AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಲಂಗೋಟಿ ಮ್ಯಾನ್’ ಸಿನಿಮಾದ ಅಸಲಿ ವಿಷಯ ಏನು? ಸೆ.20ಕ್ಕೆ ತಿಳಿಯುತ್ತೆ ಸತ್ಯ

ಟ್ರೇಲರ್ ನೋಡಿದ ಎಲ್ಲರಿಗೂ ‘ಲಂಗೋಟಿ ಮ್ಯಾನ್’ ಸಿನಿಮಾದ ಕಥೆಯ ಮೇಲೆ ಕೌತುಕ ಹೆಚ್ಚಾಗಿದೆ. ಸೆ.20ರಂದು ಈ ಸಿನಿಮಾ ತೆರೆಕಾಣಲಿದೆ. ‘ತನು ಟಾಕೀಸ್’ ಮೂಲಕ ನಿರ್ಮಾಣವಾದ ಈ ಸಿನಿಮಾಗೆ ನಿರ್ದೇಶಕಿ ಸಂಜೋತಾ ಭಂಡಾರಿ ಅವರು ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಆಕಾಶ್​ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದ ಟ್ರೇಲರ್​ ಗಮನ ಸೆಳೆದಿದೆ.

‘ಲಂಗೋಟಿ ಮ್ಯಾನ್’ ಸಿನಿಮಾದ ಅಸಲಿ ವಿಷಯ ಏನು? ಸೆ.20ಕ್ಕೆ ತಿಳಿಯುತ್ತೆ ಸತ್ಯ
ಸ್ನೇಹಾ ಖುಷಿ, ಆಕಾಶ್​, ಸಂಹಿತಾ ವಿನ್ಯಾ, ಸಂಜೋತಾ ಭಂಡಾರಿ
ಮದನ್​ ಕುಮಾರ್​
|

Updated on: Sep 13, 2024 | 10:50 PM

Share

ಟ್ರೇಲರ್​ ಮತ್ತು ಟೈಟಲ್​ ಕಾರಣದಿಂದ ‘ಲಂಗೋಟಿ ಮ್ಯಾನ್​’ ಸಿನಿಮಾ ಒಂದಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಆ ಎಲ್ಲ ಅನುಮಾನಗಳಿಗೆ ಸೆಪ್ಟೆಂಬರ್​ 20ರಂದು ಉತ್ತರ ಸಿಗಲಿದೆ. ಅಂದರೆ, ಈ ಸಿನಿಮಾ ಸೆ.20ರಂದು ಬಿಡುಗಡೆ ಆಗಲಿದ್ದು, ಇದರ ಅಸಲಿ ಕಹಾನಿ ಏನು ಎಂಬುದು ಅಂದೇ ಬಹಿರಂಗ ಆಗಲಿದೆ. ಸದ್ಯಕ್ಕಂತೂ ‘ಲಂಗೋಟಿ ಮ್ಯಾನ್​’ ಟ್ರೇಲರ್ ನೋಡಿದವರು ಸಿಕ್ಕಾಪಟ್ಟೆ ನಗುತ್ತಿದ್ದಾರೆ. ಇನ್ನು, ಪೂರ್ತಿ ಸಿನಿಮಾ ಎಷ್ಟು ಕಾಮಿಡಿಯಾಗಿ ಇರಬಹುದು ಎಂಬ ನಿರೀಕ್ಷೆ ಮೂಡಿದೆ. ಇತ್ತೀಚೆಗೆ ಈ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು.

‘ಲಂಗೋಟಿ ಮ್ಯಾನ್​’ ಚಿತ್ರವು ‘ತನು ಟಾಕೀಸ್’ ಮೂಲಕ ನಿರ್ಮಾಣ ಆಗಿದೆ. ಈ ಚಿತ್ರಕ್ಕೆ ಸಂಜೋತಾ ಭಂಡಾರಿ ಅವರು ನಿರ್ದೇಶನ ಮಾಡಿದ್ದಾರೆ. ‘ಈ ಸಿನಿಮಾ ಅನಗತ್ಯ ಕಾರಣದಿಂದ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಸಿನಿಮಾ ನೋಡಿದ ನಂತರ ಈ ಶೀರ್ಷಿಕೆ ಯಾಕೆ ಇಟ್ಟಿದ್ದೇವೆ ಎಂಬುದು ಗೊತ್ತಾಗಲಿದೆ. ಯಾವ ಸಮುದಾಯವನ್ನೂ ನಾವು ಅವಮಾನ ಮಾಡಿಲ್ಲ. ಯಾರನ್ನೂ ನೋಯಿಸುವ ಉದ್ದೇಶ ನಮಗಿಲ್ಲ’ ಎಂದು ನಿರ್ದೇಶಕಿ ಸಂಜೋತಾ ಹೇಳಿದ್ದಾರೆ.

ನಟ ಧರ್ಮೇಂದ್ರ ಕೂಡ ಸಿನಿಮಾ ಬಗ್ಗೆ ಮಾಹಿತಿ ನೀಡಿದರು. ‘ಲಂಗೋಟಿ ವಿಷಯವನ್ನು ಕೇಂದ್ರವಾಗಿ ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ತಾತನಿಗೆ ಸಂಪ್ರದಾಯ, ಆಚಾರ-ವಿಚಾರ ಪಾಲಿಸಬೇಕು ಎನ್ನುವ ನಂಬಿಕೆ. ಆದರೆ ಆ ಸಂಪ್ರದಾಯಗಳ ಹೇರಿಕೆಯಿಂದ ನಾಯಕ ರೆಬೆಲ್ ಆಗುತ್ತಾನೆ. ಈ ಸಿನಿಮಾದ ಕಥೆ ಆಸಕ್ತಿಕರವಾಗಿದೆ. ಇದೊಂದು ಉತ್ತಮ ಕೌಟುಂಬಿಕ ಸಿನಿಮಾ’ ಎಂದು ಅವರು ಹೇಳಿದ್ದಾರೆ.

ಲಂಗೋಟಿ ಮ್ಯಾನ್​ ಟ್ರೇಲರ್:

ಆಕಾಶ್ ರಾಂಬೋ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ‘ತಾತ ಹಾಗೂ ಮೊಮ್ಮಗನ ಸುತ್ತ ನಡೆಯುವ ಕಥೆ ಇದು. ಮೊಮ್ಮಗ ಲಂಗೋಟಿ ಹಾಕಿಕೊಳ್ಳಬೇಕು‌ ಎಂಬುದು ತಾತನ ಬಯಕೆ. ಮೊಮ್ಮಗನಿಗೆ ಅಂಡರ್​ವೇರ್ ಹಾಕಿಕೊಳ್ಳುವ ಆಸೆ. ತಾತಾ ಬದುಕಿರುವ ತನಕ ಅಂಡರ್​ವೇರ್ ಹಾಕಲು ಬಿಡುವುದಿಲ್ಲ. ಈ ರೀತಿಯ ಹಾಸ್ಯಮಯ ಕಥೆ ನಮ್ಮ ಸಿನಿಮಾದಲ್ಲಿದೆ’ ಎಂದು ಆಕಾಶ್​ ಹೇಳಿದ್ದಾರೆ.

ಇದನ್ನೂ ಓದಿ: ‘ಅಮ್ಮಾವ್ರ ಗಂಡ’ ಚಿತ್ರದ ನಟಿ ಭಾಗ್ಯಶ್ರೀ ಪುತ್ರಿಯ ಸಿನಿಮಾಗೆ ನಾಗಶೇಖರ್​ ನಿರ್ದೇಶನ

ಈ ಸಿನಿಮಾದಲ್ಲಿ ಸಂಹಿತಾ ವಿನ್ಯಾ, ಹುಲಿ ಕಾರ್ತಿಕ್​, ಸ್ನೇಹಾ ಖುಷಿ, ಪಲ್ಟಿ ಗೋವಿಂದ್​, ಸಾಯಿ ಪವನ್​ ಕುಮಾರ್​ ಮುಂತಾದವರು ನಟಿಸಿದ್ದಾರೆ. ಪೊಲೀಸ್​ ಪಾತ್ರದಲ್ಲಿ ಸಂಹಿತಾ ವಿನ್ಯಾ ಅಭಿನಯಿಸಿದ್ದಾರೆ. ‘ಕಾಮಿಡಿ ಸಿನಿಮಾದ ಮೂಲಕ ಕೆಲವು ಗಂಭೀರ ವಿಷಯಗಳನ್ನು ಹೇಳಿದ್ದೇವೆ’ ಎಂದಿದ್ದಾರೆ ನಟ ಹುಲಿ ಕಾರ್ತಿಕ್​.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More