ಜೈಲಿಂದ ದರ್ಶನ್ ವಿಡಿಯೋ ಕಾಲ್ ಮಾಡಿದ್ದು ಕೂಡ ರೌಡಿಗಳಿಗೆ; ಸ್ವಲ್ಪವೂ ಬದಲಾಗಿಲ್ಲ ದಾಸ

ರೇಣುಕಾಸ್ವಾಮಿ ಮರ್ಡರ್​ ಪ್ರಕರಣದಲ್ಲಿ ಎ2 ಆಗಿ ಜೈಲು ಸೇರಿದ ಬಳಿಕ ದರ್ಶನ್​ ಸುಧಾರಿಸಿರಬಹುದು ಎಂಬುದು ಅನೇಕರ ಊಹೆ ಆಗಿತ್ತು. ಆದರೆ ಅದು ನಿಜವಾದಂತಿಲ್ಲ. ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಅವರು ಹಲವು ರೌಡಿಶೀಟರ್​ಗಳ ಜೊತೆ ಆಪ್ತತೆ ಬೆಳೆಸಿರುವುದಕ್ಕೆ ವಿಡಿಯೋ, ಫೋಟೋಗಳ ಸಾಕ್ಷಿ ಸಿಕ್ಕಿದೆ. ದರ್ಶನ್ ಜತೆ ವಿಡಿಯೋ ಕಾಲ್​ ಮಾಡಿದ್ದು ಸಹ ರೌಡಿಶೀಟರ್​ಗಳು ಎಂಬುದು ತಿಳಿದುಬಂದಿದೆ.

ಜೈಲಿಂದ ದರ್ಶನ್ ವಿಡಿಯೋ ಕಾಲ್ ಮಾಡಿದ್ದು ಕೂಡ ರೌಡಿಗಳಿಗೆ; ಸ್ವಲ್ಪವೂ ಬದಲಾಗಿಲ್ಲ ದಾಸ
ವೈರಲ್​ ವಿಡಿಯೋ ಮತ್ತು ಫೋಟೋದಲ್ಲಿ ದರ್ಶನ್​ ಜೊತೆ ರೌಡಿಶೀಟರ್​ಗಳು
Follow us
|

Updated on: Aug 25, 2024 | 11:14 PM

ನಟ ದರ್ಶನ್​ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ವಿಡಿಯೋ ಕಾಲ್​ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಅವರ ವಿಡಿಯೋ ಕಾಲ್​ ಕ್ಲಿಪಿಂಗ್​ಗಳು ಸಖತ್ ವೈರಲ್​ ಆಗಿವೆ. ಕಾರಾಗೃಹದಲ್ಲಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಮೊದಲು ಅವರು ರೌಡಿಶೀಟರ್​ಗಳ ಜೊತೆ ಕುಳಿತು ಚಹ ಹೀರುತ್ತಾ, ಸಿಗರೇಟು ಸೇದಿದ್ದ ಫೋಟೋ ವೈರಲ್​ ಆಯ್ತು. ಬಳಿಕ ವಿಡಿಯೋ ಕಾಲ್ ತುಣುಕು ಕೂಡ ಹೊರಬಂತು. ಶಾಕಿಂಗ್​ ಸಂಗತಿ ಏನೆಂದರೆ, ಈ ವಿಡಿಯೋ ಕಾಲ್​ನಲ್ಲಿ ದರ್ಶನ್​ ಜೊತೆ ಮಾತನಾಡಿರುವುದು ಕೂಡ ರೌಡಿಗಳು!

ದರ್ಶನ್​ ಅವರು ರೇಣುಕಾಸ್ವಾಮಿಯ ಕೊಲೆ ಕೇಸ್​ನಲ್ಲಿ ಪ್ರಮುಖ ಆರೋಪಿ ಆಗಲು ಸಹವಾಸ ದೋಷವೇ ಕಾರಣ ಎಂಬುದು ಅನೇಕರ ಅಭಿಪ್ರಾಯ. ಜೈಲು ಸೇರಿದ ಬಳಿಕವಾದರೂ ಅವರು ಬದಲಾಗಬಹುದು ಎಂಬುದು ಕೆಲವರ ಊಹೆ ಆಗಿತ್ತು. ಆದರೆ ಅದು ನಿಜವಾಗುವಂತೆ ಕಾಣುತ್ತಿಲ್ಲ. ಯಾಕೆಂದರೆ, ಜೈಲಿನಲ್ಲಿ ಕೂಡ ದರ್ಶನ್​ ಅವರು ರೌಡಿಗಳ ಸ್ನೇಹವನ್ನೇ ಹೆಚ್ಚಾಗಿ ಬೆಳೆಸಿಕೊಳ್ಳುತ್ತಿರುವಂತಿದೆ.

ವೈರಲ್​ ಆಗಿರುವ ದರ್ಶನ್​ ಅವರ ವಿಡಿಯೋ ಕಾಲ್​ನಲ್ಲಿ ಇರುವವನು ಬ್ಯಾಡರಹಳ್ಳಿ ರೌಡಿಶೀಟರ್ ಜಾನಿ ಅಲಿಯಾಸ್​ ಜನಾರ್ದನ್ ಪುತ್ರ ಸತ್ಯ. ವಿಡಿಯೋ ಕಾಲ್ ಮಾಡಿ ದರ್ಶನ್ ಅವರನ್ನು ತೋರಿಸಿರುವವನು ಕೂಡ ರೌಡಿಶೀಟರ್ ಮಾರ್ಕೆಟ್ ಧರ್ಮ. ಜಾನಿ ಮಗ ಸತ್ಯ ಕೂಡ ಇತ್ತೀಚೆಗೆ ಜೈಲಿಗೆ ಹೋಗಿ ಬಂದಿದ್ದ. ಕೆಎಲ್​ಇ‌ ಕಾಲೇಜ್ ವಿದ್ಯಾರ್ಥಿಗಳಿಗೆ ಉಲ್ಟಾ ಮಚ್ಚಲ್ಲಿ ಸತ್ಯ ಹೊಡೆದಿದ್ದ. ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ಈ ಹಲ್ಲೆ ನಡೆದಿತ್ತು.

ಜೈಲಿಗೆ ಹೋಗಿದ್ದ ಸತ್ಯ ಸದ್ಯ ಜಾಮೀನನ ಮೇಲೆ ಹೊರಗೆ ಬಂದ. ಹೊರಗೆ ಬಂದವನು ಇತ್ತೀಚೆಗೆ ಮಾರ್ಕೆಟ್ ಧರ್ಮನಿಗೆ ವಿಡಿಯೋ ಕಾಲ್ ಮಾಡಿದ್ದ‌. ‘ದರ್ಶನ್ ನಮ್ ಸೆಲ್ ಪಕ್ಕದಲ್ಲೇ ಇರೋದು, ಇರು ತೋರಿಸ್ತಿನಿ’ ಎಂದು ಮಾರ್ಕೆಟ್​ ಧರ್ಮ, ದರ್ಶನ್ ಕೈಯಲ್ಲಿ ಹಾಯ್ ಹೇಳಿಸಿದ್ದ. ಅದನ್ನು ರೆಕಾರ್ಡ್ ಮಾಡಿಕೊಂಡ ಸತ್ಯ ತನ್ನ ಏರಿಯಾದಲ್ಲಿ ಬಿಲ್ಡಪ್ ಕೊಟ್ಟಿದ್ದ. ಕಲಾಸಿಪಾಳ್ಯದ ಕೆಲ ಹುಡುಗರಿಗೂ ವಿಡಿಯೋ ಕಳಿಸಿದ್ದ‌. ಹಾಗಾಗಿ ಈ ವಿಡಿಯೋ ವೈರಲ್​ ಆಗಿದೆ.

ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಖೈದಿ ದರ್ಶನ್​ ಹೇಗೆ ಇರಬೇಕು? ಹೀಗಿದೆ ಜೈಲು ನಡಾವಳಿ..

ಇನ್ನು, ವೈರಲ್​ ಫೋಟೋದಲ್ಲಿ ದರ್ಶನ್​ ಜೊತೆ ಇರುವುದು ಕೂಡ ರೌಡಿಶೀಟರ್​ಗಳು. ವಿಲ್ಸನ್​ ಗಾರ್ಡನ್​ ನಾಗ, ಕುಳ್ಳ ಸೀನಾ ಮುಂತಾದ ವ್ಯಕ್ತಿಗಳ ಸಂಪರ್ಕವನ್ನು ದರ್ಶನ್ ಪಡೆದುಕೊಂಡಿದ್ದಾರೆ. ಅವರ ಜೊತೆ ಜೈಲಿನ ಗಾರ್ಡನ್​ನಲ್ಲಿ ಟೀ ಕುಡಿದು, ಸಿಗರೇಟ್​ ಸೇದಿದ ಫೋಟೋ ಎಲ್ಲ ಕಡೆ ಹರಿದಾಡಿದೆ. ಜೈಲಿನ ನಿಯಮಗಳು ಉಲ್ಲಂಘನೆ ಆಗಿರುವ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ.

ವರದಿ: ಪ್ರದೀಪ್

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.