‘ಬಾಯ್ಸ್ ನೆವರ್ ಕಾಂಪ್ರಮೈಸ್’ ಸಿನಿಮಾದ ಟೀಸರ್ ಬಿಡುಗಡೆ; ಸಿಕ್ತು ಕಥೆಯ ಸುಳಿವು
‘ಬಾಯ್ಸ್ ನೆವರ್ ಕಾಂಪ್ರಮೈಸ್’ ಸಿನಿಮಾದ ಶೀರ್ಷಿಕೆಯೇ ಗಮನ ಸೆಳೆಯುತ್ತಿದೆ. ಹರೀಶ್ ಜಲಗೆರೆ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ. ಜುಲೈ 10ರಂದು ಸಿನಿಮಾ ತೆರೆಕಾಣಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇತ್ತೀಚೆಗೆ ಈ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಯಿತು. ಆ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ..

ಈ ಹಿಂದೆ ‘ಜಸ್ಟ್ ಮದ್ವೇಲಿ’, ‘ರಾಜಣ್ಣನ ಮಗ’ ಸಿನಿಮಾಗಳನ್ನು ನಿರ್ಮಿಸಿದ್ದ ಹರೀಶ್ ಜಲಗೆರೆ ಅವರು ಇದೀಗ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ‘ಬಾಯ್ಸ್ ನೆವರ್ ಕಾಂಪ್ರಮೈಸ್’ (Boys Never Compromise) ಎಂಬ ಚಿತ್ರಕ್ಕೆ ಅವರೇ ಆ್ಯಕ್ಷನ್-ಕಟ್ ಹೇಳಿದ್ದಾರೆ. ಹರೀಶ್ ಜಲಗೆರೆ ಅವರ ಹಿಂದಿನ ಎರಡೂ ಚಿತ್ರಗಳನ್ನು ನಿರ್ದೇಶಿಸಿದ್ದ ಕೋಲಾರ ಸೀನು ಅವರು ಹರೀಶ್ ಅವರ ಹೊಸ ಪ್ರಯತ್ನಕ್ಕೆ ಜೊತೆಯಾಗಿದ್ದಾರೆ. ಹಾರರ್, ಕಾಮಿಡಿ ಕಥಾಹಂದರ ಒಳಗೊಂಡ ಈ ಚಿತ್ರದ ಟೀಸರ್ ಹಾಗೂ ಬಾಯ್ಸ್ ಆಂಥೆಮ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
‘ಬಾಯ್ಸ್ ನೆವರ್ ಕಾಂಪ್ರಮೈಸ್’ ಸಿನಿಮಾದಲ್ಲಿ ಸಾಮ್ರಾಟ್, ಸುಪ್ರಿತ್ ಕಾಟಿ, ಸೀತಾರಾಮ, ನಕ್ಷತ್ರಾ, ಮಂಡ್ಯ ಸಿದ್ದು, ಉಮೇಶ್ ಕಿನ್ನಾಳ, ರಾಜೀವ್ ರೆಡ್ಡಿ, ಗಜೇಂದ್ರ, ಹೇಮಂತ್ ಗೌಡ, ರಾಜರಾಜ ಚೋಳ ಸೇರಿದಂತೆ ಬಹುತೇಕ ಹೊಸಬರೇ ನಟಿಸಿದ್ದಾರೆ. ‘ಮಾರಿ ಗೋಲ್ಡ್ ಸ್ಡುಡಿಯೋಸ್’ ಮೂಲಕ ಉಜ್ವಲ ನಾಗರಾಜ ಜಲಗೆರೆ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಲೋಕಿ ತವಸ್ಯ ಅವರು ಸಂಗೀತ ನೀಡಿದ್ದಾರೆ. ಎಂ.ಎಸ್. ತ್ಯಾಗರಾಜ್ ಅವರ ಹಿನ್ನೆಲೆ ಸಂಗೀತ, ಪ್ರಮೋದ್ ಭಾರತೀಯ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಕಾರ್ತಿಕ್ ಈಶ್ವರಚಾರಿ ಅವರು ಸಂಕಲನ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಹರೀಶ್ ಜಲಗೆರೆ ಅವರು ಮಾತನಾಡಿದರು. ‘ಇದೊಂದು ಹಾರರ್ ಕಾಮಿಡಿ ಸಿನಿಮಾ. ಜತೆಗೆ ಒಂದು ಸಂದೇಶ ಕೂಡ ಇದೆ. ಒಂದಷ್ಟು ಹುಡುಗರು ತರಲೆ ತುಂಟಾಟ ಮಾಡಲು ಹೋಗಿ ದೆವ್ವದ ಜತೆ ಹೇಗೆ ಕನೆಕ್ಟ್ ಆಗ್ತಾರೆ ಎಂಬುದೇ ಈ ಸಿನಿಮಾದ ಕಾನ್ಸೆಪ್ಟ್. ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದೇನೆ. ನನ್ನ ಪ್ರಯತ್ನಕ್ಕೆ ಸ್ನೇಹಿತ ಕೋಲಾರ ಸೀನು ಕೈಜೋಡಿಸಿದ್ದಾರೆ. ಈಗಾಗಲೇ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಜುಲೈ 10ಕ್ಕೆ ನಮ್ಮ ಸಿನಿಮಾವನ್ನು ತೆರೆಗೆ ತರುತ್ತಿದ್ದೇವೆ’ ಎಂದು ಅವರು ಹೇಳಿದರು.
‘ಬಾಯ್ಸ್ ನೆವರ್ ಕಾಂಪ್ರಮೈಸ್’ ಚಿತ್ರದ ಟೀಸರ್:
‘15-20 ದಿನದಲ್ಲಿ ಐಟಂ ಸಾಂಗ್ ರಿಲೀಸ್ ಮಾಡಿ, ಜುಲೈ ಮೊದಲ ವಾರ ಕಿಚ್ಚ ಸುದೀಪ್ ಅವರಿಂದ ನಮ್ಮ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿಸುತ್ತಿದ್ದೇವೆ. ಹುಡುಗರಲ್ಲೂ ಕೆಲವು ಅಗತ್ಯತೆಗಳು ಇರುತ್ತವೆ. ಅದರಲ್ಲಿ ಕೆಲವರು ಕಾಂಪ್ರಮೈಸ್ ಆದರೆ, ಕೆಲವರು ಆಗಲ್ಲ. ಆಗದಿದ್ದರೆ ಏನಾಗುತ್ತದೆ ಎಂಬುದನ್ನು ಒಂದು ಹಾರರ್ ಎಲಿಮೆಂಟ್ ಇಟ್ಟುಕೊಂಡು ಕಾಮಿಡಿಯಾಗಿ ಹೇಳಿದ್ದೇವೆ. ಎಲ್ಲರೂ ಒಟ್ಟಾಗಿ ಸೇರಿ ಮಾಡಿರುವ ಸಿನಿಮಾ ಇದು’ ಎಂದರು ನಿರ್ದೇಶಕರು.
ಇದನ್ನೂ ಓದಿ: ‘ಮಹಾನ್ ಕಿಲಾಡಿ’ ರಿಯಾಲಿಟಿ ಶೋ ಆರಂಭಿಸಿದ ಮಿಂಚು: ಏನಿದರ ವಿಶೇಷ?
ಮಾಡೆಲಿಂಗ್ ಅನುಭವ ಇರುವ ನಟಿ ನಕ್ಷತ್ರಾ ಅವರು ಈ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಆ್ಯಂಟೊನಿ ದಾಸನ್, ಐಶ್ವರ್ಯಾ ರಂಗರಾಜನ್ ಹಾಡಿರುವ ಗೀತೆ ಸದ್ಯದಲ್ಲೇ ಬಿಡುಗಡೆ ಆಗಲಿದೆ ಎಂದು ಸಂಗೀತ ನಿರ್ದೇಶಕ ಲೋಕಿ ತವಸ್ಯ ಹೇಳಿದರು. ರಾಜೀವ್ ರೆಡ್ಡಿ ಅವರು ಈ ಚಿತ್ರದಲ್ಲಿ ಪೊಲೀಸ್ ಪಾತ್ರ ಮಾಡಿದ್ದಾರೆ. ಕೋಲಾರ ಸೀನು ಅವರ ಸಹ-ನಿರ್ದೇಶನ ಈ ಚಿತ್ರಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




