ಆ ಸಿನಿಮಾದಿಂದ ಹೊರ ಹೋಗಿ ಬಿಡುವ ಮನಸ್ಸಾಗಿತ್ತು: ಸಾಯಿ ಪಲ್ಲವಿ

Sai Pallavi: ದಕ್ಷಿಣದ ಖ್ಯಾತ ನಟಿ ಸಾಯಿ ಪಲ್ಲವಿ, ತಮ್ಮ ನಟನೆ, ನೃತ್ಯ, ಸೌಂದರ್ಯದ ಜೊತೆಗೆ ತಮ್ಮ ವೃತ್ತಿಪರತೆಯಿಂದಲೂ ಖ್ಯಾತರು. ಆದರೆ ಸಾಯಿ ಪಲ್ಲವಿಗೆ ಒಂದು ಬಾರಿ ನಿರ್ದೇಶಕರೊಬ್ಬರ ವರ್ತನೆಯಿಂದಾಗಿ, ಸಿನಿಮಾ ಸೆಟ್​ನಿಂದ ಹೊರಗೆ ಹೋಗಿಬಿಡೋಣ ಅನಿಸಿತ್ತಂತೆ.

ಆ ಸಿನಿಮಾದಿಂದ ಹೊರ ಹೋಗಿ ಬಿಡುವ ಮನಸ್ಸಾಗಿತ್ತು: ಸಾಯಿ ಪಲ್ಲವಿ

Updated on: Nov 05, 2024 | 11:15 AM

ಸಾಯಿ ಪಲ್ಲವಿ ದಕ್ಷಿಣ ಭಾರತದ ಸ್ಟಾರ್ ನಟಿ, ಇದೀಗ ಹಿಂದಿಯೂ ಕಾಲಿಟ್ಟಿದ್ದಾರೆ. ಸಾಯಿ ಪಲ್ಲವಿ ತಮ್ಮ ಜಂಟಲ್ ವ್ಯಕ್ತಿತ್ವದಿಂದ, ವೃತ್ತಿಪರತೆಯಿಂದ ಹೆಚ್ಚು ಜನಪ್ರಿಯರು. ಯಾವ ಸಿನಿಮಾದಲ್ಲಿಯೂ ನಟಿಸಿದರೂ ಸೆಟ್​ನಲ್ಲಿ ಏನೂ ಸಮಸ್ಯೆ ಸೃಷ್ಟಿಸದೆ, ಯಾವುದೇ ಡಿಮ್ಯಾಂಡ್​ಗಳಿಲ್ಲದೆ, ನಿಗದಿತ ಸಮಯಕ್ಕೆ ಶೂಟಿಂಗ್ ಮುಗಿಸಿಕೊಡಲು ಪ್ರಯತ್ನಿಸುತ್ತಾರೆ. ಇದೇ ಕಾರಣಕ್ಕೆ ಹಲವು ನಿರ್ದೇಶಕ ಹಾಗೂ ನಿರ್ಮಾಪಕರ ನೆಚ್ಚಿನ ನಟಿ ಸಾಯಿ ಪಲ್ಲವಿ. ಆದರೆ ಸಾಯಿ ಪಲ್ಲವಿಗೆ ಒಂದು ಸಿನಿಮಾ ಸೆಟ್​ನಲ್ಲಿ ಮಾತ್ರ ತುಸು ಕೆಟ್ಟ ಅನುಭವ ಆಯ್ತಂತೆ, ಶೂಟಿಂಗ್ ಪ್ರಾರಂಭಿಸಿದ ಎರಡೇ ದಿನಕ್ಕೆ ಆ ಸೆಟ್ ಬಿಟ್ಟು ಹೊರಗೆ ಹೋಗಿಬಿಡೋಣ ಅನಿಸಿತ್ತಂತೆ ಸಾಯಿ ಪಲ್ಲವಿಗೆ.

ಸಾಯಿ ಪಲ್ಲವಿ, ತಮಿಳಿನ ಸೂರ್ಯ ಜೊತೆ ‘ಎನ್​ಜಿಕೆ’ ಸಿನಿಮಾದಲ್ಲಿ ನಟಿಸಿದ್ದರು. ಸಿನಿಮಾದಲ್ಲಿ ಸಾಯಿ ಪಲ್ಲವಿ ನಾಯಕ. ಸಿನಿಮಾ ಅನ್ನು ತಮಿಳಿನ ಸ್ಟಾರ್ ನಿರ್ದೇಶಕ ಸೆಲ್ವರಾಘವನ್ ನಿರ್ದೇಶನ ಮಾಡಿದ್ದರು. ಸಿನಿಮಾದಲ್ಲಿ ನಟಿಸಲು ಸಾಯಿ ಪಲ್ಲವಿ ಬಹಳ ಉತ್ಸುಕರಾಗಿದ್ದರಂತೆ. ಆದರೆ ಸಿನಿಮಾ ಶೂಟಿಂಗ್ ಪ್ರಾರಂಭವಾದ ಎರಡೇ ದಿನಕ್ಕೆ ಅವರಿಗೆ ಸೆಟ್ ಬಿಟ್ಟು ಹೋಗುವ ಮನಸ್ಸಾಗಿತ್ತಂತೆ. ಯಾಕೋ ಇದು ಸರಿಬರುತ್ತಿಲ್ಲ ಎನಿಸಿತ್ತಂತೆ.

ಈ ಬಗ್ಗೆ ಮಾತನಾಡಿರುವ ಸಾಯಿ ಪಲ್ಲವಿ, ‘ನಾವು ಯಾವುದೇ ಶಾಟ್ ಕೊಟ್ಟಾಗ ಸೆಲ್ವರಾಗವನ್ ಅವರು ನಮಗೆ ಏನೂ ಹೇಳುತ್ತಿರಲಿಲ್ಲ. ನನ್ನ ಜೊತೆಗಂತೂ ಸರಿಯಾಗಿ ಮಾತನಾಡುತ್ತಲೂ ಇರಲಿಲ್ಲ. ನಾನು ಸರಿಯಾಗಿ ನಟಿಸುತ್ತಿದ್ದೇನಾ ಇಲ್ಲವಾ? ಎಂಬ ಅನುಮಾನ ಬರುತ್ತಿತ್ತು, ಸೆಲ್ವರಾಘವನ್ ಯಾವುದೇ ಫೀಡ್​ಬ್ಯಾಕ್ ಕೊಡದೇ ಇರುವುದು ನೋಡಿ ನಾನು ಸರಿಯಾಗಿ ನಟಿಸುತ್ತಿಲ್ಲ ಎಂದೇ ನಾನು ಭಾವಿಸಿದ್ದೆ, ಎರಡೇ ದಿನಕ್ಕೆ ನನಗೆ ಇದು ಸರಿಬರುತ್ತಿಲ್ಲ ನಾನು ಸಿನಿಮಾ ಬಿಟ್ಟು ಹೊರಟುಬಿಡಬೇಕು ಎನ್ನಿಸಿತ್ತು’ ಎಂದಿದ್ದಾರೆ ಸಾಯಿ ಪಲ್ಲವಿ.

ಇದನ್ನೂ ಓದಿ:ಸೈನಿಕರ ಬಗ್ಗೆ ಸಾಯಿ ಪಲ್ಲವಿ ಮಾತು: ಹಳೆ ವಿಡಿಯೋ ಹಂಚಿಕೊಂಡು ಟ್ರೋಲ್

ಆದರೆ ಆ ಬಳಿಕ, ಸೆಲ್ವರಾಘವನ್ ಅವರ ಸಹೋದರ ಸ್ಟಾರ್ ನಟ ಧನುಶ್ ಕರೆ ಮಾಡಿ, ಹೇಗಿತ್ತು ಅನುಭವ ಎಂದು ಕೇಳಿದಾಗ ಅವರ ಬಳಿ ಸಾಯಿ ಪಲ್ಲವಿ ತಮ್ಮ ಸಮಸ್ಯೆ ಹೇಳಿಕೊಂಡರಂತೆ, ಹೀಗೆ ನನಗೆ ಸೆಲ್ವರಾಘವನ್ ಅವರು ಫೀಡ್​ಬ್ಯಾಕ್ ಕೊಡುತ್ತಿಲ್ಲ, ಹೀಗೆ ನಟಿಸಿ ಎಂದು ಸಹ ಹೇಳುತ್ತಿಲ್ಲ ಎಂದಂತೆ. ಆಗ ಧನುಶ್, ‘ಅದು ಅವರ ಶೈಲಿ, ಮೊದಲಿಗೆ ನಟರನ್ನು ಪರೀಕ್ಷೆ ಮಾಡುತ್ತಾರೆ ಆ ನಂತರ ನಟಿಸಲು ಹೇಳುತ್ತಾರೆ’ ಎಂದರಂತೆ. ಆ ನಂತರ ಸಾಯಿ ಪಲ್ಲವಿಗೆ ತುಸು ಧೈರ್ಯ ಬಂತಂತೆ.

‘ಎನ್​ಜಿಕೆ’ ಸಿನಿಮಾ ಅಸಲಿಗೆ ಬಾಕ್ಸ್ ಆಫೀಸ್​ನಲ್ಲಿ ಫ್ಲಾಪ್ ಆಯ್ತು. ಆ ಸಿನಿಮಾ ಬಿಡುಗಡೆಗೆ ಮುಂಚೆ ಭಾರಿ ಪ್ರಚಾರ ಮಾಡಲಾಗಿತ್ತು. ಆದರೆ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಗಳಿಸಲಿಲ್ಲ. ಸಾಯಿ ಪಲ್ಲವಿ ನಟನೆಯ ‘ಅಮರನ್’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಸಾಯಿ ಪಲ್ಲವಿಯ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಸಾಯಿ ಪಲ್ಲವಿ ನಟೆಯ ತೆಲುಗಿನ ‘ತಾಂಡೇಲ್’ ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ. ಬಾಲಿವುಡ್​ನ ಎರಡು ದೊಡ್ಡ ಪ್ರಾಜೆಕ್ಟ್​ಗಳಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಆಮಿರ್ ಖಾನ್ ಪುತ್ರನ ಸಿನಿಮಾದಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ. ಇನ್ನು ರಣ್​ಬೀರ್ ಕಪೂರ್, ಯಶ್ ನಟನೆಯ ‘ರಾಮಾಯಣ’ ಆಧರಿಸಿದ ಸಿನಿಮಾದಲ್ಲಿ ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us