವರೇ ಹಲವರು ಹೇಳುತ್ತಾರೆ” ಎಂದಿದ್ದಾರೆ ಕಾಕಿನಾಡ ಶಾಸಕ ದ್ವಾರಂಪುಡಿ ಚಂದ್ರಶೇಖರ ರೆಡ್ಡಿ. ”ಪವನ್ ಕಲ್ಯಾಣ್​ಗೆ ರಾಜಕೀಯ ಗೊತ್ತಿಲ್ಲ ಆತನೊಬ್ಬ ಅವಕಾಶವಾದಿ. ಯಾರು ಹಣ, ಅಧಿಕಾರ ಕೊಡುತ್ತೀವೆನ್ನುತ್ತಾರೊ ಅವರ ಕಡೆ ವಾಲುತ್ತಾರೆ. ಪವನ್ ಕಲ್ಯಾಣ್ ಒಬ್ಬ ರಾಜಕೀಯ ವ್ಯಭಿಚಾರಿ” ಎಂದು ಕಟು ಟೀಕೆಗಳನ್ನು ದ್ವಾರಂಪುಡಿ ಚಂದ್ರಶೇಖರ ರೆಡ್ಡಿ ಮಾಡಿದ್ದಾರೆ.

”ನಿಜವಾಗಯೂ ಆತ ಪವರ್ ಸ್ಟಾರ್ ಆಗಿದ್ದರೆ, ಪವನ್ ಕಲ್ಯಾಣ್ ನನ್ನ ಎದುರು ಚುನಾವಣೆಗೆ ನಿಲ್ಲಲಿ ಇದು ನನ್ನ ಸವಾಲು, ಆತನನ್ನು ಚುನಾವಣೆಯಲ್ಲಿ ಹೀನಾಯವಾಗಿ ಸೋಲಿಸದಿದ್ದರೆ ನಾನು ರಾಜಕೀಯ ಬಿಟ್ಟು ಹೊರಟು ಹೋಗುತ್ತೇನೆ. ಸೋತರೆ ಪವನ್ ಕಲ್ಯಾಣ್ ರಾಜಕೀಯದಿಂದ ಹಿಂದೆ ಸರಿಯುತ್ತಾನಾ” ಎಂದು ಸವಾಲು ಎಸೆದಿದ್ದಾರೆ ಚಂದ್ರಶೇಖರ ರೆಡ್ಡಿ. ”ನನ್ನವರು ಈಗಲೂ ನನ್ನ ಜೊತೆಗೇ ಇದ್ದಾರೆ. ಆದರೆ ಪವನ್ ಕಲ್ಯಾಣ್ ಅನ್ನು ನಂಬಿ ಜನಸೇನಾ ಪಕ್ಷ ಸ್ಥಾಪಿಸಿದವರು ಯಾರೂ ಈಗ ಪವನ್ ಕಲ್ಯಾಣ್ ಜೊತೆಗಿಲ್ಲ” ಎಂದು ರೆಡ್ಡಿ ಹೇಳಿದ್ದಾರೆ.

ಇದನ್ನೂ ಓದಿ:ಸುಮಲತಾ ಅಂಬರೀಶ್ ನೋಡಿ ಕಲಿ: ಪವನ್ ಕಲ್ಯಾಣ್​ ವಿರುದ್ಧ ಕೊಡಲಿ ನಾನಿ ಬೆಂಕಿ

”ನನಗೆ ಸಿಎಂ ಆಗುವ ಆಸೆಯಿಲ್ಲ ಎಂದು ಕೆಲವು ದಿನಗಳ ಹಿಂದೆಯಷ್ಟೆ ಪವನ್ ಕಲ್ಯಾಣ್ ಹೇಳಿದ್ದರು, ಈಗ ನೋಡಿದರೆ ನಾನು ಸಿಎಂ ಆಗುತ್ತೀನಿ ಎನ್ನುತ್ತಿದ್ದಾರೆ. ಪ್ಯಾಕೇಜ್, ಸೀಟು ಅಡ್ಜಸ್ಟ್​ಮೆಂಟ್​ಗಾಗಿ ಪವನ್ ಕಲ್ಯಾಣ್ ರಾಜಕೀಯ ಮಾಡುತ್ತಿದ್ದಾರೆ. ಆತನೊಬ್ಬ ಪ್ಯಾಕೇಜ್ ಸ್ಟಾರ್ ಎಂಬುದು ಆಂಧ್ರ ಪ್ರದೇಶದ ಜನರಿಗೆ ಗೊತ್ತು. 15 ಸಾವಿರ ಕೋಟಿ ಒಡೆಯ ಚಂದ್ರಬಾಬು ನಾಯ್ಡು ಪವನ್ ಕಲ್ಯಾಣ್ ಅನ್ನು ಕೊಂಡುಕೊಂಡಿದ್ದಾನೆ. ಪವನ್ ಹಾಗೂ ಚಂದ್ರಬಾಬು ನಾಯ್ಡು ಈ ಚುನಾವಣೆಯಲ್ಲಿ ಸೋತರಷ್ಟೆ ಎಲ್ಲ ಜಾತಿಯವರು ಒಟ್ಟಿಗೆ ನೆಮ್ಮದಿಯಿಂದ ಇರಲು ಸಾಧ್ಯ” ಎಂದಿದ್ದಾರೆ.

”ನಾನು ಎರಡು ಬಾರಿ ಗೆದ್ದು ಶಾಸಕನಾಗಿದ್ದೇನೆ, ಎರಡು ಕ್ಷೇತ್ರಗಳಲ್ಲಿ ಸೋತಿರುವ ವ್ಯಕ್ತಿಯಿಂದ ನಾನು ಪಾಠ ಕಲಿಯಬೇಕಿಲ್ಲ. ನನ್ನ ಮೇಲೆ ಮಾಡಿರುವ ಆರೋಪಗಳನ್ನು ಪವನ್ ಕಲ್ಯಾಣ್ ಸಾಬೀತುಪಡಿಸಲಿ. ಪವನ್ ಹೇಳಿದಂತೆ ನಾನು ರೌಡಿ ಆಗಿದ್ದರೆ ಜನಗಳು ನನ್ನನ್ನು ಏಕೆ ಗೆಲ್ಲಿಸುತ್ತಿದ್ದಾರೆ. ಜನ ಏಕೆ ನನಗೆ ಓಟು ಹಾಕುತ್ತಿದ್ದಾರೆ. ತಾಕತ್ತಿದ್ದರೆ ನನ್ನ ವಿರುದ್ಧ ಚುನಾವಣೆಗೆ ನಿಲ್ಲಿಸಿ ಸೋಲಿಸು” ಎಂದು ಸವಾಲು ಹಾಕಿದ್ದಾರೆ ರೆಡ್ಡಿ.

ಜನಸೇನಾ ಪಕ್ಷದ ಸ್ಥಾಪಕ ಪವನ್ ಕಲ್ಯಾಣ್ ಆಂಧ್ರ ಪ್ರದೇಶ ಚುನಾವಣೆಗೆ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಎಲ್ಲ ಕ್ಷೇತ್ರಗಳಿಂದಲೂ ತಮ್ಮ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಾಗಿ ಹೇಳಿರುವ ಪವನ್ ಕಲ್ಯಾಣ್, ಚುನಾವಣೆಗಾಗಿ ವಾರಾಹಿ ಯಾತ್ರೆಯನ್ನು ಶುರು ಮಾಡಿದ್ದಾರೆ. ಯಾತ್ರೆಗೆ ಭರಪೂರ ಜನಬೆಂಬಲ ವ್ಯಕ್ತವಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 9:56 pm, Wed, 21 June 23