
ಉಪೇಂದ್ರ ಅವರ ನಿರ್ದೇಶನಕ್ಕೆ ಫಿದಾ ಆಗದವರೇ ಇಲ್ಲ. ಅಂತಹ ಸಿನಿಮಾಗಳನ್ನು ಅವರು ತಮ್ಮ ವೃತ್ತಿ ಜೀವನದಲ್ಲಿ ನೀಡಿದ್ದಾರೆ. ಅವರ ಸ್ಟೈಲ್ ಅನೇಕ ನಿರ್ದೇಶಕರಿಗೆ ಸ್ಫೂರ್ತಿ ಎಂದರೂ ತಪ್ಪಾಗಲಾರದು. ನಿರ್ದೇಶಕ ಲೋಕೇಶ್ ಕನಗರಾಜ್ ಸೇರಿದಂತೆ ಅನೇಕ ನಿರ್ದೇಶಕರು ತಮ್ಮ ಸಿನಿಮಾ ಮೇಕಿಂಗ್ನಲ್ಲಿ ಉಪೇಂದ್ರ ಪ್ರಭಾವ ಇದೆ ಎಂದು ಒಪ್ಪಿಕೊಂಡಿದ್ದು ಇದೆ. ಈಗ ತಮಿಳಿನ ಸೂಪರ್ಸ್ಟಾರ್ ರಜನಿಕಾಂತ್ ಅವರು ಉಪ್ಪಿಯನ್ನು (Upendra) ಹೊಗಳಿದ್ದಾರೆ.
ತಮಿಳಿನ ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜ್ ಅವರ ‘ಕೂಲಿ’ ಸಿನಿಮಾ ಆಗಸ್ಟ್ 14ರಂದು ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ರಜನಿಕಾಂತ್ ಹೀರೋ. ಉಪೇಂದ್ರ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಆಮಿರ್ ಖಾನ್, ಅಕ್ಕಿನೇನಿ ನಾಗಾರ್ಜುನ ಸೇರಿದಂತೆ ಅನೇಕರು ಸಿನಿಮಾದಲ್ಲಿ ಇದ್ದಾರೆ. ಈ ಚಿತ್ರಕ್ಕೆ ಈಗಾಗಲೇ ಸಾಕಷ್ಟು ಹೈಪ್ ಸೃಷ್ಟಿ ಆಗಿದೆ. ಈ ಚಿತ್ರದ ಈವೆಂಟ್ನಲ್ಲಿ ರಜನಿ ಅವರು ಉಪೇಂದ್ರ ಬಗ್ಗೆ ಮಾತನಾಡಿದರು.
‘ಉಪೇಂದ್ರ ಅವರ ಅತಿಥಿ ಪಾತ್ರ ಸಿನಿಮಾದಲ್ಲಿ ಇದೆ ಎಂದು ನಿರ್ದೇಶಕರು ಹೇಳಿದರು. ಉಪೇಂದ್ರ ಭಾರತದ ಅನೇಕ ನಿರ್ದೇಶಕರಿಗೆ ಸ್ಫೂರ್ತಿ. ಹಿಂದಿ, ಮಲಯಾಳಂ, ತಮಿಳು, ತೆಲುಗು ಹೀಗೆ ಎಲ್ಲ ನಿರ್ದೇಶಕರು ಬಂದಿದ್ದು ಉಪೇಂದ್ರ ಅವರನ್ನು ನೋಡಿ. ಎಂತಹ ಅದ್ಭುತ ನಿರ್ದೇಶಕರು’ ಎಂದಿದ್ದಾರೆ ರಜನಿಕಾಂತ್.
‘ಉಪೇಂದ್ರಗೆ ನಟನೆಗಿಂತ ನಿರ್ದೇಶನದ ಬಗ್ಗೆ ಹೆಚ್ಚು ಪ್ಯಾಷನ್. ಅವರು ಶಿವರಾಜ್ಕುಮಾರ್ ಜೊತೆ ಓಂ ಸಿನಿಮಾ ಮಾಡಿದ್ದರು. ನನಗೆ ಹೇಗೆ ಬಾಷಾ ಚಿತ್ರವೋ, ಅಲ್ಲಿ ಓಮ್. ಈ ಸಿನಿಮಾ ನನ್ನ ಬಾಷಾ ಚಿತ್ರಕ್ಕಿಂತ ದೊಡ್ಡದು. ಲೋಕೇಶ್ ಕನಗರಾಜ್ ಈಗ ಮಾಡುತ್ತಿರುವ ಪಾತ್ರಗಳನ್ನು ಉಪ್ಪಿ, ಆಗಲೇ ಮಾಡಿದ್ದರು’ ಎಂದು ಮೆಚ್ಚುಗೆ ಸೂಚಿಸಿದರು.
ಇದನ್ನೂ ಓದಿ: ‘ಕೂಲಿ’ ಚಿತ್ರದ ರಜನಿ ಸಂಭಾವನೆಯಲ್ಲಿ ಬಿಗ್ ಬಜೆಟ್ ಸಿನಿಮಾ ಮಾಡಬಹುದು; ಉಪೇಂದ್ರ ಪಡೆದಿದ್ದೆಷ್ಟು?
ಉಪೇಂದ್ರ ನಿರ್ದೇಶನದಲ್ಲಿ ಮೂಡಿ ಬಂದ, ‘ಓಂ’, ‘ತರ್ಲೆ ನನ್ಮಗ’, ‘ಶ್’, ‘ಎ’ ಹಾಗೂ ‘ಉಪೇಂದ್ರ ಸಿನಿಮಾಗಳು ಕಲ್ಟ್ ಕ್ಲಾಸಿಕ್ ಎನಿಸಿಕೊಂಡಿವೆ. ಒಂದಕ್ಕಿಂತ ಒಂದು ಸಿನಿಮಾಗಳು ಭಿನ್ನವಾಗಿವೆ. ಈಗ ಅವರು ನಿರ್ದೇಶನಕ್ಕಿಂತ ಹೆಚ್ಚಾಗಿ ನಟನೆಯಲ್ಲಿ ತೊಡಗಿಕೊಂಡಿದ್ದಾರೆ. ಅವರು ‘ಪ್ರಜಾಕೀಯ’ ಪಕ್ಷ ಆರಂಭಿಸಿ, ಚುನಾವಣೆ ಕೂಡ ಎದುರಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:01 am, Tue, 12 August 25