ವರದಿಗಾರನ ಮೇಲೆ ಹಲ್ಲೆ: ಟಿವಿ9ಗೆ ಕ್ಷಮೆ ಕೇಳಿದ ನಟ ಮೋಹನ್ ಬಾಬು
Mohan Babu: ವರದಿಗೆಂದು ತೆರಳಿದ್ದ ಟಿವಿ9 ವರದಿಗಾರನ ಮೇಲೆ ಹಲ್ಲೆ ನಡೆಸಿದ್ದ ತೆಲುಗು ಚಿತ್ರರಂಗದ ಹಿರಿಯ ನಟ ಮೋಹನ್ ಬಾಬು ಇದೀಗ ಕ್ಷಮೆ ಕೇಳಿದ್ದಾರೆ. ನನ್ನ ಕೃತ್ಯದಿಂದ ಪತ್ರಕರ್ತರೊಬ್ಬರು ಗಾಯಗೊಂಡಿರುವುದು ತುಂಬಾ ಬೇಸರದ ಸಂಗತಿ. ನಾನು ಅವರ ಕುಟುಂಬ ಮತ್ತು ಟಿವಿ9 ಕುಟುಂಬಕ್ಕೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ’ ಎಂದಿದ್ದಾರೆ.

ತೆಲುಗು ಚಿತ್ರರಂಗದ ಹಿರಿಯ ನಟ, ರಾಜಕಾರಣಿಯೂ ಆಗಿರುವ ಮೋಹನ್ ಬಾಬು, ಇತ್ತೀಚೆಗೆ ವರದಿಗೆಂದು ತೆರಳಿದ್ದ ಟಿವಿ9 ವರದಿಗಾರನ ಮೇಲೆ ಹಲ್ಲೆ ಮಾಡಿದ್ದರು. ಮೋಹನ್ ಬಾಬು ಈ ಅವರ ರೌಡಿ ವರ್ತನೆಗೆ ತೀವ್ರ ಟೀಕೆ ವ್ಯಕ್ತವಾಗಿದ್ದು, ಪ್ರತಿಭಟನೆಗಳು ಸಹ ನಡೆದಿದ್ದವು. ಇದೀಗ ಮೋಹನ್ ಬಾಬು ಅವರು ಟಿವಿ9ಗೆ ಕ್ಷಮೆ ಕೇಳಿದ್ದಾರೆ. “ನನ್ನ ಕುಟುಂಬಕ್ಕೆ ಸಂಬಂಧಿಸಿದ ಘಟನೆ ಇಷ್ಟು ದೊಡ್ಡ ವಿಷಯವಾಗಿ ಟಿವಿ9 ಮತ್ತು ಪತ್ರಕರ್ತರನ್ನು ಸಂಕಷ್ಟಕ್ಕೆ ದೂಡಿದ್ದಕ್ಕೆ ನನಗೆ ವಿಷಾದವಿದೆ. ಘಟನೆಯ ನಂತರ 48 ಗಂಟೆಗಳ ಕಾಲ ಆಸ್ಪತ್ರೆಯಲ್ಲಿದ್ದ ಕಾರಣ ನಾನು ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ. ಅಂದು ನಡೆದ ಘಟನೆಯಲ್ಲಿ ಪತ್ರಕರ್ತರೊಬ್ಬರು ಗಾಯಗೊಂಡಿರುವುದು ತುಂಬಾ ಬೇಸರದ ಸಂಗತಿ. ನಾನು ಅವರ ಕುಟುಂಬ ಮತ್ತು ಟಿವಿ9 ಕುಟುಂಬಕ್ಕೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಮೋಹನ್ ಬಾಬು ಅವರ ಕುಟುಂಬದಲ್ಲಿ ವಿವಾದಗಳು ಭುಗಿಲೆದ್ದಿದ್ದು, ಅವರ ಕಿರಿಯ ಪುತ್ರ ಮಂಚು ಮನೋಜ್ ಹಾಗೂ ಮೋಹನ್ ಬಾಬು ನಡುವೆ ಆಸ್ತಿಗೆ ಸಂಬಂಧಿಸಿದಂತೆ ವಿವಾದಗಳು ನಡೆಯುತ್ತಿವೆ. ಮೋಹನ್ ಬಾಬು ಮನೆಯಲ್ಲಿ ಕೆಲ ಸಮಯದಿಂದ ವಾಸವಿದ್ದ ಮಂಚು ಮನೋಜ್ ಮೇಲೆ, ಮೋಹನ್ ಬಾಬು ಮ್ಯಾನೇಜರ್ ಹಾಗೂ ಇನ್ನೂ ಕೆಲವರು ಹಲ್ಲೆ ಮಾಡಿದ್ದರು. ಇದರ ಬಗ್ಗೆ ಮಂಚು ಮನೋಜ್ ದೂರು ನೀಡಿದ್ದರು. ಮೋಹನ್ ಬಾಬು ಸಹ ತಮ್ಮ ಪುತ್ರ ಮಂಚು ಮನೋಜ್ ಹಾಗೂ ಅವರ ಪತ್ನಿಯ ವಿರುದ್ಧ ದೂರು ದಾಖಲಿಸಿದ್ದರು.
ಸೋಮವಾರ ರಾತ್ರಿ, ಮಂಚು ಮನೋಜ್, ಮೋಹನ್ ಬಾಬು ಅವರ ಮನೆಗೆ ಹೋಗಲು ಪ್ರಯತ್ನಿಸಿದಾಗ ಗೇಟ್ ಬಳಿ ಮೋಹನ್ ಬಾಬು ಅವರನ್ನು ತಡೆಯಲು ಯತ್ನಿಸಿದರು. ಆಗ ಮಂಚು ಮನೋಜ್ ಜೊತೆಗೆ ಕೆಲ ವರದಿಗಾರರು ಸಹ ಒಳಗೆ ಹೋಗಿ ಮೋಹನ್ ಬಾಬು ಅವರ ಪ್ರತಿಕ್ರಿಯೆ ಪಡೆಯಲು ಯತ್ನಿಸಿದರು. ಈ ವೇಳೆ ಮೋಹನ್ ಬಾಬು, ಟಿವಿ9 ವರದಿಗಾರನ ಮೇಲೆ ಮೈಕ್ನಿಂದ ಹಲ್ಲೆ ಮಾಡಿದ್ದರು. ವರದಿಗಾರನ ಕಿವಿಗೆ ಇದರಿಂದ ತೀವ್ರ ಗಾಯವಾಗಿ ರಕ್ತಸ್ರಾವವಾದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದನ್ನೂ ಓದಿ:ಅಪ್ಪನ ಮೇಲೆ ದೂರು ನೀಡಿದ ನಟ, ಈಗ ಅಣ್ಣನ ಮೇಲೂ ಆರೋಪ
ಘಟನೆ ಬಳಿಕ ತೆಲುಗು ಟಿವಿ ವರದಿಗಾರರು ಮೋಹನ್ ಬಾಬು ಮನೆ ಎದುರು ಪ್ರತಿಭಟನೆ ನಡೆಸಿ ಮೋಹನ್ ಬಾಬು ಅನ್ನು ಬಂಧಿಸಲು ಒತ್ತಾಯಿಸಿದ್ದರು. ಆ ಬಳಿಕ ಮೋಹನ್ ಬಾಬು ಅವರ ಮತ್ತೊಬ್ಬ ಪುತ್ರ, ನಟ, ತೆಲುಗು ಕಲಾವಿದರ ಸಂಘದ ಅಧ್ಯಕ್ಷ ಮಂಚು ವಿಷ್ಣು ಪತ್ರಿಕಾಗೋಷ್ಠಿ ನಡೆಸಿ ಎಲ್ಲ ವರದಿಗಾರರ ಕ್ಷಮೆ ಕೇಳಿದ್ದರು. ಇದೀಗ ಸ್ವತಃ ಮೋಹನ್ ಬಾಬು ಟ್ವೀಟ್ ಮಾಡುವ ಮೂಲಕ ಟಿವಿ9ಗೆ ಕ್ಷಮೆ ಕೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ