AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಮಲ್​ ಜಾಹೀರಾತಿನಲ್ಲಿ ನಟಿಸಿದ ಅಕ್ಷಯ್​ ಕುಮಾರ್​ಗೆ ಜನರಿಂದ ಭಾರಿ ವಿರೋಧ; ಕ್ಷಮೆ ಕೇಳಿ ಹಿಂದೆ ಸರಿದ ನಟ

Akshay Kumar | Gutka: ಅಕ್ಷಯ್​ ಕುಮಾರ್​ ಅವರು ವಿಮಲ್​ ಜಾಹೀರಾತಿನಲ್ಲಿ ನಟಿಸಿರುವುದು ಅವರ ಅಭಿಮಾನಿಗಳಿಗೆ ಬೇಸರ ತಂದಿದೆ. ಭಾರಿ ವಿರೋಧ ವ್ಯಕ್ತವಾದ ಬಳಿಕ ಅಕ್ಷಯ್​ ಕುಮಾರ್​ ಕ್ಷಮೆ ಕೇಳಿದ್ದಾರೆ.

ವಿಮಲ್​ ಜಾಹೀರಾತಿನಲ್ಲಿ ನಟಿಸಿದ ಅಕ್ಷಯ್​ ಕುಮಾರ್​ಗೆ ಜನರಿಂದ ಭಾರಿ ವಿರೋಧ; ಕ್ಷಮೆ ಕೇಳಿ ಹಿಂದೆ ಸರಿದ ನಟ
ಅಕ್ಷಯ್ ಕುಮಾರ್
Follow us
TV9 Web
| Updated By: ಮದನ್​ ಕುಮಾರ್​

Updated on: Apr 21, 2022 | 8:18 AM

ಸಿನಿಮಾ ನಟರಿಗೆ ರಿಯಲ್​ ಲೈಫ್​ನಲ್ಲಿಯೂ ಒಂದು ಇಮೇಜ್​ ಇರುತ್ತದೆ. ಅದಕ್ಕೆ ಧಕ್ಕೆ ಆಗದಂತೆ ನಡೆದುಕೊಳ್ಳುವುದು ಆಯಾ ನಟರ ಹೊಣೆ. ಒಂದು ವೇಳೆ ಸ್ವಲ್ಪ ಎಡವಿದರೂ ಕೂಡ ಅಭಿಮಾನಿಗಳೇ ಚಾಟಿ ಬೀಸುತ್ತಾರೆ. ನಟ ಅಕ್ಷಯ್​ ಕುಮಾರ್​ (Akshay Kumar) ಅವರ ವಿಚಾರದಲ್ಲಿ ಈ ಮಾತು ಪುನಃ ಸಾಬೀತಾಗಿದೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಹ ಸಿನಿಮಾಗಳನ್ನು ಮಾಡುವ ಅಕ್ಷಯ್​ ಕುಮಾರ್ ಅವರು ಈಗ ಏಕಾಏಕಿ ಗುಟ್ಕಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣ ಆಗಿದೆ. ಹೌದು, ‘ವಿಮಲ್​ ಪಾನ್​ ಮಸಾಲ’ (Vimal Elaichi) ಜಾಹೀರಾತಿನಲ್ಲಿ ಅಕ್ಷಯ್​ ಕುಮಾರ್​ ನಟಿಸಿದ್ದಾರೆ. ಆ ಜಾಹೀರಾತು ಪ್ರಸಾರ ಆಗಲು ಶುರುವಾದಾಗಿನಿಂದ ಜನರು ಭಾರಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸದಾ ಕಾಲ ಫಿಟ್​ನೆಸ್ ಬಗ್ಗೆ ಮಾತನಾಡುವ, ಶಿಸ್ತಿನ ಜೀವನ ನಡೆಸುವ, ಇತರರಿಗೂ ಮಾದರಿ ಆಗಿರುವ ಅಕ್ಷಯ್​ ಕುಮಾರ್​ ಅವರು ಈ ರೀತಿ ಗುಟ್ಕಾ ಜಾಹೀರಾತಿನಲ್ಲಿ ನಟಿಸಿರುವುದು ಸರಿಯಲ್ಲ ಎಂದು ಜನರು ಕಮೆಂಟ್​ ಮಾಡುತ್ತಿದ್ದಾರೆ. ಅದರ ಬೆನ್ನಲ್ಲೇ ಅಕ್ಷಯ್​ ಕುಮಾರ್​ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ವಿಮಲ್​ ಜಾಹೀರಾತಿನಲ್ಲಿ (Vimal Elaichi advertisement) ಇನ್ಮುಂದೆ ನಟಿಸುವುದಿಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ. ಅಲ್ಲದೇ, ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ.

ಅಷ್ಟಕ್ಕೂ ಅಭಿಮಾನಿಗಳು ಈ ಪರಿ ವಿರೋಧ ವ್ಯಕ್ತಪಡಿಸಲು ಕಾರಣ ಇದೆ. ಈ ಹಿಂದೆ ಅಕ್ಷಯ್​ ಕುಮಾರ್​ ಅವರು ‘ಸ್ವಸ್ಥ ಭಾರತ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ದೊಡ್ಡದಾಗಿ ಭಾಷಣ ಬಿಗಿದಿದ್ದರು. ‘ನನಗೆ ದೊಡ್ಡ ದೊಡ್ಡ ಗುಟ್ಕಾ ಕಂಪನಿಗಳಿಂದ ಆಫರ್​ ಬರುತ್ತದೆ. ಅದರ ಜಾಹೀರಾತಿನಲ್ಲಿ ನಟಿಸಿದರೆ ನನಗೆ ಭಾರಿ ಪ್ರಮಾಣದ ಸಂಭಾವನೆ ನೀಡಲು ರೆಡಿ ಇರುತ್ತಾರೆ. ಆದರೆ ನಾನು ಅಂಥ ತಪ್ಪು ಕೆಲಸ ಮಾಡುವುದಿಲ್ಲ’ ಎಂದು ಅವರು ಹೇಳಿದ್ದರು. ಆ ಮಾತನ್ನು ಈಗ ಜನರು ಮತ್ತೆ ನೆನಪಿಸುತ್ತಿದ್ದಾರೆ. ಹಳೇ ವಿಡಿಯೋವನ್ನು ಶೇರ್​ ಮಾಡಿ, ಅಕ್ಷಯ್​ ಕುಮಾರ್​ಗೆ ಕಿವಿ ಹಿಂಡುತ್ತಿದ್ದಾರೆ.

ಜನರಿಂದ ಭಾರಿ ವಿರೋಧ ವ್ಯಕ್ತವಾದ ಬಳಿಕ ಅಕ್ಷಯ್​ ಕುಮಾರ್​ ಅವರ ಮನಸ್ಸು ಬದಲಾಗಿದೆ. ಆ ಕುರಿತು ಅವರು ಅಭಿಮಾನಿಗಳಲ್ಲಿ ಕ್ಷಮೆ ಕೇಳಿ, ಬಹಿರಂಗವಾಗಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ‘ನನ್ನನ್ನು ಕ್ಷಮಿಸಿ.. ಎಲ್ಲ ಅಭಿಮಾನಿಗಳು ಮತ್ತು ಹಿತೈಷಿಗಳಲ್ಲಿ ನಾನು ಕ್ಷಮೆ ಕೇಳುತ್ತೇನೆ. ಕಳೆದ ಕೆಲವು ದಿನಗಳಿಂದ ನೀವು ನೀಡಿದ ಪ್ರತಿಕ್ರಿಯೆಗಳು ನನ್ನಲ್ಲಿ ಆಳವಾದ ಪರಿಣಾಮ ಬೀರಿವೆ. ನಾನು ತಂಬಾಕು ಸೇವನೆಯನ್ನು ಉತ್ತೇಜಿಸುವುದಿಲ್ಲ. ವಿಮಲ್​ ಜೊತೆ ನಾನು ಕೈ ಜೋಡಿಸಿರುವುದರ ಕುರಿತು ನಿಮ್ಮ ಪ್ರತಿಕ್ರಿಯೆಗಳನ್ನು ನಾನು ಗೌರವಿಸುತ್ತೇನೆ. ಮಾನವೀಯತೆಯ ಕಾರಣಕ್ಕೆ ನಾನು ಈ ಜಾಹೀರಾತಿನಿಂದ ಹಿಂದೆ ಸರಿಯುತ್ತೇನೆ. ಒಳ್ಳೆಯ ಉದ್ದೇಶಕ್ಕೆ ಇದರ ಸಂಭಾವನೆಯನ್ನು ನೀಡಲು ನಿರ್ಧರಿಸಿದ್ದೇನೆ. ಈಗಾಗಲೇ ಮಾಡಿಕೊಂಡ ಒಪ್ಪಂದದ ಅವಧಿ ಮುಗಿಯುವವರೆಗೂ ಬ್ರ್ಯಾಂಡ್​ನವರು ಆ ಜಾಹೀರಾತನ್ನು ಪ್ರಸಾರ ಮಾಡಬಹುದು. ಆದರೆ ಮುಂಬರುವ ದಿನಗಳಲ್ಲಿ ನಾನು ಜಾಹೀರಾತುಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಎಚ್ಚರಿಕೆ ವಹಿಸುತ್ತೇನೆ. ಸದಾ ನಿಮ್ಮ ಪ್ರೀತಿ ಮತ್ತು ಹಾರೈಕೆ ಬಯಸುತ್ತೇನೆ’ ಎಂದು ಅಕ್ಷಯ್​ ಕುಮಾರ್​ ಸೋಶಿಯಲ್​ ಮೀಡಿಯಾ ಮೂಲಕ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.

ವಿಮಲ್​ ಜಾಹೀರಾತಿನಲ್ಲಿ ಅಕ್ಷಯ್​ ಕುಮಾರ್​ ಜೊತೆ ಅಜಯ್​ ದೇವಗನ್​ ಹಾಗೂ ಶಾರುಖ್​ ಖಾನ್​ ಕೂಡ ನಟಿಸಿದ್ದಾರೆ. ಅವರ ಬಗ್ಗೆಯೂ ಜನರು ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಆದರೆ ಆ ನಟರಿಬ್ಬರು ತಮ್ಮ ನಿರ್ಧಾರ ಬದಲಾಯಿಸಿಲ್ಲ. ಜಾಹೀರಾತಿನಿಂದ ಹಿಂದೆ ಸರಿದಿದ್ದಕ್ಕೆ ಅಕ್ಷಯ್​ ಕುಮಾರ್​ಗೆ ಜನರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ:

ಸೌದಿ ಮಿನಿಸ್ಟರ್​ ಜೊತೆ ಶಾರುಖ್​, ಸಲ್ಮಾನ್​​, ಅಕ್ಷಯ್​ ಕುಮಾರ್​ ಪೋಸ್; ಏನಿದು ಸಮಾಚಾರ?

ಗೋಮಾತೆ ಜೊತೆ ಅಕ್ಷಯ್​ ಕುಮಾರ್​ ಪುತ್ರಿ; ಮಕ್ಕಳಿಗೆ ಈ ಅನುಭವ ಬೇಕು ಎಂದ ಸ್ಟಾರ್​ ನಟ