ದರ್ಶನ್ ‘ತಗಡು’ ಹೇಳಿಕೆಗೆ ಉಮಾಪತಿ ಶ್ರೀನಿವಾಸ್ ಸೈಲೆಂಟ್ ಟಾಂಗ್

Umapathy Srinivas: ‘ಕಾಟೇರ’ ಸಿನಿಮಾದ ಕತೆ, ಟೈಟಲ್​ಗೆ ಸಂಬಂಧಿಸಿದಂತೆ ತಮ್ಮ ದರ್ಶನ್ ಆಡಿರುವ ಕಠು ಮಾತುಗಳ ಬಗ್ಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಪ್ರತಿಕ್ರಿಯಿಸಿದ್ದಾರೆ.

ದರ್ಶನ್ ‘ತಗಡು’ ಹೇಳಿಕೆಗೆ ಉಮಾಪತಿ ಶ್ರೀನಿವಾಸ್ ಸೈಲೆಂಟ್ ಟಾಂಗ್

Updated on: Feb 20, 2024 | 3:28 PM

ಕಾಟೇರ’ (Kaatera) ಸಿನಿಮಾದ 50 ದಿನ ಪೂರೈಸಿದ ಖುಷಿಯಲ್ಲಿ ಪ್ರಸನ್ನ ಚಿತ್ರಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ದರ್ಶನ್, ಮಾಜಿ ಗೆಳೆಯ ಉಮಾಪತಿ ಶ್ರೀನಿವಾಸ್​ ಅವರನ್ನುದ್ದೇಶಿಸಿ ಕೆಲ ಕಠು ಪದಗಳನ್ನು ಬಳಸಿದ್ದರು. ‘ಕಾಟೇರ’ ಸಿನಿಮಾದ ಕತೆಯನ್ನು ತಾವು ಮಾಡಿಸಿದ್ದಾಗಿ ಉಮಾಪತಿ ಶ್ರೀನಿವಾಸ್ ವಿನಯದಿಂದಲೇ ಈ ಹಿಂದೆ ಹೇಳಿದ್ದರು. ಆದರೆ ಅದನ್ನು ಅಪಮಾನವೆಂಬಂತೆ ತೆಗೆದುಕೊಂಡಂತಿರುವ ದರ್ಶನ್, ಉಮಾಪತಿಯನ್ನುದ್ದೇಶಿಸಿ ‘ತಗಡು’ ಇನ್ನಿತರೆ ಕಠು ಪದಗಳನ್ನು ಬಳಸಿ ನಿಂದಿಸಿದ್ದಾರೆ. ಅಲ್ಲದೆ ‘ಕಾಟೇರ’ ಸಿನಿಮಾದ ಟೈಟಲ್ ರಿಜಿಸ್ಟರ್ ತಾವೇ ಮಾಡಿಸಿದ್ದಾಗಿಯೂ ಹೇಳಿದರು.

ತಮ್ಮ ಬಗ್ಗೆ ದರ್ಶನ್ ಆಡಿರುವ ಮಾತುಗಳ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ಮಾಪಕ ಉಮಾಪತಿ ಶ್ರೀನಿವಾಸ್, ‘ಅವರಿಗೆ ಉತ್ತರ ಕೊಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ನಾವೆಲ್ಲ ತಗಡುಗಳು ತಗಡುಗಳಾಗೇ ಇರಬೇಕಲ್ವ? ‘ರಾಬರ್ಟ್’ ಸಿನಿಮಾ ಅವರದ್ದೇ, ಅವರೇ ಕತೆ ಕೊಟ್ಟರು ದುಡ್ಡು ಅವರೇ ಹಾಕಿದರು. ನಿರ್ಮಾಪಕನೂ ನಾನಲ್ಲ, ನಾನು ಡಮ್ಮಿ ನಿರ್ಮಾಪಕ ಆಗಿದ್ದೆ. ಅವರೆಲ್ಲ ದೊಡ್ಡ ವ್ಯಕ್ತಿಗಳು, ಮಾತನಾಡಿದ್ದಾರೆ, ಮಾತನಾಡಲಿ ಬಿಡಿ,’ ಎಂದು ಟಾಂಗ್ ನೀಡಿದರು. ಮುಂದುವರೆದು ಮಾತನಾಡಿ, ಎಲ್ಲ ಕತೆಗಳನ್ನು ಸಿನಿಮಾ ಮಾಡೋಕಾಗಲ್ಲ. ‘ಕಾಟೇರ’ ಟೈಟಲ್ ಯಾರ ಬ್ಯಾನರ್ ಅಲ್ಲಿ ರಿಜಿಸ್ಟರ್ ಆಯ್ತು ಎಂಬುದು ಚೇಂಬರ್​ನಲ್ಲಿ ಮಾಹಿತಿ ಸಿಗುತ್ತದೆ. ಅವರು ಹೆಸರು ರೆಫರ್ ಮಾಡಿದ್ದರು, ರಿಜಿಸ್ಟರ್ ಮಾಡಿಟ್ಟುಕೊಂಡಿದ್ದೆ, ‘ಮದಗಜ’ ಸಿನಿಮಾ ಟೈಟಲ್ ರಾಮಮೂರ್ತಿ ಅವರ ಬಳಿ ಇತ್ತು, ನೀವು ‘ಮದಗಜ’ ಕೊಡಿ ನಾನು ‘ಕಾಟೇರ’ ಕೊಡ್ತೀನಿ ಅನ್ನೋ ಒಪ್ಪಂದದ ಮೇಲೆ ಟೈಟಲ್ ಕೊಟ್ಟೆ’ ಎಂದಿದ್ದಾರೆ ಉಮಾಪತಿ.

ಇದನ್ನೂ ಓದಿ:ಅಕ್ಟೋಬರ್​ಗೆ ಮತ್ತೆ ಬರ್ತೀನಿ, ಚಿತ್ರಮಂದಿರ ಖಾಲಿ ಇಟ್ಟಿರಿ: ದರ್ಶನ್

‘ಕಾಟೇರ’ ಕತೆಯ ವಿಚಾರ ಮಾತನಾಡಿ, ‘ರಾಬರ್ಟ್’ ಸಿನಿಮಾ ಬಿಡುಗಡೆ ಆಗುವ ಮುಂಚೆಯೇ ‘ಕಾಟೇರ’ ಸಿನಿಮಾದ ಕತೆಯನ್ನು ನಾನು ಮಾಡಿಸಿದ್ದೆ. ಎಲ್ಲರೂ ಒಟ್ಟಿಗೆ ಸೇರಿ ಡಿಸ್ಕಸ್ ಮಾಡಿ ಕತೆ ಮಾಡಿದೆವು ಆದರೆ ಅದರಲ್ಲಿ ಪ್ರಮುಖ ಪಾತ್ರ ನನ್ನದಾಗಿತ್ತು. ಈಗ ಆ ಸಿನಿಮಾದ ನಿರ್ದೇಶಕರು ಅವರ ಕಡೆ ಇದ್ದಾರೆ. ನಿರ್ಮಾಪಕರು ಸಿನಿಮಾ ನಿರ್ಮಾಣ ಮಾಡಿದ್ದಾರೆ, ಇವರು (ದರ್ಶನ್) ಆಕ್ಟ್ ಮಾಡಿದ್ದಾರೆ, ಸಿನಿಮಾ ಗೆದ್ದಿದೆ. ಆ ಖುಷಿಯಲ್ಲಿ ಏನೇನೋ ಮಾತನಾಡುತ್ತಿದ್ದಾರೆ. ನನ್ನ ಅಕ್ಕಪಕ್ಕ ಇರೋರು ನಾನು ಹೇಳಿದ್ದು ಸರಿ ಅಂತರೆ, ಹಾಗೆಯೇ ಅವರ ಅಕ್ಕ-ಪಕ್ಕ ಇರೋರು ಅವರು ಹೇಳಿದ್ದು ಸರಿ ಅಂತಾರೆ. ಮೇಲಿರುವ ಭಗವಂತನ ಬಳಿ ಎಲ್ಲದಕ್ಕೂ ಲೆಕ್ಕ ಇದೆ. ನಾವೆಲ್ಲ ತಗಡುಗಳು ಅಷ್ಟೆ’ ಎಂದಿದ್ದಾರೆ ಉಮಾಪತಿ.

‘ಅವರ (ದರ್ಶನ್) ಸರಿ ಸಮಾನಕ್ಕೆ ನಾನು ಬರೋಕಾಗಲ್ಲ. ನನಗೆ ಮಾಡೋ ಕೆಲಸ ಸಾಕಷ್ಟಿದೆ, ಅವರ ಮಟ್ಟಕ್ಕೆ ನಾನು ಇನ್ನೂ ಬೆಳೆದಿಲ್ಲ. ಬೆಳೆದಾಗ ಉತ್ತರ ಕೊಡೋಣ. ಖಂಡಿತ ಉತ್ತರ ಕೊಡ್ತೀನಿ, ಕಾಲಯ ತಸ್ಮೈ ನಮಃ, ಎಲ್ಲಾದಕ್ಕೂ ಉತ್ತರ ಕೊಡಲೇ ಬೇಕು ಎಂದೇನಿಲ್ಲ. ಅವರು ಗೆದ್ದಿದ್ದಾರೆ ಖುಷಿಯಾಗಿದ್ದಾರೆ. ಮಾತನಾಡಿದ್ದಾರೆ. ನಮ್ಮ ನಿರ್ಮಾಣ ಸಂಸ್ಥೆಗೆ ಒಂದು ಸಿನಿಮಾ ಮಾಡಿಕೊಟ್ಟಿದ್ದಾರೆ ಅದರ ಬಗ್ಗೆ ಗೌರವ ಇದೆ, ಅವರು ಮೇರು ನಟರು, ನಾನು ಸಾಮಾನ್ಯ ವ್ಯಕ್ತಿ, ಭೂಮಿ-ಆಕಾಶದ ಅಂತರ ಇದೆ. ಇರಲಿ ದೇವರು ಚೆನ್ನಾಗಿ ಇಟ್ಟಿರಲಿ. ಭಗವಂತ ಇಂದು ಅವರಿಗೆ ಕೊಟ್ಟಿದ್ದಾನೆ. ನಾಳೆ ನಮಗೆ ಕೊಡ್ತಾನೆ’ ಎಂದಿದ್ದಾರೆ ಉಮಾಪತಿ ಶ್ರೀನಿವಾಸ್.

ಹಿಂದೆಯೇ ಒಮ್ಮೆ ಮಾತನಾಡಿ ಸಿಕ್ಕಿ ಹಾಕಿಕೊಂಡಿದ್ದ ಎಂದು ದರ್ಶನ್ ಹೇಳಿದ ಮಾತಿಗೆ ಪ್ರತಿಕ್ರಿಯಿಸಿದ ಉಮಾಪತಿ, ‘ಯಾರು, ಯಾರಿಗೆ ಸಿಕ್ಕಿ ಬಿದ್ದಿದ್ದರು. ಏನು ಮಾಡಿಕೊಂಡರು. ನಾನು ತಪ್ಪು ಮಾಡಿದ್ದಾಗಿದ್ದರೆ ಲೀಗಲಿ ಮೂವ್ ಮಾಡಬಹುದಿತ್ತು, ಯಾಕೆ ಮಾಡಲಿಲ್ಲ’ ಎಂದು ಪ್ರಶ್ನೆ ಮಾಡಿದ ಉಮಾಪತಿ, ‘ಕಾಟೇರ’ ಸಿನಿಮಾದ ಕತೆ ಬಗ್ಗೆ ಮಾತನಾಡಿ, ‘ಬಾಯಲ್ಲಿ ಏನು ಬೇಕಾದರೂ ಹೇಳಬಹುದು ಆದರೆ ಮನಸಾಕ್ಷಿಗೆ ಮೋಸ ಮಾಡಿಕೊಳ್ಳಲು ಸಾಧ್ಯವಿಲ್ಲ. ಕತೆ ಮಾಡಿಸಬೇಕಾದರೆ ಯಾರು ಮಾಡಿಸಿದ್ದು ಎಂಬುದು ಎಲ್ಲರಿಗೂ ಗೊತ್ತಿದೆ. ದೊಡ್ಡ ವ್ಯಕ್ತಿ ತರುಣ್​ ಸುಧೀರ್​ಗೆ ಸಹ ಗೊತ್ತಿದೆ’ ಎಂದಿದ್ದಾರೆ ಉಮಾಪತಿ ಶ್ರೀನಿವಾಸ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us