ಅಬ್ದುಲ್​ ಕಲಾಂ ಕಾರು ಚಾಲಕನಾಗಿದ್ದ ನಂದನ​ ಪ್ರಭು ನಿರ್ದೇಶನದಲ್ಲಿ ‘ಓರಿಯೋ’ ಸಿನಿಮಾ: ಏನಿದರ ಕಥೆ?

| Updated By: ಮದನ್​ ಕುಮಾರ್​

Updated on: May 15, 2022 | 7:30 AM

ಅಬ್ದುಲ್​ ಕಲಾಂ ಅವರು ಹೇಳಿದ್ದ ಮಾತುಗಳೇ ‘ಓರಿಯೋ’ ಕನ್ನಡ ಚಿತ್ರಕ್ಕೆ ಸ್ಫೂರ್ತಿ. ಈ ಸಿನಿಮಾಗೆ ನಂದನ ಪ್ರಭು ನಿರ್ದೇಶನ ಮಾಡಿದ್ದಾರೆ.

ಅಬ್ದುಲ್​ ಕಲಾಂ ಕಾರು ಚಾಲಕನಾಗಿದ್ದ ನಂದನ​ ಪ್ರಭು ನಿರ್ದೇಶನದಲ್ಲಿ ‘ಓರಿಯೋ’ ಸಿನಿಮಾ: ಏನಿದರ ಕಥೆ?
ಓರಿಯೋ ಸಿನಿಮಾ ತಂಡ
Follow us on

ಸಿನಿಮಾ ಕ್ಷೇತ್ರ ಎಲ್ಲರನ್ನೂ ಆಕರ್ಷಿಸುತ್ತದೆ. ಬೇರೆ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡಿದ ಜನರು ಚಿತ್ರರಂಗಕ್ಕೆ ಬಂದು ಕಾರ್ಯನಿರತರಾದ ಅನೇಕ ಉದಾಹರಣೆಗಳಿವೆ. ಎ.ಪಿ.ಜೆ. ಅಬ್ದುಲ್​ ಕಲಾಂ (APJ Abdul Kalam) ಅವರ ಕಾರು ಚಾಲಕನಾಗಿದ್ದ ನಂದನ​ ಪ್ರಭು ಅವರು ಕೂಡ ಸಿನಿಮಾರಂಗಕ್ಕೆ ಕಾಲಿಟ್ಟರು. ಬಿಎಂಟಿಸಿ ಕಂಡಕ್ಟರ್​ ಆಗಿಯೂ ಕೆಲಸ ಮಾಡಿರುವ ಅವರು, ಈಗಾಗಲೇ ‘ಪ್ರೀತಿಯ ಲೋಕ’, ‘ಲವ್​ ಈಸ್​ ಪಾಯಿಸನ್​’ ಚಿತ್ರ ಮಾಡಿದ್ದಾರೆ. ಈಗ ‘ಓರಿಯೋ’ ಸಿನಿಮಾ ನಿರ್ದೇಶಿಸಿದ್ದಾರೆ. ಅಬ್ದುಲ್​ ಕಲಾಂ ಅವರು ಹೇಳಿದ ಕೆಲವು ಮಾತುಗಳನ್ನೇ ಸ್ಫೂರ್ತಿಯಾಗಿ ಇಟ್ಟುಕೊಂಡು ನಂದನ ಪ್ರಭು (Director Nandana Prabhu) ಅವರು ಈ ಸಿನಿಮಾ ಮಾಡಿದ್ದಾರೆ ಎಂಬುದು ವಿಶೇಷ. ಅಬ್ದುಲ್​ ಕಲಾಂ ಹೇಳಿದ ಆ ವಿಚಾರಗಳು ಏನು? ಅವು ತೆರೆ ಮೇಲೆ ಹೇಗೆ ಮೂಡಿಬಂದಿವೆ? ಈ ಪ್ರಶ್ನೆಗಳಿಗೆ ‘ಓರಿಯೋ’ ಸಿನಿಮಾ (Oriyo Kannada Movie) ನೋಡಿ ಉತ್ತರ ಪಡೆಯಬೇಕು. ಸದ್ಯಕ್ಕೆ ಈ ಸಿನಿಮಾಗೆ ಬಹುತೇಕ ಚಿತ್ರೀಕರಣ ಮುಗಿದಿದೆ. ಒಂದು ಹಾಡಿನ ಶೂಟಿಂಗ್​ ಮಾತ್ರ ಬಾಕಿ ಇದೆ. ಸುದ್ದಿಗೋಷ್ಠಿ ನಡೆಸಿ ಒಟ್ಟಾರೆ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ ನಂದನ​ ಪ್ರಭು ಮತ್ತು ಅವರ ತಂಡದವರು.

ಏನಿದು ‘ಓರಿಯೋ’? ಈ ಪ್ರಶ್ನೆ ಮೂಡುವುದು ಸಹಜ. ‘ಈ ಪದಕ್ಕೆ ಒಂದು ಅರ್ಥ ಇಲ್ಲ. ಒಂದೊಂದು ದೇಶದಲ್ಲಿ ಒಂದೊಂದು ಅರ್ಥ ಇದೆ. ಎಲ್ಲವನ್ನೂ ಒಟ್ಟಾಗಿ ನೋಡಿದಾಗ ಕತ್ತಲು ಮತ್ತು ಬೆಳಕು ಎಂಬ ಅರ್ಥ ಸಿಗುತ್ತದೆ. ಈ ಕಥೆ ಕೂಡ ಕತ್ತಲು ಮತ್ತು ಬೆಳಕಿನ ನಡುವೆ ನಡೆಯುವಂಥದ್ದು. ಹಾಗಾಗಿ ಓರಿಯೋ ಎಂಬ ಶೀರ್ಷಿಕೆ ಹೆಚ್ಚು ಸೂಕ್ತ ಆಗುತ್ತದೆ’ ಎಂದಿದ್ದಾರೆ ನಿರ್ದೇಶಕ ನಂದನ​ ಪ್ರಭು.

‘ನಾನು ಅಬ್ದುಲ್​ ಕಲಾಂ ಜೊತೆ ಇದ್ದಾಗ ನನಗೆ ಅವರು ಒಂದಷ್ಟು ಮಾತುಗಳನ್ನು ಹೇಳಿದ್ದರು. ಅದನ್ನು ಸ್ಫೂರ್ತಿಯಾಗಿ ಇಟ್ಟುಕೊಂಡು ಈ ಕಥೆ ಬರೆದೆ. 6 ವರ್ಷಗಳ ಕಾಲ ಅಧ್ಯಯನ ನಡೆಸಿ, ಚಿತ್ರಕಥೆ ಬರೆದು ಸಿನಿಮಾ ಮಾಡಿದ್ದೇನೆ. ರಿವರ್ಸ್​ ಸ್ಕ್ರೀನ್​ಪ್ಲೇ ರೀತಿಯಲ್ಲಿ ಕಥೆ ಹೇಳುತ್ತೇವೆ. ಇದು ಪಕ್ಕಾ ಕಮರ್ಷಿಯಲ್​ ಸಿನಿಮಾ. ಆದರೆ ಸಾರ್ವತ್ರಿಕವಾಗಿ ಎಲ್ಲರಿಗೂ ಅನ್ವಯ ಆಗುವಂತಹ ಮೆಸೇಜ್​ ಇದೆ. ಸದ್ಯಕ್ಕೆ ಚಿತ್ರದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ’ ಎಂದು ನಂದನ​ ಪ್ರಭು ಹೇಳಿದ್ದಾರೆ.

ಇದನ್ನೂ ಓದಿ
ರಿಲೀಸ್​ ದಿನಾಂಕ ಲಾಕ್​ ಮಾಡಿದ ‘ತ್ರಿವಿಕ್ರಮ’; ಜೂ.24ಕ್ಕೆ ಬರಲಿದೆ ವಿಕ್ರಮ್​ ರವಿಚಂದ್ರನ್​ ಸಿನಿಮಾ
ಟ್ರೇಲರ್​ನಿಂದ ಗಮನ ಸೆಳೆದ ‘ಫಿಸಿಕ್ಸ್​ ಟೀಚರ್​’ ಮೇ 27ಕ್ಕೆ ರಿಲೀಸ್​; ಹೊಸ ಹೀರೋ ಸುಮುಖ ಎಂಟ್ರಿಗೆ ವೇದಿಕೆ ರೆಡಿ
ಸೀರಿಯಲ್​, ಸಿನಿಮಾ ಬಳಿಕ ಶ್ರೀಮಹದೇವ್ ಇನ್ನೊಂದು ಪ್ರಯತ್ನ; ಹೊಸಬರ ಜತೆ ‘Saturday ನೈಟಲಿ’​ ಸಾಂಗ್​
ಧನಂಜಯ ನಟನೆಯ ‘ಹೆಡ್​ ಬುಷ್​’ ಚಿತ್ರಕ್ಕೆ ಜಯರಾಜ್​ ಪುತ್ರ ಅಜಿತ್​ ತಕರಾರು ತೆಗೆದಿದ್ದು ಯಾಕೆ? ಇಲ್ಲಿದೆ ಕಾರಣ..

ಈ ಚಿತ್ರದ ಪೋಸ್ಟರ್​ ಗಮನ ಸೆಳೆಯುವಂತಿದೆ. ಐದು ಹೆಡೆಯ ಸರ್ಪ, ಅದರಲ್ಲಿ ಮನುಷ್ಯರ ಮುಖ ಕಾಣುವ ರೀತಿಯಲ್ಲಿ ಪೋಸ್ಟರ್​ ವಿನ್ಯಾಸ ಮಾಡಲಾಗಿದೆ. ತಕ್ಷಣಕ್ಕೆ ನೋಡಿದರೆ ಸೂಪರ್​ ನ್ಯಾಚುರಲ್​ ಅಥವಾ ಹಾರರ್​ ಶೈಲಿಯ ಸಿನಿಮಾ ಎನಿಸುತ್ತದೆ. ಆ ಅಂಶಗಳು ಕೂಡ ಸಿನಿಮಾದಲ್ಲಿ ಇವೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ವಿಜಯಶ್ರೀ ಎಂ.ಆರ್​. ಮತ್ತು ವೈಶಾಲಿ ವೈ.ಜೆ. ಅವರು ಈ ಸಿನಿಮಾದ ನಿರ್ಮಾಪಕರು. ಸಾಯಿ ಕಿರಣ್​ ಸಂಗೀತ, ಬ್ಯಾಟಪ್ಪ ಗೌಡ, ಪ್ರಭಾಕರ್​ ಛಾಯಾಗ್ರಹಣ, ಶಿವರಾಜ್​ ಮೇಹು ಸಂಕಲನ ಮಾಡಿದ್ದಾರೆ. ಡಿಫರೆಂಟ್​ ಡ್ಯಾನಿ ಮತ್ತು ಚಂದ್ರು ಬಂಡೆ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ. ನಿರ್ದೇಶನ ಮಾಡುವುದರ ಜೊತೆ ಕಥೆ, ಚಿತ್ರಕಥೆ, ಸಂಭಾಷಣೆಗಳನ್ನು ಕೂಡ ನಂದನ ಪ್ರಭು ಅವರೇ ಬರೆದಿದ್ದಾರೆ.

ಸುಚಿತ್​, ಶುಭಿ, ಯುಕ್ತಾ, ನಿತಿನ್​ ಗೌಡ, ಚಕ್ರವರ್ತಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ದೆಹಲಿ ಮೂಲದ ನಟಿ ಶುಭಿ ಅವರಿಗೆ ಕನ್ನಡದಲ್ಲಿ ಇದು ಮೊದಲ ಸಿನಿಮಾ. ಮಾಡಲಿಂಗ್​ನಲ್ಲಿಯೂ ಅವರು ಸಕ್ರಿಯರಾಗಿದ್ದಾರೆ. ಮುಂಬೈ ಮೂಲದ ನಟಿ ಯುಕ್ತಾ ಅವರು 6 ತಿಂಗಳಲ್ಲಿ ಕನ್ನಡ ಕಲಿತು ಭೇಷ್​ ಎನಿಸಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.