ಸುಪ್ರೀಂ ಕೋರ್ಟ್​​ನಲ್ಲಿ ಜುಲೈ 22ಕ್ಕೆ ದರ್ಶನ್ ಭವಿಷ್ಯ ನಿರ್ಧಾರ; ಜಾಮೀನು ವಿಚಾರಣೆ

ಸುಪ್ರೀಂ ಕೋರ್ಟ್​​ನಲ್ಲಿ ಒಂದು ವೇಳೆ ಜಾಮೀನು ರದ್ದಾದರೆ ನಟ ದರ್ಶನ್ ಅವರಿಗೆ ಸಂಕಷ್ಟ ಶುರುವಾಗಲಿದೆ. ಮಂಗಳವಾರ (ಜು.22) ನಟ ದರ್ಶನ್ ಪರವಾಗಿ ವಕೀಲ ಕಪಿಲ್ ಸಿಬಲ್‌ ಅವರು ವಾದ ಮಾಡಲಿದ್ದಾರೆ. ರಾಜ್ಯ ಸರ್ಕಾರದ ಪರ ವಕೀಲರ ವಾದ ಜುಲೈ 17ರಂದು ಮುಕ್ತಾಯ ಆಗಿದೆ.

ಸುಪ್ರೀಂ ಕೋರ್ಟ್​​ನಲ್ಲಿ ಜುಲೈ 22ಕ್ಕೆ ದರ್ಶನ್ ಭವಿಷ್ಯ ನಿರ್ಧಾರ; ಜಾಮೀನು ವಿಚಾರಣೆ
Darshan Photo

Updated on: Jul 21, 2025 | 8:55 PM

ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದಲ್ಲಿ ಸದ್ಯಕ್ಕೆ ಜಾಮೀನು ಪಡೆದಿರುವ ನಟ ದರ್ಶನ್ (Darshan) ಅವರು ಹಾಯಾಗಿ ಶೂಟಿಂಗ್ ಮಾಡಿಕೊಂಡಿದ್ದಾರೆ. ಆದರೆ ಅವರ ಜಾಮೀನು ರದ್ದು ಮಾಡುವಂತೆ ಕೋರಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದು, ಜುಲೈ 22ರಂದು ಮಹತ್ವದ ವಿಚಾರಣೆ ನಡೆಯಲಿದೆ. ನ್ಯಾ. ಪರ್ದಿವಾಲಾ, ನ್ಯಾ. ಮಹದೇವನ್ ನೇತೃತ್ವದ ಪೀಠದಲ್ಲಿ ವಿಚಾರಣೆ ನಡೆಯಲಿದ್ದು, ಕೋರ್ಟ್ (Supreme Court) ನೀಡುವ ತೀರ್ಪಿನ ಆಧಾರದ ಮೇಲೆ ದರ್ಶನ್ ಅವರ ಭವಿಷ್ಯ ನಿರ್ಧಾರ ಆಗಲಿದೆ. ಹಾಗಾಗಿ ದರ್ಶನ್ ಹಾಗೂ ಇನ್ನುಳಿದ ಆರೋಪಗಳ ಪಾಲಿಗೆ ಜುಲೈ 22 ಮಹತ್ವದ ದಿನವಾಗಿದೆ.

ದರ್ಶನ್ ಸೇರಿದಂತೆ 7 ಆರೋಪಿಗಳಿಗೆ 2024ರ ಡಿಸೆಂಬರ್‌ನಲ್ಲಿ ಕರ್ನಾಟಕ ಹೈಕೋರ್ಟ್ ನೀಡಿರುವ ಜಾಮೀನನ್ನು ರದ್ದು ಮಾಡಬೇಕು ಎಂದು ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಇತ್ತೀಚೆಗೆ ನಡೆದ ವಿಚಾರಣೆಯಲ್ಲಿ ರಾಜ್ಯ ಸರ್ಕಾರದ ಪರವಾಗಿ ವಕೀಲ ಸಿದ್ಧಾರ್ಥ್ ಲೂಥ್ರಾ ಅವರು ವಾದ ಮಂಡಿಸಿದ್ದಾರೆ. ಜುಲೈ 17ರಂದು ರಾಜ್ಯ ಸರ್ಕಾರದ ಪರ ವಾದ ಮುಕ್ತಾಯ ಆಗಿದೆ. ಮಂಗಳವಾರ (ಜುಲೈ 22) ದರ್ಶನ್ ಪರ ವಕೀಲರು ವಾದ ಮಾಡಲಿದ್ದಾರೆ.

ಜಾಮೀನು ಉಳಿಸಿಕೊಳ್ಳಲು‌ ದರ್ಶನ್ ಪರ ವಕೀಲರಿಗೆ ಇರುವ ಕೊನೆಯ‌ ಅವಕಾಶ ಇದು. ದರ್ಶನ ಪರವಾಗಿ ಕಪಿಲ್ ಸಿಬಲ್‌ ಅವರು ಅಂತಿಮ ವಾದ ಮಂಡಿಸಲಿದ್ದಾರೆ. ಬಳಿಕ‌ ಬಹುತೇಕ ಆದೇಶ ಪ್ರಕಟ ಆಗುವ ಸಾಧ್ಯತೆ ಇದೆ. ಕೋರ್ಟ್ ನೀಡಲಿರುವ ಆದೇಶದ ಮೇಲೆ ಎಲ್ಲರ ಗಮನ ನೆಟ್ಟಿದೆ. ಒಂದು ವೇಳೆ ಜಾಮೀನು ರದ್ದಾದರೆ ದರ್ಶನ್ ಹಾಗೂ ಇನ್ನುಳಿದ ಆರೋಪಿಗಳಿಗೆ ಸಂಕಷ್ಟ ಶುರುವಾಗಲಿದೆ.

ಇದನ್ನೂ ಓದಿ
ದರ್ಶನ್ ದೇವಾಲಯ ಭೇಟಿಗೆ ಟ್ವಿಸ್ಟ್, ದರ್ಶನ್ ಜೊತೆಗಿದ್ದ ಮತ್ತೊಬ್ಬ ಆರೋಪಿ
ದರ್ಶನ್ ನಟನೆಯ ‘ಡೆವಿಲ್’ ಚಿತ್ರಕ್ಕೆ ಮೈಸೂರಿನಲ್ಲಿ ಕೊನೆಯ ದಿನದ ಶೂಟಿಂಗ್
ಅಭಿಮಾನಿಗಳು ಮಾಡಿದ ಸಮಾಜ ಸೇವೆಯ ಚಿತ್ರಗಳ ಹಂಚಿಕೊಂಡ ದರ್ಶನ್
ಹಣ ವಾಪಸ್ ಕೊಡಿಸಿ: ನ್ಯಾಯಾಲಯದ ಮೊರೆ ಹೋದ ದರ್ಶನ್

‘ದಿ ಡೆವಿಲ್’ ಸಿನಿಮಾದ ಕೆಲಸಗಳಲ್ಲಿ ದರ್ಶನ್ ತೊಡಗಿಕೊಂಡಿದ್ದಾರೆ. ವಿದೇಶದಲ್ಲಿ ಈ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ನ್ಯಾಯಾಲಯದಿಂದ ಅನುಮತಿ ಪಡೆದು ಅವರು ವಿದೇಶಕ್ಕೆ ತೆರಳಿದ್ದಾರೆ. 2024ರಲ್ಲಿ ದರ್ಶನ್ ಅರೆಸ್ಟ್ ಆದ ಬಳಿಕ ಈ ಚಿತ್ರದ ಶೂಟಿಂಗ್ ನಿಂತಿತ್ತು. ಈಗ ಜಾಮೀನು ರದ್ದಾದರೆ ಮತ್ತೆ ‘ದಿ ಡೆವಿಲ್’ ಚಿತ್ರೀಕರಣಕ್ಕೆ ತೊಂದರೆ ಆಗಲಿದೆ.

ಇದನ್ನೂ ಓದಿ: ಬೈಕ್​, ಕಾರು ಆಯ್ತು ಈಗ ಥೈಲ್ಯಾಂಡ್​ನಲ್ಲಿ ಯಾಚ್ ಡ್ರೈವ್ ಮಾಡಿದ ದರ್ಶನ್

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಅವರ ಸ್ನೇಹಿತೆ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದಕ್ಕಾಗಿ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತನನ್ನು ಬೆಂಗಳೂರಿಗೆ ಕರೆತಂದು ಥಳಿಸಲಾಗಿತ್ತು. ಆ ವೇಳೆ ರೇಣುಕಾಸ್ವಾಮಿ ಹತ್ಯೆ ನಡೆಯಿತು. ಈ ಕೇಸ್​ನಲ್ಲಿ ದರ್ಶನ್, ಪವಿತ್ರಾ ಗೌಡ ಮುಂತಾದವರು ಪ್ರಮುಖ ಆರೋಪಿಗಳಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.