Navanakshatra Sanman 2021: ರಶ್ಮಿಕಾ ಮಂದಣ್ಣ ತನ್ನ ನಗುವಿಂದಲೇ ದೇಶದ ಜನರ ಮನಸು ಗೆದ್ದಿದ್ದಾರೆ; ರವಿಚಂದ್ರನ್ ಮೆಚ್ಚುಗೆ
Navanakshatra Sanman 2021: ಯಾವುದೇ ಸಾಧನೆ ಮಾಡಬೇಕಾದರೂ ಸಾಧನೆ ಮಾಡುವವರೇ ಶಿಲ್ಪಿ ಆಗಬೇಕು. ಆಗ ಮಾತ್ರ ಅವರು ಒಳ್ಳೆಯ ಶಿಲೆಯಾಗಲು ಸಾಧ್ಯ ಎಂದು ನಟ ರವಿಚಂದ್ರನ್ ಟಿವಿ-9 ವಾಹಿನಿಯ ನವನಕ್ಷತ್ರ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
![Navanakshatra Sanman 2021: ರಶ್ಮಿಕಾ ಮಂದಣ್ಣ ತನ್ನ ನಗುವಿಂದಲೇ ದೇಶದ ಜನರ ಮನಸು ಗೆದ್ದಿದ್ದಾರೆ; ರವಿಚಂದ್ರನ್ ಮೆಚ್ಚುಗೆ](https://images.tv9kannada.com/wp-content/uploads/2022/01/New-Project-2022-01-04T174112.348.jpg?w=1280)
ನ್ಯಾಷನಲ್ ಕ್ರಶ್ ಎಂದೇ ಕರೆಸಿಕೊಳ್ಳುವ ಕೊಡಗಿನ ಸುಂದರಿ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಟಿವಿ-9 ನವನಕ್ಷತ್ರ ಕಾರ್ಯಕ್ರಮದಲ್ಲಿ (Navanakshatra Sanman 2021) ಸನ್ಮಾನಿಸಲಾಯಿತು. ಕನ್ನಡದ ‘ಕಿರಿಕ್ ಪಾರ್ಟಿ’ ಸಿನಿಮಾದಿಂದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ತಮಿಳು, ತೆಲುಗು, ಬಾಲಿವುಡ್ ಸಿನಿಮಾ ರಂಗದಲ್ಲೂ ಗುರುತಿಸಿಕೊಂಡಿರುವ ಸಾಧಕಿ ರಶ್ಮಿಕಾ ಮಂದಣ್ಣ ಅವರಿಗೆ ಸನ್ಮಾನ ಮಾಡಿದ ಬಳಿಕ ಮಾತನಾಡಿದ ಕ್ರೇಜಿಸ್ಟಾರ್ ರವಿಚಂದ್ರನ್ (Ravichandran), ಯಾವುದೇ ಸಾಧನೆ ಮಾಡಬೇಕಾದರೂ ಸಾಧನೆ ಮಾಡುವವರೇ ಶಿಲ್ಪಿ ಆಗಬೇಕು. ಆಗ ಮಾತ್ರ ಅವರು ಒಳ್ಳೆಯ ಶಿಲೆಯಾಗಲು ಸಾಧ್ಯ ಎಂದು ಹೇಳಿದ್ದಾರೆ.
ಟಿವಿ-9ಗೆ 15 ವರ್ಷವಾಗಿದೆ. ನಮ್ಮ ಹುಟ್ಟುಹಬ್ಬವನ್ನು ಇನ್ನೊಂದಷ್ಟು ಜನ ಸಾಧಕರನ್ನು ಗುರುತಿಸಿ ಸೆಲಬ್ರೇಟ್ ಮಾಡುವುದು ದೊಡ್ಡ ಸಾರ್ಥಕತೆ. ಪ್ರತಿಭೆಗಳನ್ನು ಗುರುತಿಸಿ, ಬೆನ್ನು ತಟ್ಟಿ ಪ್ರೋತ್ಸಾಹಿಸಿ, ಅವರ ಸಾಧನೆಯನ್ನು ಗುರುತಿಸುವುದು ಬಹಳ ಮುಖ್ಯ. ಅದರಿಂದ ಅವರಿಗೆ ಉತ್ತೇಜನ ಸಿಗುತ್ತದೆ ಎಂದು ಕರ್ನಾಟಕದ 9 ಸಾಧಕರನ್ನು ಸನ್ಮಾನಿಸಿ, ಪ್ರಶಸ್ತಿ ನೀಡುವ ನವನಕ್ಷತ್ರ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಾವೆಲ್ಲ ಸಿನಿಮಾ ಮಾಡುತ್ತೇವೆ. ಅದನ್ನೂ ಜನ ನೋಡುತ್ತಾರೆ. ಆದರೆ, ಸಿನಿಮಾಗಿಂತ ಟಿವಿಗೆ ಮಹತ್ವ ಜಾಸ್ತಿ. ಟಿವಿ ಪ್ರತಿ ಮನೆಯಲ್ಲೂ ಇರುತ್ತದೆ, ಹಾಗಾಗಿ ಜನರು ದಿನವೂ ಟಿವಿ ನೋಡುತ್ತಾರೆ. ನೀವು ಮಾಡುವ ಎಷ್ಟೋ ನ್ಯೂಸ್ಗಳ ಮಧ್ಯೆ ಈ ದಿನ ಮಾಡಿರುವ ಕೆಲಸ ಬಹಳ ಮಹತ್ವದ್ದು. ಎಲೆಮರೆಯ, ಹೊಸ ಪ್ರತಿಭೆಗಳನ್ನು ಗುರುತಿಸಿದ್ದೀರ. ಅದೇ ಖುಷಿಯ ಸಂಗತಿ ಎಂದು ರವಿಚಂದ್ರನ್ ಹೇಳಿದ್ದಾರೆ.
![Navanakshatra Sanman 2021](https://images.tv9kannada.com/wp-content/uploads/2022/01/New-Project-2022-01-04T174611.474-1.jpg)
ಶಿವರಾಜ್ಕುಮಾರ್, ಸಿಎಂ ಬಸವರಾಜ ಬೊಮ್ಮಾಯಿ ಜೊತೆ ರವಿಚಂದ್ರನ್
ರಶ್ಮಿಕಾ ಮಂದಣ್ಣ ಎಂಬ ಈ ಹುಡುಗಿ ತನ್ನ ನಗುವಿನಿಂದಲೇ ಇಡೀ ದೇಶದ ಜನರ ಮನಸನ್ನು ಗೆದ್ದಿದ್ದಾಳೆ. ಆ ನಗುವಿನಲ್ಲೊಂದು ಪಾಸಿಟಿವ್ ಎನರ್ಜಿ ಇದೆ, ಧೈರ್ಯ, ಮುಗ್ಧತೆಯಿದೆ. ಯಾವುದೇ ಕೆಲಸವನ್ನು ಸಾಧಿಸಲು ಮನಸು ಮಾಡಿದರೆ ಸಾಧಿಸಿಯೇ ತೀರುತ್ತೇನೆ ಎಂಬ ದೃಢತೆಯಿದೆ. ಈ ನಗು ಯಾವಾಗಲೂ ಹೀಗೇ ಇರಲಿ. ಆ ನಗು ಇನ್ನಷ್ಟು ಜನರ ಮುಖದಲ್ಲಿ ನಗು ಮೂಡಿಸಲಿ ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಬಣ್ಣಿಸಿದ್ದಾರೆ.
![Navanakshatra Sanman 2021](https://images.tv9kannada.com/wp-content/uploads/2022/01/New-Project-2022-01-04T174927.668.jpg)
ಬಾಲಕನ ಜೊತೆ ರವಿಚಂದ್ರನ್ ಸೆಲ್ಫೀ
ರಶ್ಮಿಕಾ ಮಂದಣ್ಣ ಮೊದಲ ಸಿನಿಮಾ ‘ಕಿರಿಕ್ ಪಾರ್ಟಿ’ ಮಾಡಿದಾಗ ನನ್ನ ಮಗ ಬಂದು ‘ಅಪ್ಪಾ ಇವಳು ನಮ್ ಜಿಮ್ನಲ್ಲೇ ವರ್ಕೌಟ್ ಮಾಡೋದು’ ಎಂದು ಹೇಳಿದ. ಅವರಿಬ್ಬರೂ ಜಿಮ್ ಕಂಪ್ಯಾನಿಯನ್ಸ್ ಆಗಿದ್ದರು. ಅದಕ್ಕೆ ನಾನು ನನ್ನ ಮಗನಿಗೆ ಕಿಚಾಯಿಸುತ್ತಾ, ‘ಅಯ್ಯೋ ಬಿಟ್ಟು ಬಿಟ್ಯಲ್ಲೋ, ನಮ್ಮ ಈಶ್ವರಿ ಪ್ರೊಡಕ್ಷನ್ಸ್ನಿಂದಲೇ ಅವಳನ್ನು ಲಾಂಚ್ ಮಾಡಬಹುದಿತ್ತಲ್ಲ’ ಎಂದು ಹೇಳಿದ್ದೆ ಎಂದು ವೇದಿಕೆಯಲ್ಲಿ ರವಿಚಂದ್ರನ್ ಹೇಳಿದರು.
ಇದನ್ನೂ ಓದಿ: ಪುನೀತ್ ಒಂದು ಹೃದಯ, ಆತ ಎಲ್ಲರ ಹೃದಯದಲ್ಲೂ ಬೆರೆತು ಹೋಗಿದ್ದಾನೆ; ತಮ್ಮನನ್ನು ನೆನೆದು ಭಾವುಕರಾದ ನಟ ಶಿವರಾಜ್ಕುಮಾರ್