‘ವಾಲಿ’ ಸಿನಿಮಾ ವೇಳೆ ನಡೆದ ಘಟನೆಯಿಂದ ಕಣ್ಣೀರು ಹಾಕಿದ್ದ ಸುದೀಪ್
Kichcha Sudeep: ಕಿಚ್ಚ ಸುದೀಪ್ ಇಂದು ದೊಡ್ಡ ಸೂಪರ್ ಸ್ಟಾರ್, ಅವರು ಇದ್ದರೆ ಸಾಕು ಯಾವ ಟಿವಿ ಚಾನೆಲ್, ಒಟಿಟಿಗಳು ಬೇಕಾದರು ಅವರ ಸಿನಿಮಾಗಳನ್ನು ಖರೀದಿಸುತ್ತವೆ. ಆದರೆ ಸುದೀಪ್ ಚಿತ್ರರಂಗಕ್ಕೆ ಬಂದ ಹೊಸದರಲ್ಲಿ ಪರಿಸ್ಥಿತಿ ಹೀಗೆ ಇರಲಿಲ್ಲ. ‘ವಾಲಿ’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ನಡೆದ ಘಟನೆಯನ್ನು ಸುದೀಪ್ ಮಿತ್ರ ಅರುಣ್ ಸಾಗರ್ ನೆನಪು ಮಾಡಿಕೊಂಡಿದ್ದಾರೆ.

ಚಿತ್ರರಂಗ ಎಲ್ಲರನ್ನೂ ಹೂವಿನ ಹಾಸಿಗೆ ಹಾಸಿ ಸ್ವಾಗತಿಸುವುದಿಲ್ಲ. ಈ ರೀತಿ ಚಿತ್ರರಂಗಕ್ಕೆ ಬರುವವರು ಕಷ್ಟ ಎದುರಿಸಿಯೇ ಎದುರಿಸುತ್ತಾರೆ. ಅವರಿಗೆ ಯಶಸ್ಸು ಸಿಕ್ಕ ಬಳಿಕವೇ ಅವರನ್ನು ಎಲ್ಲರೂ ಕೊಂಡಾಡಲು ಬಯಸುತ್ತಾರೆ. ಖ್ಯಾತಿ ಸಿಕ್ಕಾಗ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ಅರುಣ್ ಸಾಗರ್ ಅವರು ಮಾತನಾಡಿದ್ದರು. ಕಿಚ್ಚ ಸುದೀಪ್ ಅವರ ಪರಿಸ್ಥಿತಿ ಯಾವ ರೀತಿಯಲ್ಲಿ ಇತ್ತು ಎಂಬುದನ್ನು ವಿವರಿಸಿದ್ದರು.
ಸುದೀಪ್ ಅವರ ತಂದೆ ಸಂಜೀವ್ ಅವರು ಚಿತ್ರರಂಗದಲ್ಲಿ ತೊಡಗಿಕೊಂಡವರಲ್ಲ. ಆದರೆ, ಅವರು ತಮ್ಮದೇ ಹೋಟೆಲ್ ಉದ್ಯಮ ಹೊಂದಿದ್ದರು. ಇದಕ್ಕೆ ಚಿತ್ರರಂಗದವರು ಬರುತ್ತಿದ್ದರು. ಈ ಕಾರಣದಿಂದ ಅವರಿಗೆ ಚಿತ್ರರಂಗದ ಜೊತೆ ಒಳ್ಳೆಯ ಒಡನಾಟ ಬೆಳೆದಿತ್ತು. ಸುದೀಪ್ ಅವರಿಗೆ ಸಿನಿಮಾ ಬಗ್ಗೆ ಆಸಕ್ತಿ ಬೆಳೆಯಲು ಇದು ಕೂಡ ಕಾರಣ ಆಯಿತು ಎನ್ನಬಹುದು. ಆದರೆ, ಸಿನಿಮಾ ರಂಗದ ಜರ್ನಿ ಮಾತ್ರ ಅಷ್ಟು ಸುಲಭದಲ್ಲಿ ಇರಲೇ ಇಲ್ಲ.
1997ರಲ್ಲಿ ‘ತಾಯವ್ವ’ ಹೆಸರಿನ ಸಿನಿಮಾನ ಸುದೀಪ್ ಮಾಡಿದರು. ನಂತರ ‘ಪ್ರತ್ಯರ್ಥ’ ಹೆಸರಿನ ಸಿನಿಮಾ ಮಾಡಿದರು. ‘ಸ್ಪರ್ಶ’, ‘ಹುಚ್ಚ’ ರೀತಿಯ ಸಿನಿಮಾಗಳಲ್ಲಿ ಅವರು ನಟಿಸಿದರು. ಹುಚ್ಚ ಸಿನಿಮಾ ಹಿಟ್ ಆಗಿ ಅವರಿಗೆ ಸಾಕಷ್ಟು ಖ್ಯಾತಿ ನೀಡಿತು. ಆದಾಗ್ಯೂ ಸುದೀಪ್ ಕಷ್ಟಪಡೋದು ಇದ್ದೇ ಇತ್ತು.
ಇದನ್ನೂ ಓದಿ:ನಿರ್ದೇಶಕನಾಗಬೇಕಿದ್ದ ಸುದೀಪ್ ಅವರು ಹೀರೋ ಆಗಿದ್ದು ಹೇಗೆ?
‘ವಾಲಿ’ ಸಿನಿಮಾ 2001ರಲ್ಲಿ ರಿಲೀಸ್ ಆಯಿತು. ಈ ಚಿತ್ರದ ಆಡಿಯೋ ಲಾಂಚ್ ವೇಳೆ ಎದುರಾದ ಸಮಸ್ಯೆ ಏನು ಎಂದು ಅವರ ಆಪ್ತ ಅರುಣ್ ಸಾಗರ್ ಅವರು ಹೇಳಿಕೊಂಡಿದ್ದರು. ‘ಕಾರು ಇಳಿದು ಸುದೀಪ್ ಬಂದ. ಅವನು ತುಂಬಾ ನೋವಲ್ಲಿ ಇದ್ದ. ಕೇಳಿದೆ ಇಂಥ ಚಾನೆಲ್ನಲ್ಲಿ ಆಡಿಯೋ ರಿಲೀಸ್ ಇದೆ. ಯಾರೂ ಬರಲೇ ಇಲ್ಲ ಎಂದ. ನಾನು ಹಾಗೂ ಅವನು ಸೇರಿ ಸ್ಟುಡಿಯೋ ಸೆಟಪ್ ಮಾಡಿದೆವು. ಅದಾಗಿ ಹೊರ ಬಂದಮೇಲೆ ಕಣ್ಣೀರು ಹಾಕಿದು. ಇದು ಜೀವನದ ಒಂದು ಭಾಗ’ ಎಂದಿದ್ದರು ಅರುಣ್.
ಸುದೀಪ್ ಅಂದು ಹೇಗಿದ್ದರೋ ಈಗಲೂ ಹಾಗೆಯೇ ಇದ್ದಾರಂತೆ. ಇದನ್ನು ಅರುಣ್ ಸಾಗರ್ ಅವರು ಒಪ್ಪಿಕೊಂಡಿದ್ದಾರೆ. ಈ ವಿಚಾರವನ್ನು ಅನೇಕರು ಒಪ್ಪುತ್ತಾರೆ. ಅನೇಕರಿಗೆ ಅವರು ಸ್ಫೂರ್ತಿ ಆಗಿದ್ದಾರೆ. ಕಷ್ಟ ಎಂದು ಬಂದವರಿಗೆ ಅವರು ಸಹಾಯ ಮಾಡುತ್ತಾರೆ. ಇದು ಅನೇಕರಿಗೆ ಇಷ್ಟ ಆಗುವ ವಿಚಾರಗಳಲ್ಲಿ ಒಂದು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ