‘ಹರಿ ಹರ ವೀರ ಮಲ್ಲು’ ಸಿನಿಮಾ ಹೊಸ ಬಿಡುಗಡೆ ದಿನಾಂಕ ಪ್ರಕಟ
Hari Hara Veera Mallu: ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ನಟಿಸಿರುವ ‘ಹರಿ ಹರ ವೀರ ಮಲ್ಲು’ ಸಿನಿಮಾ ಇದೇ ತಿಂಗಳು 12ನೇ ತಾರೀಖಿನಂದು ಬಿಡುಗಡೆ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾ ಬಿಡುಗಡೆ ಮುಂದೂಡಲಾಯ್ತು. ಇದೀಗ ‘ಹರಿ ಹರ ವೀರ ಮಲ್ಲು’ ಸಿನಿಮಾದ ಹೊಸ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿದೆ.

ಪವನ್ ಕಲ್ಯಾಣ್ (Pawan Kalyan) ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾದ ಬಿಡುಗಡೆ ಹಲವು ಬಾರಿ ಮುಂದೂಡಲ್ಪಟ್ಟಿದೆ. ಸುಮಾರು ಐದು ವರ್ಷದ ಹಿಂದೆ ಈ ಸಿನಿಮಾದ ಚಿತ್ರೀಕರಣ ಪ್ರಾರಂಭ ಆಗಿತ್ತು. ಏನೇನೋ ಅಡ್ಡಿ-ಆತಂಕಗಳು ಎದುರಾಗಿ ಇತ್ತೀಚೆಗಷ್ಟೆ ಸಿನಿಮಾದ ಚಿತ್ರೀಕರಣ ಮುಗಿದಿತ್ತು. ಜೂನ್ 12 ರಂದು ಸಿನಿಮಾ ಬಿಡುಗಡೆ ಆಗಲಿದೆ ಎಂದು ಘೋಷಣೆಯಾಗಿ ಪ್ರಚಾರವೂ ನಡೆದಿತ್ತು. ಆದರೆ ತೆಲುಗು ಚಿತ್ರರಂಗದಲ್ಲಿ ನಡೆದ ಕೆಲ ಬೆಳವಣಿಗೆಗಳಿಂದಾಗಿ ಸಿನಿಮಾದ ಬಿಡುಗಡೆಯನ್ನು ತಡೆಯಲಾಗಿತ್ತು. ಇದೀಗ ಸಿನಿಮಾದ ಹೊಸ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿದೆ.
ಪವನ್ ಕಲ್ಯಾಣ್, ಸನ್ನಿ ಡಿಯೋಲ್, ನಿಧಿ ಅಗರ್ವಾಲ್, ಸೋನಾಕ್ಷಿ ಸಿನ್ಹ, ನೋರಾ ಫತೇಹಿ, ನರ್ಗಿಸ್ ಫಕ್ರಿ ಅವರುಗಳು ನಟಿಸಿರುವ ‘ಹರಿ ಹರ ವೀರ ಮಲ್ಲು’ ಸಿನಿಮಾ ಜುಲೈ 24 ರಂದು ಬಿಡುಗಡೆ ಆಗಲಿದೆ. ಈ ಮೊದಲು ಜೂನ್ 12 ಕ್ಕೆ ಸಿನಿಮಾ ಬಿಡುಗಡೆ ಆಗಲಿತ್ತು. ಈಗ ಸುಮಾರು ಒಂದೂವರೆ ತಿಂಗಳು ಬಿಡುಗಡೆ ದಿನಾಂಕವನ್ನು ಮುಂದೂಡಿದಂತಾಗಿದೆ.
ಚಿತ್ರಮಂದಿರ ಗೊಂದಲದ ಜೊತೆಗೆ ‘ಹರಿ ಹರ ವೀರ ಮಲ್ಲು’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಸಹ ಪೂರ್ಣ ಆಗಿರಲಿಲ್ಲವಾದ್ದರಿಂದ ಮೊದಲು ಘೋಷಣೆ ಮಾಡಿದ್ದಂತೆ ಜೂನ್ 12 ಕ್ಕೆ ಸಿನಿಮಾ ಬಿಡುಗಡೆ ಮಾಡಲಾಗಲಿಲ್ಲ. ವಿಎಫ್ಎಕ್ಸ್ ಇನ್ನಿತರೆ ಕಾರ್ಯಗಳು ಅಪೂರ್ಣವಾಗಿದ್ದವು, ಪರಭಾಷೆ ಡಬ್ಬಿಂಗ್ ಕಾರ್ಯವೂ ಆಗಿರಲಿಲ್ಲ. ಹಾಗಾಗಿ ಸಿನಿಮಾದ ಬಿಡುಗಡೆಯನ್ನು ತಡೆಯಲಾಗಿತ್ತು. ಈಗಲೂ ಸಹ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ನಡೆಯುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಎಲ್ಲವೂ ಪೂರ್ಣಗೊಳ್ಳಲಿದೆ.
ಇದನ್ನೂ ಓದಿ: ಪವನ್ ಕಲ್ಯಾಣ್ಗೆ ಸಿನಿಮಾ ನಿರ್ದೇಶನ ಮಾಡುವ ಆಸೆ ಹೊರಹಾಕಿದ ಧನುಷ್
‘ಹರಿ ಹರ ವೀರ ಮಲ್ಲು’ ಸಿನಿಮಾನಲ್ಲಿ ಯೋಧನ ಪಾತ್ರದಲ್ಲಿ ಪವನ್ ಕಲ್ಯಾಣ್ ಅಬ್ಬರಿಸಿದ್ದಾರೆ. 17ನೇ ಶತಮಾನದಲ್ಲಿ ಮೊಘಲ್ ಸಾಮ್ರಾಜ್ಯದ ವಿರುದ್ಧ ಹೋರಾಡಿದ ನಾಯಕನಾಗಿ ಪವರ್ ಸ್ಟಾರ್ ಮಿಂಚಿದ್ದಾರೆ. 300 ವರ್ಷಗಳ ಹಿಂದಿನ ಕಾಲದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ವೀರಮಲ್ಲು ಆಗಿ ಪವನ್ ಕಲ್ಯಾಣ್ ಲುಕ್, ಗೆಟಪ್ ಪ್ರೇಕ್ಷಕರಿಗೆ ಈಗಾಗಲೇ ಇಷ್ಟ ಆಗಿದೆ.
ಐದು ವರ್ಷದ ಹಿಂದೆ ಸಿನಿಮಾ ಶುರುವಾದಾಗ ಕ್ರಿಶ್ ಜಗರ್ಲಮುಡಿ ನಿರ್ದೇಶನ ಮಾಡುತ್ತಿದ್ದರು. ಆದರೆ ಆಂಧ್ರ ವಿಧಾನಸಭೆ ಚುನಾವಣೆ ಕಾರಣಕ್ಕೆ ಸಿನಿಮಾ ಚಿತ್ರೀಕರಣ ಬಂದ್ ಆದ ಕಾರಣ ಕ್ರಿರ್ಶ ಜಗರ್ಲಮುಡಿ ಅವರು ಸಿನಿಮಾದಿಂದ ಹೊರಹೋದರು. ಆ ನಂತರ ಜ್ಯೋತಿ ಕೃಷ್ಣ ಅವರು ಸಿನಿಮಾ ನಿರ್ದೇಶನ ಮಾಡಿದರು. ಚಿತ್ರದಲ್ಲಿ ನಿಧಿ ಅಗರ್ವಾಲ್ ನಾಯಕಿಯಾಗಿ ಮಿಂಚಿದ್ದಾರೆ. ಇನ್ನುಳಿದಂತೆ ಬಾಬಿ ಡಿಯೋಲ್, ನರ್ಗೀಸ್ ಫಕ್ರಿ, ಆದಿತ್ಯಾ ಮೆನನ್, ಶುಭಲೇಖ ಸುಧಾಕರ್ ತಾರಾಗಣದಲ್ಲಿದ್ದಾರೆ. ರೋಚಕ ಯುದ್ಧದ ಸನ್ನಿವೇಶಗಳು ಚಿತ್ರದಲ್ಲಿದೆ. ಮೆಗಾ ಸೂರ್ಯ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಎ. ದಯಾಕರ್ ರಾವ್ ಈ ಚಿತ್ರವನ್ನು ನಿರ್ಮಿಸಿದ್ದು, ಎ.ಎಂ. ರತ್ನಂ ಪ್ರಸ್ತುತಪಡಿಸುತ್ತಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನ, ಮನೋಜ್ ಪರಮಹಂಸ ಛಾಯಾಗ್ರಹಣ ಚಿತ್ರಕ್ಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ