ಅಕ್ಷಯ್​​ ಬಳಿಕ ಯಶ್​ಗೆ ಪಾನ್​ ಮಸಾಲ ಆಫರ್; ಎಷ್ಟು ಕೋಟಿ ಕೊಟ್ರೂ ಈ ಕೆಲಸ ಮಾಡಲ್ಲ ಎಂದ ನಟ​

| Updated By: ಮದನ್​ ಕುಮಾರ್​

Updated on: Apr 30, 2022 | 1:04 PM

Vimal Pan Masala | Yash: ಸಿನಿಮಾ ಮಾತ್ರವಲ್ಲದೇ ಜಾಹೀರಾತು ಕ್ಷೇತ್ರದಲ್ಲೂ ಯಶ್​ ಅವರಿಗೆ ಸಖತ್​ ಡಿಮ್ಯಾಂಡ್​ ಇದೆ. ಆದರೆ ಆಯ್ಕೆಗಳ ವಿಚಾರದಲ್ಲಿ ಅವರು ತಮ್ಮದೇ ನಿಲುವು ಹೊಂದಿದ್ದಾರೆ.

ಅಕ್ಷಯ್​​ ಬಳಿಕ ಯಶ್​ಗೆ ಪಾನ್​ ಮಸಾಲ ಆಫರ್; ಎಷ್ಟು ಕೋಟಿ ಕೊಟ್ರೂ ಈ ಕೆಲಸ ಮಾಡಲ್ಲ ಎಂದ ನಟ​
ಅಕ್ಷಯ್​ ಕುಮಾರ್​, ಯಶ್
Follow us on

​‘ರಾಕಿಂಗ್​ ಸ್ಟಾರ್​’ ಯಶ್ ಅವರು ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಮಿಂಚುತ್ತಿದ್ದಾರೆ. ಈಗ ಅವರು ‘ಕೆಜಿಎಫ್​: ಚಾಪ್ಟರ್​ 2’ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ಯಶ್ (Yash)​ ಜೊತೆ ಕೆಲಸ ಮಾಡಲು ದೊಡ್ಡ ದೊಡ್ಡ ಪ್ರೊಡಕ್ಷನ್​ ಕಂಪನಿಗಳು ಕಾದಿವೆ. ಹಾಗೆಯೇ ಅನೇಕ ಬ್ರ್ಯಾಂಡ್​ಗಳಿಂದಲೂ ಅವರಿಗೆ ಆಫರ್​ ಬರುತ್ತಿದೆ. ಆದರೆ ಅವುಗಳನ್ನು ಒಪ್ಪಿಕೊಳ್ಳುವಲ್ಲಿ ಯಶ್​ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಜಾಹೀರಾತುಗಳಲ್ಲಿ ನಟಿಸಿದರೆ ಸ್ಟಾರ್​ ಕಲಾವಿದರಿಗೆ ಬಹುಕೋಟಿ ರೂಪಾಯಿ ಸಂಭಾವನೆ ಸಿಗುತ್ತದೆ. ಆದರೆ ಜನರಿಗೆ ತಪ್ಪು ಸಂದೇಶ ನೀಡಿದರೆ ತೀವ್ರ ಟೀಕೆಗೂ ಗುರಿಯಾಗಬೇಕಾಗುತ್ತದೆ. ಇತ್ತೀಚೆಗೆ ನಟ ಅಕ್ಷಯ್​ ಕುಮಾರ್​ (Akshay Kumar) ಅವರು ವಿಮಲ್​ ಪಾನ್​ ಮಸಾಲ (Vimal Pan Masala) ಜಾಹೀರಾತಿನಲ್ಲಿ ನಟಿಸಿದ್ದಕ್ಕೆ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ನಟ ಯಶ್​ ಅವರು ಈ ವಿಚಾರದಲ್ಲಿ ಹೆಚ್ಚು ಎಚ್ಚರಿಕೆ ವಹಿಸಿದ್ದಾರೆ.​ ಪಾನ್ ಮಸಾಲ ಕಂಪನಿಯಿಂದ ಬಂದ ಆಫರ್​ ಅನ್ನು ಅವರು ಮುಲಾಜಿಲ್ಲದೇ ತಿರಸ್ಕರಿಸಿದ್ದಾರೆ ಎಂಬ ಸುದ್ದಿ ಹೇಳಿಬಂದಿದೆ. ಈ ಬಗ್ಗೆ ‘ಹಿಂದುಸ್ತಾನ್​ ಟೈಮ್ಸ್​’ ವರದಿ ಪ್ರಕಟ ಮಾಡಿದೆ.

ಯಶ್​ ಅವರು ಈಗಾಗಲೇ ಕೆಲವು ಬ್ರ್ಯಾಂಡ್​ಗಳಿಗೆ ಪ್ರಚಾರ ರಾಯಭಾರಿ ಆಗಿದ್ದಾರೆ. ಅವುಗಳಿಂದ ಅವರಿಗೆ ಕೈ ತುಂಬ ಸಂಭಾವನೆ ಸಿಗುತ್ತದೆ. ಹಾಗಂತ ಸಿಕ್ಕ ಸಿಕ್ಕ ಆಫರ್​ಗಳನ್ನೆಲ್ಲ ಅವರು ಒಪ್ಪಿಕೊಳ್ಳುವುದಿಲ್ಲ. ಈ ವಿಚಾರಗಳನ್ನು ಮ್ಯಾನೇಜ್​ ಮಾಡಲು ಒಂದು ಕಂಪನಿ (Exceed Entertainment) ಜೊತೆ ಅವರು ಕೈ ಜೋಡಿಸಿದ್ದಾರೆ. ಆ ಕಂಪನಿಯ ಮುಖ್ಯಸ್ಥರು ನೀಡಿದ ಹೇಳಿಕೆ ಆಧರಿಸಿ ಈ ವರದಿ ಪ್ರಕಟ ಆಗಿದೆ.

‘ಈಗ ನಾವು ದೀರ್ಘಕಾಲದ ಸಹಯೋಗದ ಬಗ್ಗೆ ಆಲೋಚಿಸುತ್ತಿದ್ದೇನೆ. ಇತ್ತೀಚೆಗೆ ನಾವು ಎರಡಂಕಿಯ ಬಹುಕೋಟಿ ರೂಪಾಯಿ ಡೀಲ್​ ತಿರಸ್ಕರಿಸಿದೆವು. ಅದು ಪಾನ್​ ಮಸಾಲ ಕಂಪನಿಯ ಜಾಹೀರಾತು ಆಗಿತ್ತು. ಯಾರ ಜೊತೆ ನಾವು ಕೈಜೋಡಿಸುತ್ತೇವೆ ಎಂಬ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸುತ್ತಿದ್ದೇವೆ. ಯಶ್​ ಅವರಿಗೆ ಇರುವ ಪ್ಯಾನ್​ ಇಂಡಿಯಾ ಮಟ್ಟದ ಜನಪ್ರಿಯತೆಯನ್ನು ಗಮನದಲ್ಲಿ ಇಟ್ಟುಕೊಂಡು ಅಭಿಮಾನಿಗಳಿಗೆ ಸರಿಯಾದ ಸಂದೇಶ ನೀಡಲು ಪ್ರಯತ್ನಿಸುತ್ತಿದ್ದೇವೆ’ ಎಂದು Exceed Entertainment ಮ್ಯಾನೇಜರ್​ ಅರುಣ್​ ಬ್ಯಾನರ್ಜಿ ಹೇಳಿದ್ದಾರೆ.

ವಿಮಲ್​ ಪಾನ್​ ಮಸಾಲ ಜಾಹೀರಾತಿನಲ್ಲಿ ಅಕ್ಷಯ್​ ಕುಮಾರ್​, ಶಾರುಖ್​ ಖಾನ್​ ಜಾಗೂ ಅಜಯ್​ ದೇವಗನ್​ ಕಾಣಿಸಿಕೊಂಡಿದ್ದಾರೆ. ಜನರ ಟೀಕೆ ಬಗ್ಗೆ ಅಜಯ್​ ದೇವಗನ್​ ಮತ್ತು ಶಾರುಖ್​ ಖಾನ್​ ತಲೆ ಕೆಡಿಸಿಕೊಂಡಿಲ್ಲ. ಆದರೆ ಅಕ್ಷಯ್ ಕುಮಾರ್​ ಅವರು ಅಭಿಮಾನಿಗಳ ಭಾವನೆಗೆ ಗೌರವ ನೀಡಿ, ಈ ಜಾಹೀರಾತಿನಿಂದ ಹೊರಬಂದಿದ್ದಾರೆ. ಈ ಕುರಿತು ಅವರು ಇತ್ತೀಚೆಗೆ ಪೋಸ್ಟ್​ ಮಾಡಿದ್ದರು.

‘ನನ್ನನ್ನು ಕ್ಷಮಿಸಿ.. ಎಲ್ಲ ಅಭಿಮಾನಿಗಳು ಮತ್ತು ಹಿತೈಷಿಗಳಲ್ಲಿ ನಾನು ಕ್ಷಮೆ ಕೇಳುತ್ತೇನೆ. ಕಳೆದ ಕೆಲವು ದಿನಗಳಿಂದ ನೀವು ನೀಡಿದ ಪ್ರತಿಕ್ರಿಯೆಗಳು ನನ್ನಲ್ಲಿ ಆಳವಾದ ಪರಿಣಾಮ ಬೀರಿವೆ. ನಾನು ತಂಬಾಕು ಸೇವನೆಯನ್ನು ಉತ್ತೇಜಿಸುವುದಿಲ್ಲ. ವಿಮಲ್​ ಜೊತೆ ನಾನು ಕೈ ಜೋಡಿಸಿರುವುದರ ಕುರಿತು ನಿಮ್ಮ ಪ್ರತಿಕ್ರಿಯೆಗಳನ್ನು ನಾನು ಗೌರವಿಸುತ್ತೇನೆ. ಮಾನವೀಯತೆಯ ಕಾರಣಕ್ಕೆ ನಾನು ಈ ಜಾಹೀರಾತಿನಿಂದ ಹಿಂದೆ ಸರಿಯುತ್ತೇನೆ. ಒಳ್ಳೆಯ ಉದ್ದೇಶಕ್ಕೆ ಇದರ ಸಂಭಾವನೆಯನ್ನು ನೀಡಲು ನಿರ್ಧರಿಸಿದ್ದೇನೆ. ಈಗಾಗಲೇ ಮಾಡಿಕೊಂಡ ಒಪ್ಪಂದದ ಅವಧಿ ಮುಗಿಯುವವರೆಗೂ ಬ್ರ್ಯಾಂಡ್​ನವರು ಆ ಜಾಹೀರಾತನ್ನು ಪ್ರಸಾರ ಮಾಡಬಹುದು. ಆದರೆ ಮುಂಬರುವ ದಿನಗಳಲ್ಲಿ ನಾನು ಜಾಹೀರಾತುಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಎಚ್ಚರಿಕೆ ವಹಿಸುತ್ತೇನೆ. ಸದಾ ನಿಮ್ಮ ಪ್ರೀತಿ ಮತ್ತು ಹಾರೈಕೆ ಬಯಸುತ್ತೇನೆ’ ಎಂದು ಅಕ್ಷಯ್​ ಕುಮಾರ್​ ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.