ಅಂದು ‘ಮುಂಗಾರು ಮಳೆ’, ಇಂದು ‘ಮನದ ಕಡಲು’: ಯೋಗರಾಜ್ ಭಟ್-ಇ. ಕೃಷ್ಣಪ್ಪ ಹೊಸ ಸಿನಿಮಾ

‘ಮುಂಗಾರು ಮಳೆ’ ಸಿನಿಮಾದ ನಿರ್ದೇಶಕ ಯೋಗರಾಜ್‍ ಭಟ್‍ ಹಾಗೂ ನಿರ್ಮಾಪಕ ಇ. ಕೃಷ್ಣಪ್ಪ ಅವರು ಮತ್ತೆ ಒಂದಾಗಿದ್ದಾರೆ. ಈಗ ಅವರು ‘ಮನದ ಕಡಲು’ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಸುಮುಖ, ರಾಶಿಕಾ ಶೆಟ್ಟಿ, ಅಂಜಲಿ ಅನೀಶ್, ದತ್ತಣ್ಣ, ರಂಗಾಯಣ ರಘು ಮುಂತಾದವರು ನಟಿಸುತ್ತಿದ್ದಾರೆ. ಈಗಾಗಲೇ ಶೇಕಡ 95 ಭಾಗ ಶೂಟಿಂಗ್​ ಪೂರ್ಣಗೊಂಡಿದೆ.

ಅಂದು ‘ಮುಂಗಾರು ಮಳೆ’, ಇಂದು ‘ಮನದ ಕಡಲು’: ಯೋಗರಾಜ್ ಭಟ್-ಇ. ಕೃಷ್ಣಪ್ಪ ಹೊಸ ಸಿನಿಮಾ
‘ಮನದ ಕಡಲು’ ಸಿನಿಮಾ ತಂಡ

Updated on: Nov 28, 2024 | 4:24 PM

2006ರಲ್ಲಿ ‘ಮುಂಗಾರು ಮಳೆ’ ಸಿನಿಮಾ ಬಿಡುಗಡೆಯಾಗಿ ಸೂಪರ್​ ಹಿಟ್​ ಆಗಿತ್ತು. ಆ ಸಿನಿಮಾಗೆ ನಿರ್ದೇಶನ ಮಾಡಿದ್ದ ಯೋಗರಾಜ್​ ಭಟ್​ ಹಾಗೂ ನಿರ್ಮಾಣ ಮಾಡಿದ್ದ ಇ. ಕೃಷ್ಣಪ್ಪ ಅವರು ಈಗ ಮತ್ತೆ ಒಂದಾಗಿದ್ದಾರೆ. ಬರೋಬ್ಬರಿ 18 ವರ್ಷಗಳ ನಂತರ ಅವರಿಬ್ಬರ ಕಾಂಬಿನೇಷನ್​ನಲ್ಲಿ ಹೊಸ ಸಿನಿಮಾ ಬರುತ್ತಿದೆ. ಈ ಸಿನಿಮಾಗೆ ‘ಮನದ ಕಡಲು’ ಎಂದು ಶೀರ್ಷಿಕೆ ಇಡಲಾಗಿದೆ. ಸುಮುಖ ಅವರು ಈ ಚಿತ್ರಕ್ಕೆ ಹೀರೋ ಆಗಿದ್ದಾರೆ. ರಾಶಿಕಾ ಶೆಟ್ಟಿ ಹಾಗೂ ಅಂಜಲಿ ಅನೀಶ್ ಅವರು ನಾಯಕಿಯರಾಗಿ ನಟಿಸುತ್ತಿದ್ದಾರೆ. ಅನುಭವಿ ನಟ ರಂಗಾಯಣ ರಘು ಅವರಿಗೂ ಈ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರವಿದೆ.

ಜಿ. ಗಂಗಾಧರ್ ಅವರು ‘ಮನದ ಕಡಲು’ ಸಿನಿಮಾಗೆ ಸಹ ನಿರ್ಮಾಪಕರಾಗಿದ್ದಾರೆ. ಬೆಂಗಳೂರಿನಲ್ಲಿ ಈ ಸಿನಿಮಾಗೆ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಅದರ ನಡುವೆ ಸುದ್ದಿಗೋಷ್ಠಿ ನಡೆಸಲಾಗಿದೆ. ಸಿನಿಮಾ ಬಗ್ಗೆ ಯೋಗರಾಜ್​ ಭಟ್​ ಅವರು ಮಾತನಾಡಿದರು. ‘ಕೊರೋನಾ ನಂತರ ಮತ್ತೆ ಇ. ಕೃಷ್ಣಪ್ಪ ಅವರ ಜೊತೆ ಸಿನಿಮಾ ಮಾಡುವುದು ನಿರ್ಧಾರವಾಯಿತು. ಹೊಸಬರ ಜೊತೆಗೆ ಸಿನಿಮಾ ಮಾಡೋಣ ಅಂತ ಕೃಷ್ಣಪ್ಪ ಹೇಳಿದರು. ಅದು ಸುಲಭವಲ್ಲ. ಈ ಚಿತ್ರಕ್ಕೆ ಹೀರೋ ಸಿಕ್ಕಿರಲಿಲ್ಲ. ಯಾವುದೋ ಕೆಲಸದ ಸಲುವಾಗಿ ಫೋನ್‍ ಮಾಡಿದ್ದ ಸುಮುಖ ನಮಗೆಲ್ಲ ಇಷ್ಟವಾದ’ ಎಂದಿದ್ದಾರೆ ಯೋಗರಾಜ್​ ಭಟ್​.

‘ಈ ಸಿನಿಮಾಗಾಗಿ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಶೂಟಿಂಗ್​ ಮಾಡಿದ್ದೇವೆ. ಕರ್ನಾಟಕದ 12 ಜಿಲ್ಲೆಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಮಹಾರಾಷ್ಟ್ರದ ಮುರುಡ್‍ ಜಂಜೀರ ಸಮುದ್ರದ ಮಧ್ಯ ಇರುವ ಕೋಟೆಯಲ್ಲಿ ಚಿತ್ರೀಕರಣ ನಡೆದಿದೆ. ಅದಕ್ಕೆ 15 ರೀತಿಯ ಅನುಮತಿ ಬೇಕಿತ್ತು. ಅದೊಂದು ಯುದ್ಧ ಮಾಡಿದ ಅನುಭವ. ಈ ಸಿನಿಮಾದಲ್ಲಿ ರಂಗಾಯಣ ರಘು ಅವರು ಆದಿವಾಸಿಯಾಗಿ ಕಾಣಿಸಿಕೊಂಡಿದ್ದಾರೆ. ಅವರಿಗಾಗಿ ಹೊಸ ಭಾಷೆ ಸೃಷ್ಟಿ ಮಾಡಿದ್ದೇವೆ’ ಎಂದು ಯೋಗರಾಜ್​ ಭಟ್​ ಅವರು ಹೇಳಿದ್ದಾರೆ.

ಇದನ್ನೂ ಓದಿ: ಯೋಗರಾಜ್ ಭಟ್ ಎದುರು ಅನಾವರಣವಾಯಿತು ಹನುಮಂತನ ನಿಜವಾದ ಬಣ್ಣ

‘ಇದು ಒಂದು ಪ್ರಾಮಾಣಿಕ ಪ್ರಯತ್ನ. ಕನ್ನಡದಲ್ಲಿ ಸಾಕಷ್ಟು ಹೊಸ ಪ್ರತಿಭೆಗಳು ಇದ್ದಾರೆ. ಅವರನ್ನು ಸರಿಯಾಗಿ ಗುರುತಿಸುವ ಕೆಲಸ ಆಗುತ್ತಿಲ್ಲ. ಹೊಸಬರಿಗೆ ಒಳ್ಳೆಯದಾಗಬೇಕು. ಈ ಸಿನಿಮಾ ಕೂಡ ಮುಂಗಾರು ಮಳೆ ಮಟ್ಟಕ್ಕೆ ಹೋಗಬೇಕು’ ಎಂದು ನಿರ್ಮಾಪಕ ಇ. ಕೃಷ್ಣಪ್ಪ ಹೇಳಿದ್ದಾರೆ. ಸಿನಿಮಾ ಹೀರೋ ಬಗ್ಗೆ ರಂಗಾಯಣ ರಘು ಮಾತನಾಡಿದರು. ‘ನಟ ಎಂದರೆ ಜಿಮ್‍ನಿಂದ ಬರಬೇಕು ಎಂಬಂತಾಗಿದೆ. ಅವರಿಗೆ ಭಾಷೆ-ಭಾವ ತಿಳಿದಿರುವುದಿಲ್ಲ. ಸಿನಿಮಾಗೆ ಬೇಕಾಗಿರುವುದು ಅಭಿನಯ. ಸುಮುಖ ಓದಿಕೊಂಡು, ಸಿನಿಮಾ ಬಗ್ಗೆ ತಿಳಿದುಕೊಂಡಿದ್ದಾನೆ. ಚೆನ್ನಾಗಿ ಅಭಿನಯಿಸುತ್ತಾನೆ’ ಎಂದಿದ್ದಾರೆ ರಂಗಾಯಣ ರಘು.

ಹಿರಿಯ ನಟ ದತ್ತಣ್ಣ ಅವರು ಈ ಸಿನಿಮಾದಲ್ಲಿ 100 ವರ್ಷದ ಮುದುಕನ ಪಾತ್ರ ಮಾಡಿದ್ದಾರೆ. ಹರಿಕೃಷ್ಣ ಅವರು ಈ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. ಸಂತೋಷ್​ ರೈ ಪಾತಾಜೆ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us