ವಿಜಯ್ ರಾಘವೇಂದ್ರ ನಟನೆಯ ‘ಶ್ರೀಮತಿ ಸಿಂಧೂರ’ ಟೀಸರ್, ಹಾಡು ರಿಲೀಸ್

ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಅವರು ನಟಿಸಿರುವ ‘ಶ್ರೀಮತಿ ಸಿಂಧೂರ’ ಸಿನಿಮಾದ ಹಾಡುಗಳು ಮತ್ತು ಟೀಸರ್ ಬಿಡುಗಡೆ ಆಗಿದೆ. ಈ ವೇಳೆ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡದವರು ಭಾಗಿ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು.

ವಿಜಯ್ ರಾಘವೇಂದ್ರ ನಟನೆಯ ‘ಶ್ರೀಮತಿ ಸಿಂಧೂರ’ ಟೀಸರ್, ಹಾಡು ರಿಲೀಸ್
Srimathi Sindhura Movie Team

Updated on: May 03, 2026 | 5:07 PM

ಖ್ಯಾತ ನಟ ವಿಜಯ್ ರಾಘವೇಂದ್ರ ಅವರ ಹೊಸ ಸಿನಿಮಾ ‘ಶ್ರೀಮತಿ ಸಿಂಧೂರ’ (Srimathi Sindhura) ಬಿಡುಗಡೆಗೆ ಸಿದ್ಧವಾಗುತ್ತಿದೆ. ‘ಆರ್ ಆ್ಯಂಡ್ ಆರ್ ಎಂಟರ್‌ಪ್ರೈಸಸ್’ ಮೂಲಕ ಸಿನಿಮಾ ನಿರ್ಮಾಣ ಆಗಿದೆ. ರಿಯಲ್ ಎಸ್ಟೆಟ್ ಉದ್ಯಮಿ ಡಿ.ಎನ್. ನಾಗೀರೆಡ್ಡಿ ಅವರು ಕಥೆ ಬರೆದು ನಿರ್ಮಾಣ ಮಾಡಿದ್ದಾರೆ. ಆರ್. ಅನಂತರಾಜು ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ವಿಜಯ್ ರಾಘವೇಂದ್ರ (Vijay Raghavendra) ಜೊತೆ ನಾಯಕಿಯಾಗಿ ಪ್ರಿಯಾ ಹೆಗಡೆ ಅವರು ಅಭಿನಯಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟೀಸರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಲಾಯಿತು.

ಡಿ.ಎನ್. ಲಿಯೋ ಮನೋಜ್, ಸಹ ನಿರ್ಮಾಪಕ ಡಿ.ಎನ್. ಜೈ ನಾರಾಯಾಣ್, ಗಣೇಶ್‌ ರಾವ್ ಕೇಸರಕರ್, ರೇಷ್ಮಾ ವಿ. ಗೌಡ, ಸಾಹಿತಿ ಕವಿರಾಜ್, ಪ್ರಸನ್ನ ಬಾಗೀನ, ಉಗ್ರಂ ರವಿ, ಮಾಸ್ಟರ್ ಮೌರ್ಯ, ನೃತ್ಯ ಸಂಯೋಜಕ ಫೈವ್‌ ಸ್ಟಾರ್ ಗಣೇಶ್, ಗಂಗಾಧರ್ ಅವರು ಟೀಸರ್ ಮತ್ತು ಹಾಡುಗಳ ಬಿಡುಗಡೆಯ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.

‘ಶ್ರೀಮತಿ ಸಿಂಧೂರ’ ಸಿನಿಮಾದ ಹಾಡು:

Allondu Illondu Video Song | Shrimathi Sindhoora | Vijay Raghavendra | Priya Hegde | Rajesh Ramnath

ಈ ವೇಳೆ ನಟ ವಿಜಯ್ ರಾಘವೇಂದ್ರ ಅವರು ಮಾತನಾಡಿದರು. ‘ನಿರ್ಮಾಪಕರು ಹರಸಾಹಸ ಮಾಡಿದ್ದಾರೆ. ಮನೆಗೆ ಬಂದು ನಿರ್ದೇಶಕರು ಸಾರಾಂಶ ಹೇಳಿದಾಗ, ಸಿನಿಮಾ ನೋಡಿದಂತೆ ಭಾಸವಾಯಿತು. ಈಗಿನ ಸಿನಿಮಾಗಳ ಟ್ರೆಂಡ್ ಹೊಡಿ, ಬಡಿ, ಹಾರರ್, ಥ್ರಿಲ್ಲರ್ ಎಂದು ಹೇಳುತ್ತದೆ. ಇವುಗಳ ಮಧ್ಯೆ ಅಪ್ಪಟ ಕುಟುಂಬಸಮೇತ ಮನಸ್ಸಿಗೆ ಮುದ ನೀಡುವ ಸಿನಿಮಾ ಇದಾಗಿದೆ. ಇದನ್ನು ಯಾವುದೇ ವರ್ಗಕ್ಕೆ ಬೇಕಾದರೂ ಸೇರಿಸಬಹುದು. ಯಾವ ಕಾಲಕ್ಕಾದರೂ ಜನರು ಇಂತಹ ಚಿತ್ರವನ್ನು ಇಷ್ಟಪಡುತ್ತಾರೆ’ ಎಂದು ಅವರು ಹೇಳಿದರು.

Srimathi Sindhura Movie Team (1)

Srimathi Sindhura Movie Team

ನಿರ್ಮಾಪಕರಿಗೆ ಈ ಸಿನಿಮಾ 20 ವರ್ಷಗಳ ಕನಸು. ‘ಸಿನಿಮಾ ಕಾರ್ಮಿಕರಿಗೆ ಏನಾದರೂ ಕೆಲಸ ಕೊಡಬೇಕೆಂಬ ಒಳ್ಳೆಯ ಉದ್ದೇಶದಿಂದ ಬಂಡವಾಳ ಹೂಡಿದ್ದೇನೆ. ಆಂಜನೇಯನ ಹಾಡು ಸಿನಿಮಾದ ಹೈಲೈಟ್. ಕೈಲಾಶ್‌ ಖೇರ್ ಅವರು ಈ ಗೀತೆ ಹಾಡಿ ಇದು ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ. ಇಡೀ ಇಂಡಿಯಾಗೆ ಹಾಡಿದ್ದೇನೆಂದು ಸಂತಸ ಪಟ್ಟರು. ಇದೊಂದು ಪಕ್ಕಾ ಕೌಟುಂಬಿಕ ಮನರಂಜನೆಯಿಂದ ಕೂಡಿದ ಸಿನಿಮಾ’ ಎಂದು ಅವರು ಹೇಳಿದರು.

ಇದನ್ನೂ ಓದಿ: ವಿಜಯ್ ರಾಘವೇಂದ್ರ ಟಾರ್ಚರ್​​ಗೆ ಸುಸ್ತಾದ ಅನುಶ್ರೀ; ಕೊನೆಗೂ ಮೂಡಿತು ನಗು

ಕವಿರಾಜ್, ಕೆ. ಕಲ್ಯಾಣ್ ಮತ್ತು ನಿರ್ದೇಶಕ ಆರ್. ಅನಂತರಾಜು ಅವರು ಹಾಹಿತ್ಯ ಬರೆದಿದ್ದಾರೆ. ರಾಜೇಶ್‌ ರಾಮನಾಥ್ ಅವರು ಸಂಗೀತ ಸಂಯೋಜಿಸಿದ್ದಾರೆ. ಪಿ.ಕೆ.ಹೆಚ್. ದಾಸ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಆರ್. ಗಂಗಾಧರ್ ಅವರು ಕೆಲಸ ಮಾಡಿದ್ದಾರೆ. ಮೂಡಿಗೆರೆ, ಸಕಲೇಶಪುರ, ಚಿಕ್ಕಮಗಳೂರು ಮುಂತಾದ ಕಡೆಗಳಲ್ಲಿ ಶೂಟಿಂಗ್ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us