AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರಿಯುವ ನೀರನ್ನು ತಡೆಯಲಾಗದು, ಗುಂಪುಗಾರಿಕೆ ಇಲ್ಲಿ ನಡೆಯದು: ಉಮಾಪತಿ ಶ್ರೀನಿವಾಸ್

ಕೆಲವು ನಟರ ಸಿನಿಮಾಗಳನ್ನು ಮಾತ್ರವೇ ನೋಡಿ, ಬೇರೆಯವರದ್ದು ನೋಡಬೇಡಿ ಎಂದೆಲ್ಲ ಕೆಲವರು ಕರೆ ಕೊಡುತ್ತಿರುವ ಬಗ್ಗೆ ಖಡಕ್ ಆಗಿ ಪ್ರತಿಕ್ರಿಯೆ ನೀಡಿರುವ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹರಿಯುವ ನೀರನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.

ಹರಿಯುವ ನೀರನ್ನು ತಡೆಯಲಾಗದು, ಗುಂಪುಗಾರಿಕೆ ಇಲ್ಲಿ ನಡೆಯದು: ಉಮಾಪತಿ ಶ್ರೀನಿವಾಸ್
ಮಂಜುನಾಥ ಸಿ.
|

Updated on: Jul 13, 2024 | 11:00 PM

Share

ಕೆಲವು ನಟರ ಸಿನಿಮಾಗಳನ್ನು ನೋಡಿ, ಕೆಲವನ್ನು ನೋಡಬೇಡಿ, ನಾವು ನಿರ್ದಿಷ್ಟ ನಟನ ಸಿನಿಮಾ ಮಾತ್ರ ನೋಡುತ್ತೇವೆ, ಬೇರೆಯವರ ಸಿನಿಮಾ ನೋಡುವುದಿಲ್ಲ, ಬೇರೆ ನಟರ ಸಿನಿಮಾಗಳನ್ನು ಸೋಲಿಸುತ್ತೇವೆ ಎಂಬಿತ್ಯಾದಿ ಮಾತುಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದಕ್ಕೆ ನಿರ್ಮಾಪಕ ಉಮಾಪಕಿ ಶ್ರೀನಿವಾಸ್ ಗೌಡ ಪ್ರತಿಕ್ರಿಯೆ ನೀಡಿದ್ದಾರೆ. ‘ಹರಿಯುವ ನೀರನ್ನು ಯಾರೂ ತಡೆಯಲು ಸಾಧ್ಯವಿಲ್ಲ. ದೊಡ್ಡವರು ಕಟ್ಟಿದ ಈ ಚಿತ್ರರಂಗವನ್ನು ಯಾರೋ ಕೆಲವು ವ್ಯಕ್ತಿಗಳು ಹಾಳುಗೆಡವಲು ಸಾಧ್ಯವಿಲ್ಲ’ ಎಂದಿದ್ದಾರೆ.

‘ಮ್ಯಾಡಿ’ ಸಿನಿಮಾ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಉಮಾಪತಿ, ‘ಯಾವುದೋ ಒಂದು ಗುಂಪು ಅಥವಾ ಯಾರೋ ಕೆಲವರು ನಿರ್ಧಾರ ಮಾಡಿ ಸಿನಿಮಾಗಳನ್ನು ಗೆಲ್ಲಿಸುವ ಸೋಲಿಸುವ ರೀತಿ ಇದ್ದಿದ್ದರೆ ಈ ಚಿತ್ರರಂಗದಲ್ಲಿ ಯಾರೂ ಸಿನಿಮಾ ಮಾಡುತ್ತಿರಲಿಲ್ಲ. ಯಾರೂ ಸಹ ಚಿತ್ರಮಂದಿರಗಳಲ್ಲಿ ಸಿನಿಮಾಗಳನ್ನು ಬಿಡುಗಡೆಯೇ ಮಾಡುತ್ತಿರಲಿಲ್ಲ. ಅಂಥಹವರಿಗೆಲ್ಲ ಹೆದರಿಕೊಂಡು ಕೂರುವ ಅಗತ್ಯವೂ ಇಲ್ಲ’ ಎಂದಿದ್ದಾರೆ ಉಮಾಪತಿ.

ತಾವು ನಿರ್ಮಾಣ ಮಾಡಲಿರುವ ಮುಂದಿನ ಸಿನಿಮಾ ಬಗ್ಗೆ ಮಾತನಾಡಿದ ಉಮಾಪತಿ, ‘ಬೇರೆ ಕೆಲವು ಕಾರ್ಯಗಳಲ್ಲಿ ಬ್ಯುಸಿಯಾಗಿದ್ದ ಕಾರಣದಿಂದ ಸಿನಿಮಾಗಳ ಬಗ್ಗೆ ಹೆಚ್ಚು ಗಮನ ವಹಿಸಲು ಸಾಧ್ಯವಾಗಿಲ್ಲ. ಆದರೆ ಕೆಲವು ನಟರನ್ನು ಭೇಟಿ ಆಗಿದ್ದೇನೆ, ಕೆಲವು ನಿರ್ದೇಶಕರಿಂದ ಕತೆಗಳನ್ನು ಕೇಳುತ್ತಲೇ ಇದ್ದೇನೆ. ಒಳ್ಳೆಯ ಗುಣಮಟ್ಟದ ಕತೆಯ ಹುಡುಕಾಟದಲ್ಲಿದ್ದೇನೆ’ ಎಂದಿದ್ದಾರೆ.

‘ನಮ್ಮ ನಿರ್ಮಾಣ ಸಂಸ್ಥೆ ನೊಂದಣಿ ಆಗಿದ್ದು 2015 ರಲ್ಲಿ ಈ ವರೆಗೆ ಕೇವಲ ನಾಲ್ಕು ಸಿನಿಮಾಗಳನ್ನು ಮಾತ್ರವೇ ನಾವು ನಿರ್ಮಾಣ ಮಾಡಿರುವುದು, ಗುಣಮಟ್ಟದ ಸಿನಿಮಾ ನೀಡಬೇಕು ಎಂಬುದು ನಮ್ಮ ಬಯಕೆ ಹಾಗಾಗಿ ಸ್ವಲ್ಪ ಸಮಯ ತೆಗೆದುಕೊಂಡು ಸಿನಿಮಾ ನಿರ್ಮಾಣ ಮಾಡುತ್ತೇವೆ’ ಎಂದಿದ್ದಾರೆ ಉಮಾಪತಿ.

ದರ್ಶನ್ ಪ್ರಕರಣವಾದ ಬಳಿಕ ಉಮಾಪತಿ ಮಾಧ್ಯಮಗಳಲ್ಲಿ ಮಾತನಾಡಿದ್ದರು. ಇದಕ್ಕೆ ದರ್ಶನ್ ಅಭಿಮಾನಿಗಳು ಉರಿದು ಬಿದ್ದಿದ್ದರು. ಕೆಲವರು ಬೆದರಿಕೆ ಸಹ ಹಾಕಿದ್ದರು. ಉಮಾಪತಿಗೆ ಬೆದರಿಕೆ ಹಾಕಿದ್ದ ದರ್ಶನ್ ಅಭಿಮಾನಿಯೊಬ್ಬನ ವಿರುದ್ಧ ದೂರು ಸಹ ದಾಖಲಾಗಿತ್ತು. ಆತನನ್ನು ವಶಕ್ಕೆ ಪಡೆದು ಪೊಲೀಸರು ‘ಎಚ್ಚರಿಕೆ’ ನೀಡಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ