ಆ್ಯಕ್ಟರ್ ಆದ ಡಾಕ್ಟರ್; ‘ನಾಯಿ ಇದೆ ಎಚ್ಚರಿಕೆ’ ಚಿತ್ರದಲ್ಲಿ ಲೀಲಾಮೋಹನ್ ಹೀರೋ

ಶೀರ್ಷಿಕೆಯ ಕಾರಣದಿಂದ ‘ನಾಯಿ ಇದೆ ಎಚ್ಚರಿಕೆ’ ಸಿನಿಮಾ ಕೌತುಕ ಮೂಡಿಸಿದೆ. ಈ ಸಿನಿಮಾದಲ್ಲಿ ಡಾಕ್ಟರ್ ಲೀಲಾಮೋಹನ್ ಅವರು ಹೀರೋ ಆಗಿದ್ದಾರೆ. ಕಳೆದ 18 ವರ್ಷಗಳಿಂದ ಡಾಕ್ಟರ್ ಆಗಿ ಕೆಲಸ ಮಾಡಿರುವ ಅವರು ಈಗ ನಟನಾಗಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಅಭಿನಯದ ಮಾತ್ರವಲ್ಲದೇ ಚಿತ್ರರಂಗದ ಹಲವು ವಿಭಾಗಗಳಲ್ಲಿ ಅವರು ತೊಡಗಿಕೊಂಡಿದ್ದಾರೆ.

ಆ್ಯಕ್ಟರ್ ಆದ ಡಾಕ್ಟರ್; ‘ನಾಯಿ ಇದೆ ಎಚ್ಚರಿಕೆ’ ಚಿತ್ರದಲ್ಲಿ ಲೀಲಾಮೋಹನ್ ಹೀರೋ
ಡಾಕ್ಟರ್ ಲೀಲಾಮೋಹನ್

Updated on: Nov 13, 2024 | 8:11 PM

ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ವರ್ಷಗಳ ಅನುಭವ ಹೊಂದಿರುವ ಡಾಕ್ಟರ್ ಲೀಲಾಮೋಹನ್ ಅವರು ಈಗ ಹೀರೋ ಆಗುತ್ತಿದ್ದಾರೆ. ‘ನಾಯಿ ಇದೆ ಎಚ್ಚರಿಕೆ’ ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಎಲ್ಲರನ್ನೂ ಬಣ್ಣದ ಲೋಕ ಕೈ ಬೀಸಿ ಕರೆಯುತ್ತದೆ. ನಟಿಸಬೇಕು ಹಾಗೂ ಜನರಿಂದ ಚಪ್ಪಾಳೆ ಪಡೆಯಬೇಕು ಎಂಬ ಆಸೆ ಬಹುತೇಕರಿಗೆ ಇರುತ್ತದೆ. ಡಾಕ್ಟರ್ ಲೀಲಾಮೋಹನ್ ಕೂಡ ಇದಕ್ಕೆ ಹೊರತಾಗಿಲ್ಲ. ಅಭಿನಯ ಎಂಬುದು ಅವರ ಹಲವು ವರ್ಷಗಳ ಕನಸು. ಹಾಗಾಗಿ ಅವರು ಡಾಕ್ಟರ್​ ಕೆಲಸದ ಜೊತೆ ಸಿನಿಮಾರಂಗಕ್ಕೂ ಕಾಲಿಟ್ಟಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಡಾಕ್ಟರ್ ಲೀಲಾಮೋಹನ್ ಅವರಿಗೆ ದೊಡ್ಡ ಹೀರೋ ಆಗಬೇಕು ಎಂಬ ಬಯಕೆ. ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ನಟನೆ ಮಾತ್ರವಲ್ಲದೇ ಸಿನಿಮಾಗಳ ನಿರ್ಮಾಣ ಮತ್ತು ವಿತರಣೆಯಲ್ಲೂ ಅವರು ಅನುಭವ ಪಡೆದಿದ್ದಾರೆ. ವೃತ್ತಿಯಲ್ಲಿ ಫಿಸಿಶಿಯನ್ ಮತ್ತು ಡಯಾಬಿಟಿಕ್ಸ್ ಸ್ಪೆಷಲಿಸ್ಟ್ ಆಗಿರುವ ಅವರು ಪ್ರವೃತ್ತಿಯಾಗಿ ಸಿನಿಮಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಈ ಮೊದಲು ಲೀಲಾಮೋಹನ್ ಅವರು ‘ಬದುಕು’ ಧಾರಾವಾಹಿಯಲ್ಲಿ ನಟಿಸಿದ್ದರು. ಅದು ಅವರಿಗೆ ಮೊದಲ ಅಭಿನಯದ ಅನುಭವ. ಆ ಸೀರಿಯಲ್​ನಲ್ಲಿ ಅವರಿಗೆ ವಿಶೇಷ ಪಾತ್ರ ಸಿಕ್ಕಿತು. ಬಳಿಕ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಕಿರುಚಿತ್ರಗಳನ್ನು ನಿರ್ಮಾಣ ಮಾಡಿದರು. ‘ಕ್ರೌರ್ಯ’ ಚಿತ್ರದಿಂದ ಅವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದರು.

ಕನ್ನಡ ಅಷ್ಟೇ ಅಲ್ಲದೇ, ತೆಲುಗಿನ 2 ಸಿನಿಮಾಗಳಲ್ಲಿ ಕೂಡ ಡಾಕ್ಟರ್ ಲೀಲಾಮೋಹನ್ ಅಭಿನಯಿಸಿದ್ದಾರೆ. ‘ಗಡಿಯಾರ’, ‘ಪುಟಾಣಿ ಪಂಟ್ರು’, ‘ಉಗ್ರಾವತಾರ’ ಸಿನಿಮಾದಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ‘ಉಗ್ರಾವತಾರ’ ಚಿತ್ರದಲ್ಲಿ ಸೈಕೋ ಸುದರ್ಶನ ಎಂಬ ಪಾತ್ರ ಲೀಲಾಮೋಹನ್ ಅವರದ್ದು. ಇನ್ನು, ವಿತರಣೆಯಲ್ಲೂ ಅವರು ತೊಡಗಿಕೊಂಡಿದ್ದಾರೆ. ಪ್ರಿಯಾಮಣಿ ನಟಿಸಿದ ‘ಅಂಗುಲಿಕಾ’ ಚಿತ್ರವನ್ನು ಲೀಲಾಮೋಹನ್ ಅವರು ರಾಜ್ಯಾದ್ಯಂತ ಬಿಡುಗಡೆ ಮಾಡಿದರು.

ಇದನ್ನೂ ಓದಿ: ವಿದೇಶದಲ್ಲಿ ಊಟ, ವಸತಿಗಾಗಿ ಕುರಿ ಮೇಯಿಸಿ, ಕೃಷಿ ಮಾಡುತ್ತಿರುವ ಮೋಹನ್​ಲಾಲ್ ಪುತ್ರ ಪ್ರಣವ್

ಹೀಗೆ, ಕಡಿಮೆ ಅವಧಿಯಲ್ಲೇ ಸಿನಿಮಾ ಕ್ಷೇತ್ರದ ಹಲವು ವಿಭಾಗಗಳಲ್ಲಿ ಲೀಲಾಮೋಹನ್ ತೊಡಗಿಕೊಂಡಿದ್ದಾರೆ. ತಾವು ಬೆಳೆಯುವುದರ ಜೊತೆ ಹೊಸ ಪ್ರತಿಭೆಗಳಿಗೆ ಕೂಡ ಅವಕಾಶ ನೀಡುವ ಗುರಿ ಇಟ್ಟುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us