‘ಪೆದ್ದಿ’ ಸಿನಿಮಾದಲ್ಲಿ ನೆಗೆಟಿವ್ ಶೇಡ್ ಪಾತ್ರ? ಶಿವಣ್ಣ ಹೇಳಿದ್ದಿಷ್ಟು
ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ 'ಪೆದ್ದಿ' ಚಿತ್ರ ಜೂನ್ 4ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಈ ಹೈ-ವೋಲ್ಟೇಜ್ ಆಕ್ಷನ್ ಡ್ರಾಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಗೌರನಾಯ್ಡು ಎಂಬ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರದ ಬಗೆಗಿನ ಕುತೂಹಲ ಟ್ರೈಲರ್ ಮತ್ತು ಸಂದರ್ಶನದಲ್ಲಿ ಹೆಚ್ಚಾಗಿದೆ. ಇದು ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ ನೀಡುವ ಮುನ್ಸೂಚನೆ.

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಹಾಗೂ ಸ್ಟಾರ್ ನಿರ್ದೇಶಕ ಬುಚ್ಚಿ ಬಾಬು ಸನಾ ಕಾಂಬಿನೇಷನ್ನ ಬಹುನಿರೀಕ್ಷಿತ ‘ಪೆದ್ದಿ’ ಸಿನಿಮಾ ಜೂನ್ 4ರಂದು ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಗ್ರಾಮೀಣ ಕ್ರೀಡೆಯ ಹಿನ್ನೆಲೆಯುಳ್ಳ ಈ ಹೈ-ವೋಲ್ಟೇಜ್ ಆಕ್ಷನ್ ಡ್ರಾಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರು ಒಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಸಿನಿಮಾದ ಟ್ರೈಲರ್ ಮತ್ತು ಪ್ರಚಾರದ ಸಂದರ್ಭದಲ್ಲಿ ಶಿವಣ್ಣ ಅವರು ತಮ್ಮ ಪಾತ್ರದ ಬಗ್ಗೆ ಬಿಟ್ಟುಕೊಟ್ಟಿರುವ ಆಸಕ್ತಿದಾಯಕ ಮಾಹಿತಿ ಈಗ ಸ್ಯಾಂಡಲ್ವುಡ್ ಅಂಗಳದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಶಿವಣ್ಣ ಅವರು ‘ಪೆದ್ದಿ’ ಸಿನಿಮಾದಲ್ಲಿನ ತಮ್ಮ ಪಾತ್ರದ ಕುರಿತು ಪ್ರಮುಖ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಅವರ ಪಾತ್ರದ ಹೆಸರು ‘ಗೌರನಾಯ್ಡು’. ಈ ಕ್ಯಾರೆಕ್ಟರ್ ತುಂಬಾ ವಿಭಿನ್ನವಾಗಿದ್ದು, ತಮಗೆ ಸಾಕಷ್ಟು ಸವಾಲಿನಿಂದ ಕೂಡಿತ್ತು ಎಂದು ಶಿವಣ್ಣ ಹೇಳಿದ್ದಾರೆ. ವಿಶೇಷವೆಂದರೆ, ನಿರ್ದೇಶಕ ಬುಚ್ಚಿ ಬಾಬು ಅವರು ಈ ಪಾತ್ರಕ್ಕಾಗಿ ಬೇರೆ ಯಾರನ್ನೂ ಯೋಚಿಸದೆ, ಶಿವಣ್ಣ ಅವರನ್ನೇ ಮನಸ್ಸಿನಲ್ಲಿಟ್ಟುಕೊಂಡು ಈ ಪಾತ್ರವನ್ನು ಬರೆದಿದ್ದಾರಂತೆ. ಅದಕ್ಕಾಗಿಯೇ ಅವರನ್ನು ಹುಡುಕಿಕೊಂಡು ಬಂದು ಕಥೆ ಹೇಳಿದ್ದಾರೆ ಎಂದು ಶಿವಣ್ಣ ಹೇಳಿಕೊಂಡಿದ್ದಾರೆ.
ಸಿನಿಮಾದ ಟ್ರೈಲರ್ನಲ್ಲಿ ಶಿವಣ್ಣ ಅವರ ಲುಕ್ ಅನ್ನು ಬಹಳ ಸೀರಿಯಸ್ ಮತ್ತು ಇಂಟೆನ್ಸ್ ಆಗಿ ತೋರಿಸಲಾಗಿದ್ದು, ಚಿತ್ರದ ಸುತ್ತ ಭಾರಿ ಕುತೂಹಲ ಮೂಡುವಂತೆ ಎಡಿಟ್ ಮಾಡಲಾಗಿದೆ. ಸಂದರ್ಶನದ ವೇಳೆ ನಿರೂಪಕರು, ‘ಟ್ರೈಲರ್ನಲ್ಲಿ ನಿಮ್ಮ ಪಾತ್ರ ಪಾಸಿಟಿವ್ ಆಗಿದೆಯೋ ಅಥವಾ ನೆಗೆಟಿವ್ ಆಗಿದೆಯೋ ಎಂಬುವುದನ್ನು ತುಂಬಾ ಚಾಣಾಕ್ಷತನದಿಂದ ಮುಚ್ಚಿಡಲಾಗಿದೆ’ ಎಂದು ಹೇಳಿದಾಗ, ಶಿವಣ್ಣ ಅವರು ನಗುತ್ತಲೇ ಹೌದು ಎಂಬಂತೆ ತಲೆಯಾಡಿಸಿದ್ದಾರೆ.
ಶಿವಣ್ಣ ಅವರ ಈ ನಡೆ, ಚಿತ್ರದಲ್ಲಿ ಅವರ ಪಾತ್ರ ಕೇವಲ ಸೀದಾ-ಸಾದಾ ಆಗಿರದೆ, ಗ್ರೇ ಶೇಡ್ ಅಥವಾ ವಿಭಿನ್ನ ತಿರುವುಗಳನ್ನು ನೀಡುವ ಪಾತ್ರ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ತೆರೆಯ ಮೇಲೆ ನೆಚ್ಚಿನ ನಟನನ್ನು ಸದಾ ವಿಭಿನ್ನವಾಗಿ ನೋಡಲು ಬಯಸುವ ಕನ್ನಡ ವೀಕ್ಷಕರಿಗೆ ಮತ್ತು ಶಿವಣ್ಣ ಅಭಿಮಾನಿಗಳಿಗೆ ಈ ಗೌರನಾಯ್ಡು ಪಾತ್ರದ ರಹಸ್ಯ ದೊಡ್ಡ ಸರ್ಪ್ರೈಸ್ ನೀಡುವ ಮುನ್ಸೂಚನೆ ಸಿಕ್ಕಿದೆ.
ಇದನ್ನೂ ಓದಿ: ‘ಪೆದ್ದಿ’ ಸಿನಿಮಾ ಬಗ್ಗೆ ವಿಚಾರಿಸಿದ ನರೇಂದ್ರ ಮೋದಿ , ಹೇಳಿದ್ದೇನು?
ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಅತ್ಯಂತ ಅದ್ದೂರಿ ಬಜೆಟ್ನಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಸಂಗೀತ ನೀಡಿದ್ದಾರೆ. ಜಗಪತಿ ಬಾಬು, ಜಾನ್ವಿ ಕಪೂರ್, ದಿವ್ಯೇಂದು ಶರ್ಮಾ ಮತ್ತು ಬೊಮನ್ ಇರಾನಿ ಅವರಂತಹ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





