Puneeth Rajkumar: ‘ನಾನೂ ಅವರ ಕುಟುಂಬದವಳಾಗಿದ್ದೆ’: ಅಪ್ಪು ಅಂತಿಮ ನಮನದ ಬಳಿಕ ರಾಧಿಕಾ ಕುಮಾರಸ್ವಾಮಿ ಮಾತು

| Updated By: ಮದನ್​ ಕುಮಾರ್​

Updated on: Oct 30, 2021 | 3:29 PM

Puneeth Rajkumar Heart Attack: ಪುನೀತ್​ ರಾಜ್​ಕುಮಾರ್​ ಜೊತೆ ಒಂದಾದರೂ ಸಿನಿಮಾ ಮಾಡಬೇಕು ಎಂಬುದು ರಾಧಿಕಾ ಕುಮಾರಸ್ವಾಮಿ ಅವರ ಕನಸಾಗಿತ್ತು. ಆದರೆ ಅದು ನನಸಾಗುವುದಕ್ಕೂ ಮುನ್ನವೇ ವಿಧಿ ತನ್ನ ಅಟ್ಟಹಾಸ ಮೆರೆದಿದೆ.

Puneeth Rajkumar: ‘ನಾನೂ ಅವರ ಕುಟುಂಬದವಳಾಗಿದ್ದೆ’: ಅಪ್ಪು ಅಂತಿಮ ನಮನದ ಬಳಿಕ ರಾಧಿಕಾ ಕುಮಾರಸ್ವಾಮಿ ಮಾತು
ಪುನೀತ್​ ರಾಜ್​ಕುಮಾರ್​, ರಾಧಿಕಾ ಕುಮಾರಸ್ವಾಮಿ
Follow us on

ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಪುನೀತ್​ ರಾಜ್​ಕುಮಾರ್​ ಅವರ ಅಂತಿಮ ದರ್ಶನ ಪಡೆಯಲು ಜನಸಾಗರವೇ ಹರಿದುಬರುತ್ತಿದೆ. ಸಾವಿರಾರು ಮಂದಿ ಸೆಲೆಬ್ರಿಟಿಗಳು ಬಂದು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ನಟಿ ರಾಧಿಕಾ ಕುಮಾರಸ್ವಾಮಿ ಕೂಡ ಆಗಮಿಸಿದ್ದಾರೆ. ಬಳಿಕ ಟಿವಿ9 ಜೊತೆ ಮಾತನಾಡಿದ ಅವರು ಅಪ್ಪು ಜೊತೆಗಿನ ನೆನಪುಗಳನ್ನು ಹಂಚಿಕೊಂಡರು. ಪುನೀತ್​ ರಾಜ್​ಕುಮಾರ್​ ಅವರ ಒಳ್ಳೆಯ ಗುಣಗಳನ್ನು ಅವರು ಕೊಂಡಾಡಿದರು. ‘ಪವರ್​ ಸ್ಟಾರ್​’ ಜೊತೆ ಸಿನಿಮಾ ಮಾಡಬೇಕು ಎಂದುಕೊಂಡಿದ್ದ ರಾಧಿಕಾ ಅವರ ಕನಸು ಕನಸಾಗಿಯೇ ಉಳಿದುಕೊಂಡಿದೆ.

‘ನಾನು ಮತ್ತು ಅಪ್ಪು ಒಂದೇ ಸಮಯದಲ್ಲಿ ಚಿತ್ರರಂಗಕ್ಕೆ ಬಂದವರು. ಅವರ ಜೊತೆ ನಟಿಸದೇ ಇರಬಹುದು. ಆದರೆ ಅನೇಕ ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಭಾಗವಹಿಸಿದ್ದೆವು. ನಾಲ್ಕು ದಿನಗಳ ಹಿಂದೆ ನಾನು ಅವರ ಜೊತೆ ಮಾತನಾಡಿದ್ದೆ. ನಮ್ಮ ಹೋಮ್ ಬ್ಯಾನರ್​ನಲ್ಲಿ ಅವರಿಗಾಗಿ ಒಂದು ಸಿನಿಮಾ ಮಾಡಬೇಕು ಅಂದುಕೊಂಡಿದ್ದೆ. ಈ ಬಗ್ಗೆ ಚರ್ಚೆ ಮಾಡಲು ಅವರನ್ನು ಭೇಟಿ ಆಗುವುದಾಗಿ ತಿಳಿಸಿದ್ದೆ. ನಮಗಾಗಿ ಒಂದು ಸಿನಿಮಾ ಮಾಡಿ ಎಂದು ಕೇಳಿಕೊಂಡಿದ್ದೆ. ಖಂಡಿತವಾಗಿ ಮಾಡುತ್ತೇನೆ ಅಂತ ಒಪ್ಪಿಕೊಂಡಿದ್ದರು’ ಎಂದು ರಾಧಿಕಾ ಹೇಳಿದ್ದಾರೆ.

‘ಆರು ವರ್ಷಗಳ ಹಿಂದೆ ನಾನು ಅವರ ಜೊತೆ ಕೆಲಸ ಮಾಡಬೇಕಿತ್ತು. ಆದರೆ ಸಾಧ್ಯವಾಗಿರಲಿಲ್ಲ. ನಾನು ಶಿವಣ್ಣನ ಜೊತೆ ಅಣ್ಣ-ತಂಗಿ ಕಥೆಯ ಸಿನಿಮಾ ಮಾಡಿದ ಬಳಿಕ ಅಪ್ಪಾಜಿಯವರ ಕುಟುಂಬದಲ್ಲಿ ನಾನೂ ಒಬ್ಬಳಾಗಿದ್ದೆ. ಅಪ್ಪು ಅವರನ್ನು ಈ ರೀತಿ ನೋಡುತ್ತೇನೆ ಅಂತ ಯಾವತ್ತೂ ಅಂದುಕೊಂಡಿರಲಿಲ್ಲ’ ಎಂದು ರಾಧಿಕಾ ಕಂಬನಿ ಸುರಿಸಿದ್ದಾರೆ.

‘ಸದ್ಯದ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ಸರ್ಕಾರಕ್ಕೆ, ಪೊಲೀಸ್​ ಅಧಿಕಾರಿಗಳಿಗೆ ಹಾಗೂ ತಾಳ್ಮೆಯಿಂದ ನಡೆದುಕೊಳ್ಳುತ್ತಿರುವ ಅಭಿಮಾನಿಗಳಿಗೆ ಧನ್ಯವಾದಗಳು. ಪುನೀತ್​ ಪತ್ನಿ ಅಶ್ವಿನಿ ಅವರಿಗೆ ಈ ನೋವು ಮರೆಯಲು ಸಾಧ್ಯವಿಲ್ಲ. ಆದರೆ ನೋವು ಸಹಿಸುವ ಶಕ್ತಿಯನ್ನು ಆ ದೇವರು ನೀಡಲಿ. ಅಪ್ಪು ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ರಾಧಿಕಾ ಕುಮಾರಸ್ವಾಮಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

‘ನನ್ನ ಬೈರಾದೇವಿ ಸಿನಿಮಾದ ಶೂಟಿಂಗ್​ ವೇಳೆ ಕುಟುಂಬ ಸಮೇತರಾಗಿ ಪುನೀತ್​ ಅವರು ಚಿತ್ರೀಕರಣದ ಸೆಟ್​ಗೆ ಬಂದಿದ್ದರು. ಅವರ ಜೊತೆ ಒಂದಾದರೂ ಸಿನಿಮಾ ಮಾಡಬೇಕು ಎಂಬ ದೊಡ್ಡ ಕನಸನ್ನು ನಾನು ಇಟ್ಟುಕೊಂಡಿದ್ದೆ. ಅಪ್ಪು ಬೇರೆಲ್ಲಿಯೂ ಹೋಗಿಲ್ಲ. ನಮ್ಮ ಹೃದಯದಲ್ಲಿ ಸದಾ ಇರುತ್ತಾರೆ’ ಎಂದು ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ.


ಇದನ್ನೂ ಓದಿ:

ಪುನೀತ್​ಗೆ ಪಾಕಿಸ್ತಾನದ ಅಭಿಮಾನಿಯ ಗಾನ ನಮನ; ಕನ್ನಡದಲ್ಲಿ ಹಾಡು ಹೇಳುವ ಮೂಲಕ ಶ್ರದ್ಧಾಂಜಲಿ

‘ಪುನೀತ್​ ಸಾವಿನಿಂದ ಕಟು ಸತ್ಯ ಬಯಲಾಗಿದೆ’: ಆತಂಕದಲ್ಲೇ ಅನಿಸಿಕೆ ಹಂಚಿಕೊಂಡ ರಾಮ್​ ಗೋಪಾಲ್​ ವರ್ಮಾ

Published On - 3:28 pm, Sat, 30 October 21