ಎಸ್​ಪಿಬಿ ಸ್ಮಾರಕ ನಿರ್ಮಾಣಕ್ಕೆ ತಯಾರಿ; ಬೆಂಗಳೂರಲ್ಲಿ ಡಿ.8ಕ್ಕೆ ಸಂಗೀತ ಕಾರ್ಯಕ್ರಮ

ಕನಕಪುರ ರಸ್ತೆಯ ಕೋಣನಕುಂಟೆ ಕ್ರಾಸ್ ಬಳಿಯಿರುವ ಪ್ರೇಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್​ನಲ್ಲಿ ಈ ಲೈವ್ ಮ್ಯೂಸಿಕ್ ಕನ್ಸರ್ಟ್ ನಡೆಯಲಿದೆ. ರಾಜೇಶ್ ಕೃಷ್ಣನ್, ಎಸ್.ಪಿ. ಚರಣ್, ವಿಜಯ್ ಪ್ರಕಾಶ್ ಅವರು ಎಸ್​ಪಿಬಿಯ ಜನಪ್ರಿಯ ಗೀತೆಗಳನ್ನು ಹಾಡಲಿದ್ದಾರೆ. ಈ ಕುರಿತು ಮಾಹಿತಿ ನೀಡಲು ಸುದ್ದಿಗೋಷ್ಠಿ ಮಾಡಲಾಗಿದೆ.

ಎಸ್​ಪಿಬಿ ಸ್ಮಾರಕ ನಿರ್ಮಾಣಕ್ಕೆ ತಯಾರಿ; ಬೆಂಗಳೂರಲ್ಲಿ ಡಿ.8ಕ್ಕೆ ಸಂಗೀತ ಕಾರ್ಯಕ್ರಮ
ಎಸ್​ಪಿ ಬಾಲಸುಬ್ರಹ್ಮಣ್ಯಂ, ಎಸ್​.ಪಿ. ಚರಣ್​

Updated on: Nov 28, 2024 | 7:29 PM

ಖ್ಯಾತ ಗಾಯಕ, ಸ್ವರ ಮಾಂತ್ರಿಕ, ಕನ್ನಡ ಸೇರಿದಂತೆ 16 ಭಾಷೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ದೇಶದ ಜನರ ಹೃದಯದಲ್ಲಿ ಮನೆ ಮಾಡಿರುವ ಶ್ರೇಷ್ಠ ಗಾಯಕ ದಿವಂಗತ ಎಸ್.ಪಿ. ಬಾಲಸುಬ್ರಮಣ್ಯಂ ಸ್ಮರಣಾರ್ಥ ತಮಿಳುನಾಡಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ನೆರವಾಗುವ ಸದುದ್ದೇಶದಿಂದ ಡಿಸೆಂಬರ್ 8ರಂದು ಬೆಂಗಳೂರಿನಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ನಗರದ ಕನಕಪುರ ರಸ್ತೆಯ ಕೋಣನಕುಂಟೆ ಕ್ರಾಸ್ ಬಳಿ ಇರುವ ಪ್ರೇಸ್ಟೀಜ್ ಸೆಂಟರ್ ಫಾರ್ ಪರ್ಫಾಮಿಂಗ್ ಆರ್ಟ್ಸ್​ನಲ್ಲಿ ಸಂಗೀತ ಕಾರ್ಯಕ್ರಮ ಜರುಗಲಿದೆ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಹಾಡಿರುವ ಕನ್ನಡ ಸಿನಿಮಾಗಳ ಜನಪ್ರಿಯ ಹಾಡುಗಳನ್ನು ಖ್ಯಾತ ಹಿನ್ನೆಲೆ ಗಾಯಕರಾದ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಮತ್ತು ಎಸ್.ಪಿ. ಚರಣ್ ಅವರು ಹಾಡಲಿದ್ದಾರೆ.

ಈ ಕಾರ್ಯಕ್ರಮದ ಕುರಿತು ಮಾಹಿತಿ ನೀಡಲು ಇಂದು (ನ.28) ಬೆಂಗಳೂರಿನಲ್ಲಿ ಸುದ್ದಗೋಷ್ಠಿ ನಡೆಸಲಾಯಿತು. ಈ ವೇಳೆ ಎಸ್.ಪಿ. ಬಾಲಸುಬ್ರಮಣ್ಯಂ ಅವರ ಪುತ್ರ ಎಸ್.ಪಿ. ಚರಣ್ ಮಾತನಾಡಿದರು. ‘ಎಸ್‌ಪಿ.ಬಿ ಅವರು 5 ದಶಕಗಳ ವೃತ್ತಿ ಜೀವನದಲ್ಲಿ ಹಾಡಿದ ಸಾವಿರಾರು ಹಾಡುಗಳು ದೇಶದ ಜನರ ನಾಲಿಗೆ ಮೇಲೆ ಹರಿದಾಡುತ್ತಿವೆ. ಸಂಗೀತ ಲೋಕಕ್ಕೆ ಅವರು ನೀಡಿದ ಅಪಾರ ಕೊಡುಗೆಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು, ಗೌರವಗಳು ಅರಸಿ ಬಂದಿವೆ. 6 ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಪದ್ಮಶ್ರೀ ಹಾಗೂ ಪದ್ಮವಿಭೂಷಣ ಪ್ರಶಸ್ತಿಗಳು ಅವರ ಮುಡಿಗೇರಿವೆ’ ಎಂದರು.

‘2020ರ ಸೆಪ್ಟೆಂಬರ್​ 25ರಂದು ಎಸ್​ಪಿಬಿ ನಿಧನರಾದರು. ಆದರೆ, ಅವರ ಕಂಠಸಿರಿಯಲ್ಲಿ ಬಂದಿರುವ ಮಧುರ ಹಾಡುಗಳನ್ನು ಅಭಿಮಾನಿಗಳ ಹೃದಯದಲ್ಲಿ ಇಟ್ಟು ಹೋಗಿದ್ದಾರೆ. ನಾಡಿನ ಈ ಮಹಾನ್ ಗಾಯಕನಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ತಮಿಳುನಾಡಿನ ತಿರುವಳ್ಳುವರ್​ನಲ್ಲಿ ಸ್ಮಾರಕ ಮತ್ತು ಮ್ಯೂಸಿಯಂ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ’ ಎಂದು ಎಸ್​ಪಿ ಚರಣ್ ಹೇಳಿದರು.

ಇದನ್ನೂ ಓದಿ: ಎಸ್​ಪಿ ಬಾಲಸುಬ್ರಹ್ಮಣ್ಯಂ ನಾಲ್ಕನೇ ಪುಣ್ಯತಿಥಿ; ಮುಖ್ಯ ರಸ್ತೆಯೊಂದಕ್ಕೆ ಗಾಯಕನ ಹೆಸರಿಟ್ಟ ಸಿಎಂ

‘ಈ ಸ್ಮಾರಕವು ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಸಂಗೀತ, ಗಾಯನ ಕ್ಷೇತ್ರದಲ್ಲಿ ನಡೆದು ಬಂದ ದಾರಿ, ನೀಡಿದ ಕೊಡುಗೆಗಳು, ಲಕ್ಷಾಂತರ ಗಾಯಕರಿಗೆ ನೀಡಿದ ಸ್ಪೂರ್ತಿಯ ವಿವರಗಳನ್ನು ಸ್ಮಾರಕದ ಮೂಲಕ ಮುಂದಿನ ತಲೆಮಾರಿಗೆ ಹಂಚಲಾಗುತ್ತದೆ. ಕಲೆ, ಸಾಹಿತ್ಯ, ಸಂಸ್ಕೃತಿ, ಭಾಷೆಗಳನ್ನು ಉಳಿಸಿ, ಬೆಳೆಸಲು, ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಅವರು ನೀಡಿರುವ ಕೊಡುಗೆಯನ್ನು ಈ ಸ್ಮಾರಕ ಪಸರಿಸಲಿದೆ. ಅಲ್ಲದೇ, ಯುವ ಸಮುದಾಯಕ್ಕೆ ಸ್ಪೂರ್ತಿಯ ಸೆಲೆಯಾಗುತ್ತದೆ. ಡಿಸೆಂಬರ್​ 8ರಂದು ನಡೆಯುವ ಲೈವ್ ಕನ್ಸರ್ಟ್ ಕಾರ್ಯಕ್ರಮದಿಂದ ನಿಧಿಯನ್ನು ಸಂಗ್ರಹಿಸಿ ಅದನ್ನು ಸ್ಮಾರಕ, ಮ್ಯೂಸಿಯಂ ನಿರ್ಮಾಣಕ್ಕೆ ಬಳಸಲಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:45 pm, Thu, 28 November 24

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us