ತನಿಷಾ ಕುಪ್ಪಂಡ, ಎಟಿಎಂ ಮಂಜು, ಸೋನಿಯಾ ರಾವುತ್ ಹೊಸ ಸಿನಿಮಾ ‘ಕೆಎ 18’; ಏನಿದರ ಕಹಾನಿ?
ಹೊಸ ಚಿತ್ರಕ್ಕೆ ‘ಕೆಎ 18’ ಎಂಬ ಟೈಟಲ್ ಇದೆ. ಈ ಶೀರ್ಷಿಕೆ ಕೇಳಿದ ಕೂಡಲೇ ಇದು ಚಿಕ್ಕಮಗಳೂರು ಸುತ್ತಮುತ್ತ ನಡೆಯುವ ಕಥೆ ಎಂಬುದು ಗೊತ್ತಾಗುತ್ತದೆ. ಕನ್ನಡದ ಈ ಸಿನಿಮಾವನ್ನು ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಮಾಡುವ ಪ್ಲ್ಯಾನ್ ಚಿತ್ರತಂಡಕ್ಕಿದೆ.

ಎಟಿಎಂ ಮಂಜು, ತನಿಷಾ ಕುಪ್ಪಂಡ (Tanisha Kuppanda) ಹಾಗೂ ಸೋನಿಯಾ ರಾವುತ್ ಅವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಸಿನಿಮಾಗೆ ‘ಕೆಎ 18’ (KA 18) ಎಂದು ಡಿಫರೆಂಟ್ ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದ ಮುಹೂರ್ತ ಸಮಾರಂಭವು ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಇತ್ತೀಚೆಗೆ ನೆರವೇರಿತು. ವಿ. ನಾಗೇಂದ್ರ ಪ್ರಸಾದ್ ಅವರು ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ನಟ ದರ್ಶನ್ ಅವರ ಅಳಿಯ ಮನೋಜ್ ಅವರು ಕ್ಯಾಮೆರಾ ಚಾಲನೆ ಮಾಡಿದರು. ‘ಅಪ್ಪಾಜಿ ಪ್ರೊಡಕ್ಷನ್ಸ್’ ಮೂಲಕ ಹಿರೇಮಗಳೂರು ಮೂಲದ ಎಟಿಎಂ ಮಂಜು ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ನಿರ್ಮಾಣ ಮಾಡುವುದರ ಜತೆಗೆ ನಾಯಕನಾಗಿಯೂ ಎಟಿಎಂ ಮಂಜು ಅವರು ನಟಿಸುತ್ತಿದ್ದಾರೆ. ನಟನಾಗಿ ಇದು ಅವರಿಗೆ ಮೊದಲ ಅನುಭವ. ಮೋಹನ್ ಚಿಕ್ಕಿ ಅವರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಉತ್ತರಕಾಂಡದ ಸೋನಿಯಾ ರಾವುತ್ ಅವರು ಸಹ-ನಿರ್ಮಾಪಕಿ ಆಗಿದ್ದಾರೆ. ಅಲ್ಲದೇ, ಒಂದು ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ.
ಎಟಿಎಂ ಮಂಜು, ತನಿಷಾ ಕುಪ್ಪಂಡ, ಸೋನಿಯಾ ರಾವುತ್ ಮಾತ್ರವಲ್ಲದೇ ದೀಪು, ವಿಜಿ, ಪೂಜಾ ಮುಂತಾದ ಕಲಾವಿದರ ಕೂಡ ‘ಕೆಎ 18’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶಶಿಕುಮಾರ್ ಜೆ.ಕೆ. ಅವರು ಸಾಹಿತ್ಯ ಬರೆದಿದ್ದಾರೆ, ಮುಂಜಾನೆ ಮಂಜು ಅವರ ಛಾಯಾಗ್ರಹಣ, ರಘು ಶಿವರಾಮ್ ಅವರ ಸಂಕಲನ, ವೈಲೆಂಟ್ ವೇಲು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕೆ ಇರಲಿದೆ. ಮಂಜುನಾಥ್ ದೈವಜ್ಞ ಅವರು ನಿರ್ಮಾಣ ನಿರ್ವಹಣೆ ಮಾಡುತ್ತಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ‘ಕೆಎ 18’ ಸಿನಿಮಾದ ಬಗ್ಗೆ ನಿರ್ದೇಶಕ ಮೋಹನ್ ಚಿಕ್ಕಿ ಅವರು ಮಾಹಿತಿ ನೀಡಿದರು. ‘ನಿರ್ಮಾಪಕರು ಹೇಳಿದ ಒಂದು ಎಳೆಯನ್ನು ಬಳಸಿಕೊಂಡು ಅದನ್ನು ವಿಸ್ತಾರ ಮಾಡಿಕೊಳ್ಳಲಾಗಿದೆ. ಚಿತ್ರವು ಎರಡು ಪಾತ್ರಗಳ ಸುತ್ತ ನಡೆಯುತ್ತಿದೆ. ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆ ತನಕ ನಡೆಯುವ ಘಟನೆಯಲ್ಲಿ ನಾಲ್ಕೈದು ಅಂಶಗಳು ಬರುತ್ತದೆ. ಚಿಕ್ಕಮಗಳೂರು ಸುತ್ತಮುತ್ತ ಸಂಪೂರ್ಣ ಶೂಟಿಂಗ್ ಮಾಡಲಾಗುತ್ತದೆ’ ಎಂದು ಅವರು ಹೇಳಿದರು.
ಇದನ್ನೂ ಓದಿ: ತನಿಷಾ ಕುಪ್ಪಂಡ ಜೊತೆ ಅಸಭ್ಯವಾಗಿ ವರ್ತಿಸಿದ ಫೋಟೋಗ್ರಾಫರ್; ನಟಿಯ ನೇರ ಕ್ಲಾಸ್
ನಿರ್ಮಾಪಕ, ನಟ ಎಟಿಎಂ ಮಂಜು ಅವರು ಚಿತ್ರದ ಬಗ್ಗೆ ಮಾತನಾಡಿದರು. ‘ಶಾಲೆ ಕಾಲೇಜು ದಿನಗಳಿಂದಲೂ ನಾಟಕ ಪ್ರೇಮಿ. ಅಂದಿನಿಂದಲೇ ಸಿನಿಮಾ ಮಾಡಬೇಕೆಂಬ ಆಸೆ ಇತ್ತು. ಅದಕ್ಕೆ ಈಗ ಕಾಲ ಕೂಡಿಬಂದಿದೆ. 2000ನೇ ಇಸವಿಯಲ್ಲಿ ಅಪ್ಪನೊಂದಿಗೆ ಕೆಮ್ಮಣ್ಣುಗುಂಡಿಗೆ ಹೋಗಿದ್ದಾಗ ಅಲ್ಲಿ ನೋಡಿದ ಘಟನೆಯನ್ನು ನಿರ್ದೇಶಕರಿಗೆ ಹೇಳಿದೆ. ಅದರ ಬಗ್ಗೆ ಕಥೆ ಇದೆ. ಅಲ್ಲದೇ ಮೂಢನಂಬಿಕೆ ಅಂಶವನ್ನು ತೆಗೆದುಕೊಳ್ಳಲಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




