‘ಟಾಕ್ಸಿಕ್’ ಪ್ರೀ-ರಿಲೀಸ್ ಇವೆಂಟ್ ವೇಳೆ ಸೌಂಡ್ ಬಾಕ್ಸ್ ಬಿದ್ದು ಅಭಿಮಾನಿಗಳಿಗೆ ಗಾಯ

ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಚಿತ್ರದಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಮುಂತಾದವರು ನಟಿಸಿದ್ದಾರೆ. ಆಗಸ್ಟ್ 26ರಂದು ಸಿನಿಮಾ ರಿಲೀಸ್ ಆಗಲಿದ್ದು, ಹೈದರಾಬಾದ್​ನಲ್ಲಿ ಅದ್ದೂರಿಯಾಗಿ ಪ್ರೀ-ರಿಲೀಸ್ ಇವೆಂಟ್ ಮಾಡಲಾಗಿದೆ. ಈ ವೇಳೆ ಅಭಿಮಾನಿಗಳ ಮೇಲೆ ಸೌಂಡ್ ಬಾಕ್ಸ್ ಬಿದ್ದಿದೆ.

‘ಟಾಕ್ಸಿಕ್’ ಪ್ರೀ-ರಿಲೀಸ್ ಇವೆಂಟ್ ವೇಳೆ ಸೌಂಡ್ ಬಾಕ್ಸ್ ಬಿದ್ದು ಅಭಿಮಾನಿಗಳಿಗೆ ಗಾಯ
Toxic Pre Release Event

Updated on: Aug 23, 2026 | 9:27 AM

‘ರಾಕಿಂಗ್ ಸ್ಟಾರ್’ ಯಶ್ (Yash) ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದ ಪ್ರೀ-ರಿಲೀಸ್ (Toxic Pre Release Event) ಕಾರ್ಯಕ್ರಮದಲ್ಲಿ ಒಂದು ಅನಾಹುತ ಸಂಭವಿಸಿದೆ. ಹೈದರಾಬಾದ್‌ನ ಮಲ್ಲಾರೆಡ್ಡಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಬೃಹತ್ ಕಾರ್ಯಕ್ರಮದಲ್ಲಿ ಸೌಂಡ್‌ಬಾಕ್ಸ್ ಮತ್ತು ಲೈಟಿಂಗ್ ಸೆಟಪ್‌ ಬಿದ್ದು ಕೆಲವು ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳು ಗಾಯಗೊಂಡಿದ್ದಾರೆ. ವೇದಿಕೆಯಲ್ಲಿ ಯಶ್ ಅವರು ಮಾತನಾಡುತ್ತಿದ್ದಾಗಲೇ ಈ ಘಟನೆ ನಡೆದಿದೆ. ಕೂಡಲೇ ಅವರು ಪ್ರತಿಕ್ರಿಯಿಸಿದ್ದಾರೆ.

ಆಗಸ್ಟ್ 26ರಂದು ‘ಟಾಕ್ಸಿಕ್’ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಈ ಹಿನ್ನೆಲೆಯಲ್ಲಿ ಪ್ರೀ-ರಿಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳನ್ನು ಉದ್ದೇಶಿಸಿ ಯಶ್ ಅವರು ವೇದಿಕೆ ಮೇಲೆ ಮಾತನಾಡುತ್ತಿದ್ದ ಸಂದರ್ಭದಲ್ಲೇ ಈ ಅನಾಹುತ ಸಂಭವಿಸಿದೆ. ಸ್ಟೇಜ್ ಬಳಿ ನೆರೆದಿದ್ದ ವಿದ್ಯಾರ್ಥಿಗಳ ಮೇಲೆ ಬೃಹತ್ ಸೌಂಡ್‌ಬಾಕ್ಸ್ ಹಾಗೂ ಫ್ಲಡ್‌ಲೈಟ್ ಕಂಬ ಕುಸಿದುಬಿದ್ದಿದೆ.

ಪ್ರಜ್ಞೆ ತಪ್ಪಿ ಬಿದ್ದ ವಿದ್ಯಾರ್ಥಿನಿ:

ಈ ವೇಳೆ ಕೆಲವು ಯುವಕ-ಯುವತಿಯರಿಗೆ ಗಾಯಗಳಾಗಿದೆ. ಈ ಘಟನೆಯಿಂದ ಓರ್ವ ವಿದ್ಯಾರ್ಥಿನಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ತಕ್ಷಣವೇ ಆಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅವರ ಆರೋಗ್ಯದ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.

ಕಳವಳ ವ್ಯಕ್ತಪಡಿಸಿದ ಯಶ್:

ಈ ಘಟನೆ ಸಂಭವಿಸುತ್ತಿದ್ದಂತೆಯೇ ವೇದಿಕೆ ಮೇಲಿದ್ದ ಯಶ್ ಅವರು ತಕ್ಷಣ ತಮ್ಮ ಮಾತು ನಿಲ್ಲಿಸಿ ಕಳವಳ ವ್ಯಕ್ತಪಡಿಸಿದರು. ಗಾಯಗೊಂಡ ವಿದ್ಯಾರ್ಥಿಗಳ ಕ್ಷೇಮ ವಿಚಾರಿಸಿದ ಅವರು, ಪ್ರೇಕ್ಷಕರು ಶಾಂತವಾಗಿ ಕುಳಿತುಕೊಳ್ಳುವಂತೆ ಮತ್ತು ಜಾಗರೂಕರಾಗಿರುವಂತೆ ಮನವಿ ಮಾಡಿದರು. ಆಯೋಜಕರಿಂದ ಘಟನೆಯ ವಿವರ ಪಡೆದುಕೊಂಡು ಸುರಕ್ಷತೆಗೆ ಆದ್ಯತೆ ನೀಡುವಂತೆ ಸೂಚಿಸಿದರು ಎನ್ನಲಾಗಿದೆ.

ಇದನ್ನೂ ಓದಿ: ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ

ಭದ್ರತಾ ವೈಫಲ್ಯದ ಬಗ್ಗೆ ಪ್ರಶ್ನೆ:

ವೇದಿಕೆಯ ಹತ್ತಿರಕ್ಕೆ ಬರಲು ವಿದ್ಯಾರ್ಥಿಗಳು ಸೌಂಡ್‌ಬಾಕ್ಸ್ ಹಾಗೂ ಇತರ ಉಪಕರಣಗಳನ್ನು ಕಟ್ಟಿಹಾಕಿದ್ದ ಕಂಬಗಳನ್ನು ಹತ್ತಲು ಯತ್ನಿಸಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ಘಟನೆಗೂ ಮುನ್ನವೇ ತಳ್ಳಾಟ ನಿಯಂತ್ರಿಸಲು ಜನರನ್ನು ಪೊಲೀಸರು ಹಿಂದೆ ಸರಿಯುವಂತೆ ಎಚ್ಚರಿಸಿದ್ದರು. ಆದರೆ ಮಲ್ಲಾರೆಡ್ಡಿ ಯೂನಿವರ್ಸಿಟಿಯಲ್ಲಿ ಅತಿಯಾದ ಜನಸ್ತೋಮ ಸೇರಿದ್ದರಿಂದ ಜನಸಂದಣಿ ನಿಯಂತ್ರಣ ಕಷ್ಟಕರವಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us