Yash: ಅಯೋಧ್ಯೆ ರಾಮ ಮಂದಿರಕ್ಕೆ ಯಶ್​ 50 ಕೋಟಿ ರೂ. ಕೊಟ್ರು ಅಂತ ಹಬ್ಬಿದೆ ಸುಳ್ಳು ಸುದ್ದಿ; ಫೋಟೋ ಹಿಂದಿನ ಸತ್ಯವೇನು?

| Updated By: ಮದನ್​ ಕುಮಾರ್​

Updated on: Sep 01, 2022 | 11:08 AM

Yash | Ayodhya Ram Mandir: ‘ರಾಮ ಮಂದಿರ ನಿರ್ಮಾಣಕ್ಕೆ​ ಯಶ್ 50 ಕೋಟಿ ರೂ. ದೇಣಿಗೆ ನೀಡಿದ್ದಾರೆ’ ಎಂದು ಕೆಲವರು ಸುದ್ದಿ ಹಬ್ಬಿಸಿದ್ದಾರೆ. ಅದರ ಜತೆಗೆ ಒಂದು ಫೋಟೋ ಹಂಚಿಕೊಳ್ಳಲಾಗಿದೆ.

Yash: ಅಯೋಧ್ಯೆ ರಾಮ ಮಂದಿರಕ್ಕೆ ಯಶ್​ 50 ಕೋಟಿ ರೂ. ಕೊಟ್ರು ಅಂತ ಹಬ್ಬಿದೆ ಸುಳ್ಳು ಸುದ್ದಿ; ಫೋಟೋ ಹಿಂದಿನ ಸತ್ಯವೇನು?
ಯಶ್​ ವೈರಲ್​ ಫೋಟೋ
Follow us on

ನಟ ಯಶ್ (Yash) ಅವರಿಗೆ ದೇಶಾದ್ಯಂತ ಜನಪ್ರಿಯತೆ ಇದೆ. ಅವರ ಬಗ್ಗೆ ಪ್ರತಿ ದಿನ ಒಂದಿಲ್ಲೊಂದು ಸುದ್ದಿ ಆಗುತ್ತಲೇ ಇರುತ್ತದೆ. ಆದರೆ ಕೆಲವರು ಸುಳ್ಳು ಸುದ್ದಿ ಹಬ್ಬಿಸಿ ಜನರ ದಾರಿ ತಪ್ಪಿಸುತ್ತಾರೆ. ಈಗ ಯಶ್​ ಅವರ ಉದಾರತೆ ಕುರಿತು ಒಂದು ಫೇಕ್​ ನ್ಯೂಸ್​ ಹರಿದಾಡುತ್ತಿದೆ. ಅಯೋಧ್ಯೆಯಲ್ಲಿ (Ayodhya) ರಾಮ ಮಂದಿರ ನಿರ್ಮಾಣದ ಕಾರ್ಯ ಭರದಿಂದ ಸಾಗಿದೆ. ಅದಕ್ಕಾಗಿ ದೇಶದ ಕೋಟ್ಯಂತರ ಮಂದಿ ದೇಣಿಗೆ ನೀಡುತ್ತಿದ್ದಾರೆ. ರಾಮ ಮಂದಿರ (Ram Mandir) ನಿರ್ಮಾಣಕ್ಕೆ ‘ರಾಕಿಂಗ್​ ಸ್ಟಾರ್​’ ಯಶ್​ ಅವರು ಬರೋಬ್ಬರಿ 50 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಈ ಕುರಿತು ಕೆಲವರು ಫೋಟೋ ಸಮೇತ ಪೋಸ್ಟ್​ ಮಾಡಿದ್ದಾರೆ. ಆದರೆ ಆ ಫೋಟೋದ ಅಸಲಿಯತ್ತು ಬೇರೆ ಇದೆ.

ಈಗಾಗಲೇ ಯಶ್​ ಅವರು ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ. ಕರ್ನಾಟಕದ ಕೆರೆಗಳ ಸಂರಕ್ಷಣೆ ಮತ್ತು ಅಂತರ್ಜಲ ವೃದ್ಧಿಗಾಗಿ ಅವರು ಕೋಟ್ಯಂತರ ರೂಪಾಯಿ ಕರ್ಚು ಮಾಡಿದ್ದಾರೆ. ಯಶ್​ ಅವರ ‘ಯಶೋಮಾರ್ಗ’ ಸಂಸ್ಥೆಯಿಂದ ಅನೇಕರಿಗೆ ಸಹಾಯ ಆಗಿದೆ. ಆದರೆ ಸದ್ಯಕ್ಕೆ ರಾಮ ಮಂದಿರದ ದೇಣಿಗೆ ಕುರಿತು ಹರಿದಾಡಿರುವುದು ಮಾತ್ರ ಶುದ್ಧ ಸುಳ್ಳು.

‘ದಕ್ಷಿಣದ ಸ್ಟಾರ್​ ನಟ ಯಶ್​ ಅವರು ಇತ್ತೀಚೆಗೆ ಅಯೋಧ್ಯೆಗೆ ಭೇಟಿ ನೀಡಿದರು. ಈ ವೇಳೆ ರಾಮ ಮಂದಿರ ನಿರ್ಮಾಣಕ್ಕಾಗಿ​ 50 ಕೋಟಿ ರೂಪಾಯಿ ದೇಣಿಗೆ ನೀಡುವುದಾಗಿ ತಿಳಿಸಿದರು’ ಎಂದು ಸೋಶಿಯಲ್​ ಮೀಡಿಯಾದಲ್ಲಿ ಕೆಲವರು ಪೋಸ್ಟ್​ ಮಾಡಿದ್ದಾರೆ. ಅದರ ಜೊತೆಗೆ ಒಂದು ಫೋಟೋ ಹಂಚಿಕೊಳ್ಳಲಾಗಿದೆ. ಅಂದಹಾಗೆ, ಆ ಫೋಟೋದ ಅಸಲಿಯತ್ತು ಬೇರೆ ಇದೆ. ಅದು ಅಯೋಧ್ಯಗೆ ಭೇಟಿ ನೀಡಿದ ಸಂದರ್ಭದ ಫೋಟೋ ಅಲ್ಲ. ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಬಿಡುಗಡೆಗೂ ಮುನ್ನ ಅವರು ತಿರುಪತಿಗೆ ಭೇಟಿ ನೀಡಿದ್ದರು. ಆ ಸಂದರ್ಭದ ಫೋಟೋವನ್ನೇ ಬಳಸಿಕೊಂಡು ಈಗ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ.

ಇದನ್ನೂ ಓದಿ
ಬಾಲ್ಯ ಸ್ನೇಹಿತನ ಮದುವೆಗೆ ಪತ್ನಿ ಸಮೇತ ಬಂದು ಹರಸಿದ ಯಶ್​; ಸಲಾಂ ರಾಕಿ ಭಾಯ್​ ಎಂದ ಫ್ಯಾನ್ಸ್​
ಗೋವಾ ಸಿಎಂ ಪ್ರಮೋದ್​ ಸಾವಂತ್​ ಭೇಟಿ ಮಾಡಿದ ಯಶ್​-ರಾಧಿಕಾ ಪಂಡಿತ್​; ಮುಂದಿನ ಸಿನಿಮಾ ಬಗ್ಗೆ​ ಕುತೂಹಲ
‘ಕೆಜಿಎಫ್​ 2’ ಹಿಟ್​ ಆಗಿದ್ದಕ್ಕೆ ಕಬ್ಬಿನ ಹಾಲು ಟ್ರೀಟ್​ ಕೇಳಿದ ‘ಗೂಗ್ಲಿ’ ನಟಿ ಕೃತಿ ಕರಬಂಧ: ಯಶ್​ ಏನಂದ್ರು?
‘ಕೆಜಿಎಫ್​ 2’ಗೆ ಕೆಟ್ಟ ವಿಮರ್ಶೆ ಮಾಡಿ, ಯಶ್​ ಬಗ್ಗೆ ವ್ಯಂಗ್ಯದ ಮಾತಾಡಿದ ‘ದೇಶದ್ರೋಹಿ’ ನಟ:​ ಸಿಡಿದೆದ್ದ ಫ್ಯಾನ್ಸ್​

(ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಫೇಕ್​​ ಪೋಸ್ಟ್​)

ಸ್ಟಾರ್​ ನಟರ ಕುರಿತು ಈ ರೀತಿ ಅನೇಕ ಫೇಕ್​ ನ್ಯೂಸ್​ಗಳು ಹರಿದಾಡುತ್ತವೆ. ಹಾಗಾಗಿ ಅವುಗಳಿಗೆಲ್ಲ ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಆದರೆ ಅಂಥ ಸುಳ್ಳು ಸುದ್ದಿಗಳು ಜನರ ಭಾವನೆಗೆ ಸಂಬಂಧಿಸಿದ್ದಾದರೆ ಖಂಡಿತವಾಗಿಯೂ ಸ್ಪಷ್ಟನೆ ನೀಡಬೇಕಾಗುತ್ತದೆ.

ಯಶ್​ ಅವರು ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಮೂಲಕ ದೊಡ್ಡ ಯಶಸ್ಸು ಪಡೆದಿದ್ದಾರೆ. ಬಹುಕೋಟಿ ರೂಪಾಯಿ ಸಂಭಾವನೆ ಪಡೆಯುವ ನಟರಲ್ಲಿ ಅವರು ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ಬಾಲಿವುಡ್​ನ ಸ್ಟಾರ್ ಹೀರೋಗಳನ್ನೂ ಮೀರಿಸಿದೆ ಅವರ ಸಕ್ಸಸ್​. ಅವರ ಮುಂದಿನ ಚಿತ್ರದ ಘೋಷಣೆಗಾಗಿ ಎಲ್ಲರೂ ಕಾಯುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.