‘ನಾಗಿಣಿ 2’ ತ್ರಿಶೂಲ್ ಹಾಗೂ ಶಿವಾನಿ ಅದ್ದೂರಿ ಆರತಕ್ಷತೆ; ಅಭಿಮಾನಿಗಳಿಗೆ ಹಬ್ಬದೂಟ

| Updated By: ರಾಜೇಶ್ ದುಗ್ಗುಮನೆ

Updated on: Apr 22, 2021 | 4:11 PM

Naagini 2 Kannada Serial : ದಾವಣಗೆರೆಯಲ್ಲಿ ಒಂದು ಮದುವೆ ಛತ್ರದಲ್ಲಿ ಎಲ್ಲರನ್ನೂ ಆಹ್ವಾನಿಸಲಾಗಿತ್ತು. ಇಡೀ ‘ನಾಗಿಣಿ 2’ ತಂಡ ಅಲ್ಲಿ ಹಾಜರಾಗಿತ್ತು. ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಿತು.

‘ನಾಗಿಣಿ 2’ ತ್ರಿಶೂಲ್ ಹಾಗೂ ಶಿವಾನಿ ಅದ್ದೂರಿ ಆರತಕ್ಷತೆ; ಅಭಿಮಾನಿಗಳಿಗೆ ಹಬ್ಬದೂಟ
ನಾಗಿಣಿ-2 ಧಾರಾವಾಹಿಯ ತ್ರಿಶೂಲ್ ಹಾಗೂ ಶಿವಾನಿಗೆ ದಾವಣಗೆರೆಯಲ್ಲಿ ಮದುವೆ ಆರತಕ್ಷತೆ
Follow us on

ಕನ್ನಡ ಕಿರುತೆರೆ ಲೋಕ ಈಗ ದೊಡ್ಡ ಮಟ್ಟಕ್ಕೆ ಬೆಳೆದಿದೆ. ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತ ಜನರನ್ನು ಆಕರ್ಷಿಸಲಾಗುತ್ತಿದೆ. ಸಿನಿಮಾಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲಾಗುತ್ತಿದೆ. ಕನ್ನಡದ ಜನಪ್ರಿಯ ಮನರಂಜನಾ ವಾಹಿನಿ ಜೀ ಕನ್ನಡ ಕೂಡ ವಿಭಿನ್ನ ಪ್ರಯೋಗಗಳನ್ನು ಮಾಡುತ್ತಿದೆ. ಈ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ನಾಗಿಣಿ 2’ ಧಾರಾವಾಹಿ ತಂಡ ಅದ್ದೂರಿಯಾಗಿ ಒಂದು ಮದುವೆ ಆರತಕ್ಷತೆ ಕಾರ್ಯಕ್ರಮ ಮಾಡಿದೆ.

‘ನಾಗಿಣಿ 2’ ಧಾರಾವಾಹಿ ಪಾತ್ರಗಳಾದ ತ್ರಿಶೂಲ್​ ಮತ್ತು ಶಿವಾನಿಗೆ ಮದುವೆ ಆಗಿದೆ. ಜನರ ಸಮ್ಮುಖದಲ್ಲಿಯೇ ಈ ಮದುವೆಯ ಚಿತ್ರೀಕರಣ ಮಾಡಲಾಗಿದೆ. ದಾವಣಗೆರೆಯಲ್ಲಿ ನೂರಾರು ಅಭಿಮಾನಿಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಈ ಮೊದಲು ಮೈಸೂರಿನಲ್ಲಿ ಇದೇ ರೀತಿ ಆರತಕ್ಷತೆ ಕಾರ್ಯಕ್ರಮವನ್ನು ನೆರವೇರಿಸಲಾಗಿತ್ತು.

ಕನ್ನಡ ಕಿರುತೆರೆ ಇತಿಹಾಸದಲ್ಲಿಯೇ ಈ ರೀತಿ ಪ್ರಯೋಗ ಮಾಡಿರುವುದು ಇದೇ ಮೊದಲು ಎಂದು ವಾಹಿನಿ ಹೇಳಿಕೊಂಡಿದೆ. ದಾವಣಗೆರೆಯ ಜನರು ಇದರಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡರು. ತ್ರಿಶೂಲ್ ಮತ್ತು ಶಿವಾನಿ ಅವರೊಂದಿಗೆ ಸೆಲ್ಫೀಗಳನ್ನು ಕ್ಲಿಕ್ಕಿಸಿಕೊಂಡು ಖುಷಿಪಟ್ಟರು. ಈ ಸಮಾರಂಭದಲ್ಲಿ ಭಾಗವಹಿಸಬೇಕು ಎಂಬ ಆಸೆ ಅನೇಕರಿತ್ತು. ಸ್ಪರ್ಧೆಯೊಂದನ್ನು ಆಯೋಜಿಸಿ, ಅದರಲ್ಲಿ ಗೆದ್ದವರಿಗೆ ಆರತಕ್ಷತೆಯ ಆಹ್ವಾನ ನೀಡಲಾಯಿತು.

ದಾವಣಗೆರೆಯಲ್ಲಿ ಒಂದು ಮದುವೆ ಛತ್ರದಲ್ಲಿ ಎಲ್ಲರನ್ನೂ ಆಹ್ವಾನಿಸಲಾಗಿತ್ತು. ಇಡೀ ನಾಗಿಣಿ ತಂಡ ಅಲ್ಲಿ ಹಾಜರಾಗಿತ್ತು. ಈ ಸಂದರ್ಭದಲ್ಲಿ ಪ್ರೇಕ್ಷಕರು ಮತ್ತು ಕಲಾವಿದರ ಜೊತೆಗೆ ಸಂವಾದ ಕಾರ್ಯಕ್ರಮವನ್ನೂ ನಡೆಸಲಾಯಿತು. ಬೆಣ್ಣೆದೋಸೆ ನಗರಿಯ ಜನರು ಇದು ತಮ್ಮದೇ ಮನೆಯ ಸಮಾರಂಭ ಎಂಬಂತೆ ಖುಷಿಯಿಂದ ಇದರಲ್ಲಿ ಭಾಗವಹಿಸಿದರು. ಶ್ಯಾವಿಗೆ ಪಾಯಸದ ರುಚಿಕರವಾದ ಭೋಜನ ಸವಿದು ಎಲ್ಲರೂ ಸಂಭ್ರಮಿಸಿದರು.

ಧಾರಾವಾಹಿಯಲ್ಲಿ ಶಿವಾನಿ ಪಾತ್ರಕ್ಕೆ ನಮ್ರತಾ ಗೌಡ ಹಾಗೂ ತ್ರಿಶೂಲ್​ ಪಾತ್ರಕ್ಕೆ ನಿನಾದ್​ ಬಣ್ಣ ಹಚ್ಚಿದ್ದಾರೆ. ಕಳೆದ ಬಾರಿ ಮೈಸೂರಿನಲ್ಲಿ ಇದೇ ರೀತಿಯ ಕಾರ್ಯಕ್ರಮ ಮಾಡಿದಾಗ ಆ ಫೋಟೋಗಳು ವೈರಲ್​ ಆಗಿದ್ದವು. ಅದನ್ನು ನೋಡಿದ ಜನರು ಇದು ನಿಜವಾದ ಮದುವೆ ಎಂದೇ ಭಾವಿಸಿದ್ದರು. ನಮ್ರತಾ ಮತ್ತು ನಿನಾದ್​ಗೆ ಎಲ್ಲರೂ ಸೋಶಿಯಲ್​ ಮೀಡಿಯಾ ಮೂಲಕ ಅಭಿನಂದನೆ ಹೇಳಲು ಆರಂಭಿಸಿದ್ದರು. ನಂತರ ಒಂದು ವಿಡಿಯೋ ಮಾಡಿ ನಮ್ರತಾ ಮತ್ತು ನಿನಾದ್​ ಪ್ರತಿಕ್ರಿಯೆ ನೀಡಿದ್ದರು. ಇದು ಸೀರಿಯಲ್ ಮದುವೆಯೇ ಹೊರತು ನಿಜವಾದ ಮದುವೆ ಅಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದರು.

ಇದನ್ನೂ ಓದಿ: Naagini 2: ಮದುವೆ ಆದ್ರೂ ನಾವು ಗಂಡ-ಹೆಂಡತಿ ಅಲ್ಲ ಎಂದ ನಾಗಿಣಿ ನಟ-ನಟಿ! ಏನಿದರ ಅಸಲಿ ಕಥೆ?

ಸೀರಿಯಲ್​ ನೋಡಿ ದೇವ್ರೇ ಕಾಪಾಡಪ್ಪ ಎಂದ ಅನಿತಾ ಭಟ್​! ಅಂಥದ್ದೇನಿದೆ ಈ ದೃಶ್ಯದಲ್ಲಿ?