ಉಮಾಪತಿ ಶ್ರೀನಿವಾಸ್ ‘ಏರಿಯಾ’ಕ್ಕೆ ನುಗ್ಗಲು ಸಜ್ಜಾದ ದರ್ಶನ್

Umapathy v/s Darshan: ಉಮಾಪತಿ ಶ್ರೀನಿವಾಸ್ ಹಾಗೂ ದರ್ಶನ್ ನಡುವಿನ ವಿವಾದ ಉಲ್ಬಣವಾಗುತ್ತಾ ಸಾಗುತ್ತಿದೆ. ಈಗ ಉಮಾಪತಿ ಶ್ರೀನಿವಾಸ್​ರ ಕ್ಷೇತ್ರದಲ್ಲಿಯೇ ದರ್ಶನ್ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ಉಮಾಪತಿ ಶ್ರೀನಿವಾಸ್ ‘ಏರಿಯಾ’ಕ್ಕೆ ನುಗ್ಗಲು ಸಜ್ಜಾದ ದರ್ಶನ್

Updated on: Feb 25, 2024 | 2:42 PM

ನಿರ್ಮಾಪಕ ಉಮಾಪತಿ ಶ್ರೀನಿವಾಸ್ (Umapathy Srinivas) ಹಾಗೂ ನಟ ದರ್ಶನ್ ತೂಗುದೀಪ (Darshan Thoogudeepa) ನಡುವೆ ಸಮರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಸಾಗುತ್ತಿದೆ. ‘ಕಾಟೇರ’ ಸಿನಿಮಾದ ಕತೆ ಹಾಗೂ ಟೈಟಲ್ ಹಾಗೂ ತಾವು ಮಾಡಿಸಿದ್ದು ಎಂದು ಉಮಾಪತಿ ಶ್ರೀನಿವಾಸ್ ಈ ಹಿಂದೆ ಹೇಳಿದ್ದರು. ಆದರೆ ಇದು ದರ್ಶನ್​ಗೆ ಇಷ್ಟವಾಗಲಿಲ್ಲ. ‘ಕಾಟೇರ’ ಸಿನಿಮಾದ 50 ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ದರ್ಶನ್, ‘ತಗಡು’ ಎಂಬಿತ್ಯಾದಿ ಕಠು ಪದಗಳನ್ನು ಬಳಸಿ ಉಮಾಪತಿಯನ್ನು ನಿಂದಿಸಿದರು. ದರ್ಶನ್​ರ ಮಾತುಗಳಿಗೆ ಖಡಕ್ ಆಗಿಯೇ ಉಮಾಪತಿ ಪ್ರತ್ಯುತ್ತರ ನೀಡಿದ್ದರು. ದರ್ಶನ್ ವಿರುದ್ಧ ಕೆಲವು ದೂರುಗಳು ಸಹ ದಾಖಲಾಗಿದ್ದವು. ಇದರ ಬೆನ್ನಲ್ಲೆ ಇದೀಗ ನಟ ದರ್ಶನ್, ಉಮಾಪತಿ ವಿರುದ್ಧ ನೇರವಾಗಿ ಅಖಾಡಕ್ಕೆ ಇಳಿದಿದ್ದಾರೆ.

ಉಮಾಪತಿ ಶ್ರೀನಿವಾಸ್ ಕಾಂಗ್ರೆಸ್​ನಿಂದ ಚುನಾವಣೆಗೆ ಸ್ಪರ್ಧಿಸಿದ್ದ, ಮುಂದಿನ ಬಾರಿ ಮತ್ತೆ ಸ್ಪರ್ಧಿಸುವ ಉಮೇದು ಇಟ್ಟುಕೊಂಡಿರುವ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ದರ್ಶನ್ ಬೈಕ್ ರ್ಯಾಲಿ ನಡೆಸಲಿದ್ದಾರೆ. ಈ ಬೈಕ್ ರ್ಯಾಲಿಗೆ ದರ್ಶನ್​ರ ಅಭಿಮಾನಿಗಳು ಭಾಗಿಯಾಗಲಿದ್ದಾರೆ. ದೊಡ್ಡ ಮಟ್ಟದಲ್ಲಿಯೇ ಈ ಬೈಕ್ ರ್ಯಾಲಿ ನಡೆಯಲಿದ್ದು, ಉಮಾಪತಿ ಶ್ರೀನಿವಾಸ್ ವಿರುದ್ಧ ಶಕ್ತಿ ಪ್ರದರ್ಶನ ಮಾಡಲೆಂದೇ ಈ ಬೈಕ್ ರ್ಯಾಲಿ ಮಾಡುತ್ತಿದ್ದಾರೆ ದರ್ಶನ್.

ಇದನ್ನೂ ಓದಿ:ದರ್ಶನ್ ಹಾಗೂ ನಾನು ಒಂದೇ ಸಿನಿಮಾದಲ್ಲಿ ನಾಯಕರಾಗಿದ್ದೆವು: ಹರೀಶ್ ರಾಜ್

ಉಮಾಪತಿ ಶ್ರೀನಿವಾಸ್ ಅವರ ಅಡ್ಡಾದಲ್ಲಿಯೇ ತಮ್ಮ ಶಕ್ತಿ ಪ್ರದರ್ಶನ ಮಾಡುವ ಉದ್ದೇಶದಿಂದಲೇ ಈ ಬೈಕ್ ರ್ಯಾಲಿ ಆಯೋಜನೆ ಮಾಡಿದ್ದಾರೆ ದರ್ಶನ್. ವೈಯಕ್ತಿಕ ದ್ವೇಷ ಸಾಧನೆಗಾಗಿ ಮಾಡಲಾಗುತ್ತಿರುವ ಈ ಬೈಕ್ ರ್ಯಾಲಿಗೆ ಪೊಲೀಸರು ಅನುಮತಿ ನೀಡುತ್ತಾರೆಯೇ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ. ಬೈಕ್ ರ್ಯಾಲಿ ನಡೆವ ದಿನವೂ ಸಹ ಉಮಾಪತಿ ಬೆಂಬಲಿಗರು ಹಾಗೂ ದರ್ಶನ್ ಬೆಂಬಲಿಗರ ನಡುವೆ ಜಗಳಗಳು ನಡೆಯುವ ಸಂಭವವೂ ಇದೆ.

ಉಮಾಪತಿ ಶ್ರೀನಿವಾಸ್ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೊಮ್ಮನಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಪರವಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ಚುನಾವಣೆ ಸಂದರ್ಭದಲ್ಲಿ ನಟ ದರ್ಶನ್, ಉಮಾಪತಿ ಶ್ರೀನಿವಾಸ್ ವಿರುದ್ಧವಾಗಿ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ಪರವಾಗಿ ಚುನಾವಣೆ ಪ್ರಚಾರ ಮಾಡಿದ್ದರು. ಉಮಾಪತಿ ಶ್ರೀನಿವಾಸ್ ಆ ಚುನಾವಣೆ ಸೋತರು. ಈಗ ಮುಂದಿನ ವಿಧಾನಸಭೆ ಚುನಾವಣೆಗೆ ತಯಾರಾಗುತ್ತಿದ್ದಾರೆ.

‘ಕಾಟೇರ’ ಸಿನಿಮಾದ ಕತೆಯನ್ನು ತಾವು ಮಾಡಿಸಿದ್ದಾಗಿ ಉಮಾಪತಿ ಶ್ರೀನಿವಾಸ್ ಹೇಳಿದ್ದರು. ‘ಕಾಟೇರ’ ಸಿನಿಮಾದ ಟೈಟಲ್ ಸಹ ಉಮಾಪತಿ ಶ್ರೀನಿವಾಸ್ ಅವರ ಬಳಿಯೇ ಇತ್ತು. ಇದನ್ನೇ ಅವರು ಹೇಳಿಕೊಂಡಿದ್ದರು. ಆದರೆ ಉಮಾಪತಿಯವರ ಮಾತು ದರ್ಶನ್​ಗೆ ಹಿಡಿಸಲಿಲ್ಲ, ದರ್ಶನ್ ತುಸು ಖಾರವಾಗಿ ಉಮಾಪತಿಗೆ ಪ್ರತ್ಯುತ್ತರ ನೀಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us