ಪುನೀತ್ ರಾಜ್ಕುಮಾರ್ ನಿಧನ ಬಳಿಕ ಎರಡು ದಿನ ಹಲವೆಡೆ ಜಿಮ್ ಬಂದ್ ಮಾಡಿ ಸಂತಾಪ ಸೂಚಿಸಲಾಗಿತ್ತು. ಇದೀಗ ಜಿಮ್ ಓಪನ್ ಆಗಿದ್ದರೂ ಕೂಡ ಜನರು ವರ್ಕೌಟ್ ಮಾಡಲು ಹೋಗುತ್ತಿಲ್ಲ. ರಾಜ್ಯಾದ್ಯಂತ ಜಿಮ್ ಬಗ್ಗೆ ಯುವಕರ ನಿರ್ಲಕ್ಷ್ಯದ ಮಾತು ಕೇಳಿಬರುತ್ತಿದೆ. ಪೋಷಕರು ಕೂಡ ಜಿಮ್ಗೆ ಹೋಗದಂತೆ ಮಕ್ಕಳನ್ನು ತಡೆಯುತ್ತಿದ್ದಾರೆ. ಔಟ್ ಡೋರ್ ಫಿಟ್ನೆಸ್ಗೆ ಆದ್ಯತೆ ಕೊಡವಂತೆ ಸಲಹೆ ನೀಡುತ್ತಿದ್ದಾರೆ.
ರಾಜ್ಯದ್ಯಂತ ಶೇ.50ರಷ್ಟು ಮಂದಿ ಜಿಮ್ ಹೋಗಲು ಒಲವು ತೋರುತ್ತಿಲ್ಲ. ಬೆಂಗಳೂರಿನಲ್ಲಿ ಶೇ.60ರಷ್ಟು ಜನರು ಜಿಮ್ಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಪುನೀತ್ ಅವರ ಹೃದಯಾಘಾತಕ್ಕೆ ಜಿಮ್ ವರ್ಕೌಟ್ ಕಾರಣ ಎಂಬ ಭಾವನೆ ಹಲವರಲ್ಲಿ ಬೇರೂರಿದೆ. ‘ಪ್ರತಿ ದಿನ 130 ಯುವಕ-ಯುವತಿಯರು ಜಿಮ್ಗೆ ಬರುತಿದ್ದರು. ಆದರೆ ಈಗ 50ರಿಂದ 70 ಜನರು ಮಾತ್ರ ಬರುತ್ತಿದ್ದಾರೆ. ಕೊರೊನಾ ಸಂಕಷ್ಟದಿಂದ ಈಗಷ್ಟೇ ಹೊರ ಬರುತ್ತಿದ್ದೇವೆ. ಇಂಥ ಹೊತ್ತಿನಲ್ಲಿ ಮತ್ತೆ ತೊಂದರೆಯಾಗುತ್ತಿದೆ’ ಎಂದಿದ್ದಾರೆ ಕತ್ತರಿಗುಪ್ಪೆಯ ಜಿಮ್ ಟ್ರೈನರ್ ಸುರೇಶ್.
ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಹಲವು ಕಡೆಗಳಲ್ಲಿ ಜಿಮ್ ಪರಿಸ್ಥಿತಿ ಇದೇ ರೀತಿ ಆಗಿದೆ. ಕಲಬುರಗಿ ನಗರದಲ್ಲಿ ಪ್ರತಿ ದಿನ ತುಂಬಿರುತ್ತಿದ್ದ ಜಿಮ್ಗಳು ಇದೀಗ ಖಾಲಿ ಹೊಡೆಯುತ್ತಿವೆ. ಒಂದು ಶಿಫ್ಟ್ನಲ್ಲಿ ನಲವತ್ತು ಜನರು ಮೊದಲು ಬರುತ್ತಿದ್ದರು. ಇದೀಗ ಹತ್ತು ಜನ ಬರುತ್ತಿದ್ದಾರೆ. ಹೀಗಾಗಿ ಬಾಡಿಗೆ ಕಟ್ಟೋದು ಹೇಗೆ ಅನ್ನೋ ಚಿಂತೆ ಜಿಮ್ ಮಾಲೀಕರನ್ನು ಕಾಡುತ್ತಿದೆ.
ಸರಿಯಾದ ಕ್ರಮದಲ್ಲಿ ವರ್ಕೌಟ್ ಮಾಡಿದರೆ ಯಾವುದೇ ತೊಂದರೆ ಇಲ್ಲ ಎಂಬುದು ತಜ್ಞರ ಅಭಿಪ್ರಾಯ. ಜಿಮ್ಗೆ ತೆರಳುವ ಮುನ್ನ ಹೃದಯಕ್ಕೆ ಸಂಬಂಧಿಸಿದ ಒಂದಷ್ಟು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ ಎಂಬ ಸಲಹೆ ವೈದ್ಯರಿಂದ ಕೇಳಿಬರುತ್ತದೆ.
ಇದನ್ನೂ ಓದಿ
‘ಪುನೀತ್ ಅತಿಯಾಗಿ ಜಿಮ್ ಮಾಡಿದ್ರು’: ಕರಾಳ ಶುಕ್ರವಾರದ ಘಟನೆ ವಿವರಿಸಿದ ಸೆಕ್ಯೂರಿಟಿ ಸಿಬ್ಬಂದಿ
ಸಕ್ರೆಬೈಲು ಆನೆ ಮರಿಗೆ ಪುನೀತ್ ಹೆಸರು; ವನ್ಯಜೀವಿಗಳ ಬಗ್ಗೆ ಅಪ್ಪುಗೆ ಇತ್ತು ವಿಶೇಷ ಕಾಳಜಿ