ತಮ್ಮದೇ ಸಿನಿಮಾ ನೋಡಿ ಗಳಗಳನೆ ಅತ್ತಿದ್ದ ವಿಷ್ಣುವರ್ಧನ್; ಕಣ್ಣೀರು ನಿಲ್ಲಲೇ ಇಲ್ಲ
Vishnuvardhan Birthday: ವಿಷ್ಣುವರ್ಧನ್ ಅವರ 75ನೇ ಜನ್ಮದಿನಾಚರಣೆಯಂದು, ಅವರ ಅಭಿಮಾನಿಗಳು ಅವರ ಅಪ್ರತಿಮ ನಟನೆಯನ್ನು ನೆನಪಿಸಿಕೊಳ್ಳುತ್ತಿದ್ದಾರೆ. ‘ಜೀವನ ಚಕ್ರ’ ಚಿತ್ರವು ವಿಷ್ಣುವರ್ಧನ್ ಅವರನ್ನು ಭಾವನಾತ್ಮಕವಾಗಿ ತಲುಪಿದ ಚಿತ್ರವಾಗಿದೆ. ತೆಲುಗು ಮತ್ತು ತಮಿಳು ರಿಮೇಕ್ಗಳಿಂದ ಭಿನ್ನವಾಗಿ, ಭಾರ್ಗವ್ ಅವರು ಚಿತ್ರಕ್ಕೆ ಭಾವನಾತ್ಮಕ ಅಂತ್ಯವನ್ನು ನೀಡಿದ್ದಾರೆ.

ವಿಷ್ಣುವರ್ಧನ್ (Vishnuvardhan) ಅವರಿಗೆ ಇಂದು (ಸೆಪ್ಟೆಂಬರ್ 17) ಜನ್ಮದಿನ. ಈ ವಿಶೇಷ ದಿನದಂದು ಅವರನ್ನೂ ಎಲ್ಲರೂ ನೆನಪಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಅವರು ಇದ್ದಿದ್ದರೆ 75ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ, ಅವರಿಲ್ಲದೆ ಅಭಿಮಾನಿಗಳು ಬರ್ತ್ಡೇ ಆಚರಿಸಿಕೊಳ್ಳಬೇಕಿದೆ. ವಿಷ್ಣು ಬದುಕಿದ್ದಾಗ ಹಲವು ಹಿಟ್ ಚಿತ್ರಗಳನ್ನು ನೀಡಿದ್ದರು. ವಿಶೇಷ ಎಂದರೆ ವಿಷ್ಣು ವರ್ಧನ್ ಅವರು ತಾವೇ ಮಾಡಿದ ಸಿನಿಮಾ ನೋಡಿ ಕಣ್ಣೀರು ಹಾಕಿದ್ದರು. ಆ ಚಿತ್ರದ ಹೆಸರು ‘ಜೀವನ ಚಕ್ರ’. ಆ ಬಗ್ಗೆ ಇಂದು ನೆನಪಿಸಿಕೊಳ್ಳೋಣ.
19985ರಲ್ಲಿ ‘ಜೀವನ ಚಕ್ರ’ ಚಿತ್ರವು ತೆರೆಗೆ ಬಂತು. ಇದು ಕನ್ನಡದ ಸಿನಿಮಾ. ಈ ಚಿತ್ರವನ್ನು ಎಚ್ ಭಾರ್ಗವ್ ಅವರು ನಿರ್ದೇಶನ ಮಾಡಿದ್ದರು. 1983ರ ತೆಲುಗು ಚಿತ್ರ ‘ಧರ್ಮಾತ್ಮುಡು’ ಚಿತ್ರದ ರಿಮೇಕ್ ಇದಾಗಿದೆ. ತೆಲುಗಿನಲ್ಲಿ ಕೃಷ್ಣಂ ರಾಜು ಹಾಗೂ ಜಯಸುಧಾ ನಟಿಸಿದ್ದರು. 1984ರಲ್ಲಿ ತಮಿಳಿಗೆ ‘ನಲ್ಲವಕು ನಲ್ಲವಾನ್’ ಹೆಸರಿನಲ್ಲಿ ರಿಮೇಕ್ ಆಯಿತು. ರಜನಿಕಾಂತ್ ಹಾಗೂ ರಾಧಿಕಾ ಇದರಲ್ಲಿ ನಟಿಸಿದ್ದರು. ತಮಿಳಿನಲ್ಲಿ ಸಿನಿಮಾ ನೋಡಿ ಇಷ್ಟಪಟ್ಟರು ಭಾರ್ಗವ್.
ಕನ್ನಡಕ್ಕೆ ಈ ಸಿನಿಮಾ ಮಾಡಲು ಭಾರ್ಗವ್ ನಿರ್ಧರಿಸಿದರು. ಅಂತೆಯೇ ಸಿನಿಮಾ ಮಾಡಿಯೇ ಬಿಟ್ಟರು. ವಿಷ್ಣುವರ್ಧನ್ ಈ ಚಿತ್ರಕ್ಕೆ ಹೀರೋ ಆದರು. ತಮಿಳಿನಲ್ಲಿ ನಟಿಸಿದ್ದ ರಾಧಿಕಾ ಅವರನ್ನೇ ಈ ಚಿತ್ರಕ್ಕೂ ಕರೆತರಲಾಯಿತು. ಈ ಸಿನಿಮಾ ನೋಡಿದ ಬಳಿಕ ವಿಷ್ಣುವರ್ಧನ್ ಗಳಗಳನೆ ಅತ್ತರು. ಅವರು ಎರಡರಿಂದ ಮೂರು ಬಾರಿ ಸಿನಿಮಾ ವೀಕ್ಷಿಸಿದರಂತೆ. ಈ ವಿಚಾರವನ್ನು ಭಾರ್ಗವ್ ಅವರು ಕಲಾ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ಇದನ್ನೂ ಓದಿ: ವಿಷ್ಣು ನಟನೆಯ ‘ಬಂಧನ’ ಸಿನಿಮಾ ತಡೆಯಲು ಮಾಡಿದ ಪ್ರಯತ್ನಗಳು ಒಂದೆರಡಲ್ಲ
‘ಜೀವನ ಚಕ್ರ’ ಸಿನಿಮಾ ಆಗಿನ ಕಾಲಕ್ಕೆ ದೊಡ್ಡ ಗೆಲುವು ತಂದು ಕೊಟ್ಟಿತ್ತು. ಭಾವನಾತ್ಮಕವಾಗಿ ಸಿನಿಮಾ ಮೂಡಿ ಬಂದಿತ್ತು. ತೆಲುಗು ಹಾಗೂ ತಮಿಳಿನಲ್ಲಿ ಸಿನಿಮಾ ಕೊನೆಯಲ್ಲಿ ಫೈಟ್ ಇತ್ತಂತೆ. ಅದನ್ನು ಭಾರ್ಗವ್ ಇಡಲಿಲ್ಲ. ಬದಲಿಗೆ ಒಂದು ಭಾವನಾತ್ಮಕ ಟಚ್ ಜೊತೆ ಸಿನಿಮಾನ ಕೊನೆಗೊಳಿಸಿದ್ದರು. ಈ ಕಾರಣಕ್ಕೆ ಕನ್ನಡದಲ್ಲಿ ಈ ಸಿನಿಮಾ ಮತ್ತಷ್ಟು ಇಷ್ಟ ಆಯಿತು ಎಂಬುದು ಅವರ ಅಭಿಪ್ರಾಯ. ಈ ಸಿನಿಮಾ ರಿಲೀಸ್ ಆಗಿ 40 ವರ್ಷಗಳೇ ಕಳೆದು ಹೋಗಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







