Vedha Review: ಉಪದೇಶ ಮಾಡೋದರ ಜೊತೆಗೆ ಹೆಣ್ಮಕ್ಕಳ ಕೈಗೆ ಆಯುಧ ನೀಡಿದ ‘ವೇದ’

|

Updated on: Dec 23, 2022 | 11:52 AM

Shivarajkumar | Vedha Movie Review: ‘ವೇದ’ ಸಿನಿಮಾದ ಮೇಕಿಂಗ್​ ಶೈಲಿ ಮಾಸ್​ ಆಗಿದೆ. ಆದರೂ ಕೂಡ ಫ್ಯಾಮಿಲಿ ಆಡಿಯನ್ಸ್​ಗೆ ಇಷ್ಟ ಆಗುವಂತಹ ಕಥಾವಸ್ತುವನ್ನು ಆಯ್ದುಕೊಳ್ಳಲಾಗಿದೆ.

Vedha Review: ಉಪದೇಶ ಮಾಡೋದರ ಜೊತೆಗೆ ಹೆಣ್ಮಕ್ಕಳ ಕೈಗೆ ಆಯುಧ ನೀಡಿದ ‘ವೇದ’
ಶಿವರಾಜ್​ಕುಮಾರ್​
Follow us on

ಸಿನಿಮಾ: ವೇದ

ನಿರ್ಮಾಣ: ಗೀತಾ ಶಿವರಾಜ್​ಕುಮಾರ್​, ಜೀ ಸ್ಟುಡಿಯೋಸ್​

ನಿರ್ದೇಶನ: ಎ. ಹರ್ಷ

ಇದನ್ನೂ ಓದಿ
Triple Riding Movie Review: ‘ತ್ರಿಬಲ್​ ರೈಡಿಂಗ್​’ ರೇಸ್​ನಲ್ಲಿ ಓವರ್​ಟೇಕ್​ ಮಾಡಿದ ಸಾಧುಕೋಕಿಲ, ರಂಗಾಯಣ ರಘು
Shubhamangala: ‘ಶುಭಮಂಗಳ’ ಸಿನಿಮಾ ವಿಮರ್ಶೆ; ಇದು ಆರು ಪ್ರೇಮಕಥೆಗಳ ಸುಂದರ ಸಂಕಲನ
Kantara Review: ಹಲವು ಸಂಘರ್ಷಗಳ ‘ಕಾಂತಾರ’; ರಿಷಬ್​ ಶೆಟ್ಟಿಯ ಹೊಸ ಅವತಾರ
Guru Shishyaru Review: ರೋಚಕ ಖೊಖೊ ಪಂದ್ಯದ ಜೊತೆ ಹಿತ-ಮಿತವಾದ ಕಾಮಿಡಿ

ಪಾತ್ರವರ್ಗ: ಶಿವರಾಜ್​ಕುಮಾರ್​, ಗಾನವಿ ಲಕ್ಷ್ಮಣ್​, ಉಮಾಶ್ರೀ, ಅದಿತಿ ಸಾಗರ್​, ರಘು ಶಿವಮೊಗ್ಗ ಮುಂತಾದವರು.

ಸ್ಟಾರ್​: 3/5

ನಿರ್ದೇಶಕ ಎ. ಹರ್ಷ ಮತ್ತು ಶಿವರಾಜ್​ಕುಮಾರ್​ ಅವರ ಕಾಂಬಿನೇಷನ್​ನಲ್ಲಿ ಮೂಡಿಬಂದ ಸಿನಿಮಾ ಎಂಬ ಕಾರಣಕ್ಕೆ ‘ವೇದ’ ಚಿತ್ರ ನಿರೀಕ್ಷೆ ಮೂಡಿಸಿತ್ತು. ಈ ಸಿನಿಮಾ ತುಂಬ ರಗಡ್​ ಆಗಿ ಮೂಡಿಬಂದಿದೆ ಎಂಬುದಕ್ಕೆ ಟ್ರೇಲರ್​ನಲ್ಲೇ ಸುಳಿವು ಸಿಕ್ಕಿತ್ತು. ಇಂದು (ಡಿ.23) ಅದ್ದೂರಿಯಾಗಿ ಈ ಚಿತ್ರ ರಿಲೀಸ್​ ಆಗಿದೆ. ನಿರೀಕ್ಷೆಯಂತೆಯೇ ತುಂಬ ಮಾಸ್​ ಆಗಿ ‘ವೇದ’ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಎ. ಹರ್ಷ. ಮೇಕಿಂಗ್​ ಶೈಲಿ ಮಾಸ್​ ಆಗಿದ್ದರೂ ಕೂಡ ಫ್ಯಾಮಿಲಿ ಆಡಿಯನ್ಸ್​ಗೆ ಇಷ್ಟ ಆಗುವ ಕಥಾವಸ್ತುವನ್ನು ಆಯ್ದುಕೊಳ್ಳಲಾಗಿದೆ. ಒಟ್ಟಾರೆ ಸಿನಿಮಾ ಹೇಗಿದೆ? ಈ ಚಿತ್ರದ ಪ್ಲಸ್​ ಏನು? ಮೈನಸ್​ ಏನು? ಏನೆಲ್ಲ ವಿಶೇಷತೆಗಳಿವೆ ಎಂಬುದನ್ನು ತಿಳಿಯಲು ಈ ವಿಮರ್ಶೆ ಓದಿ..

‘ವೇದ’ ಚಿತ್ರದಲ್ಲಿ ಸೇಡಿನ ಕಥೆ:

ಕಥಾನಾಯಕನ ಹೆಸರು ವೇದ. ಆತನಿಗೊಂದು ಭಯಾನಕವಾದ ಫ್ಲ್ಯಾಶ್​ ಬ್ಯಾಕ್​. ತನ್ನ ಕುಟುಂಬಕ್ಕೆ ಅನ್ಯಾಯ ಮಾಡಿದ ದುಷ್ಟರ ವಿರುದ್ಧ ಆತ ಸೇಡು ತೀರಿಸಿಕೊಳ್ಳಲು ಹಲವು ವರ್ಷ ತಾಳ್ಮೆಯಿಂದ ಕಾಯುತ್ತಾನೆ. ಸೂಕ್ತ ಸಮಯ ಬಂದಾಗ ಸಿಡಿದೇಳುತ್ತಾನೆ. ಇದು ಈ ಸಿನಿಮಾದ ಒನ್​ ಲೈನ್​ ಕಥೆ. ಇಷ್ಟೇ ಆಗಿದ್ದರೆ ಇದು ಹತ್ತರಲ್ಲಿ ಹನ್ನೊಂದನೆಯ ಚಿತ್ರವಾಗುತ್ತಿತ್ತು. ಆದರೆ ಇಲ್ಲಿ ಕಥಾನಾಯಕನಿಗೆ ಆತನ ಮಗಳು ಕೂಡ ಸಾಥ್​ ನೀಡುತ್ತಾಳೆ. ಅವಳೂ ಕತ್ತಿ ಹಿಡಿದು ದುಷ್ಟರ ಸಂಹಾರ ಮಾಡುತ್ತಾಳೆ. ಆ ಕಾರಣದಿಂದ ‘ವೇದ’ ಸಿನಿಮಾ ಕೊಂಚ ಡಿಫರೆಂಟ್​ ಎನಿಸಿಕೊಂಡಿದೆ.

ಶಿವರಾಜ್​ಕುಮಾರ್​-ಅದಿತಿ ಸಾಗರ್​ ಕಾಂಬಿನೇಷನ್​:

ಇಡೀ ಸಿನಿಮಾದಲ್ಲಿ ಶಿವರಾಜ್​ಕುಮಾರ್​ ಮತ್ತು ಅದಿತಿ ಸಾಗರ್ ಅವರ ಕಾಂಬಿನೇಷನ್​ ಹೈಲೈಟ್​ ಆಗಿದೆ. ಅಪ್ಪ-ಮಗಳ ಪಾತ್ರದಲ್ಲಿ ಅವರಿಬ್ಬರು ನಟಿಸಿದ್ದಾರೆ. ಕೆಲವು ದೃಶ್ಯಗಳಲ್ಲಿ ಶಿವರಾಜ್​ಕುಮಾರ್​ ಅವರಿಗಿಂತಲೂ ಜೋರಾಗಿ ಅದಿತಿ ಅಬ್ಬರಿಸುತ್ತಾರೆ. ಅಷ್ಟರಮಟ್ಟಿಗೆ ಮಗಳ ಪಾತ್ರಕ್ಕೆ ನಿರ್ದೇಶಕರು ಪ್ರಾಮುಖ್ಯತೆ ನೀಡಿದ್ದಾರೆ.

ಅಚ್ಚರಿ ಮೂಡಿಸುವ ಗಾನವಿ ಲಕ್ಷ್ಮಣ್​:

ನಟಿ ಗಾನವಿ ಲಕ್ಷ್ಮಣ್​ ಅವರು ‘ವೇದ’ ಸಿನಿಮಾದಲ್ಲಿ ಶಿವರಾಜ್​ಕುಮಾರ್​ಗೆ ಜೋಡಿಯಾಗಿ ನಟಿಸಿದ್ದಾರೆ. ಹಾಗೆಂದ ಮಾತ್ರಕ್ಕೆ ಇದು ಕೇವಲ ಮರ ಸುತ್ತುವಂತಹ ಪಾತ್ರವಲ್ಲ. ಎರಡು ಶೇಡ್​ ಇರುವಂತಹ ಪಾತ್ರವನ್ನು ಅವರು ನಿಭಾಯಿಸಿದ್ದಾರೆ. ಒಂದು ದೃಶ್ಯದಲ್ಲಿ ತುಂಬ ಸಾಫ್ಟ್​ ಆಗಿ ಕಾಣುವ ಅವರು ಮರು ಕ್ಷಣವೇ ಚಂಡಿ ಚಾಮುಂಡಿಯಂತೆ ಅಬ್ಬರಿಸುವ ಮಹಿಳೆಯಾಗಿ ನಟಿಸಿದ್ದಾರೆ. ಅವರ ನಟನೆಗೆ ಹೆಚ್ಚು ಅವಕಾಶ ಸಿಕ್ಕಿದೆ.

ಇದನ್ನೂ ಓದಿ: Vedha: ‘ವೇದ’ ಕುರಿತು ಇಂಚಿಂಚೂ ಮಾಹಿತಿ ಹಂಚಿಕೊಂಡ ಶಿವಣ್ಣ; ಇಲ್ಲಿದೆ ಟಿವಿ9 ಸ್ಪೆಷಲ್​ ಸಂದರ್ಶನ

ಮಹಿಳಾ ಪಾತ್ರಗಳಿಗೆ ಮಹತ್ವ ನೀಡಿದ ‘ವೇದ’:

ಹೆಣ್ಣು ಮಕ್ಕಳ ವಿರುದ್ಧ ಆದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳುವ ಕಥೆ ‘ವೇದ’ ಚಿತ್ರದಲ್ಲಿದೆ. ಅನ್ಯಾಯ ಆದ ಕ್ಷಣವೇ ಮಹಿಳೆಯರು ಸಿಡಿದು ನಿಲ್ಲಬೇಕು ಎಂಬ ಸಂದೇಶ ಈ ಚಿತ್ರದಲ್ಲಿದೆ. ಹಾಗಂತ ಅದನ್ನು ಕೇವಲ ಹೀರೋ ಬಾಯಲ್ಲಿ ಉಪದೇಶ ಹೇಳಿಸಿ ನಿರ್ದೇಶಕರು ಸುಮ್ಮನಾಗಿಲ್ಲ. ಸೂಕ್ತ ಸನ್ನಿವೇಶಗಳಲ್ಲಿ ಮಹಿಳಾ ಪಾತ್ರಗಳು ಕೂಡ ಆಯುಧವನ್ನು ಕೈಗೆತ್ತಿಕೊಳ್ಳುವಂತಹ ದೃಶ್ಯಗಳು ಈ ಚಿತ್ರದಲ್ಲಿವೆ. ಅಂಥ ಸನ್ನಿವೇಶಗಳಲ್ಲೆಲ್ಲ ಶಿವರಾಜ್​ಕುಮಾರ್​ ಅವರ ಹೀರೋಯಿಸಂ ಹಿನ್ನೆಲೆಗೆ ಸರಿದು, ಮಹಿಳೆಯರ ಪಾತ್ರಗಳು ಮುನ್ನೆಲೆಗೆ ಬಂದಿವೆ. ಅಷ್ಟರಮಟ್ಟಿಗೆ ಶಿವರಾಜ್​ಕುಮಾರ್​ ಅವರು ಕಥೆಗೆ ಶರಣಾಗಿದ್ದಾರೆ.

ಮಿಂಚಿದ ಗಾನವಿ, ಅದಿತಿ, ಶ್ವೇತಾ ಚೆಂಗಪ್ಪ:

ನಟಿ ಅದಿತಿ ಸಾಗರ್​ ಅವರು ಕಥಾನಾಯಕನ ಮಗಳ ಪಾತ್ರದಲ್ಲಿ ಸಖತ್​ ಸ್ಕೋರ್​ ಮಾಡಿದ್ದಾರೆ. ಹೆಚ್ಚಿನ ಡೈಲಾಗ್​ ಇಲ್ಲದಿದ್ದರೂ ಆ್ಯಕ್ಷನ್​ ಮತ್ತು ಅಭಿನಯದ ಮೂಲಕ ಅವರು ಗಮನ ಸೆಳೆದಿದ್ದಾರೆ. ತಲಾ ಒಂದು ದೃಶ್ಯದಲ್ಲಿ ಗಾನವಿ ಲಕ್ಷ್ಮಣ್​ ಮತ್ತು ಶ್ವೇತಾ ಚಂಗಪ್ಪ ಕೂಡ ಫೈಟಿಂಗ್​ ಮಾಡುವ ಮೂಲಕ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದ್ದಾರೆ. ಒಂದಷ್ಟು ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಉಮಾಶ್ರೀ ಅವರು ನಗಿಸುವ ಪ್ರಯತ್ನ ಮಾಡಿದ್ದಾರೆ. ಕಥೆಗೆ ಟ್ವಿಸ್ಟ್​ ನೀಡುವಂತಹ ಪಾತ್ರದಲ್ಲಿ ರಘು ಶಿವಮೊಗ್ಗ ನಟಿಸಿದ್ದಾರೆ.

ಇದನ್ನೂ ಓದಿ: Vedha Twitter Review: ‘ಒಂದೊಳ್ಳೆಯ ಸಿನಿಮಾ’; ಶಿವರಾಜ್​ಕುಮಾರ್ ನಟನೆಯ ‘ವೇದ’ ಚಿತ್ರಕ್ಕೆ ಫ್ಯಾನ್ಸ್ ಮೆಚ್ಚುಗೆ

ಇನ್ನಷ್ಟು ಚುರುಕಾಗಬೇಕಿತ್ತು ಚಿತ್ರಕಥೆ:

ಮೊದಲೇ ಹೇಳಿದಂತೆ ಇದು ಮಾಮೂಲಿ ಸೇಡಿನ ಕಥೆ. ಅದನ್ನು ಎರಡು ಪ್ರಮುಖ ಕಾಲಘಟ್ಟದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಆರಂಭದಿಂದ ಪ್ರೀ-ಕ್ಲೈಮ್ಯಾಕ್ಸ್​ ತನಕವೂ ಹೀರೋ ಸೇಡು ತೀರಿಸಿಕೊಳ್ಳುತ್ತಲೇ ಸಾಗುತ್ತಾನೆ. ಆದ್ರೆ ಅವನ ಸೇಡಿಗೆ ಕಾರಣ ಏನು ಎಂಬ ಫ್ಲ್ಯಾಶ್​ ಬ್ಯಾಕ್​ ತೆರೆದುಕೊಳ್ಳುವುದು ಕೊನೆಯಲ್ಲಿ ಮಾತ್ರ. ಅಲ್ಲಿಯವರೆಗೂ ಯಾವುದೇ ಸುಳಿವು ಇಲ್ಲದೇ ಬರೀ ಹೊಡಿಬಡಿ ದೃಶ್ಯಗಳನ್ನು ನೋಡಬೇಕು ಪ್ರೇಕ್ಷಕ. ಆರಂಭದ ಹಲವು ದೃಶ್ಯಗಳು ಕಥಾನಾಯಕನ ಇಂಟ್ರಡಕ್ಷನ್​ಗೆ ಮೀಸಲು ಆದಂತಿವೆ. ಇಂಥ ಕಡೆಗಳಲ್ಲಿ ಸ್ವಲ್ಪ ಚುರುಕುತನದ ಅಗತ್ಯವಿತ್ತು ಎನಿಸುತ್ತದೆ.

ಡಿಫರೆಂಟ್​ ಮೇಕಿಂಗ್​ ಪ್ರಯತ್ನಿಸಿದ ಹರ್ಷ:

‘ವೇದ’ ಚಿತ್ರದ ಬಹುತೇಕ ದೃಶ್ಯಗಳನ್ನು ಡಾರ್ಕ್​ ಶೇಡ್​ನಲ್ಲಿ ಕಟ್ಟಿಕೊಡಲು ಹರ್ಷ ಪ್ರಯತ್ನಿಸಿದ್ದಾರೆ. ಅವರ ಕಾನ್ಸೆಪ್ಟ್​ಗೆ ಸ್ವಾಮಿ ಜೆ. ಗೌಡ ಛಾಯಾಗ್ರಹಣ ಪೂರಕವಾಗಿದೆ. 1965 ಮತ್ತು 1985ರ ಕಾಲಘಟ್ಟವನ್ನು ತೋರಿಸಲು ನಿರ್ದೇಶಕರು ಹಲವು ಸೆಟ್​ಗಳ ಮೊರೆ ಹೋಗಿದ್ದಾರೆ. ಕಲಾ ನಿರ್ದೇಶಕ ರವಿ ಸಂತೆಹಕ್ಲು ಅವರ ಕೆಲಸ ಎದ್ದು ಕಾಣಿಸಿದೆ. ಹಿನ್ನೆಲೆ ಸಂಗೀತದಲ್ಲಿ ಅರ್ಜುನ್​ ಜನ್ಯ ಅಬ್ಬರಿಸಿದ್ದಾರೆ.

​ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:47 am, Fri, 23 December 22