AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನರಮನ್ಸ ನರಮನ್ಸ ಬದುಕೋದು ಹೀಗಲ್ಲ’; ಕೊವಿಡ್​ ದುಸ್ಥಿತಿಯಲ್ಲಿ ವೈರಲ್​ ಆಗುತ್ತಿರುವ ದರ್ಶನ್​ ಹಾಡಿನ ವಿಶೇಷ ಏನು?

‘ನರಮೇದವ ಶುರುಮಾಡಿದ ನರರಾಕ್ಷಸ ಯಾರೋ? ಅಭಿಮಾನದ ಒಳಸಂಚನು ನಡೆಸೋರು ಯಾರೋ? ಪಾಪಿಗಳ ಸಂತೆಯಲ್ಲಿ ಪ್ರಾಣಕೆ ಬೆಲೆಯೇ ಇಲ್ಲ’ ಎಂಬ ಸಾಲುಗಳು ಹೆಚ್ಚು ವೈರಲ್​ ಆಗುತ್ತಿದೆ.

‘ನರಮನ್ಸ ನರಮನ್ಸ ಬದುಕೋದು ಹೀಗಲ್ಲ’; ಕೊವಿಡ್​ ದುಸ್ಥಿತಿಯಲ್ಲಿ ವೈರಲ್​ ಆಗುತ್ತಿರುವ ದರ್ಶನ್​ ಹಾಡಿನ ವಿಶೇಷ ಏನು?
ನವಗ್ರಹ ಸಿನಿಮಾ ಪೋಸ್ಟರ್​ - ಕೊರೊನಾ ವೈರಸ್​
ಮದನ್​ ಕುಮಾರ್​
|

Updated on: May 01, 2021 | 12:19 PM

Share

ಎಲ್ಲೆಲ್ಲೂ ಕೊರೊನಾ ವೈರಸ್​ ತಾಂಡವ ಆಡುತ್ತಿದೆ. ಬೆಂಗಳೂರಿನಲ್ಲಿ ಜನರು ಶವ ಸಂಸ್ಕಾರಕ್ಕೂ ಸಾಲುಗಟ್ಟಿ ನಿಲ್ಲುವಂತಹ ದುಸ್ಥಿತಿ ನಿರ್ಮಾಣ ಆಗಿದೆ. ಬೇರೆ ಬೇರೆ ಕಡೆಗಳಲ್ಲಿ ಸಾಮೂಹಿಕವಾಗಿ ಜನರ ಅಂತ್ಯ ಸಂಸ್ಕಾರ ಮಾಡುತ್ತಿರುವ ದೃಶ್ಯಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ. ಅದರಲ್ಲಿ ಗಮನ ಸೆಳೆಯುತ್ತಿರುವ ಒಂದು ಅಂಶ ಎಂದರೆ, ಕನ್ನಡ ಸಿನಿಮಾದ ಒಂದು ಗೀತೆ ಹಿನ್ನೆಲೆಯಲ್ಲಿ ಕೇಳಿಬರುತ್ತಿದೆ. ‘ನರಮನ್ಸ ನರಮನ್ಸ ಬದುಕೋದು ಹೀಗಲ್ಲ.. ಕಲಿಸೋಕೆ ಯಾರೂ ಇಲ್ಲ…’ ಎಂಬ ಹಾಡಿನ ಹಿನ್ನೆಲೆಯಲ್ಲಿ ಕೊವಿಡ್​ನ ನರಕ ಸದೃಶ್ಯ ಸ್ಥಿತಿಯನ್ನು ವಿವರಿಸಲಾಗುತ್ತಿದೆ.

ಇದು 2008ರಲ್ಲಿ ತೆರೆಕಂಡ ನವಗ್ರಹ ಸಿನಿಮಾದ ಗೀತೆ. ದರ್ಶನ್​, ತರುಣ್​ ಸುಧೀರ್​, ಸೃಜನ್​ ಲೋಕೇಶ್​, ವಿನೋದ್​ ಪ್ರಭಾಕರ್​, ಧರ್ಮ ಕೀರ್ತಿ ರಾಜ್​, ಶರ್ಮಿಳಾ ಮಾಂಡ್ರೆ, ನಾಗೇಂದ್ರ ಅರಸ್​ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದರು. ದರ್ಶನ್​ ಸಹೋದರ ದಿನಕರ ತೂಗುದೀಪ್​ ನಿರ್ದೇಶನ ಮಾಡಿದ್ದ ನವಗ್ರಹ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲೂ ಯಶಸ್ವಿ ಆಗಿತ್ತು. ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ನೀಡಿದ್ದರು. ಅದೇ ಸಿನಿಮಾದ ‘ನರ ಮನ್ಸ ಮನ್ಸ..’ ಹಾಡು ಈಗ ಕೊವಿಡ್​ ಮಹಾಮಾರಿಯ ಮರಣಮೃದಂಗವನ್ನು ಎಳೆಎಳೆಯಾಗಿ ವಿವರಿಸುವಂತಿದೆ.

ಮೈಸೂರಿನ ಚಿನ್ನದ ಅಂಬಾರಿ ಕದಿಯಬೇಕು ಎಂದುಕೊಳ್ಳುವ 9 ಜನರ ಕಥೆಯನ್ನು ಈ ಸಿನಿಮಾ ಒಳಗೊಂಡಿತ್ತು. ದುಡ್ಡಿನ ಆಸೆಗೆ ಬಿದ್ದು ಪ್ರಾಣವನ್ನೇ ಕಳೆದುಕೊಳ್ಳುವ ಆಪ್ತ ಸ್ನೇಹಿತರ ಬಗ್ಗೆ ಚಿತ್ರದಲ್ಲಿ ವಿವರಿಸಲಾಗಿತ್ತು. ಒಟ್ಟಾರೆ ಸಿನಿಮಾದ ಆಶಯಕ್ಕೆ ತಕ್ಕಂತೆ ವಿ. ನಾಗೇಂದ್ರ ಪ್ರಸಾದ್​ ಅವರು ‘ನರ ಮನ್ಸ ನರ ಮನ್ಸ..’ ಹಾಡನ್ನು ಬರೆದಿದ್ದರು. ಆ ಹಾಡಿನಲ್ಲಿ ಇರುವ ಒಂದೊಂದು ಸಾಲು ಕೂಡ ಈಗ ಕೊವಿಡ್​ ಪರಿಸ್ಥಿತಿಗೆ ಸೂಕ್ತವೇನೂ ಅನಿಸುತ್ತಿದೆ. ಹಾಗಾಗಿ, ಕೊರೊನಾ ವೈರಸ್​ನಿಂದ ಉಂಟಾಗಿರುವ ನರಕದಂತಹ ದೃಶ್ಯಗಳ ಹಿನ್ನೆಲೆಗೆ ನೆಟ್ಟಿಗರು ಈ ಹಾಡನ್ನು ಬಳಸುತ್ತಿದ್ದಾರೆ.

‘ನರ ಮನ್ಸ ನರ ಮನ್ಸ ಬದುಕೋದು ಹೀಗಲ್ಲ.. ಕಲಿಸೋಕೆ ಯಾರೂ ಇಲ್ಲ. ನರ ಮನ್ಸ ನರ ಮನ್ಸ ಹಿಂದೇನೂ ನಡೆಯಿಲ್ಲ.. ಅವನಿಷ್ಟದಂಗೆ ಎಲ್ಲಾ. ಬರಿಗೈಲೇ ಬರೋದು, ಬರಿಗೈಲಿ ಹೋಗೋದು. ತಿಳಿದಾಗ ನೀನೇ ಬುದ್ಧನು. ಕಳಬೇಡ ಕೊಲಬೇಡ, ಈ ವಚನ ಮರಿಬೇಡ… ಸುಮ್​ ಸುಮ್ನೇ ಮೆರಿಬೇಡವೋ’ ಎಂಬ ಸಾಲುಗಳ ಮೂಲಕ ಎಲ್ಲರಿಗೂ ಪಾಠ ಮಾಡುವಂತಿದೆ ಈ ಹಾಡು.

‘ನರಮೇದವ ಶುರುಮಾಡಿದ ನರರಾಕ್ಷಸ ಯಾರೋ? ಅಭಿಮಾನದ ಒಳಸಂಚನು ನಡೆಸೋರು ಯಾರೋ? ಪಾಪಿಗಳ ಸಂತೆಯಲ್ಲಿ ಪ್ರಾಣಕೆ ಬೆಲೆಯೇ ಇಲ್ಲ. ನಿನ್ನೋರು ಅನ್ನೋರೇ ಇಲ್ಲ. ಸುಖ ನೆಮ್ಮದಿ ಹಣದಲ್ಲಿದೆ ಅಂದುಕೊಂಡರೆ ಮೋಹ. ನಿನ್ನ ನಾಳೆಯು ಹಣೆಯಲ್ಲಿದೆ, ಅರಿವಾದರೆ ಸ್ನೇಹ. ಆಸೆಗೆ ಬದುಕೋರೆಲ್ಲ ಮಣ್ಣಾಗಿ ಹೋಗೋರೆ.. ನಿಂದೂನೂ ಅಷ್ಟೇ ತಾನೇ..’ ಎಂಬ ಸಾಲುಗಳನ್ನು ಹೊಂದಿರುವ ಈ ಹಾಡು ಈಗ ಹೆಚ್ಚು ವೈರಲ್​ ಆಗುತ್ತಿದೆ.

ಈ ಹಾಡಿಗೆ ಧ್ವನಿ ನೀಡಿದ್ದು ಖ್ಯಾತ ಗಾಯಕ ಹರಿಹರನ್​.

ಇದನ್ನೂ ಓದಿ: Producer Ramu Death: ಕೊರೊನಾ ಸೋಂಕಿನಿಂದ ನಟಿ ಮಾಲಾಶ್ರೀ ಪತಿ, ಖ್ಯಾತ ನಿರ್ಮಾಪಕ ರಾಮು ನಿಧನ

ಕೊರೊನಾಗೆ ಬಲಿಯಾದ ಮತ್ತೋರ್ವ ಸ್ಯಾಂಡಲ್​ವುಡ್​ ಯುವ ನಿರ್ಮಾಪಕ