
ರವಿಚಂದ್ರನ್ (Ravichandran), ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ. ತಮ್ಮ ಅದ್ಧೂರಿ ಸಿನಿಮಾಗಳಿಂದಾಗಿ ‘ಕನಸುಗಾರ’ ಎಂದೇ ಕರೆಸಿಕೊಳ್ಳುವ ರವಿಚಂದ್ರನ್, ‘ನನಗೆ ಸಿನಿಮಾ ಬಿಟ್ಟು ಇನ್ನೇನೂ ಬರುವುದಿಲ್ಲ’ ಎಂದು ಹಲವು ಬಾರಿ ಹೇಳಿಕೊಂಡಿದ್ದಾರೆ. ಆದರೆ ಇದೀಗ ರವಿಚಂದ್ರನ್ ಸಿನಿಮಾದ ಜೊತೆಗೆ ರಾಜಕೀಯ ಅಂಗಳಕ್ಕೆ ಇಳಿಯುತ್ತಿದ್ದಾರೆಂಬ ಸುದ್ದಿ ಬಲವಾಗಿ ಹರಿದಾಡುತ್ತಿದೆ. ರವಿಚಂದ್ರನ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವ ಪ್ರಯತ್ನ ನಡೆಯುತ್ತಿದ್ದು, ಖುದ್ದು ಸಿಎಂ ಡಿಕೆ ಶಿವಕುಮಾರ್ ಅವರೇ ಶಿಫಾರಸ್ಸು ಮಾಡಿದ್ದಾರೆ ಎನ್ನಲಾಗಿದೆ.
ಕಲೆ, ಸಾಹಿತ್ಯ, ವಿಜ್ಞಾನ ಇನ್ನಿತರೆ ಕ್ಷೇತ್ರಗಳಲ್ಲಿ ಸೇವೆ ಸಲ್ಲಿದವರನ್ನು ಪರಿಷತ್ತಿನ ಸದಸ್ಯರಾಗಿ ಆಯ್ಕೆ ಮಾಡಲಾಗುತ್ತದೆ. ಈ ಬಾರಿ ರವಿಚಂದ್ರನ್ ಅವರನ್ನು ಕಲಾ ಕ್ಷೇತ್ರದಿಂದ ಪರಿಷತ್ತಿಗೆ ಕಳಿಸಲಾಗುತ್ತಿದೆ ಎನ್ನಲಾಗುತ್ತಿದೆ. ರವಿಚಂದ್ರನ್ ಅವರ ಅಭಿಮಾನಿಗಳು, ತಮ್ಮ ಮೆಚ್ಚಿನ ನಟ ಎಂಎಲ್ಸಿ ಆಗುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಖುಷಿ ಹಂಚಿಕೊಳ್ಳುತ್ತಿದ್ದಾರೆ. ರವಿಚಂದ್ರನ್, ಡಿಕೆ ಶಿವಕುಮಾರ್ ಅವರನ್ನು ರವಿಚಂದ್ರನ್ ಕೆಲವು ಭಾರಿ ಭೇಟಿ ಆಗಿದ್ದರು, ಇತ್ತೀಚೆಗಷ್ಟೆ ಸಿಎಂ ಅವರ ಸ್ವಗೃಹದಲ್ಲಿ ರವಿಚಂದ್ರನ್ ಭೇಟಿ ಆಗಿದ್ದರು. ಇದು ಸಹ ಈ ಹೊಸದಾಗಿ ಹರಿದಾಡುತ್ತಿರುವ ಎಂಎಲ್ಸಿ ಸುದ್ದಿಗೆ ಪುಷ್ಠಿ ನೀಡಿದೆ.
ಈ ಹಿಂದೆ ಸಿನಿಮಾ ಸಂಬಂಧಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಡಿಕೆ ಶಿವಕುಮಾರ್, ‘ನಮ್ಮನ್ನು ಬೆಂಬಲಿಸಿದವರಿಗೆ ನಾನು ಗೌರವ ಸಲ್ಲಿಸುತ್ತೇವೆ. ಸಾಧುಕೋಕಿಲ ವರ್ಷಗಳಿಂದಲೂ ನಮ್ಮ ಜೊತೆಗಿದ್ದಾರೆ, ಅವರಿಗೆ ಸೂಕ್ತ ಸ್ಥಾನ ಮಾನ (ಅಕಾಡೆಮಿ ಅಧ್ಯಕ್ಷ ಸ್ಥಾನ) ನೀಡಿದ್ದೇವೆ ಎಂದಿದ್ದರು. ರವಿಚಂದ್ರನ್, ಸಕ್ರಿಯವಾಗಿ ಕಾಂಗ್ರೆಸ್ ಅಥವಾ ಯಾವುದೇ ರಾಜಕೀಯ ಪಕ್ಷದ ಜೊತೆಗೆ ಗುರುತಿಸಿಕೊಂಡಿಲ್ಲ ಆದರೆ ಡಿಕೆ ಶಿವಕುಮಾರ್ ಅವರ ಆಪ್ತ ಗೆಳೆಯರಾಗಿದ್ದಾರೆ. ಕೆಲ ತಿಂಗಳ ಹಿಂದೆಯಷ್ಟೆ ನಡೆದಿದ್ದ ‘ಮದ್ದೂರಮ್ಮ ಉತ್ಸವ’ದಲ್ಲಿ ಭಾಗಿ ಆಗಿದ್ದ ರವಿಚಂದ್ರನ್, ಡಿಕೆ ಶಿವಕುಮಾರ್ ಕುರಿತು ಭಾವುಕವಾಗಿ ಮಾತನಾಡಿದ್ದರು, ‘ನಾನು ಕೈ ಚಾಚುವ ಮುನ್ನವೇ ನನ್ನ ಕೈಹಿಡಿದಿದ್ದಾರೆ. ನನ್ನನ್ನು ಬಹು ದೊಡ್ಡ ಕಷ್ಟದಿಂದ ಪಾರು ಮಾಡಿದ್ದಾರೆ. ಜೀವನ ಪರ್ಯಂತ ಅವರ ಋಣದಲ್ಲಿ ನಾನು ಇರುತ್ತೀವಿ, ಅವರ ಆಜ್ಞೆ ಪಾಲಿಸುತ್ತೀನಿ’ ಎಂದೆಲ್ಲ ಹೇಳಿದ್ದರು. ಮಾತ್ರವಲ್ಲದೆ, ಡಿಕೆ ಶಿವಕುಮಾರ್ ಅವರ ನಾಯಕತ್ವವನ್ನು ಕೊಂಡಾಡಿದ್ದಾರೆ. ದೇಶದ ಡೈನಮಿಕ್ ನಾಯಕ ಎಂದೆಲ್ಲ ಹೊಗಳಿದ್ದರು.
ಇದನ್ನೂ ಓದಿ:ರವಿಚಂದ್ರನ್ ಮನೆ ಮಾರಿದ್ದು ನಿಜವೇ? ಅಸಲಿ ವಿಷಯ ತೆರೆದಿಟ್ಟ ದಿಲ್ ಸೇ ದಿಲೀಪ್
ಡಿಕೆ ಶಿವಕುಮಾರ್ ಸಹ, ರವಿಚಂದ್ರನ್ ತಮ್ಮ ಬಾಲ್ಯದ ಗೆಳೆಯ, ಶಾಲಾ ಸಹಪಾಠಿ ಎಂದೆಲ್ಲ ಕೊಂಡಾಡಿದ್ದರು. ಇದೀಗ ತಮ್ಮ ಬಾಲ್ಯದ ಗೆಳೆಯನಿಗೆ ಪರಿಷತ್ತಿನ ಸ್ಥಾನವನ್ನು ‘ಉಡುಗೊರೆ’ಯಾಗಿ ಕೊಡಲು ಮುಂದಾಗಿದ್ದಾರೆ. ರವಿಚಂದ್ರನ್ ಅವರಿಗೆ ಪರಿಷತ್ ಸ್ಥಾನದ ಬಗ್ಗೆ ಕಾಂಗ್ರೆಸ್ ಆಗಲಿ, ಸಿಎಂ ಕಚೇರಿಯಾಗಲಿ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ರವಿಚಂದ್ರನ್ ಅಭಿಮಾನಿಗಳು ಹೀಗೊಂದು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ