ಅಪ್ಪು, ಅಣ್ಣಾವ್ರ ಸಮಾಧಿಗೆ ನಮಿಸಿದ ಯಶ್ ತಾಯಿ ಪುಷ್ಪ; ಸಿನಿಮಾ ಬಗ್ಗೆ ನೇರ ಮಾತು

ಡಾ. ರಾಜ್​ಕುಮಾರ್ ಹಾಗೂ ಪುನೀತ್ ರಾಜ್​ಕುಮಾರ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಪುಷ್ಪ ಅವರು ಮಾತನಾಡಿದರು. ‘ಕೊತ್ತಲವಾಡಿ’ ಸಿನಿಮಾಗೆ ಬಂಡವಾಳ ಹೂಡಿರುವ ಅವರು ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅಣ್ಣಾವ್ರ ಸಮಾಧಿಯೇ ದೇವಸ್ಥಾನ ಇದ್ದಂತೆ ಎಂದು ಅವರು ಹೇಳಿದ್ದಾರೆ.

ಅಪ್ಪು, ಅಣ್ಣಾವ್ರ ಸಮಾಧಿಗೆ ನಮಿಸಿದ ಯಶ್ ತಾಯಿ ಪುಷ್ಪ; ಸಿನಿಮಾ ಬಗ್ಗೆ ನೇರ ಮಾತು
Pushpa, Dr Rajkumar Samadhi

Updated on: Jul 02, 2025 | 10:37 AM

ನಟ ಯಶ್ ಅವರ ತಾಯಿ ಪುಷ್ಪ (Yash mother Pushpa) ಅವರು ನಿರ್ಮಾಪಕಿ ಆಗಿದ್ದಾರೆ. ಅವರು ನಿರ್ಮಿಸಿರುವ ಮೊದಲ ಸಿನಿಮಾ ‘ಕೊತ್ತಲವಾಡಿ’ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಸಿನಿಮಾದಲ್ಲಿ ಪೃಥ್ವಿ ಅಂಬಾರ್ ಅವರು ಹೀರೋ. ಈ ಚಿತ್ರದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇಂದು (ಜುಲೈ 2) ಪುನೀತ್ ರಾಜ್​ಕುಮಾರ್ (Puneeth Rajkumar) ಸಮಾಧಿಗೆ ಪುಷ್ಪ ಅವರು ಭೇಟಿ ನೀಡಿದ್ದಾರೆ. ಅಪ್ಪು ಸಮಾಧಿಗೆ ನಮಿಸಿದ ಬಳಿಕ ಅವರು ಸಿನಿಮಾ ಬಗ್ಗೆ ಮಾತನಾಡಿದರು.

‘ಇದೇ ನಮ್ಮ ದೇವಸ್ಥಾನ. ಕನ್ನಡ ಚಿತ್ರರಂಗಕ್ಕೆ ಬುನಾದಿ ಹಾಕಿಕೊಟ್ಟು, ನಮ್ಮನ್ನೆಲ್ಲ ಬೆಳೆಸಿ ಹೋದವರು ಅಣ್ಣಾವ್ರು. ಇವತ್ತಿನಿಂದ ನಮ್ಮ ಸಿನಿಮಾದ ಪ್ರಚಾರ ಶುರು. ಮೊದಲು ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿ ಕೆಲಸ ಆರಂಭಿಸೋಣ ಅಂತ ನಮ್ಮ ತಂಡದ ಜೊತೆ ಚರ್ಚೆ ಮಾಡಿದೆ. ಅವರು ಸರಿ ಎಂದರು’ ಎಂದಿದ್ದಾರೆ ಪುಷ್ಪ.

‘ಅಪ್ಪು ಅವರು ಕೂಡ ನಮ್ಮ ಮನೆ ಮಗ ಇದ್ದಂತೆ. ಆದರೆ ದೇವರ ಆಟ, ವಿಧಿ ಏನೂ ಮಾಡೋಕೆ ಆಗಲ್ಲ. ಪಾರ್ವತಮ್ಮನವರ ಆಶೀರ್ವಾದ ಇದೆ. ಯಶ್ 5 ತಿಂಗಳು ಮಗು ಆಗಿದ್ದಾಗ ಅನುರಾಗ ಅರಳಿತು ಸಿನಿಮಾ ತೋರಿಸಿದ್ದೆ. ನಮ್ಮ ಮೊಮ್ಮಗನಿಗೆ ಕಸ್ತೂರಿ ನಿವಾಸ ಹೊಸ ಪ್ರಿಂಟ್ ತೋರಿಸಿದ್ದೇನೆ. ನಮಗೆ ರಾಜ್​ಕುಮಾರ್ ಮೇಲೆ ಅಷ್ಟು ಅಭಿಮಾನ’ ಎಂದು ಪುಷ್ಪ ಅವರು ಹೇಳಿದ್ದಾರೆ.

ಇದನ್ನೂ ಓದಿ
ಬೆಳೆಸಿದ ವ್ಯಕ್ತಿಗಳ ಮೇಲೆ ಯಶ್​ಗೆ ಅದೆಂಥಾ ಗೌರವ; ಇಲ್ಲಿದೆ ಸಾಕ್ಷಿ
ಶಿವಣ್ಣನ ಮನೆಗೆ ಯಶ್-ರಾಧಿಕಾ ಪಂಡಿತ್ ಭೇಟಿ, ಇಲ್ಲಿವೆ ನೋಡಿ ಚಿತ್ರ
ರಾಕಿಂಗ್ ಸ್ಟಾರ್ ಯಶ್ ಈ ವ್ಯಕ್ತಿಗೆ ಬಾಸ್ ಎಂದು ಕರೆಯುತ್ತಾರೆ ಯಶ್
ಕಡಲ ತೀರದಲ್ಲಿ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ ಆಚರಣೆ: ಇಲ್ಲಿವೆ ಚಿತ್ರ

‘ಕೊತ್ತಲವಾಡಿ ಸಿನಿಮಾಗೆ ನಮ್ಮ ಪ್ರಚಾರದ ಪ್ಲ್ಯಾನ್ ಏನೂ ಇಲ್ಲ. ಜನರೇ ಪ್ರಚಾರ ಮಾಡುತ್ತಾರೆ. ನೀವು ಅಂದುಕೊಂಡ ತಕ್ಷಣ ಪ್ರಚಾರ ಆಗಲ್ಲ. ಇಲ್ಲಿ ನಮ್ಮದು ಏನೂ ನಡೆಯಲ್ಲ. ಇಷ್ಟ ಆಗಲಿಲ್ಲ ಎಂದರೆ ಇಂಥ ನೂರಾರು ಸಿನಿಮಾಗಳನ್ನು ಜನರು ಮೂಲೆಗೆ ಎಸೆಯುತ್ತಾರೆ. ಜನರಿಗೆ ಬುದ್ಧಿ ಇದೆ. ಪ್ರಚಾರ ಮಾಡಿದ ಮಾತ್ರಕ್ಕೆ ಜನರು ಬಂದು ಸಿನಿಮಾ ನೋಡುತ್ತಾರೆ ಅಂದುಕೊಂಡರೆ ನಾವು ತುಂಬಾ ದಡ್ಡರು’ ಎಂದಿದ್ದಾರೆ ಯಶ್ ತಾಯಿ ಪುಷ್ಪ.

ಇದನ್ನೂ ಓದಿ: ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ

‘ಸಿನಿಮಾ ಚೆನ್ನಾಗಿ ಇದ್ದರೆ ಜನರು ಚಿತ್ರಮಂದಿರದಲ್ಲಿ ನೋಡುತ್ತಾರೆ. ಮೊದಲ ಮೂರು ದಿನ ನಮಗೆ ಚಾನ್ಸ್ ಕೊಡುತ್ತಾರೆ. ಸಿನಿಮಾದಲ್ಲಿ ಕಂಟೆಂಟ್ ಇದ್ದರೆ ಜನರು ಬಾಯಿ ಮಾತಿನ ಪ್ರಚಾರ ನೀಡುತ್ತಾರೆ. ಇಲ್ಲದಿದ್ದರೆ, ನೆಗೆಟಿವ್ ಕೂಡ ಅಷ್ಟೇ ಬೇಗ ಮಾಡುತ್ತಾರೆ. ನಮ್ಮ ಮೊದಲ ಸಿನಿಮಾಗೆ ಜನರು ತಪ್ಪು-ಸರಿ ಎರಡನ್ನೂ ಹೇಳಲಿ. ನನ್ನ ಪ್ರಕಾರ ನಮ್ಮ ಡೈರೆಕ್ಟರ್ ಚೆನ್ನಾಗಿ ಮಾಡಿದ್ದಾರೆ. ನೀವೆಲ್ಲ ನೋಡಿ ಹೇಳಿ’ ಎಂಬುದು ಪುಷ್ಪ ಅವರ ಮಾತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us