ಗಣೇಶ್ ಸಿನಿಮಾ ಜರ್ನಿಗೆ 20 ವರ್ಷ, ಸಿನಿಮಾ ಮೂಲಕ ವಿಶಿಷ್ಟ ಗೌರವ
Golden star Ganesh: ಗೋಲ್ಡನ್ ಸ್ಟಾರ್ ಗಣೇಶ್ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಮೂಲಕ ದೊಡ್ಡ ಹಿಟ್ ನೀಡಿದ್ದಾರೆ. ಇದೀಗ ಅವರು ಹೊಸ ಸಿನಿಮಾ ಒಪ್ಪಿಕೊಂಡಿದ್ದು, ಸಿನಿಮಾದ ಮುಹೂರ್ತ ಇಂದು ನಡೆದು, ಚಿತ್ರೀಕರಣ ಪ್ರಾರಂಭ ಆಗಿದೆ. ಗಣೇಶ್ ಅವರು ನಟಿಸುತ್ತಿರುವ ಹೊಸ ಸಿನಿಮಾ ‘ತಮ್ಮ ಸುಖಾಗಮನ ಬಯಸುವ’ ಮುಹೂರ್ತ ಶಿವರಾತ್ರಿ ಪ್ರಯುಕ್ತ ನೆರವೇರಿದೆ.

‘ಗೋಲ್ಡನ್ ಸ್ಟಾರ್’ ಎನಿಸಿಕೊಂಡಿರುವ ಗಣೇಶ್ (Ganesh), ಕನ್ನಡ ಚಿತ್ರರಂಗದ ಸ್ಟಾರ್ ನಟರುಗಳಲ್ಲಿ ಒಬ್ಬರು. ಹೊಡಿ-ಬಡಿ ಹೀರೋಗಳ ನಡುವೆ ಅಪ್ಪಟ ಕೌಟುಂಬಿಕ ನಾಯಕನಾಗಿ ಮಿಂಚುತ್ತಿರುವ ಗಣೇಶ್ ಅವರಿಗೆ ಅವರದ್ದೇ ಆದ ಅಭಿಮಾನಿ ವರ್ಗವಿದೆ. ಅದರಲ್ಲೂ ಗಣೇಶ್ಗೆ ಮಹಿಳಾ ಅಭಿಮಾನಿಗಳ ಸಂಖ್ಯೆ ದೊಡ್ಡದಾಗಿದೆ. ಟಿವಿ ಆಂಕರ್ ಆಗಿದ್ದ ಗಣೇಶ್ ಅವರು ಅವರು ಬೆಳ್ಳಿತೆರೆಯಲ್ಲಿ ಮಿಂಚಲು ಆರಂಭಿಸಿ ಈಗ ಯಶಸ್ವಿ 20 ವರ್ಷಗಳು ಸಂದಿವೆ. ಗಣೇಶ್ ಅವರ ಜರ್ನಿ ಅದ್ಭುತವಾದುದು, ಹಲವು ಏರಿಳಿತಗಳಿಂದ ಕೂಡಿದ್ದು ಮತ್ತು ಹಲವಾರು ಮಂದಿಗೆ ಸ್ಪೂರ್ತಿ ಆಗಬಹುದಾದಂಥಹ ಪಯಣ ಅವರದ್ದು. ಗಣೇಶ್ ಅವರ ಈ ಸಿನಿ ಜರ್ನಿಗೆ ಟ್ರಿಬ್ಯೂಟ್ (ವಿಶೇಷ ಗೌರವ) ಅನ್ನು ಸಿನಿಮಾ ಮೂಲಕ ನೀಡಲಾಗುತ್ತಿದೆ. ಆ ಸಿನಿಮಾ ‘ತಮ್ಮ ಸುಖಾಗಮನ ಬಯಸುವ’.
ಗಣೇಶ್ ಅವರು ‘ತಮ್ಮ ಸುಖಾಗಮನ ಬಯಸುವ’ ಹೆಸರಿನ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದು, ಸಿನಿಮಾದ ಮುಹೂರ್ತವನ್ನು ಶಿವರಾತ್ರಿ ಪ್ರಯುಕ್ತ ಇಂದು (ಫೆಬ್ರವರಿ 15) ಮಾಡಲಾಯ್ತು. ಗಣೇಶ್ ಅವರ ಪತ್ನಿ ಶಿಲ್ಪಾ ಅವರು ಕ್ಲಾಪ್ ಮಾಡಿ ಸಿನಿಮಾಕ್ಕೆ ಚಾಲನೆ ನೀಡಿದ್ದು ವಿಶೇಷ. ಈ ಚಿತ್ರವನ್ನು ಪ್ರತಿಭಾವಂತ ನಿರ್ದೇಶಕ ದೀಪಕ್ ಗಂಗಾಧರ್ ನಿರ್ದೇಶಿಸುತ್ತಿದ್ದಾರೆ. ಗಣೇಶ್ ಅವರ ವೃತ್ತಿಜೀವನದ ಮೈಲಿಗಲ್ಲನ್ನು ಸಂಭ್ರಮಿಸುವ ಉದ್ದೇಶದಿಂದಲೇ ಈ ಚಿತ್ರವನ್ನು ಬಹಳ ಕಾಳಜಿಯಿಂದ ರೂಪಿಸಲಾಗಿದೆ ಎಂದಿದ್ದಾರೆ ನಿರ್ದೇಶಕ. ಚಿತ್ರದ ಶೀರ್ಷಿಕೆಯೇ ಬಹಳ ವಿಭಿನ್ನವಾಗಿದ್ದು, ಗಣೇಶ್ ಅವರ ಎಂದಿನ ಲವಲವಿಕೆಯ ಮತ್ತು ಎಮೋಷನಲ್ ಶೈಲಿಯ ಅಭಿನಯವನ್ನು ಈ ಚಿತ್ರದಲ್ಲಿ ನಿರೀಕ್ಷಿಸಬಹುದಾಗಿದೆ ಎಂದಿದ್ದಾರೆ.
ಇದನ್ನೂ ಓದಿ:ಚಿಕ್ಕಮಗಳೂರು: ಗಣೇಶ್ ಮರ್ಡರ್ ಕೇಸ್ನಲ್ಲಿ ಬಜರಂಗದಳ ಕಾರ್ಯಕರ್ತ ಅರೆಸ್ಟ್
ನಟ ಗಣೇಶ್ ಮಾತನಾಡಿ, ‘ನನಗೆ ಗೊತ್ತಿರಲಿಲ್ಲ 20ವರ್ಷ ಆಯಿತು ಇಂಡಸ್ಟ್ರಿ ಗೆ ಬಂದು ಅಂತ, ನಾನು ಬೆಂಗಳೂರಿಗೆ ಬಂದಾಗ 19 ವರ್ಷ ವಯಸ್ಸು ಅಷ್ಟೆ, ನಟ ಆಗಬೇಕು ಅಂತ ಬಂದಿದ್ದೆ, 2006ರಲ್ಲಿ ‘ಮುಂಗಾರು ಮಳೆ’ ಸಿನಿಮಾ ಆಗಿದ್ದು, ಗೆಲುವನ್ನ ತಲೆ ಮೇಲೆ ಹೊತ್ತುಕೊಂಡು ಹೋಗಲ್ಲ, ಹಿಟ್, ಫ್ಲಾಪ್ ಎಲ್ಲಾ ಬ್ಯಾಲೆನ್ಸ್ ಮಾಡ್ತೀನಿ. ಈ ವರೆಗೆ ನಾನು 45 ಸಿನಿಮಾಗಳಲ್ಲಿ ನಟಿಸಿದ್ದೀನಿ, ಎಲ್ಲ ಸಿನಿಮಾಗಳನ್ನೂ ಸಹ ಇಷ್ಟಪಟ್ಟೇ ನಟಿಸಿದ್ದೀನಿ’ ಎಂದಿದ್ದಾರೆ. ಮುಂದುವರೆದು ಮಾತನಾಡಿ, ‘ರಾಮೇನಹಳ್ಳಿ ಜಗನ್ನಾಥ್ ಸಿನಿಮಾ ಟೈಟಲ್ ಗಳನ್ನ ಚೆನ್ನಾಗಿ ಇಡುತ್ತಾರೆ. ಹ್ಯೂಮನ್ ಎಮೋಷನ್ಸ್ಗಳನ್ನು ಹೊಂದಿರುವ ಸಿನಿಮಾ ಇದಾಗಿದೆ. ಈ ಸಿನಿಮಾಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶಕರಾಗಿದ್ದು, ನನ್ನ ಅರ್ಜುನ್ ಜನ್ಯ ಕಾಂಬಿನೇಶನ್ ನಲ್ಲಿ ಒಳ್ಳೆಯ ಹಾಡುಗಳು ಬಂದಿವೆ, ಈ ಸಿನಿಮಾನಲ್ಲೂ ಅದೇ ರಿಪೀಟ್ ಆಗುವ ವಿಶ್ವಾಸ ಇದೆ’ ಎಂದಿದ್ದಾರೆ ಗಣೇಶ್.
“ಗಣೇಶ್ ಅವರು ಕನ್ನಡ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಅಪಾರ. ‘ಮುಂಗಾರು ಮಳೆ’ಯಿಂದ ಆರಂಭವಾದ ಅವರ ಮೋಡಿ ಇಂದಿಗೂ ಮುಂದುವರಿದಿದೆ. ಅವರ 20 ವರ್ಷಗಳ ಈ ಸುದೀರ್ಘ ಜರ್ನಿಯನ್ನು ಸಂಭ್ರಮಿಸಲು ‘ತಮ್ಮ ಸುಖಾಗಮನ ಬಯಸುವ’ ಚಿತ್ರವು ಸೂಕ್ತ ವೇದಿಕೆಯಾಗಲಿದೆ. ಈ ಸಿನಿಮಾ ಗಣೇಶ್ ಅವರ ಅಭಿಮಾನಿಗಳಿಗೆ ಹಬ್ಬದಂತಿರಲಿದೆ, ಸಿನಿಮಾದ ಹೆಸರು ಆಹ್ವಾನ ನೀಡುವಂತಿರಬೇಕು ಎಂದು ಈ ಹೆಸರಿಟ್ಟಿದ್ದೇವೆ’ ಎಂದು ನಿರ್ದೇಶಕ ದೀಪಕ್ ಗಂಗಾಧರ್ ಹೇಳಿದ್ದಾರೆ. ಈ ಚಿತ್ರವನ್ನು ಖ್ಯಾತ ವಿತರಕ ಮತ್ತು ನಿರ್ಮಾಪಕ ಕಾರ್ತಿಕ್ ಗೌಡ ಅವರ ‘ಕೆಆರ್ಜಿ ಸ್ಟುಡಿಯೋಸ್’ (KRG Studios) ಪ್ರಸ್ತುತಪಡಿಸುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




