ಬೆಂಗಳೂರು ಸಿನಿಮೋತ್ಸವ ರದ್ದುಗೊಳಿಸಿ, ಅದರ ಹಣವನ್ನು ಕಾರ್ಮಿಕರಿಗೆ ನೀಡುವಂತೆ ನಿರ್ದೇಶಕ ಮಂಸೋರೆ ಮನವಿ

Coronavirus: ಈ ಬಾರಿಯ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ಅದಕ್ಕಾಗಿ ಮೀಸಲಿಟ್ಟಿದ್ದ ಹಣವನ್ನು ಕಾರ್ಮಿಕರಿಗೆ ವಿತರಿಸುವುದು ಹೆಚ್ಚು ಅರ್ಥಪೂರ್ಣ ಎಂದು ‘ಆ್ಯಕ್ಟ್​-1978’ ಚಿತ್ರದ ನಿರ್ದೇಶಕ ಮಂಸೋರೆ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು ಸಿನಿಮೋತ್ಸವ ರದ್ದುಗೊಳಿಸಿ, ಅದರ ಹಣವನ್ನು ಕಾರ್ಮಿಕರಿಗೆ ನೀಡುವಂತೆ ನಿರ್ದೇಶಕ ಮಂಸೋರೆ ಮನವಿ
ನಿರ್ದೇಶಕ ಮಂಸೋರೆ
Follow us
|

Updated on: May 20, 2021 | 8:52 AM

ಕೊರೊನಾ ವೈರಸ್​ನ ಹಾವಳಿಗೆ ಸಿಲುಕಿರುವ ಎಲ್ಲ ಉದ್ಯಮಗಳ ರೀತಿಯೇ ಸಿನಿಮಾ ಕ್ಷೇತ್ರ ಕೂಡ ಕಂಗೆಟ್ಟಿದೆ. ಚಿತ್ರರಂಗದಲ್ಲಿ ಕೆಲಸ ಮಾಡುವ ಅನೇಕರು ಕೊವಿಡ್​ನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಮಾಹಾಮಾರಿಯನ್ನು ನಿಯಂತ್ರಿಸಲು ಸದ್ಯ ಲಾಕ್​ಡೌನ್​ ಜಾರಿ ಮಾಡಿರುವುದರಿಂದ ನಿರುದ್ಯೋಗ ಕೂಡ ಕಾಡುತ್ತಿದೆ. ಈ ಸಂದರ್ಭದಲ್ಲಿ ಬಡವರು ಜೀವನ ನಡೆಸುವುದು ಕಷ್ಟವಾಗಿದೆ. ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವ ಅನೇಕರ ಬದುಕು ಈಗ ಸಂಕಷ್ಟದಲ್ಲಿದೆ. ಕೆಲವು ಸ್ಟಾರ್​ ನಟರು ಮುಂದೆ ನಿಂತು ಬಡ ಕಲಾವಿದರಿಗೆ, ಹಿರಿಯ ನಟ-ನಟಿಯರಿಗೆ, ಸಂಕಷ್ಟದಲ್ಲಿರುವ ತಂತ್ರಜ್ಞರಿಗೆ ಸಹಾಯ ಮಾಡುತ್ತಿದ್ದಾರೆ. ಆದರೂ ನೆರವು ಸಾಕಾಗುತ್ತಿಲ್ಲ. ಅದಕ್ಕಾಗಿ ನಿರ್ದೇಶಕ ಮಂಸೋರೆ ಅವರು ಸರ್ಕಾರಕ್ಕೆ ಒಂದು ಮನವಿ ಮಾಡಿಕೊಂಡಿದ್ದಾರೆ.

ಈ ಬಾರಿ ನಡೆಯಬೇಕಾಗಿದ್ದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟಿದೆ. ಈ ಸಿನಿಮಾತ್ಸವಕ್ಕಾಗಿ ಕೋಟ್ಯಂತರ ರೂಪಾಯಿ ಹಣ ಮೀಸಲಿಡಲಾಗಿದೆ. ಆ ಹಣವನ್ನು ಕಾರ್ಮಿಕರಿಗೆ, ಬಡ ಕಲಾವಿದರಿಗೆ ನೀಡಿದರೆ ಒಳಿತು ಎಂಬುದು ಮಂಸೋರೆ ಅಭಿಪ್ರಾಯ. ಈ ಬಗ್ಗೆ ಅವರು ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. ಕೊರೊನಾ ವೈರಸ್​ನಿಂದ ಜನರ ಜೀವನ ದುಸ್ತರವಾಗಿರುವಾಗ ಚಿತ್ರೋತ್ಸವಕ್ಕಿಂತಲೂ ಜೀವ ಉಳಿಸುವುದು ಮುಖ್ಯ ಎಂದು ಅವರು ಹೇಳಿದ್ದಾರೆ.

‘ಕೊವಿಡ್‌ನಿಂದಾಗಿ ಇಡೀ ರಾಜ್ಯ, ದೇಶ ತತ್ತರಿಸಿದೆ. ಪ್ರತಿಯೊಬ್ಬ ಪ್ರಜೆಯೂ ಆತಂಕದಿಂದ ಜೀವನ ನಡೆಸುತ್ತಿದ್ದಾರೆ. ಸರ್ಕಾರ ಕೊವಿಡ್ ತಡೆಯಲು ಲಾಕ್‌ಡೌನ್ ಹೇರಿದೆ. ಇದೇ ಸಂದರ್ಭದಲ್ಲಿ ಚಿತ್ರರಂಗದ ಸಾವಿರಾರು ಕಾರ್ಮಿಕರು, ಕಲಾವಿದರು ಕೆಲಸವಿಲ್ಲದೆ ಆರ್ಥಿಕ ಭದ್ರತೆ ಇಲ್ಲದೆ ನರಳುತ್ತಿದ್ದಾರೆ. ಅಕಾಡೆಮಿ ಅಧ್ಯಕ್ಷರು ಸರ್ಕಾರಕ್ಕೆ ವಿಶೇಷ ಪ್ಯಾಕೇಜ್ ಒದಗಿಸುವಂತೆ ಮನವಿ ಮಾಡಿದ್ದಾರೆ. ಈಗಾಗಲೇ ಸರ್ಕಾರ ಆರ್ಥಿಕವಾಗಿ ಸಮಸ್ಯೆಗಳನ್ನು ಎದುರಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಈ ಸಂದರ್ಭದಲ್ಲಿ ಸರ್ಕಾರದ ವಿಶೇಷ ಪ್ಯಾಕೇಜ್‌ಗಾಗಿ ಕಾಯದೇ, ಈ ಬಾರಿಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ಅದಕ್ಕಾಗಿ ಮೀಸಲಿಟ್ಟಿದ್ದ ಹಣವನ್ನು ಕಾರ್ಮಿಕರಿಗೆ ವಿತರಿಸುವುದು ಹೆಚ್ಚು ಅರ್ಥಪೂರ್ಣ ಎನ್ನುವುದು ನನ್ನ ಭಾವನೆ’ ಎಂದಿದ್ದಾರೆ ಮಂಸೋರೆ.

‘ಕೊವಿಡ್ ಕಾರಣದಿಂದ ಈಗಾಗಲೇ ಸಾಕಷ್ಟು ಜನ ತೀರಿಕೊಂಡಿದ್ದಾರೆ. ಮುಂದೆ ಜೀವನ ಹೇಗೋ ಎಂದು ನೂರಾರು ಕುಟುಂಬಗಳು ಕಂಗಾಲಾಗಿವೆ. ಇಂತಹ ಸಂದರ್ಭದಲ್ಲಿ ಚಿತ್ರೋತ್ಸವಕ್ಕಿಂತ ಜೀವಗಳನ್ನು ಕಾಪಾಡಿಕೊಳ್ಳುವುದು ಆದ್ಯತೆಯಾಗಲಿ ಎಂಬುದು ನನ್ನ ಕೋರಿಕೆ. ಈ ಬಾರಿಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನಮ್ಮ ಆಕ್ಟ್-1978 ಸಿನಿಮಾವನ್ನು ಕೂಡ ಸ್ಪರ್ಧೆಗೆ ಕಳುಹಿಸಲಾಗಿದೆ. ಹಾಗಿದ್ದರೂ ಕೂಡ ನನಗೆ ಚಿತ್ರೋತ್ಸವ ರದ್ದಾಗುವುದರ ಬಗ್ಗೆ ಯಾವ ಬೇಸರವೂ ಇಲ್ಲ. ಈಗ ಎಲ್ಲದಕ್ಕಿಂತ ಜೀವ-ಜೀವನ ಮುಖ್ಯ’ ಎಂದು ಮಂಸೋರೆ ಹೇಳಿದ್ದಾರೆ.

ಇದನ್ನೂ ಓದಿ:

ಬಾಲಿವುಡ್​ಗೆ ರಿಮೇಕ್​ ಆಗುತ್ತಿರುವ ಕನ್ನಡದ Act 1978 ಚಿತ್ರ! ಹಿಂದಿಯಲ್ಲಿ ನಾಯಕಿ ಯಾರು?

ಬೆಂಗಳೂರು ಚಿತ್ರೋತ್ಸವಕ್ಕೆ ಸರ್ಕಾರದ ದುಂದು ವೆಚ್ಚ! ಸ್ಯಾಂಡಲ್​ವುಡ್​ ಮಂದಿ ಏನ್​ ಹೇಳ್ತಾರೆ?