ಲೀಲಾವತಿ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಶಿವಣ್ಣ ದಂಪತಿ

Shiva Rajkumar: ನಟ ಶಿವರಾಜ್ ಕುಮಾರ್ ಹಾಗೂ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ಇಂದು ವಿನೋದ್ ರಾಜ್ ನಿವಾಸಕ್ಕೆ ಭೇಟಿ ನೀಡಿ ಲೀಲಾವತಿ ಅವರ ಆರೋಗ್ಯ ವಿಚಾರಿಸಿದರು.

ಲೀಲಾವತಿ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಶಿವಣ್ಣ ದಂಪತಿ
ಶಿವಣ್ಣ
Follow us
|

Updated on: Nov 28, 2023 | 3:08 PM

ಕನ್ನಡ ಚಿತ್ರರಂಗದ (Sandalwood) ಹಿರಿಯ ನಟಿ ಲೀಲಾವತಿ (Leelavathi) ಆರೋಗ್ಯ ದಿನೇ-ದಿನೇ ಕ್ಷೀಣಿಸುತ್ತಿದೆ. ವಯೋಸಹಜ ಸಮಸ್ಯೆಗಳಿಂದ ಅವರು ಬಳಲುತ್ತಿದ್ದಾರೆ. ಪುತ್ರ ವಿನೋದ್ ರಾಜ್​ ಆರೈಕೆಯಲ್ಲಿ ನೆಲಮಂಗಲದ ಸಮೀಪದ ಸೋಲದೇವನಹಳ್ಳಿಯ ನಿವಾಸದಲ್ಲಿ ಲೀಲಾವತಿ ದಿನಗಳು ಕಳೆಯುತ್ತಿದ್ದಾರೆ. ಹಿರಿಯ ನಟಿಯ ಆರೋಗ್ಯ ಕ್ಷೀಣಿಸುತ್ತಿರುವ ಸುದ್ದಿ ಹಬ್ಬುತ್ತಿದ್ದಂತೆ ಚಿತ್ರರಂಗದ ಹಲವು ನಟರು ಒಬ್ಬೊಬ್ಬರಾಗಿ ಲೀಲಾವತಿಯವರ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. ಇಂದು ನಟ ಶಿವರಾಜ್ ಕುಮಾರ್ ಹಾಗೂ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ಲೀಲಾವತಿ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಲೀಲಾವತಿಯವರ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ ಶಿವರಾಜ್ ಕುಮಾರ್, ‘ಅಮ್ಮ ನನ್ನ ಧ್ವನಿ ಕಂಡು ಹಿಡಿದರು. ಈ ವಯಸ್ಸಿನಲ್ಲಿಯೂ ಅವರು ನೋವನ್ನು ಸಹಿಸಿಕೊಂಡು ಇರುವ ಶಕ್ತಿ ಇದೆಯಲ್ಲ ಅದು ಸಾಮಾನ್ಯದ್ದಲ್ಲ. ಯೋಗ ಪುರುಷರು ಅನ್ನುತ್ತಾರಲ್ಲ ಹಾಗೆ. ಈಗಲೂ ಅವರು ಸ್ಟ್ರಾಂಗ್ ಆಗಿದ್ದಾರೆ. ಆಗಿನ ಕಾಲದವರು ಅವರು, ಒಳ್ಳೆಯ ಮನಸ್ಸಿರುವವರು, ಒಳ್ಳೆಯ ವ್ಯಕ್ತಿ ಉಳ್ಳವರು. ನಾವು ಅವರನ್ನು ಇಷ್ಟೋಂದು ಪ್ರೀತಿಸಲು ಅದೇ ಕಾರಣ’ ಎಂದರು.

‘‘ನಾನು ಚಿಕ್ಕವನಿದ್ದಾಗಿನಿಂದಲೂ ನಮ್ಮ ಬಗ್ಗೆ ಅಪಾರ ಪ್ರೀತಿ ಲೀಲಾವತಿ ಅವರಿಗೆ. ನಾವು ಅವರನ್ನು ಯಾವಾಗ ಕಂಡರು ಅದೇ ಆತ್ಮೀಯತೆ ಅದೇ ಪ್ರೀತಿ. ಅವರ ಆ ಪ್ರೀತಿಯನ್ನು ಎಂದೂ ಮರೆಯೋಕಾಗಲ್ಲ. ಈಗ ವಿನೋದ್ ಅನ್ನು ನೋಡಿದರೆ ಅವರ ತಾಯಿಯನ್ನೇ ನೋಡಿದಂತೆ ಆಗುತ್ತದೆ. ಅವರ ಆರೋಗ್ಯ ಕ್ಷೀಣಿಸಿರುವ ಬಗ್ಗೆ ಬೇಜಾರಾಗುತ್ತೆ ಆದರೆ ಅವರು ಇನ್ನೂ ನಮ್ಮೊಂದಿಗೆ ಇರುತ್ತಾರೆ ಎಂಬ ನಂಬಿಕೆ ಇದೆ. ಅವರೊಟ್ಟಿಗೆ ದೇವರ ಆಶೀರ್ವಾದವಿದೆ ಎಲ್ಲದಕ್ಕಿಂತಲೂ ಹೆಚ್ಚಿನದಾಗಿ ಅವರ ಮಗನ ಪ್ರೀತಿ ಇದೆ’’ ಎಂದಿದ್ದಾರೆ ಶಿವರಾಜ್ ಕುಮಾರ್.

ಇದನ್ನೂ ಓದಿ:ಹಿರಿಯ ನಟಿ ಲೀಲಾವತಿಯ ಯೋಗಕ್ಷೇಮ ವಿಚಾರಿಸಿದ ನಟ ದರ್ಶನ್

ತಾಯಿಯ ಅನಾರೋಗ್ಯದ ಬಗ್ಗೆ ಆತಂಕಿತರಾಗಿ, ಅಮ್ಮನೊಟ್ಟಿಗೆ ತಾನೂ ಹೋಗಿಬಿಡುತ್ತೇನೆ ಎಂಬ ಮಾತನ್ನಾಡಿದ್ದ ವಿನೋದ್​ಗೆ ಧೈರ್ಯ ತುಂಬಿದ ಶಿವರಾಜ್ ಕುಮಾರ್, ‘‘ಬೇಡ ವಿನೋದ್, ನೀವು ಹಾಗೆಲ್ಲ ಧೈರ್ಯ ಕಳೆದುಕೊಳ್ಳಬಾರದು. ನೋವು ಎಲ್ಲರಿಗೂ ಆಗುತ್ತೆ, ನಾವು ತಾಳಿಕೊಂಡಿಲ್ಲವೇ ಹಾಗೆಯೇ ನೀವು ಧೈರ್ಯ ತಂದುಕೊಳ್ಳಿ. ನಿಮ್ಮ ತಾಯಿಯವರಿಗೆ ನನ್ನ ಮಗ ಚೆನ್ನಾಗಿರಬೇಕು ಎಂಬ ಆಸೆ ಇದ್ದೇ ಇರುತ್ತದೆ. ಅವರ ಆಸೆಯಂತೆ ನೀವು ಚೆನ್ನಾಗಿರಬೇಕು. ದಯವಿಟ್ಟು ಆ ನಿರ್ಧಾರಗಳನ್ನು ಮಾಡಬೇಡಿ’’ ಎಂದು ಕೈ ಹಿಡಿದು ಧೈರ್ಯ ತುಂಬಿದರು ಶಿವರಾಜ್ ಕುಮಾರ್. ಜೊತೆಗೆ ಇಂದು (ನವೆಂಬರ್ 28) ಲೀಲಾವತಿ ಅವರ ಹೆಸರಲ್ಲಿ ಪಶು ಆಸ್ಪತ್ರೆ ಉದ್ಘಾಟನೆ ಆಗುತ್ತಿರುವ ಬಗ್ಗೆಯೂ ಸಂತಸ ವ್ಯಕ್ತಪಡಿಸಿದರು ಶಿವರಾಜ್ ಕುಮಾರ್.

ಲೀಲಾವತಿ ಅವರ ಆರೋಗ್ಯ ವಿಚಾರಿಸಲು ಹಲವು ಸ್ಟಾರ್ ನಟರು ಇತ್ತೀಚೆಗೆ ವಿನೋದ್ ರಾಜ್ ನಿವಾಸಕ್ಕೆ ಆಗಮಿಸಿದ್ದರು. ಅರ್ಜುನ್ ಸರ್ಜಾ, ನಟ ದರ್ಶನ್, ಅಭಿಷೇಕ್ ಅಂಬರೀಶ್ ಈಗ ಶಿವರಾಜ್ ಕುಮಾರ್, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇನ್ನೂ ಹಲವರು ಬಂದು ಲೀಲಾವತಿಯವರನ್ನು ಕಂಡು ಆರೋಗ್ಯ ವಿಚಾರಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ