ನಾನು ಬಾಯಿ ಮುಚ್ಕೊಂಡು ಇದ್ದೆ, ಯಾಕಂದ್ರೆ; ಹುಬ್ಬಳಿಯಿಂದ ಇಡೀ ರಾಜ್ಯಕ್ಕೆ ಸುದೀಪ್ ಖಡಕ್ ಸಂದೇಶ

ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಅವರು ಪ್ರಾಮಿಸ್ ಮಾಡಿದಂತೆಯೇ ಡಿಸೆಂಬರ್ 25ಕ್ಕೆ ‘ಮಾರ್ಕ್’ ಬಿಡುಗಡೆ ಆಗುತ್ತಿದೆ. ಹುಬ್ಬಳ್ಳಿಯಲ್ಲಿ ಪ್ರೀ-ರಿಲೀಸ್ ಇವೆಂಟ್ ನಡೆದಿದೆ. ಈ ವೇದಿಕೆಯಲ್ಲಿ ಸುದೀಪ್ ಕೆಲವು ಮುಖ್ಯ ವಿಷಯ ಮಾತಾಡಿದ್ದಾರೆ. ‘ಮಾತಾಡೋ ಟೈಮ್​​ನಲ್ಲಿ ಮಾತಾಡಿ’ ಎಂದು ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಅವರು ಕಿವಿಮಾತು ಹೇಳಿದ್ದಾರೆ.

ನಾನು ಬಾಯಿ ಮುಚ್ಕೊಂಡು ಇದ್ದೆ, ಯಾಕಂದ್ರೆ; ಹುಬ್ಬಳಿಯಿಂದ ಇಡೀ ರಾಜ್ಯಕ್ಕೆ ಸುದೀಪ್ ಖಡಕ್ ಸಂದೇಶ
Kichcha Sudeep

Updated on: Dec 21, 2025 | 8:46 AM

ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ (Mark Movie) ಡಿಸೆಂಬರ್ 25ರಂದು ಅದ್ದೂರಿಯಾಗಿ ತೆರೆಕಾಣಲಿದೆ. ಈ ಪ್ರಯುಕ್ತ ಡಿಸೆಂಬರ್ 20ರ ಸಂಜೆ ಹುಬ್ಬಳ್ಳಿಯಲ್ಲಿ ಪ್ರೀ-ರಿಲೀಸ್ ಇವೆಂಟ್ ಮಾಡಲಾಗಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು ಇದರಲ್ಲಿ ಭಾಗಿ ಆಗಿದ್ದಾರೆ. ಚಿತ್ರತಂಡದ ಕಲಾವಿದರು, ತಂತ್ರಜ್ಞರು ಹಾಗೂ ಆಪ್ತರ ಸಮ್ಮುಖದಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರು ಮಾತನಾಡಿದರು. ಈ ವೇದಿಕೆಯಲ್ಲಿ ತಮ್ಮ ಅಭಿಮಾನಿಗಳಿಗೆ ಅವರು ಖಡಕ್ ಸಂದೇಶ ನೀಡಿದರು.

‘ಎಲ್ಲರೂ ಹೇಗಿದ್ದೀರಿ? 2003ರಲ್ಲಿ ಇಲ್ಲಿ ಒಂದು ಪ್ರೋಗ್ರಾಂ ಮಾಡಿದ ಬಳಿಕ ಮತ್ತೆ ಇಲ್ಲಿಗೆ ಬರಲು ಇವತ್ತೇ ಅವಕಾಶ ಸಿಕ್ಕಿದ್ದು. ಬಹಳ ಚೆನ್ನಾಗಿ, ಸುಂದರವಾಗಿ ಸ್ವಾಗತಿಸಿದ್ದಕ್ಕೆ ಧನ್ಯವಾದಗಳು. ಮಾತಾಡೊದಕ್ಕೆ ತುಂಬಾ ಆಸೆ ಇದೆ. ಕೆಲವು ಕಂಟ್ರೋಲ್ ಮಾಡಿಕೊಂಡು ಮಾತಾಡುತ್ತೀನಿ. ಹುಬ್ಬಳ್ಳಿಗೆ ಬಂದು ಈ ಕಾರ್ಯಕ್ರಮ ಮಾಡೋದಕ್ಕೆ ಒಂದು ದೊಡ್ಡ ಕಾರಣ ಇದೆ’ ಎನ್ನುವ ಮೂಲಕ ಕಿಚ್ಚ ಸುದೀಪ್ ಅವರು ಮಾತು ಆರಂಭಿಸಿದರು.

‘ಕೆಲವು ಮಾತು ಈ ಹುಬ್ಬಳಿಗೆ ಬಂದು ವೇದಿಕೆ ಮೇಲೆ ಮಾತಾಡಿದರೆ ಇಡೀ ಕರ್ನಾಟಕಕ್ಕೆ ಎಲ್ಲಿ ತಟ್ಟಬೇಕೋ ತಟ್ಟುತ್ತೆ, ಹೇಗೆ ತಟ್ಟಬೇಕೋ ತಟ್ಟುತ್ತೆ. ಯಾವ ಭರ್ಜರಿಯಲ್ಲಿ ತಟ್ಟಬೇಕೋ ತಟ್ಟುತ್ತೆ. ಪ್ರತಿ ಬಾರಿ ಈ ಊರಲ್ಲಿ ನಮಗೆ ಸಿಕ್ಕ ಪ್ರೀತಿ, ವಿಶ್ವಾಸ, ಬೆಂಬಲವನ್ನು ನಾವು ಎಂದಿಗೂ ಮರೆಯಲ್ಲ. ಈ ವೇದಿಕೆಗೆ ಬಂದ ಎಲ್ಲ ಸ್ನೇಹಿತರಿಗೆ, ಜನಸಾಗರಕ್ಕೆ, ನನ್ನ ಕುಟುಂಬಕ್ಕೆ ಧನ್ಯವಾದ’ ಎಂದು ಸುದೀಪ್ ಹೇಳಿದ್ದಾರೆ.

‘ಜುಲೈ 5ರಂದು ಒಂದು ಪ್ರಾಮಿಸ್ ಮಾಡಿದ್ದೆ. ಡಿಸೆಂಬರ್ 25ನೇ ತಾರೀಕು ಬಾಗಿಲು ತಟ್ಟುತ್ತೇನೆ ಅಂತ. ಜೋರಾಗಿ ತಟ್ಟುತ್ತಾ ಇದ್ದೇವೆ ನಾವು. ಈ ಜರ್ನಿಯಲ್ಲಿ 25ಕ್ಕೆ ಥಿಯೇಟರ್​​ನಲ್ಲಿ ಒಂದು ಸಿನಿಮಾ ಬಿಡುಗಡೆ ಆಗುತ್ತೆ. ಆದರೆ ಹೊರಗಡೆ ಒಂದು ಪಡೆ ಯುದ್ಧಕ್ಕೆ ರೆಡಿ ಆಗುತ್ತಾ ಇದೆ. ಈ ವೇದಿಕೆ ಮೇಲಿಂದ ಹೇಳ್ತಾ ಇದ್ದೇನೆ. ಯುದ್ಧಕ್ಕೆ ಸಿದ್ಧ. ಯಾಕೆಂದರೆ ನಾವು ನಮ್ಮ ಮಾತಿಗೆ ಬದ್ಧ’ ಎಂದಿದ್ದಾರೆ ಸುದೀಪ್.

‘ಮಾರ್ಕ್’ ಸಿನಿಮಾ ಪ್ರೀ-ರಿಲೀಸ್ ಇವೆಂಟ್ ವಿಡಿಯೋ:

Mark Pre-Release Event LIVE in Hubballi | Kichcha Sudeepa | Vijay Kartikeyaa | Sathya Jyothi Films

‘ಕೆಲವೊಮ್ಮೆ ನನಗೆ ಅನಿಸುತ್ತೆ, ಸೈಲೆಂಟ್ ಆಗಿ ಇರುವುದು ಒಳ್ಳೆಯದೋ ಕೆಟ್ಟದ್ದೋ ಗೊತ್ತಿಲ್ಲ. ಆದರೆ ನಿಮಗೋಸ್ಕರ, ನನ್ನ ಸ್ನೇಹಿತರು ನೀವೆಲ್ಲ ಚೆನ್ನಾಗಿರಬೇಕು ಎಂಬ ಒಂದೇ ಕಾರಣಕ್ಕೋಸ್ಕರ, ನಾವೆಲ್ಲರೂ ಒಳ್ಳೆಯ ಹೆಸರಲ್ಲಿ ಇರಬೇಕು ಎಂಬ ಕಾರಣಕ್ಕೋಸ್ಕರ ನಾನು ಬಾಯಿ ಮುಚ್ಚಿಕೊಂಡು ಇದ್ದೆ ಹೊರತು ಬಾಯಿ ಇಲ್ಲ ಅಂತಲ್ಲ’ ಎಂದಿದ್ದಾರೆ ಕಿಚ್ಚ ಸುದೀಪ್.

ಇದನ್ನೂ ಓದಿ: ನಾನು ಸಖತ್ ದುಬಾರಿ ಎಂದ ಕಿಚ್ಚ ಸುದೀಪ್; ಕಾರಣವೇನು?

‘ನನ್ನಿಂದ, ನನ್ನ ಸಹನೆನಿಂದ ಬಹಳಷ್ಟು ಕಲ್ಲಿನ ತೂರಾಟ ನಿಮ್ಮ ಮೇಲೆ ಬೀಳುತ್ತಲೇ ಇರುತ್ತದೆ. ಅದನ್ನು ನೀವು ತಡೆದುಕೊಂಡು ಬರುತ್ತಲೇ ಇದ್ದೀರಿ. ಈಗ ಹೇಳ್ತಾ ಇದೀನಿ. ತಡೆಯೋ ತನಕ ತಡೆಯಿರಿ. ಮಾತಾಡೋ ಟೈಮ್​​ನಲ್ಲಿ ಮಾತಾಡಿ. ಮಾರ್ಕ್ ಒಂದು ಅದ್ಭುತವಾದ ಸಿನಿಮಾ. ಇಡೀ ತಂಡಕ್ಕೆ ಧನ್ಯವಾದ. ಡಿಸೆಂಬರ್ 25ಕ್ಕೆ ಇಲ್ಲಿನ ಕೂಗಾಟ ನನಗೆ ಬೆಂಗಳೂರಲ್ಲಿ ಕೇಳಿಸಬೇಕು’ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us