ಸೂತಕದ ಮನೆಯಲ್ಲೂ ಸೆಲ್ಫಿ ಹುಚ್ಚು; ತಾಳ್ಮೆ ಕಳೆದುಕೊಂಡು ಕೂಗಾಡಿದ ರಾಜಮೌಳಿ
ಪ್ರಸಿದ್ಧ ನಟ ಕೋಟಾ ಶ್ರೀನಿವಾಸ್ ರಾವ್ ಅವರ ನಿಧನದಿಂದ ತೆಲುಗು ಚಿತ್ರರಂಗಕ್ಕೆ ಭಾರೀ ನಷ್ಟ ಉಂಟು ಮಾಡಿದೆ. ಅವರ ಅಂತಿಮ ದರ್ಶನದ ಸಮಯದಲ್ಲಿ ಅಭಿಮಾನಿಗಳು ಸೆಲ್ಫಿ ತೆಗೆಯಲು ಮುಗಿಬಿದ್ದಿದ್ದರಿಂದ ನಿರ್ದೇಶಕ ಎಸ್.ಎಸ್. ರಾಜಮೌಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸೂತಕದ ಮನೆಯಲ್ಲಿ ಈ ರೀತಿಯ ವರ್ತನೆ ಸರಿಯಲ್ಲ ಎಂದು ಅನೇಕರು ಹೇಳಿದ್ದಾರೆ.

ತೆಲುಗು, ಕನ್ನಡ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದ ಕೋಟಾ ಶ್ರೀನಿವಾಸ್ ರಾವ್ (Kota Srinivas Rao) ಅವರು ನಿಧನ ಹೊಂದಿದ್ದಾರೆ. ಇದರಿಂದ ತೆಲುಗು ಚಿತ್ರರಂಗಕ್ಕೆ ದೊಡ್ಡ ನಷ್ಟ ಉಂಟಾಗಿದೆ. ಅವರನ್ನು ಕಳೆದುಕೊಂಡ ಬೆನ್ನಲ್ಲೇ ಅನೇಕ ಸೆಲೆಬ್ರಿಟಿಗಳು ಆಗಮಿಸಿ ನಟನ ಅಂತಿಮ ದರ್ಶನ ಪಡೆದಿದ್ದಾರೆ. ಕೇವಲ ಚಿತ್ರರಂಗಕ್ಕೆ ಸೀಮಿತವಾಗದೆ ರಾಜಕಾರಣಿಗಳು ಕೂಡ ಇಲ್ಲಿಗೆ ಆಗಮಿಸಿದ್ದರು. ನಿರ್ದೇಶಕ ಎಸ್ಎಸ್ ರಾಜಮೌಳಿ ಆಗಮಿಸಿ ಸಂತಾಪ ಸೂಚಿಸಿದರು. ಆಗ ನಡೆದ ಘಟನೆಯೊಂದು ಚರ್ಚೆಗೆ ಕಾರಣ ಆಗಿದೆ. ರಾಜಮೌಳಿ ಅಭಿಮಾನಿಗಳ ಮೇಲೆ ಸಿಟ್ಟಾಗಿದ್ದಾರೆ.
ಶ್ರೀನಿವಾಸ್ ರಾವ್ ಅವರ ಹೈದರಾಬಾದ್ ಮನೆಯಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸೆಲೆಬ್ರಿಟಿಗಳು ಆಗಮಿಸುತ್ತಾರೆ ಎಂದು ತಿಳಿದ ಒಂದಷ್ಟು ಮಂದಿ ಇದೇ ಸದಾವಕಾಶ ಎಂದು ಭಾವಿಸಿ ಅವರ ಮನೆಯ ಮುಂದೆ ನೆರೆದರು. ಹೋಗಿ ಬರೋ ಸೆಲೆಬ್ರಿಟಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಆರಂಭಿಸಿದರು. ಸೂತಕದ ಮನೆಯಲ್ಲಿ ಈ ರೀತಿ ಮಾಡಿರೋದು ಚರ್ಚೆಯ ಕೇಂದ್ರ ಬಿಂದು ಆಗಿದೆ. ಅಲ್ಲದೆ, ಅನೇಕರ ಕೋಪಕ್ಕೂ ಕಾರಣ ಆಗಿದೆ.
ವೈರಲ್ ಆದ ಪೋಸ್ಟ್
Taking selfie during someone’s demise . Good on rajamouli sir to react that way ! pic.twitter.com/0GIFCmPpLb
— Prashanth Rangaswamy (@itisprashanth) July 13, 2025
ರಾಜಮೌಳಿ ಅವರು ಶ್ರೀನಿವಾಸ್ ರಾವ್ ಅಂತಿಮ ದರ್ಶನ ಪಡೆದು ದುಖಃದಲ್ಲಿ ಮನೆಯಿಂದ ಹೊರಡುತ್ತಿದ್ದರು. ಈ ವೇಳೆ ಕೆಲವರು ಸೆಲ್ಫಿ ಕೇಳಿದ್ದಾರೆ. ಆದರೆ, ಅವರಿಗೆ ಸೆಲ್ಫಿ ಕೊಡೋಕೆ ಇಷ್ಟವೇ ಇರಲಿಲ್ಲ. ರಾಜಮೌಳಿ ಅವರು ಈ ವಿಚಾರಕ್ಕೆ ಬೇಸರ ಮಾಡಿಕೊಂಡರು. ಹೀಗಾಗಿ, ಅವರು ಸಿಟ್ಟಾಗಿ ಅಭಿಮಾನಿಗಳ ಮೇಲೆ ಕೂಗಾಡಿದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಭಿಮಾನಿಗಳ ಹುಚ್ಚುತನವನ್ನು ಅನೇಕರು ಖಂಡಿಸಿದ್ದಾರೆ.
ಇದನ್ನೂ ಓದಿ: ಕೋಟಾ ಶ್ರೀನಿವಾಸ್ ರಾವ್ ಕನ್ನಡದಲ್ಲಿ ನಟಿಸಿದ್ದ ಸಿನಿಮಾಗಳು ಯಾವುವು ಗೊತ್ತೆ?
ನಟನಿಗೆ ಏನಾಗಿತ್ತು?
ಕೋಟಾ ಶ್ರೀನಿವಾಸ್ ರಾವ್ ಅವರಿಗೆ 83 ವರ್ಷ ವಯಸ್ಸಾಗಿತ್ತು. ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹೈದರಾಬಾದ್ನಲ್ಲಿ ಅವರು ನಿಧನ ಹೊಂದಿದರು. ಅವರಿಗೆ 750ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ ಅನುಭವ ಇತ್ತು. ಅವರು ತೆಲುಗು ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಇದರ ಜೊತೆಗೆ ಕನ್ನಡದಲ್ಲೂ ಅವರು ನಟಿಸಿದ್ದಾರೆ. 1997 ರಲ್ಲಿ ಕೋಟಾ ಶ್ರೀನಿವಾಸ್ ರಾವ್ ಅವರು ‘ಲೇಡಿ ಕಮಿಷನರ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದರು. ಅಲ್ಲದೆ, ‘ರಕ್ತ ಕಣ್ಣೀರು’, ‘ಲವ್’, ‘ನಮ್ಮ ಬಸವ’, ‘ನಮ್ಮಣ್ಣ’ ‘ಮಸ್ತಿ’, ‘ಶ್ರೀಮತಿ’, ‘ಕಬ್ಜ’ ಸಿನಿಮಾಗಳಲ್ಲಿ ಅವರು ಕಾಣಿಸಿಕೊಂಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:03 am, Mon, 14 July 25








