ಸ್ಯಾಂಡಲ್​ವುಡ್​ನಲ್ಲಿ ಹೊಸಬರ ‘ವೈಭೋಗ’; ಇದು ‘ಯು ಟರ್ನ್​ 2’ ನಿರ್ದೇಶಕನ ಹೊಸ ಸಿನಿಮಾ​

‘ವರ್ಷಕ್ಕೆ ನಾಲ್ಕೈದು ಸಿನಿಮಾ ಮಾಡುವುದರಿಂದ ಒಂದಷ್ಟು ಮಂದಿಗೆ ಉದ್ಯೋಗ ಸಿಗಲಿದೆ’ ಎಂದು ಹೇಳುವ ನಿರ್ದೇಶಕ ಚಂದ್ರು ಓಬಯ್ಯ ಅವರು ಈಗ 4ನೇ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾದ ಶೀರ್ಷಿಕೆ ‘ವೈಭೋಗ’. ಶ್ರೇಯಸ್ ಹಾಗೂ ಸಂಜನಾ ಕದಂ ಅವರು ಜೋಡಿಯಾಗಿ ಈ ಚಿತ್ರದಲ್ಲಿ ನಟಿಸಲಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು.

ಸ್ಯಾಂಡಲ್​ವುಡ್​ನಲ್ಲಿ ಹೊಸಬರ ‘ವೈಭೋಗ’; ಇದು ‘ಯು ಟರ್ನ್​ 2’ ನಿರ್ದೇಶಕನ ಹೊಸ ಸಿನಿಮಾ​
‘ವೈಭೋಗ’ ಸಿನಿಮಾ ತಂಡ
Follow us
|

Updated on: Sep 13, 2024 | 8:24 PM

ನಿರ್ದೇಶಕ ಚಂದ್ರು ಓಬಯ್ಯ ಅವರು ಈಗಾಗಲೇ 3 ಸಿನಿಮಾಗಳಿಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ‘ಯು ಟರ್ನ್ 2’, ‘ರಾಮು ಆ್ಯಂಡ್ ರಾಮು’, ‘ಕರಿಮಣಿ ಮಾಲೀಕ’ ಸಿನಿಮಾಗಳ ಬಳಿಕ ಅವರು 4ನೇ ಸಿನಿಮಾವನ್ನು ಕೂಡ ಆರಂಭಿಸಿದ್ದಾರೆ. ಈ ಸಿನಿಮಾಗೆ ‘ವೈಭೋಗ’ ಎಂದು ಟೈಟಲ್​ ಇಡಲಾಗಿದೆ. ಇತ್ತೀಚೆಗೆ ಈ ಸಿನಿಮಾದ ಟೈಟಲ್​ ಲಾಂಚ್​ ಮಾಡಲಾಯಿತು. ಈ ವೇಳೆ ನಡೆದ ಸುದ್ದಿಗೋಷ್ಠಿಯಲ್ಲಿ ಸಿನಿಮಾ ಬಗ್ಗೆ ಚಿತ್ರತಂಡದವರು ಮಾಹಿತಿ ಹಂಚಿಕೊಂಡರು. ‘ಯೌವನದಲ್ಲಿ ಹುಟ್ಟೋ ಪ್ರೀತಿಗೋಸ್ಕರ ಹೆತ್ತವರನ್ನು ಮರೀಬೇಡ’ ಎನ್ನುವ ಟ್ಯಾಗ್ ಲೈನ್ ಈ ಸಿನಿಮಾದ ಶೀರ್ಷಿಕೆ ಇದೆ.

ಡಾ. ಚೇತನ್ ನಿಂಗೇಗೌಡ ಅವರು ‘ವೈಭೋಗ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಚಂದ್ರು ಓಬಯ್ಯ ಅವರು ಮಾತನಾಡಿ ಮಾಹಿತಿ ನೀಡಿದರು. ‘ಇದೊಂದು ಕಮರ್ಷಿಯಲ್ ಸಿನಿಮಾ. ಈ ಚಿತ್ರದ ಮೂಲಕ ಒಳ್ಳೆಯ ಸಂದೇಶ ನೀಡುತ್ತೇವೆ’ ಎಂದು ಅವರು ಹೇಳಿದರು. ಶ್ರೇಯಸ್ ಮತ್ತು ಸಂಜನಾ ಕದಂ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗನ್ನು ಮಾಡುತ್ತಿದ್ದಾರೆ.

‘ವೈಭೋಗ’ ಸಿನಿಮಾಗೆ ಸೆಪ್ಟೆಂಬರ್​ 20ರಂದು ಶೂಟಿಂಗ್​ ಆರಂಭ ಆಗಲಿದೆ. ಚನ್ನಪಟ್ಟಣ, ಮೈಸೂರು ಸುತ್ತಮುತ್ತ 30 ದಿನಗಳ‌ ಕಾಲ‌ ಮಾತಿನ ಭಾಗದ ಚಿತ್ರೀಕರಣ ಮಾಡಲಾಗುವುದು. ಮಂಗಳೂರು ಸುತ್ತಮುತ್ತ 10 ದಿನಗಳ ಕಾಲ ಹಾಡು ಮತ್ತು ಸಾಹಸ ದೃಶ್ಯಗಳ ಶೂಟಿಂಗ್​ ಮಾಡಲು ಚಿತ್ರತಂಡ ಪ್ಲ್ಯಾನ್​ ಮಾಡಿಕೊಂಡಿದೆ. ‘ನಾನು ನಿರ್ದೇಶಿಸಿದ ರಾಮು ಆ್ಯಂಡ್ ರಾಮು ಸಿನಿಮಾಗೆ ಸೆನ್ಸಾರ್ ಆಗಿದೆ. ಕರೀಮಣಿ ಮಾಲಿಕ ಸಿನಿಮಾದ ಶೂಟಿಂಗ್​ ಮುಗಿದಿದೆ’ ಎಂದರು ಚಂದ್ರು ಓಬಯ್ಯ.

ನಟ ಶ್ರೇಯಸ್​ ಅವರಿಗೆ ಹೀರೋ ಆಗಿ ಇದು ಮೊದಲ ಸಿನಿಮಾ. ‘ನಿರ್ದೇಶಕರು ನನಗೆ ಇನ್ನೂ ಕಥೆ ಹೇಳಿಲ್ಲ. ಒಳ್ಳೆಯ ಚಿತ್ರವಾಗುವ ವಿಶ್ವಾಸವಿದೆ’ ಎಂದು ಶ್ರೇಯಸ್​ ಹೇಳಿದ್ದಾರೆ. ಸಂಜನಾ ಕದಂ ಮಾತನಾಡಿ, ‘ನಾನು ಮೈಸೂರಿನ ಹುಡುಗಿ, ರಂಗಭೂಮಿ‌ ಕಲಾವಿದೆ. ಮಂಡ್ಯ ರಮೇಶ್ ಅವರ ನಟನಾದಲ್ಲಿ ಅಭಿನಯ ಕಲಿತಿದ್ದೇನೆ. ಈ ಸಿನಿಮಾದಲ್ಲಿ ನಾಯಕಿ ಆಗುವ ಅವಕಾಶ ಸಿಕ್ಕಿದೆ’ ಎಂದರು.

ಇದನ್ನೂ ಓದಿ: ‘ಅಮ್ಮಾವ್ರ ಗಂಡ’ ಚಿತ್ರದ ನಟಿ ಭಾಗ್ಯಶ್ರೀ ಪುತ್ರಿಯ ಸಿನಿಮಾಗೆ ನಾಗಶೇಖರ್​ ನಿರ್ದೇಶನ

ನಿರಂಜನ್ ಬೋಪಣ್ಣ ಅವರು ‘ವೈಭೋಗ’ ಸಿನಿಮಾಗೆ ಛಾಯಾಗ್ರಹಣ ಮಾಡಲಿದ್ದಾರೆ. ಈ ಸಿನಿಮಾದಲ್ಲಿ ನಾಗೇಂದ್ರ ಅರಸ್ ಅವರು ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೂಗು ಸುರೇಶ್ ಕೂಡ ಒಂದು ಪಾತ್ರ ಮಾಡುತ್ತಿದ್ದಾರೆ. ‘ಅವಿಭಕ್ತ ಕುಟುಂಬದ ಮಹತ್ವ ಹೇಳುವ ಪ್ರಯತ್ನ ನಮ್ಮ ಸಿನಿಮಾದಿಂದ ಆಗಲಿದೆ’ ಎಂದು ನಿರ್ಮಾಪಕ ಡಾ. ಚೇತನ್ ನಿಂಗೇಗೌಡ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.