ರಜನಿಕಾಂತ್-ಧನುಷ್ ಮನೆಯಲ್ಲಿ ಬಾಂಬ್ ಇಟ್ಟಿದ್ದಾಗಿ ಪೊಲೀಸರಿಗೆ ಬಂತು ಮೇಲ್
ತಮಿಳಿನ ಖ್ಯಾತ ನಟರಾದ ರಜನಿಕಾಂತ್ ಮತ್ತು ಧನುಷ್ ಅವರ ಮನೆಗೆ ಬಾಂಬ್ ಇಟ್ಟಿದ್ದಾಗಿ ತಮಿಳುನಾಡು ಪೊಲೀಸ್ ಮಹಾನಿರ್ದೇಶಕರಿಗೆ ಇಮೇಲ್ ಬಂದಿತ್ತು. ತಕ್ಷಣ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ತೆರಳಿ ಪರಿಶೀಲಿಸಿತು. ಯಾವುದೇ ಸ್ಫೋಟಕ ಪತ್ತೆಯಾಗದ ಕಾರಣ, ಇದು ಹುಸಿ ಕರೆ ಎಂದು ದೃಢಪಟ್ಟಿದೆ.

ತಮಿಳಿನ ಖ್ಯಾತ ನಟರಾದ ರಜನಿಕಾಂತ್ (Rajinikanth) ಹಾಗೂ ಧನುಷ್ ಅವರ ಮನೆಗೆ ಬಾಂಬ್ ಇಟ್ಟಿದ್ದಾಗ ತಮಿಳುನಾಡು ಪೊಲೀಸ್ ಮಹಾನಿರ್ದೇಶಕರಿಗೆ ಇ-ಮೇಲ್ ಕಳುಹಿಸಲಾಗಿದೆ. ಈ ಬೆನ್ನಲ್ಲೇ ಬಾಂಬ್ ಸ್ಕ್ವಾಡ್ ಅವರ ಮನೆಗೆ ತೆರಳಿ ಪರೀಕ್ಷೆ ನಡೆಸಿದೆ. ಆದರೆ, ಯಾವುದೇ ಬಾಂಬ್ ಪತ್ತೆ ಆಗಿಲ್ಲ. ಇದು ಹುಸಿ ಬಾಂಬ್ ಕರೆ ಎಂಬುದು ಗೊತ್ತಾಗಿದೆ. ಇತ್ತೀಚೆಗೆ ತಮಿಳುನಾಡಿನಲ್ಲಿ ಈ ರೀತಿಯ ಪ್ರಕರಣ ಹೆಚ್ಚುತ್ತಿರುವುದನ್ನು ಕಾಣಬಹುದು. ಇದು ಪೊಲೀಸರ ಶ್ರಮವನ್ನು ಹಾಳು ಮಾಡುತ್ತಿದೆ.
ಪೊಲೀಸ್ ಮಹಾನಿರ್ದೇಶಕರಿಗೆ ಇ-ಮೇಲ್ ಒಂದು ಬಂದಿದೆ. ಇದರಲ್ಲಿ ನಟ ರಜನಿಕಾಂತ್, ಧನುಷ್ ಹಾಗೂ ತಮಿಳು ನಾಡು ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಮನೆಗೆ ಬಾಂಬ್ ಇಟ್ಟಿದ್ದಾಗಿ ಹೇಳಲಾಗಿತ್ತು. ಇವರ ಮನೆಗೆ ತೆರಳಿ ಪರೀಕ್ಷೆ ಮಾಡಲಾಗಿದೆ.
ಪೊಲೀಸರು ನಡೆಸಿದ ತನಿಖೆಯಲ್ಲಿ ಯಾವುದೇ ಅನುಮನಾಸ್ಪದ ವಸ್ತುಗಳು ಸಿಕ್ಕಿಲ್ಲ. ರಜನಿಕಾಂತ್ ಅವರ ಭದ್ರತಾ ಸಿಬ್ಬಂದಿಗಳ ವಿಚಾರಣೆಯನ್ನು ಮಾಡಲಾಗಿದೆ. ಅವರ ಪ್ರಕಾರ ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಮನೆ ಒಳಗೆ ತೆರಳಿಲ್ಲ. ಹೀಗಿರುವಾಗ ಮನೆ ಒಳಗೆ ಹೋಗಿ ಸ್ಫೋಟಕ ಇಡಲು ಹೇಗೆ ಸಾಧ್ಯ?
ಚೆನ್ನೈ ನಗರ ಪೊಲೀಸರು, ಬಾಂಬ್ ನಿಷ್ಕ್ರಿಯ ದಳದ ಸಹಯೋಗದೊಂದಿಗೆ, ಇ-ಮೇಲ್ನಲ್ಲಿ ಹೆಸರಿಸಲಾದ ಇತರ ವ್ಯಕ್ತಿಗಳ ಮನೆಯನ್ನು ತಪಾಸಣೆ ಮಾಡಿದರು. ಶೋಧ ಕಾರ್ಯಾಚರಣೆಯ ನಂತರ, ಯಾವುದೇ ಸ್ಫೋಟಕಗಳು ಕಂಡುಬಂದಿಲ್ಲ. ಇತ್ತೀಗೆ ಹೆಚ್ಚುತ್ತಿರುವ ಹುಸಿ ಬಾಂಬ್ ಕರೆಗಳ ಸಾಲಿಗೆ ಇದನ್ನು ಸೇರಿಸಿದ್ದಾರೆ.
ಇದನ್ನೂ ಓದಿ: ರಜನಿಕಾಂತ್, ಮೋಹನ್ಲಾಲ್ ಸ್ಟೈಲ್ ಅನುಕರಿಸಿದ ರಿಷಬ್ ಶೆಟ್ಟಿ; ದಂಗಾದ ಅಮಿತಾಭ್
ಇತ್ತೀಚೆಗೆ ಹಲವಾರು ತಮಿಳು ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳು ಇದೇ ರೀತಿಯ ಬೆದರಿಕೆಗಳಿಗೆ ಗುರಿಯಾಗಿದ್ದಾರೆ. ಅಕ್ಟೋಬರ್ ಆರಂಭದಲ್ಲಿ, ತ್ರಿಶಾ ಕೃಷ್ಣನ್ ಮತ್ತು ಎಸ್ ವಿ ಶೇಖರ್ ಸೇರಿದಂತೆ ಇತರ ಸೆಲೆಬ್ರಿಟಿಗಳಿಗೆ ಬೆದರಿಕೆಗಳನ್ನು ಕಳುಹಿಸಲಾಗಿತ್ತು. ಸಂಗೀತ ಸಂಯೋಜಕ ಇಳಯರಾಜ ಅವರ ಸ್ಟುಡಿಯೋವನ್ನು ಸಹ ಗುರಿ ಮಾಡಲಾಗಿತ್ತು. ಆದರೆ, ಎಲ್ಲವೂ ಫೇಕ್ ಎಂಬುದು ಗೊತ್ತಾಗಿದೆ. ಹಾಗಂದ ಮಾತ್ರಕ್ಕೆ ಇದನ್ನು ಪರೀಕ್ಷೆ ನಡೆಸದೆ ಇರಲು ಸಾಧ್ಯವಿಲ್ಲ. ಈ ಕಾರಣದಿಂದಲೇ ಪೊಲೀಸರು ಇದನ್ನು ನಿರ್ಲಕ್ಷಿಸಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:21 am, Wed, 29 October 25







