ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಕಿಚ್ಚ, ಅಭಿಮಾನಿಗಳಿಗೆ ಭಾವುಕ ಸಂದೇಶ

Kichcha Sudeep films: ಕಿಚ್ಚ ಸುದೀಪ್ ಹುಟ್ಟುಹಬ್ಬ ಸೆಪ್ಟೆಂಬರ್ 2, ಪ್ರತಿ ವರ್ಷ ಅವರ ಅಭಿಮಾನಿಗಳು ಮನೆಯ ಬಳಿ ಹೋಗಿ ಸುದೀಪ್ ಅವರೊಟ್ಟಿಗೆ ಸಂಭ್ರಮಾಚರಣೆ ಮಾಡುತ್ತಾರೆ. ಸುದೀಪ್ ಸಹ ಆ ದಿನ ಅಭಿಮಾನಿಗಳು ತಂದ ಕೇಕ್ ಕತ್ತರಿಸಿ, ಅವರು ಕೊಟ್ಟ ಉಡುಗೊರೆಗಳನ್ನು ಸ್ವೀಕರಿಸಿ ಅವರೊಟ್ಟಿಗೆ ಸಂಭ್ರಮಾಚರಣೆ ಮಾಡುತ್ತಾರೆ. ಆದರೆ ಈ ಬಾರಿ ಅದೆಲ್ಲವೂ ಇರುವುದಿಲ್ಲ. ಈ ಬಗ್ಗೆ ಸುದೀಪ್ ಅವರು ಭಾವುಕ ಸಂದೇಶವನ್ನು ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದ್ದಾರೆ.

ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಕಿಚ್ಚ, ಅಭಿಮಾನಿಗಳಿಗೆ ಭಾವುಕ ಸಂದೇಶ
Kichcha Sudeep

Updated on: Aug 27, 2026 | 1:24 PM

ಮುಖ್ಯಾಂಶಗಳು

  • ಸೆಪ್ಟೆಂಬರ್ 2 ಕಿಚ್ಚ ಸುದೀಪ್ ಹುಟ್ಟುಹಬ್ಬ
  • ಆದರೆ ಈ ಬಾರಿ ಸುದೀಪ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ.
  • ಆ ಬಗ್ಗೆ ಭಾವುಕ ಸಂದೇಶವನ್ನು ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದ್ದಾರೆ ನಟ.

ಕಿಚ್ಚ ಸುದೀಪ್ (Kichcha Sudeep), ಕನ್ನಡದ ಸ್ಟಾರ್ ನಟ. ಸೆಪ್ಟೆಂಬರ್ 2 ಅವರ ಹುಟ್ಟುಹಬ್ಬ. ಸುದೀಪ್ ಅವರ ಹುಟ್ಟುಹಬ್ಬವನ್ನು ಪ್ರತಿ ವರ್ಷವೂ ಅವರ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸುತ್ತಾ ಬರುತ್ತಿದ್ದಾರೆ. ಸುದೀಪ್ ಅವರ ಮನೆಯ ಬಳಿ ಬಂದು ಕೇಕ್ ಕತ್ತರಿಸಿ ಹಾರ, ವಿವಿಧ ಉಡೆಗೊರೆಗಳನ್ನು ಕೊಟ್ಟು ಜಯಕಾರಗಳನ್ನು ಹಾಕುತ್ತಾ ಅದ್ಧೂರಿಯಾಗಿ ತಮ್ಮ ಮೆಚ್ಚಿನ ನಟನ ಹುಟ್ಟುವಬ್ಬವನ್ನು ಆಚರಣೆ ಮಾಡುತ್ತಿದ್ದರು ಅಭಿಮಾನಿಗಳು. ಆದರೆ ಈ ಬಾರಿ ಸುದೀಪ್ ಅವರು ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಗುತ್ತಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶವನ್ನು ಸುದೀಪ್ ಹಂಚಿಕೊಂಡಿದ್ದಾರೆ. ಅಭಿಮಾನಿಗಳಿಗೆ ತುಸು ದೀರ್ಘವಾದ ಪತ್ರವನ್ನು ಬರೆದಿದ್ದಾರೆ.

‘ಆತ್ಮೀಯ ಸ್ನೇಹಿತರೆ, ನಮಸ್ಕಾರ, ಹೇಗಿದ್ದೀರಾ? 2ನೇ ಸೆಪ್ಟೆಂಬರ್ ಎಂಬುದು ಒಂದು ದಿನಾಂಕ ಅಷ್ಟೇ. ಅದನ್ನು ಸಂಭ್ರಮವನ್ನಾಗಿ 30 ವರ್ಷಗಳಿಂದ ಪರಿವರ್ತಿಸಿದ ಅಪಾರ ಪ್ರೀತಿ ನಿಮ್ಮದು. ನಿಮ್ಮ ಅಭಿಮಾನ, ಹುಟ್ಟುಹಬ್ಬಕ್ಕೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಕಳೆದ 30 ವರ್ಷಗಳಲ್ಲಿ ನಿಮ್ಮ ಚಪ್ಪಾಳೆ, ಶಿಳ್ಳೆಗಳಲ್ಲಿ ಇನ್ನು ಹೆಚ್ಚು ಹೆಚ್ಚು ಪ್ರೋತ್ಸಾಹ ಪ್ರೀತಿ ಕಂಡುಕೊಂಡಿದ್ದೇನೆ. ಪ್ರತಿ ಸಿನಿಮಾ ಇರಲಿ, ಬಿಗ್​​ಬಾಸ್ ಇರಲಿ ಜೊತೆಗೆ ಯಾವುದೋ ಕಾರ್ಯಕ್ರಮಕ್ಕೆ ಮುಂದಾದಾಗ ನೀವು ತೋರಿಸಿದ ಪ್ರೀತಿ ಅಪಾರವಿದೆ. ಅದೇ ನನಗೆ ಶ್ರೀರಕ್ಷೆ’ ಎಂದಿದ್ದಾರೆ ಸುದೀಪ್.

ಮುಂದುವರೆದು, ‘ಆದರೆ ಈ ವರ್ಷ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಅದಕ್ಕೆ ಬಲವಾದ ಮತ್ತು ವೈಯಕ್ತಿಕ ಕಾರಣಗಳಿವೆ. ಸಂಭ್ರಮಗಳನ್ನು ತರೆದ ಹೃದಯದಿಂದ ಆಚರಿಸಲು ಸಾಧ್ಯವಾಗಿದ್ದರೆ ಅದು ಸಂಭ್ರಮವೇ ಅಲ್ಲ ನನಗೆ.
ನಿಮ್ಮ ನಿಮ್ಮ ಊರು, ಭಾಗಗಳಲ್ಲಿ ನೀವು ಮಾಡುವ ಸಾಮಾಜಿಕ ಕಾರ್ಯಕ್ರಮಗಳೇ ಆಚರಣೆಗಳು. ಅದು ಸದಾ ಮುಂದುವರೆಯಲಿ. ಮತ್ತೆ ಭೇಟಿಯಾಗೋಣ. ನನ್ನನ್ನು ನಿಮ್ಮನ್ನು ಎಂದಾದರೂ ಭೇರ್ಪಡಿಸಲು ಸಾಧ್ಯವೇ? ಅಂದು ಮನೆಯ ಬಳಿಯೂ ಯಾರಿಗೂ ಲಭ್ಯವಾಗುತ್ತಿಲ್ಲ. ಸುತ್ಕಾರಗಳು ಗದ್ದಲವಾಗಬಾರದು ಎಂಬುದನ್ನು ನಿಮ್ಮಲ್ಲಿ ಪದೇ ಪದೇ ಅರಿಕೆ ಮಾಡಿಕೊಂಡಿದ್ದೇನೆ. ನಿಮ್ಮ ಉಡುಗೊರೆಗಳು ಸಮಾಜಕ್ಕೆ ಸದ್ವಿನಿಯೋಗವಾಗಲಿ. ನಿಮ್ಮ ಪ್ರೀತಿ, ಹಾರೈಕೆಗಳಿಗಿಂತ ಮತ್ತೊಂದು ಶ್ರೀರಕ್ಷೆ, ಆಶೀರ್ವಾದ ಇರಲು ಸಾಧ್ಯವೇ’ ಎಂದಿದ್ದಾರೆ ಕಿಚ್ಚ.

‘ಮೊತ್ತೊಂದು ವಿಷಯ, 30 ವರ್ಷ, ಅಂದರೆ ‘ಬರೋಬ್ಬರಿ ಮೂವತ್ತು ವರ್ಷ’ ಕನ್ನಡದ ಚಿತ್ರರಂಗಕ್ಕೆ ಅರ್ಪಿಸಿಕೊಂಡವನಿಗೆ, ಸಿನಿಮಾ ನನ್ನ ಪರಮ ಕಾಯಕ ಅನ್ನೋದು ಸತ್ಯ. ಕೆಲವೊಮ್ಮೆ ತಡವಾಗಿಬಿಡುವುದು ಅದಕ್ಕೂ ಕಾರಣಗಳಿರುತ್ತವೆ. ‘ಸಿಂಹ ಸುಮ್ಮನೆ ಕುಳಿತಿದೆ ಎಂದರೆ ಸುಮ್ಮಾಗಿದ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗಿದೆ ಎಂದರ್ಥ’ ನೋಡಿ, ನನ್ನದೇ ಸಿನಿಮಾ ಸಂಭಾಷಣೆ ಹೀಗೆ ಈ ಪತ್ರದಲ್ಲಿ ನನ್ನ ಬಲಕ್ಕೆ ಬರುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ, ಯಾವುದೇ ವೇದಿಕೆ, ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಕನ್ನಡಿಗಿರನ್ನು ರಂಜಿಸಲು, ಕನ್ನಡವನ್ನು ಕುಣಿಸಲು, ‘ಕನ್ನಡ ನನ್ನ ಸತ್ವ.. ಕನ್ನಡದಿಂದ ನಾನು ನಿತ್ಯ’’ ಎಂದಿದ್ದಾರೆ ಸುದೀಪ್.

‘ನಿಮ್ಮನ್ನು ರಂಜಿಸುವ ವಿಷಯದಲ್ಲಿ ಯಾವತ್ತಿಗೂ ರಾಜಿಯಾದವನಲ್ಲ ನಾನು. ರಾಜಿ ಆಗುವುದೂ ಇಲ್ಲ. ನನ್ನ ಎಲ್ಲ ಹೆಜ್ಜೆಗಳಲ್ಲಿ ನೀವಿದ್ದೀರಿ ಹೆಜ್ಜೆ ಗುರುತಾಗಿ. ಏನೇ ಇರಲಿ ಜೀವನದಲ್ಲಿ ಹೂ ಮುಳ್ಳು, ನಿಮ್ಮ ಪ್ರೀತಿ ಮುಳ್ಳುಗಳಲ್ಲ’ ಎಂದು ಭಾವುಕವಾಗಿ ಸಂದೇಶವನ್ನು ಸುದೀಪ್ ಹಂಚಿಕೊಂಡಿದ್ದಾರೆ. ಆ ಮೂಲಕ ತಾವು ಈ ಬಾರಿ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಗುತ್ತಿಲ್ಲ ಎಂದಿದ್ದಾರೆ.

 

Published On - 1:08 pm, Thu, 27 August 26

Loading...
Unable to load recommendations.
Follow Us