‘ಕಾವೇರಿ ವಿಷಯದಲ್ಲಿ ಕನ್ನಡಿಗರ ನಿಲುವೇ ನನ್ನ ನಿಲುವು’: ನಿಖಿಲ್​ ಕುಮಾರಸ್ವಾಮಿ

‘ಕಾವೇರಿ ವಿಷಯದಲ್ಲಿ ಅನ್ಯಾಯ ಸಹಿಸಲು ಸಾಧ್ಯವಿಲ್ಲ. ರಾಜಿ ಆಗುವ ಪ್ರಶ್ನೆಯೇ ಇಲ್ಲ. ರಾಜ್ಯದ ಕಾಂಗ್ರೆಸ್‌ ಸರ್ಕಾರವು ಈ ವಿಚಾರದಲ್ಲಿ ಆಡುತ್ತಿರುವ ಕಪಟ ನಾಟಕ ಸಾಕು. ಕರ್ನಾಟಕದ ಹಿತಾಸಕ್ತಿ ಕಡೆಗಣಿಸುವ ಯಾವುದೇ ಕೆಲಸವನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ’ ಎಂದು ನಿಖಿಲ್​ ಕುಮಾರ್​ ಬರೆದುಕೊಂಡಿದ್ದಾರೆ.

‘ಕಾವೇರಿ ವಿಷಯದಲ್ಲಿ ಕನ್ನಡಿಗರ ನಿಲುವೇ ನನ್ನ ನಿಲುವು’: ನಿಖಿಲ್​ ಕುಮಾರಸ್ವಾಮಿ
ನಿಖಿಲ್​ ಕುಮಾರ್​
Follow us
|

Updated on: Sep 21, 2023 | 4:45 PM

ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ (Cauvery) ನದಿ ನೀರು ಹಂಚಿಕೆ ಕುರಿತ ಸಮಸ್ಯೆ (Cauvery Dispute) ಮುಂದುವರಿದಿದೆ. ಈ ಬಾರಿ ಕರ್ನಾಟಕದಲ್ಲಿ ಸರಿಯಾಗಿ ಮಳೆ ಆಗಿಲ್ಲ. ಆ ಕಾರಣದಿಂದ ರಾಜ್ಯದಲ್ಲಿ ನೀರಿನ ಅಭಾವ ಉಂಟಾಗಿದೆ. ರಾಜ್ಯದ ಹಲವು ಜಿಲ್ಲೆಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ. ಇಂಥ ಸಂದರ್ಭದಲ್ಲಿ ಪಕ್ಕದ ರಾಜ್ಯವಾದ ತಮಿಳುನಾಡಿಗೆ ಹೆಚ್ಚು ನೀರು ಬಿಡುವುದು ಕಷ್ಟದ ಕೆಲಸ. ಕರ್ನಾಟಕದ ರೈತರಿಗೆ ನೀರು ಸಿಗುವಂತೆ ಮಾಡಲು ಹೋರಾಟ ನಡೆಯುತ್ತಿದೆ. ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಈ ಬಗ್ಗೆ ತಮ್ಮ ಧ್ವನಿ ಎತ್ತಿದ್ದಾರೆ. ನಟ, ರಾಜಕಾರಣಿ ನಿಖಿಲ್​ ಕುಮಾರ್​ (Nikhil Kumar) ಕೂಡ ತಮ್ಮ ನಿಲುವು ಏನು ಎಂಬುದನ್ನು ಸೋಶಿಯಲ್​ ಮೀಡಿಯಾ ಮೂಲಕ ತಿಳಿಸಿದ್ದಾರೆ.

‘ಕಾವೇರಿ ಕನ್ನಡಿಗರ ಹಕ್ಕು. ಕಾವೇರಿ ಕನ್ನಡಿಗರ ಜೀವನಾಡಿ ಆಗಿದೆ. ಈ ವಿಷಯದಲ್ಲಿ ಅನ್ಯಾಯ ಸಹಿಸಲು ಸಾಧ್ಯವಿಲ್ಲ. ರಾಜಿ ಆಗುವ ಪ್ರಶ್ನೆಯೇ ಇಲ್ಲ. ರಾಜ್ಯದ ಕಾಂಗ್ರೆಸ್‌ ಸರ್ಕಾರವು ಈ ವಿಚಾರದಲ್ಲಿ ಆಡುತ್ತಿರುವ ಕಪಟ ನಾಟಕ ಸಾಕು. ಕರ್ನಾಟಕದ ಹಿತಾಸಕ್ತಿ ಕಡೆಗಣಿಸುವ ಯಾವುದೇ ಕೆಲಸವನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ’ ಎಂದು ನಿಖಿಲ್​ ಕುಮಾರ್​ ಅವರು ತಮ್ಮ ಬರಹ ಆರಂಭಿಸಿದ್ದಾರೆ. ಈಗಿನ ರಾಜ್ಯ ಸರ್ಕಾರವನ್ನು ಅವರು ಟೀಕಿಸಿದ್ದಾರೆ.

ಕಾವೇರಿ ನೀರು ಹಂಚಿಕೆ ವಿವಾದದ ಬಗ್ಗೆ ನಿಖಿಲ್​ ಕುಮಾರ್​ ಪೋಸ್ಟ್

‘ನಮ್ಮ ರಾಜ್ಯದಲ್ಲಿ ನೀರಿನ ಕೊರತೆ ಉಂಟಾಗಿದೆ. ಈ ವರ್ಷ ಮಳೆ ಕೈಕೊಟ್ಟಿದೆ. ರಾಜ್ಯದಲ್ಲಿನ ಜಲಾಶಯಗಳು ಬರಿದಾಗಿವೆ. ಆದರೂ ರಾಜ್ಯ ಸರ್ಕಾರವು ಏಕಪಕ್ಷೀಯವಾಗಿ ತಮಿಳುನಾಡಿಗೆ ನೀರು ಹರಿಸಿದ್ದು ಅಕ್ಷಮ್ಯ. ಬ್ರಿಟಿಷರ ಕಾಲದಲ್ಲಿ ಶುರುವಾದ ಅನ್ಯಾಯದ ಪರಂಪರೆಯನ್ನು ನಮ್ಮ ರಾಜ್ಯ ಸರ್ಕಾರವೇ ಮುಂದುವರಿಸಿದೆ’ ಎಂದು ನಿಖಿಲ್​ ಕುಮಾರ್​ ಅವರು ಅಭಿಪ್ರಾಯಪಟ್ಟಿದ್ದಾರೆ.

ನಿಖಿಲ್​ ಕುಮಾರ್​ ಸಿನಿಮಾದ ಸೆಟ್​ಗೆ ಭೇಟಿ ನೀಡಿದ ಶಿವರಾಜ್​ಕುಮಾರ್​; ಫೋಟೋ ವೈರಲ್​

‘ಸ್ವಾತಂತ್ರ್ಯ ನಂತರವೂ ಇದು ಮುಂದುವರಿದಿದೆ. ಕಾಂಗ್ರೆಸ್‌ ಪಕ್ಷಕ್ಕೆ ಕಾವೇರಿ ಎಂಬುದು ರಾಜಕೀಯ ಲಾಭದ ವಸ್ತುವಿನ ರೀತಿ ಆಗಿರುವುದು ನೋವಿನ ಸಂಗತಿ. ಕಾವೇರಿ ನೀರಿನ ವಿಷಯದಲ್ಲಿ ಕನ್ನಡಿಗರ ನಿಲುವೇ ನನ್ನ ನಿಲುವು ಆಗಿದೆ. ಆರೂವರೆ ಕೋಟಿ ಕನ್ನಡಿಗರ ದನಿಯೇ ನನ್ನ ದನಿ. ತಾಯಿ ಕಾವೇರಿಗಾಗಿ ಯಾವುದೇ ಹೋರಾಟಕ್ಕೂ ನಾನು ಸಿದ್ಧ ಆಗಿದ್ದೇನೆ’ ಎಂದು ನಿಖಿಲ್​ ಕುಮಾರ್​ ಅವರು ಬರಹ ಪೂರ್ಣಗೊಳಿಸಿದ್ದಾರೆ. ಶಿವರಾಜ್​ಕುಮಾರ್​, ದರ್ಶನ್​, ಸುದೀಪ್​, ಅಭಿಷೇಕ್​ ಅಂಬರೀಷ್​, ಸತೀಶ್​ ನೀನಾಸಂ, ಉಪೇಂದ್ರ, ಪೂಜಾ ಗಾಂಧಿ, ದುನಿಯಾ ವಿಜಯ್​, ಸಾರಾ ಗೋವಿಂದು ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕಾವೇರಿ ಹೋರಾಟದ ಪರವಾಗಿ ಧ್ವನಿ ಎತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.