ಜೀ5, ಪಿಆರ್ಕೆ ಪ್ರೊಡಕ್ಷನ್ಸ್ ಸಹಯೋಗದ ವೆಬ್ ಸರಣಿಗೆ ‘ಮಾರಿಗಲ್ಲು’ ಶೀರ್ಷಿಕೆ
ಪಿಆರ್ಕೆ ಪ್ರೊಡಕ್ಷನ್ಸ್ ಮತ್ತು ಜೀ5 ಜೊತೆಯಾಗಿ ‘ಮಾರಿಗಲ್ಲು’ ಹೆಸರಿನಲ್ಲಿ ವೆಬ್ ಸರಣಿ ನಿರ್ಮಾಣ ಮಾಡುತ್ತಿವೆ. ಮಾರಿ ದೇವತೆಯಿಂದ ಕಾಯಲ್ಪಟ್ಟಿದ್ದ ಕದಂಬರ ನಿಧಿಯ ಕಳವು ಹಾಗೂ ಹುಡುಕಾಟದ ಸುತ್ತ ಈ ಕಥೆ ಸಾಗುತ್ತದೆ. ‘ಇದು ನಮ್ಮ ನೆಲದ ಸಂಸ್ಕೃತಿಯನ್ನು ಬಿಂಬಿಸುವ ಕಥೆ’ ಎಂದು ಅಶ್ವಿನಿ ಪುನೀತ್ ರಾಜ್ಕುಮಾರ್ ಹೇಳಿದ್ದಾರೆ.

ಇತ್ತೀಚೆಗಷ್ಟೇ ಜೀ5 (Zee5) ಒಟಿಟಿ ಹಾಗೂ ಪಿಆರ್ಕೆ ಪ್ರೊಡಕ್ಷನ್ಸ್ (PRK Productions) ಸಹಯೋಗದಲ್ಲಿ ಹೊಸ ವೆಬ್ ಸರಣಿ ಅನೌನ್ಸ್ ಆಗಿತ್ತು. ಆದರೆ ಶೀರ್ಷಿಕೆ ಏನೆಂಬುದು ಬಹಿರಂಗ ಆಗಿರಲಿಲ್ಲ. ಈಗ ಆ ಬಗ್ಗೆ ಅಧಿಕೃತವಾಗಿ ಸುದ್ದಿ ನೀಡಲಾಗಿದೆ. ‘ಮಾರಿಗಲ್ಲು’ (Marigallu) ಎಂದು ಈ ವೆಬ್ ಸರಣಿಗೆ ಹೆಸರು ಇಡಲಾಗಿದೆ. ಜೀ5 ಕಡೆಯಿಂದ ಶೀರ್ಷಿಕೆ ಪೋಸ್ಟರ್ ಬಿಡುಗಡೆ ಆಗಿದೆ. ಈ ವೆಬ್ ಸರಣಿಯಲ್ಲಿ ಕರ್ನಾಟಕ ಜಾನಪದವನ್ನು ಹೇಳುವ ಒಂದು ದೈವಿಕ ಥ್ರಿಲ್ಲರ್ ಕಹಾನಿ ಇರಲಿದೆ. ಈ ಕಥೆಯು ಸದೃಢ ಸಾಂಸ್ಕೃತಿಕ ಮತ್ತು ಐತಿಹಾಸಿಕ ಆಧಾರಗಳನ್ನು ಹೊಂದಿರುತ್ತದೆ ಎಂದು ತಂಡ ಮಾಹಿತಿ ನೀಡಿದೆ.
4ನೇ ಶತಮಾನದ ಕದಂಬರ ಆಳ್ವಿಕೆಯ ಕಥೆ ಇದರಲ್ಲಿ ಇರಲಿದೆ. ಕದಂಬರ ಪ್ರಥಮ ರಾಜನಾದ ಮಯೂರ ಶರ್ಮನ ಪರಂಪರೆಯನ್ನು ತಿಳಿಸುತ್ತದೆ. ಕದಂಬರ ಕಾಲದಿಂದಲ್ಲೂ ಮಾರಿ ಎಂಬ ದೇವತೆಯಿಂದ ಕಾಪಾಡಲ್ಪಟ್ಟಿರುವ ನಿಧಿಯ ಕುರಿತಾಗಿ ಕಥೆಯನ್ನು ಹೆಣೆಯಲಾಗಿದೆ. ನಂಬಿಕೆ, ಸ್ವಾರ್ಥ, ದುರಾಸೆ ಮುಂತಾದ ಭಾವನೆಗಳಿಗೆ ಒಳಗಾದ ಪಾತ್ರಗಳು ಈ ವೆಬ್ ಸರಣಿಯಲ್ಲಿ ಇರಲಿವೆ.
ನಿಧಿಯ ರಹಸ್ಯವನ್ನು ಹೇಗೆ ಭೇದಿಸುತ್ತಾರೆ ಎಂಬುದನ್ನು ‘ಮಾರಿಗಲ್ಲು’ ವೆಬ್ ಸರಣಿಯನ್ನು ನೋಡಿ ತಿಳಿಯಬೇಕಿದೆ. ಇಂತಹ ಕುತೂಹಲಕಾರಿ ಕಥೆಗಳನ್ನು ಪ್ರೇಕ್ಷಕರಿಗೆ ಒಟಿಟಿ ವೇದಿಕೆಗಳ ಮೂಲಕ ಜನರಿಗೆ ನೀಡಬೇಕು ಎಂಬುದು ಪುನೀತ್ ರಾಜ್ಕುಮಾರ್ ಅವರ ಕನಸಾಗಿತ್ತು. ಉತ್ತಮ ಗುಣಮಟ್ಟದ ಕಥೆಗಳನ್ನು ಜನರಿಗೆ ತಲುಪಿಸಬೇಕು ಎಂಬ ಅವರ ಆ ಕನಸಿಗೆ ‘ಮಾರಿಗಲ್ಲು’ ಮುನ್ನುಡಿ ಆಗುತ್ತಿದೆ.
‘ಮಾರಿಗಲ್ಲು’ ವೆಬ್ ಸಿರೀಸ್ ಬಗ್ಗೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಮಾತನಾಡಿದ್ದಾರೆ. ‘ನಮ್ಮ ನೆಲದ ಸಂಸ್ಕೃತಿಯನ್ನು ಬಿಂಬಿಸುವ ಕಥೆಗಳು ಹಾಗೂ ಜನರ ಜೀವನವನ್ನು ಪ್ರತಿಬಿಂಬಿಸುವ ಕಥೆಗಳನ್ನು ನಾವು ಹೆಚ್ಚು ನಂಬುತ್ತೇವೆ. ಆ ರೀತಿಯ ಕಥೆಗಳಿಗೆ ಉತ್ತೇಜನ ನೀಡುತ್ತೇವೆ. ಮಾರಿಗಲ್ಲು ಅಂತಹ ಒಂದು ಕಥೆಯಾಗಿದೆ’ ಎಂದು ಅವರು ಹೇಳಿದ್ದಾರೆ.
‘ಈ ಕಥೆಯು ಕೇವಲ ರಹಸ್ಯ, ಥ್ರಿಲ್, ಆ್ಯಕ್ಷನ್ಗಳನ್ನು ಮಾತ್ರ ಒಳಗೊಂಡಿಲ್ಲ. ಅವುಗಳ ಜೊತೆಗೆ ಕರ್ನಾಟಕ ಜಾನಪದ ಸಂಸ್ಕೃತಿ, ದೈವ ಭಕ್ತಿ ಮುಂತಾದವುಗಳನ್ನೂ ಒಳಗೊಂಡಿರುವ ವಿಭಿನ್ನ ಮಿಶ್ರಣವಾಗಿದೆ. ಇದು ಪ್ರತಿಯೊಬ್ಬರು ಕಣ್ಣರಳಿಸಿ ನೋಡುವಂಥ ಥ್ರಿಲ್ಲರ್ ಕಥೆಯಾಗಲಿದೆ’ ಎಂದು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಹೇಗಿದೆ ಕನ್ನಡದ ‘ಶೋಧ’ ವೆಬ್ ಸರಣಿ? ಏನಿದೆ? ಏನಿಲ್ಲ?
‘ಮಾರಿಗಲ್ಲು ಎಂಬುದು ನಾವು ಹಿಂದೆಂದೂ ಮಾಡಿರದ ಪ್ರಯೋಗವಾಗಿದೆ. ದುರಾಸೆ, ರಹಸ್ಯ, ಮೋಹ, ದೈವ ಭಕ್ತಿ ಮುಂತಾದ ಅನೇಕ ವಿಷಯಗಳ ವಿಭಿನ್ನ ಮಿಶ್ರಣವಾದ ಈ ಕಥೆ ಕನ್ನಡ ನಾಡಿನ ಜಾನಪದವನ್ನು ಕೂಡ ಎತ್ತಿ ಹಿಡಿಯಲಿದೆ. ಕದಂಬ ವಂಶಸ್ಥರ ಸಾಧನೆಗಳನ್ನು ಜೀವಂತವಾಗಿಸುವ ಪ್ರಯತ್ನವನ್ನು ಇದರಲ್ಲಿ ಕಾಣಬಹುದು’ ಎಂದು ಕನ್ನಡ ಜೀ5 ಬಿಸಿನೆಸ್ ಮುಖ್ಯಸ್ಥ ದೀಪಕ್ ಶ್ರಿರಾಮುಲು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




