ಸಿನಿಮಾ ಇಲ್ಲದೆ ಕಷ್ಟದಲ್ಲಿರೋ ತ್ರಿವಿಕ್ರಂಗೆ ದೊಡ್ಡ ಸಲಹೆ ಕೊಟ್ಟ ಪವನ್ ಕಲ್ಯಾಣ್
ತ್ರಿವಿಕ್ರಂ ಅವರ ಇತ್ತೀಚಿನ ಚಿತ್ರಗಳ ವೈಫಲ್ಯದ ನಂತರ, ಅವರಿಗೆ ಸ್ಟಾರ್ ನಟರ ಕಾಲ್ ಶೀಟ್ ಸಿಗುತ್ತಿರಲಿಲ್ಲ. ಪವನ್ ಕಲ್ಯಾಣ್ ಅವರ ಸಲಹೆಯ ಮೇರೆಗೆ, ರಾಮ್ ಚರಣ್ ಅವರು ತ್ರಿವಿಕ್ರಂ ಜೊತೆ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಸಿತಾರಾ ಎಂಟರ್ಟೈನ್ಮೆಂಟ್ ಈ ಚಿತ್ರವನ್ನು ನಿರ್ಮಿಸುವ ಸಾಧ್ಯತೆಯಿದೆ.

ಒಂದು ಕಾಲದಲ್ಲಿ ಬೇಡಿಕೆ ನಿರ್ದೇಶಕ ಎನಿಸಿಕೊಂಡಿದ್ದ ತ್ರಿವಿಕ್ರಂ ಶ್ರೀನಿವಾಸ್(Trivikram Srinivas) ಅವರಿಗೆ ಇತ್ತೀಚೆಗೆ ಬೇಡಿಕೆ ಕಡಿಮೆ ಆಗಿದೆ. ಬ್ಯಾಕ್ ಟು ಬ್ಯಾಕ್ ಫ್ಲಾಪ್ ಕೊಟ್ಟಿದ್ದರಿಂದ ಸ್ಟಾರ್ ಹೀರೋಗಳ ಕಾಲ್ಶೀಟ್ ಸಿಗದಂತೆ ಆಗಿದೆ. ತ್ರಿವಿಕ್ರಂ ಅವರು ಈ ಮೊದಲು ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡುತ್ತಾರೆ ಎನ್ನಲಾಗಿತ್ತು. ಆದರೆ, ಅಲ್ಲು ಅರ್ಜುನ್ ಅವರು ಅಟ್ಲೀ ಜೊತೆ ಕೈ ಜೋಡಿಸಿದರು. ಆ ಬಳಿಕ ವೆಂಕಟೇಶ್ ಜೊತೆ ಅವರು ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಹರಡಿತು. ಈಗ ಅವರು ರಾಮ್ ಚರಣ್ ಜೊತೆ ಕೈ ಜೋಡಿಸುತ್ತಾರೆ ಎನ್ನಲಾಗಿದೆ. ಇದಕ್ಕೆ ಕಾರಣ ಆಗಿದ್ದು ಪವನ್ ಕಲ್ಯಾಣ್ ಅವರ ಸಲಹೆ.
ತ್ರಿವಿಕ್ರಂ ಹಾಗೂ ಪವನ್ ಕಲ್ಯಾಣ್ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಇವರು ಕೆಲವು ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ತ್ರಿವಿಕ್ರಂಗೆ ರಾಮ್ ಚರಣ್ ಜೊತೆ ಸಿನಿಮಾ ಮಾಡುವಂತೆ ಸಲಹೆ ಕೊಟ್ಟಿದ್ದು ಪವನ್ ಕಲ್ಯಾಣ್ ಅವರೇ ಎಂದು ತಿಳಿದು ಬಂದಿದೆ. ಈ ಕಾರಣಕ್ಕೆ ಏಕಾಏಕಿ ಇವರ ಕೊಲಾಬ್ಯರೇಷನ್ ವಿಚಾರ ಮುನ್ನೆಲೆಗೆ ಬಂದಿದೆ. ಕಷ್ಟದಲ್ಲಿರೋ ತ್ರಿವಿಕ್ರಂಗೆ ಪವನ್ ಕಲ್ಯಾಣ್ ಸಲಹೆ ಸಹಾಯಕ್ಕೆ ಬಂದಿದೆ.
ರಾಮ್ ಚರಣ್ ಅವರು ಸದ್ಯ ‘ಪೆದ್ದಿ’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಆ ಬಳಿಕ ಅವರು ಸುಕುಮಾರ್ ಜೊತೆ ಸಿನಿಮಾ ಮಾಡಬೇಕಿದೆ. ಆದರೆ, ಈ ಚಿತ್ರದ ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿವೆ. ಇದಕ್ಕೆ ಇನ್ನೂ ಸಾಕಷ್ಟು ಸಮಯ ಬೇಕಿದೆ. ಅಲ್ಲಿವರೆಗೆ ರಾಮ್ ಚರಣ್ ಅವರು ತ್ರಿವಿಕ್ರಂ ಜೊತೆ ಸೇರಿ ಸಿನಿಮಾ ಕೆಲಸ ಪೂರ್ಣಗೊಳಿಸಲಿದ್ದಾರೆ.
ಇದನ್ನೂ ಓದಿ: ಅಲ್ಲು ಅರ್ಜುನ್-ಅಟ್ಲಿ ಚಿತ್ರಕ್ಕೆ ದೀಪಿಕಾ ಎಂಟ್ರಿ ಅಧಿಕೃತ; ಪ್ರೋಮೋ ರಿಲೀಸ್
‘ಸಿತಾರಾ ಎಂಟರ್ಟೇನ್ಮೆಂಟ್’ ಸಂಸ್ಥೆ ತ್ರಿವಿಕ್ರಂ ಹಾಗೂ ರಾಮ್ ಚರಣ್ ಚಿತ್ರವನ್ನು ನಿರ್ಮಾಣ ಮಾಡಲು ಆಸಕ್ತಿ ತೋರಿಸಿದೆ. ಒಂದೊಮ್ಮೆ ಅವರು ನಿರ್ಮಾಣಕ್ಕೆ ಮುಂದೆ ಬಂದರೆ ಶೀಘ್ರವೇ ಈ ಬಗ್ಗೆ ಅಧಿಕೃತ ಘೋಷಣೆ ಆಗಲಿದೆ. ಈ ವಿಚಾರ ಸದ್ಯ ಚರ್ಚೆಯ ಹಂತದಲ್ಲಿ ಇದೆ. ಎಲ್ಲವೂ ಓಕೆ ಆದರೆ ತ್ರಿವಿಕ್ರಂಗೆ ಮತ್ತೆ ಸ್ಟಾರ್ ಹೀರೋನ ಕಾಲ್ಶೀಟ್ ಸಿಕ್ಕಂತೆ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.