
‘ನಂದ ಗೋಕುಲ’ದಲ್ಲಿ ಕೇಶವ ಹೆಸರಿನ ಪಾತ್ರ ಮಾಡುತ್ತಿದ್ದ ಯಶ್ವಂತ್ ಕುಮಾರ್ ಅವರು ಈಗ ಧಾರಾವಾಹಿಯಿಂದ ಹೊರ ಬಂದಿದ್ದಾರೆ. ಈ ಬಗ್ಗೆ ಪೋಸ್ಟ್ ಹಾಕಿ ವಿಷಯ ಅಧಿಕೃತ ಮಾಡಿದ್ದಾರೆ. ಈ ಬಗ್ಗೆ ಸಾಕಷ್ಟು ಪ್ರಶ್ನೆ ಎದ್ದಿದೆ. ‘ಅವರೇನಾದ್ರೂ ಬಿಗ್ ಬಾಸ್ಗೆ ಹೋಗ್ತಾರಾ’ ಎಂದು ಕೆಲವರು ಕೇಳಿದರೆ ಇನ್ನೂ ಕೆಲವರು, ‘ತಂಡದ ಜೊತೆ ಕಿರಿಕ್ ಆಯಿತೇ’ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ, ಅವರು ಸೀರಿಯಲ್ ಬಿಡೋಕೆ ಬೇರೆಯದೇ ಕಾರಣ ಇದೆ. ಈ ಬಗ್ಗೆ ಅವರು ‘ಟಿವಿ9 ಕನ್ನಡ ಡಿಜಿಟಲ್’ ಜೊತೆ ಮಾತನಾಡಿದ್ದಾರೆ.
‘ನಂದ ಗೋಕುಲ ಧಾರಾವಾಹಿ 350 ಎಪಿಸೋಡ್ಗಳನ್ನು ಪೂರೈಸಿದೆ. ನಂದನ ಮಗ ಕೇಶವನಾಗಿ ಕಾಣಿಸಿಕೊಂಡಿದ್ದಾರೆ ಯಶ್ವಂತ್. ಮೀನಾ ಹಾಗೂ ಕೇಶವನ ಕೆಮಿಸ್ಟ್ರಿ ಎಲ್ಲರಿಗೂ ಇಷ್ಟ ಆಗಿದೆ. ಇಷ್ಟು ದಿನ ಧಾರಾವಾಹಿ ಮೂಲಕ ಎಲ್ಲರನ್ನೂ ನಗಿಸಿ, ಅಳಿಸಿದ್ದ ಕೇಶವನ ಪಾತ್ರಕ್ಕೆ ಯಶ್ವಂತ್ ಗುಡ್ಬೈ ಹೇಳಿದ್ದಾರೆ. ಇದರ ಹಿಂದಿನ ಕಾರಣವನ್ನು ಅವರು ವಿವರಿಸಿದ್ದಾರೆ.
‘ನಂದ ಗೋಕುಲ ಧಾರಾವಾಹಿಯಲ್ಲಿ ಎಲ್ಲರಿಗೂ ಇಷ್ಟವಾದ ಪಾತ್ರಗಳಲ್ಲಿ ಕೇಶವನ ಪಾತ್ರ ಕೂಡ ಒಂದು. ಈ ಧಾರಾವಾಹಿಯಿಂದ ಹೊರ ಬರೋದು ದೊಡ್ಡ ನಿರ್ಧಾರ. ಇಷ್ಟು ದೊಡ್ಡ ನಿರ್ಧಾರವನ್ನು ಏಕಾಏಕಿ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ. ಸಾಕಷ್ಟು ಯೋಚಿಸಿದ ಬಳಿಕವೇ ಈ ನಿರ್ಧಾರ ಮಾಡಿದ್ದೇನೆ’ ಎಂದು ಅವರು ನೇರ ಮಾತುಗಳಲ್ಲಿ ಹೇಳಿದ್ದಾರೆ.
ಹಾಗಾದರೆ, ಧಾರಾವಾಹಿ ಬಿಡುವಷ್ಟು ದೊಡ್ಡ ನಿರ್ಧಾರ ತೆಗೆದುಕೊಳ್ಳಲು ಕಾರಣವಾದ ಅಂಶ ಯಾವುದು? ಸಿನಿಮಾ. ಈಗಾಗಲೇ 15ಕ್ಕೂ ಹೆಚ್ಚು ಧಾರಾವಾಹಿ ಹಾಗೂ ಕೆಲವು ಸಿನಿಮಾಗಳಲ್ಲಿ ನಟಿಸಿರೋ ಯಶ್ವಂತ್ ಅವರು ಈಗ ‘ಸಮುದ್ರ ಮಂಥನ’ ಹೆಸರಿನ ಸಿನಿಮಾ ಮಾಡಿದ್ದಾರೆ. ಈ ಚಿತ್ರವನ್ನು ಜನರಿಗೆ ತಲುಪಿಸೋ ದೊಡ್ಡ ಜವಾಬ್ದಾರಿ ಅವರಿಗೆ ಇರುವುದರಿಂದ ಧಾರಾವಾಹಿ ತೊರೆಯುವ ಅನಿವಾರ್ಯತೆ ಬಂದಿದೆ.
‘ನಾನು ಸಮುದ್ರ ಮಂಥನ ಹೆಸರಿನ ಚಿತ್ರಕ್ಕೆ ಈ ಹಿಂದೆಯೇ ಸಹಿ ಹಾಕಿದ್ದೆ. ಕಳೆದ ವರ್ಷ ಸಮುದ್ರ ಮಂಥನ, ಅಮೃತಧಾರೆ ಹಾಗೂ ನಂದ ಗೋಕುಲ ಶೂಟ್ನ ಒಟ್ಟೊಟ್ಟಿಗೆ ಮಾಡಿದ್ದೆ. ಈಗ ಸಮುದ್ರ ಮಂಥನ ಸಿನಿಮಾ ರಿಲೀಸ್ ಹಂತಕ್ಕೆ ಬಂದಿದೆ. ಇದನ್ನು ಹೆಚ್ಚು ಜನರಿಗೆ ತಲುಪಿಸಬೇಕಿದೆ. ಹೀಗಾಗಿ, ರಾಜ್ಯದ ಮೂಲೆ ಮೂಲೆಗೆ ತೆರಳಿ ಪ್ರಚಾರ ಮಾಡಬೇಕಿದೆ. ಈ ವೇಳೆ ಡೇಟ್ಸ್ ಕ್ಲ್ಯಾಶ್ ಆಗುತ್ತದೆ. ಧಾರಾವಾಹಿಯಲ್ಲಿ ಮುಂದುವರಿದರೆ ಸಿನಿಮಾ ಪ್ರಚಾರಕ್ಕೆ ನೂರರಷ್ಟು ಕೊಡಲು ಸಾಧ್ಯವಾಗೋದಿಲ್ಲ. ಹೀಗಾಗಿ, ನಿರ್ಧಾರವನ್ನು ವಾಹಿನಿಯವರಿಗೆ ಹೇಳಿದೆ. ಅವರು ನನ್ನನ್ನು ಅರ್ಥೈಸಿಕೊಂಡರು. ಪರಸ್ಪರ ಗೌರವದಿಂದಲೇ ಧಾರಾವಾಹಿಯಿಂದ ಹೊರ ಬಂದಿದ್ದೇನೆ’ ಎಂದು ಅವರು ಹೇಳಿದ್ದಾರೆ.
ವಿಶೇಷ ಎಂದರೆ ಈವರೆಗೆ ಹಲವು ಧಾರಾವಾಹಿಗಳಲ್ಲಿ ಯಶ್ವಂತ್ ಅವರು ನಟಿಸಿದ್ದರೂ ಅಭಿಮಾನಿಗಳು ತೋರಿದ ಪ್ರೀತಿ ಹಾಗೂ ಬೆಂಬಲಕ್ಕೆ ನೇರವಾಗಿ ಧನ್ಯವಾದ ಹೇಳಲು ಸಾಧ್ಯವಾಗಿರಲಿಲ್ಲ. ಈಗ ‘ಸಮುದ್ರ ಮಂಥನ’ ಪ್ರಚಾರದ ಸಂದರ್ಭದಲ್ಲಿ ಪ್ರತಿ ಜಿಲ್ಲೆಗೂ ತೆರಳಿ ಅಭಿಮಾನಿಗಳನ್ನು ಭೇಟಿ ಮಾಡಿ ಧನ್ಯವಾದ ತಿಳಿಸುವ ಪ್ಲ್ಯಾನ್ನಲ್ಲಿದ್ದಾರೆ. ಹಿಂದೆಂದೂ ನೋಡಿರದ ಪಾತ್ರದಲ್ಲಿ ಅವರು ಪ್ರೇಕ್ಷಕರ ಎದುರು ಬರುತ್ತಿದ್ದಾರೆ.
ಇದನ್ನೂ ಓದಿ: ‘ನಂದಗೋಕುಲ’ ಧಾರಾವಾಹಿಗೆ ವಿದಾಯ ಹೇಳಿದ ಯಶ್ವಂತ್ ಕುಮಾರ್; ಕಾರಣ ಹೇಳಿದ ಕೇಶವ
‘ನಂದ ಗೋಕುಲ’ ಧಾರಾವಾಹಿಯಿಂದ ಹೊರ ಬರುವಾಗ ಇಡೀ ತಂಡದವರು ಕಣ್ಣೀರು ಹಾಕಿದರಂತೆ. ಇದು ತಂಡದ ಜೊತೆಗಿನ ಅವರ ಬಾಂಧವ್ಯಕ್ಕೆ ಸಾಕ್ಷಿ. ಆದರೆ, ಒಂದು ದೊಡ್ಡ ಗುರಿ ತಲುಪುವ ಉದ್ದೇಶದಿಂದ ಅವರು ಇಷ್ಟು ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕಾಯಿತು. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ‘ಸಮುದ್ರ ಮಂಥನ’ ಸಿನಿಮಾ ಮೂಡಿಬರುತ್ತಿದೆ. ಶೀಘ್ರವೇ ತಂಡದವರು ಟ್ರೇಲರ್ ಲಾಂಚ್ ಮಾಡಿ ಆ ಬಳಿಕ ಜನರ ಎದುರು ಸಿನಿಮಾನ ತರಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:05 pm, Sat, 29 August 26