ಬೆಂಗಳೂರಲ್ಲಿ ತುಳು, ಕನ್ನಡ ಭಾಷೆಯ ‘ಜೈ’ ಸಿನಿಮಾ ಟ್ರೇಲರ್ ಬಿಡುಗಡೆ ಮಾಡಲಿರುವ ಸುನೀಲ್ ಶೆಟ್ಟಿ
ರೂಪೇಶ್ ಶೆಟ್ಟಿ ನಟನೆಯ ಕನ್ನಡ-ತುಳು ಭಾಷೆಯ ‘ಜೈ’ ಸಿನಿಮಾದ ಟ್ರೇಲರ್ ಬಿಡುಗಡೆಗೆ ದಿನಾಂಕ ನಿಗದಿ ಆಗಿದೆ. ನವೆಂಬರ್ 7ರಂದು ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರು ಟ್ರೇಲರ್ ಬಿಡುಗಡೆ ಮಾಡಲು ಬೆಂಗಳೂರಿಗೆ ಆಗಮಿಸಲಿದ್ದಾರೆ. ‘ಜೈ’ ಸಿನಿಮಾದ ಟೀಸರ್ ಈಗಾಗಲೇ ಗಮನ ಸೆಳೆದಿದೆ. ವಿದೇಶದಲ್ಲಿ ನಡೆದ ಪ್ರೀಮಿಯರ್ ಶೋನಲ್ಲಿ ಜನಮೆಚ್ಚುಗೆ ಸಿಕ್ಕಿದೆ.

ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ (Roopesh Shetty) ಅವರು ಕನ್ನಡ ಮತ್ತು ತುಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಅಭಿನಯಿಸಿರುವ ‘ಜೈ’ ಸಿನಿಮಾ (Jai Movie) ಈಗಾಗಲೇ ಕೆಲವು ಕಡೆಗಳಲ್ಲಿ ಪ್ರೀಮಿಯರ್ ಪ್ರದರ್ಶನ ಕಂಡು ಜನಮೆಚ್ಚುಗೆ ಪಡೆದಿದೆ. ನವೆಂಬರ್ 14ರಂದು ಈ ಸಿನಿಮಾ ರಿಲೀಸ್ ಆಗಲಿದೆ. ಈಗಾಗಲೇ ಟೀಸರ್ ಗಮನ ಸೆಳೆದಿದೆ. ಈಗ ‘ಜೈ’ ಸಿನಿಮಾದ ಟ್ರೇಲರ್ ನೋಡುವ ಸಮಯ ಹತ್ತಿರ ಆಗಿದೆ. ಬೆಂಗಳೂರಿನಲ್ಲಿ ಅದ್ದೂರಿಯಾಗಿ ಟ್ರೇಲರ್ ಬಿಡುಗಡೆ ಆಗಲಿದೆ. ಈ ಕಾರ್ಯಕ್ರಮಕ್ಕೆ ಬಾಲಿವುಡ್ ಸೂಪರ್ ಸ್ಟಾರ್ ಸುನೀಲ್ ಶೆಟ್ಟಿ (Suniel Shetty) ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.
ಈ ಬಗ್ಗೆ ರೂಪೇಶ್ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ‘ಹೌದು, ಬಾಲಿವುಡ್ನ ಅಣ್ಣ ನಮ್ಮ ಬೆಂಗಳೂರಿಗೆ ಬರುತ್ತಿದ್ದಾರೆ. ಇಂಡಿಯನ್ ಸೂಪರ್ ಸ್ಟಾರ್ ಸುನೀಲ್ ಶೆಟ್ಟಿ ಅವರು ಜೈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ನವೆಂಬರ್ 7ರಂದು ಬೆಂಗಳೂರು ಮಂತ್ರಿ ಮಾಲ್ಗೆ ಬರಲಿದ್ದಾರೆ’ ಎಂದು ರೂಪೇಶ್ ಶೆಟ್ಟಿ ಅವರು ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ರೂಪೇಶ್ ಶೆಟ್ಟಿ ಅವರೇ ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಅವರು ಜೊತೆಯಲ್ಲಿ ಅದ್ವಿತಿ ಶೆಟ್ಟಿ, ಅರವಿಂದ್ ಬೋಳಾರ್, ರಾಜ್ ದೀಪಕ್ ಶೆಟ್ಟಿ, ನವೀನ್ ಡಿ. ಪಡೀಲ್, ದೇವದಾಸ್ ಕಾಪಿಕಾಡ್ ಮುಂತಾದವರು ನಟಿಸಿದ್ದಾರೆ. ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರು ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಕಾರಣದಿಂದ ‘ಜೈ’ ಸಿನಿಮಾ ಮೇಲೆ ನಿರೀಕ್ಷೆ ಜಾಸ್ತಿ ಇದೆ.
View this post on Instagram
ಇತ್ತೀಚೆಗೆ ಮಸ್ಕಟ್ನಲ್ಲಿ ‘ಜೈ’ ಚಿತ್ರದ ಅಂತಾರಾಷ್ಟ್ರೀಯ ಪ್ರೇಮಿಯರ್ ಶೋ ನಡೆಯಿತು. ಅಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದರು. ಅದರಿಂದಾಗಿ ಚಿತ್ರತಂಡದ ಬಲ ಹೆಚ್ಚಿದಂತಾಗಿದೆ. ಟ್ರೇಲರ್ ಬಿಡುಗಡೆ ಆದ ಬಳಿಕ ಸಿನಿಮಾ ಮೇಲಿನ ಹೈಪ್ ಇನ್ನಷ್ಟು ಹೆಚ್ಚಾಗಲಿದೆ. ಸುನೀಲ್ ಶೆಟ್ಟಿ ಅವರ ಪಾತ್ರದ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಕಾದಿದ್ದಾರೆ.
ಇದನ್ನೂ ಓದಿ: ಬಿಡುಗಡೆಗೂ ಮುನ್ನ ಜನಮೆಚ್ಚುಗೆ ಗಳಿಸಿದ ರೂಪೇಶ್ ಶೆಟ್ಟಿ ಸಿನಿಮಾ ‘ಜೈ’
ಕರ್ನಾಟಕದ ಬಗ್ಗೆ ಸುನೀಲ್ ಶೆಟ್ಟಿ ಅವರಿಗೆ ವಿಶೇಷ ಗೌರವ ಇದೆ. ಮಂಗಳೂರಿನಲ್ಲಿ ಜನಿಸಿದ ಅವರು ಚೆನ್ನಾಗಿ ತುಳು ಮಾತನಾಡುತ್ತಾರೆ. ‘ಜೈ’ ಸಿನಿಮಾ ಕನ್ನಡ ಮತ್ತು ತುಳು ಭಾಷೆಯಲ್ಲಿ ಬಿಡುಗಡೆ ಆಗಲಿದೆ. ‘ಸುನೀಲ್ ಶೆಟ್ಟಿ ಅವರ ಜೊತೆ ಕೆಲಸ ಮಾಡಿದ್ದು ಜೀವನದ ಒಂದು ಅದ್ಭುತ ಅನುಭವ. ಅವರನ್ನು ನಿರ್ದೇಶಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ’ ಎಂದು ರೂಪೇಶ್ ಶೆಟ್ಟಿ ಅವರು ಈ ಮೊದಲು ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




