ನಿರ್ಮಾಪಕರಿಂದ ದರ್ಶನ್ ಪಡೆದಿರುವ ಅಡ್ವಾನ್ಸ್ ಎಷ್ಟು ಕೋಟಿ?

ರೇಣುಕಾ ಸ್ವಾಮಿ ಬಂಧನದ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದಾರೆ. ದರ್ಶನ್ ಜೈಲು ಸೇರಿರುವುದರಿಂದ ಅವರಿಗೆ ಸಿನಿಮಾಕ್ಕಾಗಿ ಒಪ್ಪಂದ ಮಾಡಿಕೊಂಡ, ಅಡ್ವಾನ್ಸ್ ಹಣ ಕೊಟ್ಟ ಹಲವು ನಿರ್ಮಾಪಕರು ಆತಂಕಕ್ಕೆ ಒಳಗಾಗಿದ್ದಾರೆ. ಅಂದಹಾಗೆ ದರ್ಶನ್ ಪಡೆದಿರುವ ಅಡ್ವಾನ್ಸ್ ಹಣ ಎಷ್ಟು?

ನಿರ್ಮಾಪಕರಿಂದ ದರ್ಶನ್ ಪಡೆದಿರುವ ಅಡ್ವಾನ್ಸ್ ಎಷ್ಟು ಕೋಟಿ?
Follow us
|

Updated on: Jun 13, 2024 | 6:26 PM

ನಟ ದರ್ಶನ್ (Darshan Thoogudeepa) ಈಗ ಪೊಲೀಸರ ಅತಿಥಿಯಾಗಿದ್ದಾರೆ. ರೇಣುಕಾ ಸ್ವಾಮಿಯ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನವಾಗಿ ಮೂರು ದಿನಗಳಾಗಿವೆ. ದರ್ಶನ್ ‘ಡೆವಿಲ್’ ಸಿನಿಮಾದ ಚಿತ್ರೀಕರಣಕ್ಕೆಂದು ಮೈಸೂರಿಗೆ ತೆರಳಿದ್ದಾಗ ಜೂನ್ 11 ರಂದು ಅವರನ್ನು ಬಂಧಿಸಲಾಯ್ತು. ದರ್ಶನ್ ಬಂಧನವಾಗಿರುವುದು ಅವರ ಅಭಿಮಾನಿಗಳಿಗೆ ಆತಂಕ ತಂದಿದೆ. ಜೊತೆಗೆ ಕೆಲವು ನಿರ್ಮಾಪಕರು ಸಹ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ದರ್ಶನ್​ರ ‘ಡೆವಿಲ್’ ಸಿನಿಮಾದ ನಿರ್ಮಾಪಕರಂತೂ ಕೋಟ್ಯಂತರ ರೂಪಾಯಿ ಹಣವನ್ನು ಈಗಾಗಲೇ ಸಿನಿಮಾ ಮೇಲೆ ಹೂಡಿಕೆ ಮಾಡಿಬಿಟ್ಟಿದ್ದಾರೆ. ‘ಡೆವಿಲ್’ ಮಾತ್ರವೇ ಅಲ್ಲದೆ ಇನ್ನೂ ಕೆಲವು ನಿರ್ಮಾಪಕರಿಂದ ಹಣ ಪಡೆದಿದ್ದಾರಂತೆ ದರ್ಶನ್.

ದರ್ಶನ್ ನಟಿಸುತ್ತಿರುವ ‘ಡೆವಿಲ್’ ಸಿನಿಮಾ ಕೇವಲ 25 ದಿನ ಚಿತ್ರೀಕರಣ ಆಗಿದೆ. ಮೊದಲ ಶೆಡ್ಯೂಲ್ ಚಿತ್ರೀಕರಣದ ವೇಳೆ ಆಕ್ಷನ್ ದೃಶ್ಯದ ಚಿತ್ರೀಕರಣ ಮಾಡುವ ಹಂತದಲ್ಲಿ ದರ್ಶನ್ ಪೆಟ್ಟು ಮಾಡಿಕೊಂಡಿದ್ದರು. ಎಡಗೈಯಿಗೆ ಗಾಯವಾಗಿದ್ದ ಕಾರಣ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಹಾಗಾಗಿ ಸಿನಿಮಾ ಶೂಟಿಂಗ್ ಮುಂದೂಡಲಾಗಿತ್ತು. ದರ್ಶನ್ ಬಂಧನವಾಗುವ ಎರಡು ದಿನಗಳ ಮುಂಚೆಯಷ್ಟೆ ಸಿನಿಮಾದ ಚಿತ್ರೀಕರಣ ಮತ್ತೆ ಪ್ರಾರಂಭವಾಗಿತ್ತು, ಅಷ್ಟರಲ್ಲೇ ದರ್ಶನ್ ಬಂಧನವಾಗಿದೆ.

‘ಡೆವಿಲ್’ ಸಿನಿಮಾಕ್ಕೆ ದರ್ಶನ್ 22 ಕೋಟಿ ರೂಪಾಯಿ ಸಂಭಾವನೆ ನಿಗದಿಪಡಿಸಿದ್ದರಂತೆ. ಈಗಾಗಲೇ ಮೂರು ಕೋಟಿ ರೂಪಾಯಿ ಸಂಭಾವನೆಯನ್ನೂ ಸಹ ದರ್ಶನ್, ನಿರ್ಮಾಪಕರಿಂದ ಪಡೆದಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದ 25 ದಿನ ಶೂಟಿಂಗ್, ಸೆಟ್​ಗಳ ನಿರ್ಮಾಣ, ಇತರೆ ಕಲಾವಿದರಿಗೆ ಸಂಭಾವನೆ, ಚಿತ್ರೀಕರಣದ ಯೂನಿಟ್ ಬುಕ್ ಇನ್ನೂ ಹಲವಾರು ವಿಭಾಗಗಳಿಗೆ ನಿರ್ಮಾಪಕರು ಈಗಾಗಲೇ ಹಣ ಖರ್ಚು ಮಾಡಿದ್ದು, ಸದ್ಯಕ್ಕೆ ದರ್ಶನ್ ಜೈಲು ಸೇರಿರುವುದು ಅವರಿಗೆ ನುಂಗಲಾರದ ತುತ್ತಾಗಿದೆ. ನಿರ್ದೇಶಕ ಮಿಲನಾ ಪ್ರಕಾಶ್ ಸಹ ತೀವ್ರ ಶಾಕ್​ನಲ್ಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ದರ್ಶನ್ ಬಗ್ಗೆ ನಿಖಿಲ್ ಕುಮಾರಸ್ವಾಮಿ ಶಾಕಿಂಗ್ ರಿಯಾಕ್ಷನ್

‘ಡೆವಿಲ್’ ಸಿನಿಮಾವನ್ನು ಡಿಸೆಂಬರ್ 25ಕ್ಕೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಆದರೆ ಈಗ ಸಿನಿಮಾದ ಚಿತ್ರೀಕರಣವನ್ನೇ ನಿಲ್ಲಿಸಿದ್ದು, ಸಿನಿಮಾದ ಬಿಡುಗಡೆ ಇನ್ನಷ್ಟು ವಿಳಂಬವಾಗಲಿದೆ. ಸದ್ಯಕ್ಕಂತೂ ಸಿನಿಮಾದ ಶೂಟಿಂಗ್ ಅನ್ನು ಮಿಲನಾ ಪ್ರಕಾಶ್ ನಿಲ್ಲಿಸಿದ್ದಾರೆ. ದರ್ಶನ್ ಹೊರಬಂದ ಮೇಲಷ್ಟೆ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ.

‘ಡೆವಿಲ್’ ಸಿನಿಮಾದ ಬಳಿಕ ದರ್ಶನ್ ‘ಸಿಂಧೂರ ಲಕ್ಷ್ಮಣ’ ಸಿನಿಮಾದಲ್ಲಿ ನಟಿಸಬೇಕಿತ್ತು. ‘ಕ್ರಾಂತಿ’ ಸಿನಿಮಾ ಮಾಡಿದ್ದ ನಿರ್ಮಾಪಕ ಬಿ ಸುರೇಶ್ ನಿರ್ಮಿಸಿ, ತರುಣ್ ಸುಧೀರ್ ನಿರ್ದೇಶನ ಮಾಡಬೇಕಿದ್ದ ಸಿನಿಮಾ ಇದು. ‘ಡೆವಿಲ್’ ಸಿನಿಮಾ ಮುಗಿದ ಕೂಡಲೇ ‘ಸಿಂಧೂರ ಲಕ್ಷ್ಮಣ’ ಸಿನಿಮಾ ಶುರುವಾಗಬೇಕಿತ್ತು. ಆದರೆ ದರ್ಶನ್ ಯಡವಟ್ಟಿನಿಂದ ‘ಸಿಂಧೂರ ಲಕ್ಷ್ಮಣ’ ಸಿನಿಮಾ ಶೂಟಿಂಗ್ ಕೂಡ ಮುಂದಿನ ವರ್ಷಕ್ಕೆ ಹೋಗಲಿದೆ. ಈ ಸಿನಿಮಾಕ್ಕಾಗಿ ದರ್ಶನ್ ಪಡೆದಿರೋ ಅಡ್ವಾನ್ಸ್ ಹಣ 3 ಕೋಟಿ ಎನ್ನಲಾಗುತ್ತಿದೆ.

ಈ ಚಿತ್ರದ ಮಧ್ಯೆ ದರ್ಶನ್ ಮತ್ತೊಂದು ಬಿಗ್ ಬಜೆಟ್ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದರು. ಅದುವೇ ಜೋಗಿ ಪ್ರೇಮ್ ನಿರ್ದೇಶನದ ಕನ್ನಡದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೋಡಕ್ಷನ್ ನಿರ್ಮಿಸಲಿರುವ ಸಿನಿಮಾ. ಬಹುಕೋಟಿ ವೆಚ್ಚದ ಸಿನಿಮಾ ಮಾಡಲು ದರ್ಶನ್ ಒಪ್ಪಿಗೆ ನೀಡಿದ್ದರು. ಈ ಚಿತ್ರಕ್ಕೆ ಅಡ್ವಾನ್ಸ್ ಹಣ ಅಂತಾ ದರ್ಶನ್ 3 ರಿಂದ 5 ಕೋಟಿ ಪಡೆದಿದ್ದಾರೆ ಅನ್ನೋದು ಗಾಂಧಿನಗರದ ಮಾತು. ಈ ಪ್ರಾಜೆಕ್ಟ್ ಮುಗಿದ ಮೇಲೆ ದರ್ಶನ್ ಮತ್ತೆ ಜಗ್ಗುದಾದ ಸಿನಿಮಾ ನಿರ್ದೇಶಕರಾದ ರಾಘವೇಂದ್ರ ಹೆಗ್ಡೆ ಜೊತೆ ಸಿನಿಮಾ ಮಾಡುವ ಯೋಜನೆ ಇತ್ತು.

ಇದನ್ನೂ ಓದಿ:ದರ್ಶನ್​ ಹೀರೋ ಅಲ್ಲ.. ಖಳನಾಯಕ! ಮಂಡ್ಯ ರೈತರ ಆಕ್ರೋಶ ನೋಡಿ

ಈ ಚಿತ್ರಗಳ ಬಳಿಕ ದರ್ಶನ್ ತೆಲುಗಿನ ‘ಅತ್ತಾರಿಂಟಿಕಿ ದಾರೇದಿ’ ಚಿತ್ರದ ನಿರ್ಮಾಪಕರಾದ ಬಿ.ವಿ.ಎಸ್. ಎನ್ ಪ್ರಸಾದ್ ಜೊತೆ ಸಿನಿಮಾ ಮಾಡಲು ಮಾತುಕತೆ ಮಾಡಿಕೊಂಡಿದ್ದರು. ಇದಕ್ಕಾಗಿ 25 ಲಕ್ಷ ಅಡ್ವಾನ್ಸ್ ಹಣ ಸಹ ಪಡೆದಿದ್ದಾರಂತೆ‌. ಈ ಸಿನಿಮಾ ಶುರುವಾಗೋದಿಕ್ಕೆ ಇನ್ನು ಒಂದು ವರ್ಷ ಸಮಯವಿತ್ತು. ಇದರ ಜೊತೆಗೆ ತಮಿಳು ನಿರ್ಮಾಪಕ ರಮೇಶ್ ಪಿಳ್ಳೈ ಜೊತೆ ಚಿತ್ರ ಮಾಡುವುದಾಗಿ ದರ್ಶನ್ ಮಾತುಕತೆ ಆಗಿತ್ತು. ಈ ಸಿನಿಮಾ ಮಾಡುವುದಾಗಿ ಅಡ್ವಾನ್ಸ್ ಹಣ ಅಂತಾ 25 ಲಕ್ಷ ಪಡೆದಿದ್ದರಂತೆ‌. ಹಾಗೇ ಮತ್ತೊಬ್ಬ ಹೈದರಾಬಾದ್ ನಿರ್ಮಾಪಕ ರಘುನಾಥ್ ಎಂಬುವರ ಜೊತೆ ಸಿನಿಮಾ ಮಾತುಕತೆ ಆಗಿದೆ‌. ಈ ಚಿತ್ರಕ್ಕೂ ದರ್ಶನ್ 25 ಲಕ್ಷ ಅಡ್ವಾನ್ಸ್ ಹಣ ಪಡೆದಿದ್ದಾರಂತೆ‌. ಅಡ್ವಾನ್ಸ್ ಕೊಟ್ಟ ಈ ಎಲ್ಲ ನಿರ್ಮಾಪಕರು ಸಹ ಈಗ ಆತಂಕದಲ್ಲಿದ್ದಾರೆ. ಒಂದೊಮ್ಮೆ ದರ್ಶನ್​ ಅಪರಾಧಿಯೆಂದು ಸಾಬೀತಾಗಿ ಶಿಕ್ಷೆಯಾದರೆ ಇವರ ಹಣವೆಲ್ಲ ನೀರಿನಲ್ಲಿ ಹೋಮವಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ