ಪುನೀತ್​ ರಾಜ್​ಕುಮಾರ್​ ಹೆಸರಲ್ಲಿ ಉಡಾವಣೆ ಆಗಲಿದೆ ಉಪಗ್ರಹ; ಇದಕ್ಕೆ ತಗಲುತ್ತಿರುವ ವೆಚ್ಚ ಎಷ್ಟು?

| Updated By: ರಾಜೇಶ್ ದುಗ್ಗುಮನೆ

Updated on: Feb 28, 2022 | 4:27 PM

ಉಪಗ್ರಹ​ ಹಾರಿಸುವ ಬಗ್ಗೆ ಸಚಿವ ಅಶ್ವತ್ಥ್ ನಾರಾಯಣ ಹೇಳಿಕೆ ನೀಡಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ನಿಜಕ್ಕೂ ಖುಷಿಪಟ್ಟಿದ್ದಾರೆ. ಈ ಉಪಗ್ರಹದಿಂದ ಆಗುವ ಉಪಯೋಗಗಳು ಏನು ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ಪುನೀತ್​ ರಾಜ್​ಕುಮಾರ್​ ಹೆಸರಲ್ಲಿ ಉಡಾವಣೆ ಆಗಲಿದೆ ಉಪಗ್ರಹ; ಇದಕ್ಕೆ ತಗಲುತ್ತಿರುವ ವೆಚ್ಚ ಎಷ್ಟು?
ಪುನೀತ್​
Follow us on

ನಟ ಪುನೀತ್​ ರಾಜ್​ಕುಮಾರ್ (Puneeth Rajkumar) ಮೇಲೆ ಜನರು ಇಟ್ಟಿರುವ ಪ್ರೀತಿ ಅಷ್ಟಿಷ್ಟಲ್ಲ. ಅವರು ನಿಧನ ಹೊಂದಿದ ನಂತರದಲ್ಲಿ ಅಭಿಮಾನಿಗಳು ನಾನಾ ರೀತಿಯಲ್ಲಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ರಸ್ತೆ ಹಾಗೂ ಪಾರ್ಕ್​ಗಳಿಗೆ ಪುನೀತ್​ ಹೆಸರನ್ನು ಇಡಲಾಗುತ್ತಿದೆ. ಈಗ ಅಚ್ಚರಿ ಎಂಬಂತೆ ಪುನೀತ್​ ಹೆಸರಲ್ಲಿ ಉಪಗ್ರಹ (Satellite ) ಉಡಾವಣೆ ಮಾಡಲಾಗುತ್ತಿದೆ. ಈ ಬಗ್ಗೆ ಸಚಿವ ಅಶ್ವತ್ಥ್ ನಾರಾಯಣ (Ashwath Narayan) ಹೇಳಿಕೆ ನೀಡಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ನಿಜಕ್ಕೂ ಖುಷಿಪಟ್ಟಿದ್ದಾರೆ. ಈ ಉಪಗ್ರಹದಿಂದ ಆಗುವ ಉಪಯೋಗಗಳು ಏನು ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ಇಂದು ರಾಷ್ಟ್ರೀಯ ವಿಜ್ಞಾನ ದಿನ. ಇದರ ಅಂಗವಾಗಿ ಮಲ್ಲೇಶ್ವರದ 18ನೇ ಅಡ್ಡರಸ್ತೆಯಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಅಶ್ವತ್ಥ್​ ನಾರಾಯಣ್​ ತೆರಳಿದ್ದರು. ಈ ವೇಳೆ ಅವರು ಈ ಬಗ್ಗೆ ಘೋಷಣೆ ಮಾಡಿದರು. ಸ್ವಾತಂತ್ರ್ಯ ಬಂದು 75ನೇ ವರ್ಷ ಆದ ಹಿನ್ನೆಲೆಯಲ್ಲಿ, ಐಟಿಸಿಎ 75 ಉಪಗ್ರಹಗಳನ್ನು ಉಡಾಯಿಸುತ್ತಿದೆ. ಈ ಪೈಕಿ ಒಂದು ಉಪಗ್ರಹ ರಾಜ್ಯ ಸರ್ಕಾರ ಸಹಕಾರದಲ್ಲಿ ತಯಾರಾಗಲಿದೆ. ಸರ್ಕಾರಿ ಶಾಲೆಗಳ ಮಕ್ಕಳು ಇದನ್ನು ನಿರ್ಮಿಸುತ್ತಿದ್ದು, ರಾಜ್ಯ ಸರ್ಕಾರವೇ ಇದಕ್ಕೆ ಹಣ ನೀಡುತ್ತಿದೆ.

ಈ ಜೋಜನೆಯ ಗ್ರೌಂಡ್ ಸ್ಟೇಷನ್ ಮಲ್ಲೇಶ್ವರದ 18ನೇ ಅಡ್ಡರಸ್ತೆಯಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲೇ ಇರಲಿದೆ. ಎಲ್ಲ ನಿರ್ವಹಣೆಯೂ ಅಲ್ಲಿಂದಲೇ ಆಗಲಿದೆ. ಈ ಯೋಜನೆಗೆ 20 ಸರ್ಕಾರಿ ಶಾಲೆಗಳ 100 ಪ್ರತಿಭಾವಂತ ಮಕ್ಕಳನ್ನು ನಾನಾ ಸ್ಪರ್ಧೆ ಮತ್ತು ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗಿದೆ. ಈ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ.

‘ಪುನೀತ್ ರಾಜ್‌ಕುಮಾರ್ ಹೆಸರಲ್ಲಿ ಉಪಗ್ರಹ ಉಡಾವಣೆ ಮಾಡಲಾಗುತ್ತಿದೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಇದು ಲಾಂಚ್​ ಆಗಬಹುದು. ₹1.90 ಕೋಟಿ ವೆಚ್ಚದಲ್ಲಿ ಉಪಗ್ರಹ ಸಿದ್ಧವಾಗುತ್ತಿದೆ.  1.5 ಕೆ.ಜಿ. ತೂಕದ ಉಪಗ್ರಹ ಸಿದ್ಧವಾಗುತ್ತಿದೆ’ ಎಂದು ಅಶ್ವತ್ಥ್ ನಾರಾಯಣ ಹೇಳಿಕೆ ನೀಡಿದ್ದಾರೆ.

ತರಬೇತಿಯಲ್ಲೇನಿರಲಿದೆ?

ನಾನಾ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಉಪಗ್ರಹದ ಪೇಲೋಡ್ ತಿಳಿವಳಿಕೆ ನೀಡಲಾಗುತ್ತದೆ. ಬೆಂಗಳೂರಿನಲ್ಲಿರುವ ವೈಜ್ಞಾನಿಕ ಸಂಸ್ಥೆಗಳಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲಾಗುತ್ತದೆ. ಉಡಾವಣೆ ಸಮಯದಲ್ಲಿ ಶ್ರೀಹರಿಕೋಟಾಗೆ ಭೇಟಿ ಮಾಡಿಸಲಾಗುತ್ತದೆ. ಹಲವರ ಜತೆ ವಿದ್ಯಾರ್ಥಿಗಳು ಸಂವಾದ ನಡೆಸಲಿದ್ದಾರೆ.

ಪುನೀತ್​ ಸಮಾಧಿಗೆ ಪೂಜೆ:

ಪುನೀತ್​ ರಾಜ್​ಕುಮಾರ್​ ಅವರನ್ನು ಕಳೆದುಕೊಂಡು ನಾಲ್ಕು ತಿಂಗಳು ಮುಗಿದಿದೆ. ‘ಪವರ್​ ಸ್ಟಾರ್​’ ಇಲ್ಲ ಎಂಬುದನ್ನು ಒಪ್ಪಿಕೊಳ್ಳಲು ಅಭಿಮಾನಿಗಳಿಗೆ ಸಾಧ್ಯವಾಗುತ್ತಲೇ ಇಲ್ಲ. ಅ.29ರಂದು ಅಪ್ಪು ಹೃದಯಾಘಾತದಿಂದ ನಿಧನರಾದಾಗ ಅವರ ಕುಟುಂಬಕ್ಕೆ  ಆದ ನೋವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಇಂದಿಗೂ ಕೂಡ ಪುನೀತ್​ ಪತ್ನಿ-ಮಕ್ಕಳು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಇಂದು (ಫೆ.28) ಫೆಬ್ರವರಿ ತಿಂಗಳ ಕೊನೇ ದಿನ. ಹಾಗಾಗಿ 29ನೇ ತಾರೀಕಿನ ಬದಲಿಗೆ ಒಂದು ದಿನ ಮುಂಚಿತವಾಗಿ ಪುನೀತ್​ ರಾಜ್​ಕುಮಾರ್​ ಸಮಾಧಿಗೆ ಅವರ ಕುಟುಂಬದವರು ಪೂಜೆ ಸಲ್ಲಿಸಿದ್ದಾರೆ. ಪತ್ನಿ ಅಶ್ವಿನಿ ಪುನೀತ್​ ರಾಜ್​ ಕುಮಾರ್​, ಮಕ್ಕಳಾದ ಧೃತಿ ಹಾಗೂ ವಂದಿತಾ ಅವರು ಕಂಠೀರವ ಸ್ಟುಡಿಯೋಗೆ ಬಂದು ಅಪ್ಪು ಸಮಾಧಿಗೆ ನಮಿಸಿದ್ದಾರೆ.

ಇದನ್ನೂ ಓದಿ: Puneeth Rajkumar: ‘ಪುನೀತ್​ ರಾಜ್​ಕುಮಾರ್ ರಸ್ತೆ’ ನಾಮಕರಣಕ್ಕೆ ಬಿಬಿಎಂಪಿ ಅಧಿಕೃತ ಅನುಮೋದನೆ

ಪುನೀತ್​ ರಾಜ್​ಕುಮಾರ್ ಕುರಿತು ಬಯೋಗ್ರಫಿ; ಈ ಪುಸ್ತಕದಲ್ಲಿ ಏನೆಲ್ಲ ಮಾಹಿತಿ ಇರಲಿದೆ?

Published On - 2:41 pm, Mon, 28 February 22