‘ನಂದಗೋಕುಲ’ ಧಾರಾವಾಹಿಗೆ ವಿದಾಯ ಹೇಳಿದ ಯಶ್ವಂತ್ ಕುಮಾರ್; ಕಾರಣ ಹೇಳಿದ ಕೇಶವ
ಕಲರ್ಸ್ ಕನ್ನಡದ ‘ನಂದಗೋಕುಲ’ ಧಾರಾವಾಹಿಯ ಕೇಶವ ಪಾತ್ರಧಾರಿ ಯಶ್ವಂತ್ ಕುಮಾರ್ ಸೀರಿಯಲ್ನಿಂದ ಹೊರಬಂದಿದ್ದಾರೆ. 350 ಸಂಚಿಕೆಗಳ ಪಯಣ ಮುಗಿಸಿ ಭಾವುಕ ಪೋಸ್ಟ್ ಹಂಚಿಕೊಂಡಿರುವ ಅವರು 'ಸಮುದ್ರ ಮಂಥನ' ಸಿನಿಮಾ ಮೂಲಕ ಬೆಳ್ಳಿಪರದೆಗೆ ಹೆಜ್ಜೆ ಇಡುತ್ತಿದ್ದಾರೆ. ಇದೀಗ ಪವನ್ ಕುಮಾರ್ ಹೊಸ ಕೇಶವನಾಗಿ ಎಂಟ್ರಿ ನೀಡಿದ್ದಾರೆ.

ಮುಖ್ಯಾಂಶಗಳು
- ‘ನಂದಗೋಕುಲ’ ಸೀರಿಯಲ್ಗೆ ಕೇಶವ ವಿದಾಯ
- ಸೋಶಿಯಲ್ ಮೀಡಿಯಾದಲ್ಲಿ ಯಶ್ವಂತ್ ಭಾವುಕ ಪೋಸ್ಟ್
- ಕಿರುತೆರೆಯಿಂದ ಬೆಳ್ಳಿಪರದೆಗೆ ನೆಗೆತ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ‘ನಂದಗೋಕುಲ’ ಧಾರಾವಾಹಿಯಲ್ಲಿ ‘ಕೇಶವ’ ಎಂಬ ಮುಖ್ಯ ಪಾತ್ರದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ನಟ ಯಶ್ವಂತ್ ಕುಮಾರ್ ಎಸ್ಎಸ್ ಅವರು ದಿಢೀರನೆ ಧಾರಾವಾಹಿಯಿಂದ ಹೊರಬಿದ್ದಿದ್ದಾರೆ. ಧಾರಾವಾಹಿ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಕೇಶವ ಪಾತ್ರವೂ ಸಕತ್ ಗಮನ ಸೆಳೆಯುತ್ತಿದ್ದ ಸಂದರ್ಭದಲ್ಲೇ ನಟ ಯಶ್ವಂತ್ ಅವರು ಸೀರಿಯಲ್ಗೆ ವಿದಾಯ ಹೇಳಿರುವುದು ಅಭಿಮಾನಿಗಳಿಗೆ ತುಸು ಬೇಸರ ತಂದಿದೆ. ಇನ್ನು ಈ ಜಾಗಕ್ಕೆ ‘ಕಿನ್ನರಿ’ ಹಾಗೂ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಖ್ಯಾತಿಯ ನಟ ಪವನ್ ಕುಮಾರ್ ಹೊಸ ಕೇಶವನಾಗಿ ಎಂಟ್ರಿ ನೀಡುತ್ತಿದ್ದಾರೆ. ಅವರಿಗೂ ಇಷ್ಟೇ ಪ್ರೀತಿ ಸಿಗಲಿ ಎಂದು ಧಾರಾವಾಹಿತಂಡದವರು ನಿರೀಕ್ಷಿಸುತ್ತಿದ್ದಾರೆ. ಈ ಪಾತ್ರವನ್ನು ಹೇಗೆ ಸ್ವೀಕರಿಸಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಸುದೀರ್ಘ ಭಾವುಕ ಪತ್ರವನ್ನು ಹಂಚಿಕೊಂಡಿರುವ ಯಶ್ವಂತ್, ಪೋಸ್ಟ್ನ ಪ್ರತಿಯೊಂದು ಅಂಶವನ್ನು ಪ್ರೇಕ್ಷಕರೊಂದಿಗೆ ಹಂಚಿಕೊಂಡಿದ್ದಾರೆ:
View this post on Instagram
ಪೋಸ್ಟ್ನ ಸಂಪೂರ್ಣ ಸಾರಾಂಶ:
- ಕೇಶವ ಪಾತ್ರಕ್ಕೆ ವಿದಾಯ: ‘ನನ್ನ ಪಯಣದ ಒಂದು ವಿಶೇಷ ಅಧ್ಯಾಯ ಮುಗಿಯುತ್ತಿದೆ. ನನ್ನ ಹೃದಯಕ್ಕೆ ಅತ್ಯಂತ ಹತ್ತಿರವಾಗಿದ್ದ ‘ಕೇಶವ’ ಪಾತ್ರ ಹಾಗೂ ‘ನಂದಗೋಕುಲ’ ಧಾರಾವಾಹಿಯೊಂದಿಗಿನ ಪಯಣಕ್ಕೆ ವಿದಾಯ ಹೇಳುತ್ತಿದ್ದೇನೆ’ ಎಂದಿದ್ದಾರೆ.
- 350 ಸಂಚಿಕೆಗಳ ಪ್ರೀತಿ: ಸುಮಾರು 350 ಸಂಚಿಕೆಗಳ ಕಾಲ ಪ್ರೇಕ್ಷಕರು ಕೇಶವನನ್ನು ತಮ್ಮ ಮನೆಯ ಮಗನಂತೆ ಸ್ವೀಕರಿಸಿ, ಬೆಂಬಲಿಸಿ, ಊಹಿಸಲಾಗದಷ್ಟು ಪ್ರೀತಿ ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಪ್ರೀತಿಯನ್ನು ಶಾಶ್ವತವಾಗಿ ಕೊಂಡೊಯ್ಯುವುದಾಗಿ ತಿಳಿಸಿದ್ದಾರೆ.
- ಧಾರಾವಾಹಿ ತೊರೆಯಲು ಕಾರಣ: ನಂದಗೋಕುಲ ಬಿಡುವುದು ಸುಲಭದ ನಿರ್ಧಾರವಾಗಿರಲಿಲ್ಲ. ಹಲವು ಚಿಂತನಶೀಲ ಚರ್ಚೆಗಳು, ಪಾತ್ರದ ಬೆಳವಣಿಗೆ ಹಾಗೂ ಕೆಲವು ವೃತ್ತಿಪರ ಅಂಶಗಳನ್ನು ಪರಿಗಣಿಸಿದ ನಂತರ ಮುಂದಿನ ಅಧ್ಯಾಯಕ್ಕೆ ಹೆಜ್ಜೆ ಇಡಲು ಇದು ಸರಿಯಾದ ಸಮಯ ಎಂದು ಭಾವಿಸಿ ನಿರ್ಧಾರ ತೆಗೆದುಕೊಂಡಿದ್ದಾಗಿ ಹೇಳಿದ್ದಾರೆ.
- ತಂಡಕ್ಕೆ ಧನ್ಯವಾದ: ಜೊತೆಗೆ ನಿಂತ ಸಹನಟರು, ನಿರ್ದೇಶಕರು, ಬರಹಗಾರರು, ತಂತ್ರಜ್ಞರು ಹಾಗೂ ಇಡೀ ನಂದಗೋಕುಲ ತಂಡಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಪ್ರೇಕ್ಷಕರು ನೀಡಿದ ಮೆಚ್ಚುಗೆ ಮತ್ತು ಪ್ರತಿಯೊಂದು ಟೀಕೆಯೂ ತಮ್ಮ ಬೆಳವಣಿಗೆಯ ಭಾಗವಾಗಿದೆ ಎಂದಿದ್ದಾರೆ.
- ಅಭಿಮಾನಿಗಳಿಗೆ ಕೃತಜ್ಞತೆ: ಕೇಶವನನ್ನು ಪ್ರೀತಿಸಿ, ಅರ್ಥಮಾಡಿಕೊಂಡು ತಮ್ಮ ಜೀವನದ ಭಾಗವಾಗಿಸಿಕೊಂಡಿದ್ದಕ್ಕಾಗಿ ಅಭಿಮಾನಿಗಳಿಗೆ ವಿಶೇಷವಾಗಿ ಧನ್ಯವಾದ ತಿಳಿಸಿದ್ದಾರೆ.
- ಹೊಸ ಬೆಳ್ಳಿಪರದೆ ಪಯಣ: ‘ಇದು ನಂದಗೋಕುಲ ಪಯಣದ ಅಂತ್ಯವಿರಬಹುದು, ಆದರೆ ನನ್ನ ಹೊಸ ಪಯಣದ ಶುರು’ ಎಂದಿರುವ ಯಶ್ವಿಂತ್, ತಾವು ಮುಂಬರುವ ‘ಸಮುದ್ರ ಮಂಥನ’ ಎಂಬ ಸಿನಿಮಾದ ಮೂಲಕ ಬೆಳ್ಳಿಪರದೆಗೆ ಹೆಜ್ಜೆ ಇಡುತ್ತಿರುವುದಾಗಿ ಪ್ರಕಟಿಸಿದ್ದಾರೆ. ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ಭೇಟಿಯಾಗಲು ತುದಿಗಾಲಲ್ಲಿ ನಿಂತಿರುವುದಾಗಿ ಹೇಳಿದ್ದಾರೆ.
- ಭಾವುಕ ಸಾಲುಗಳು: ‘ನಿನ್ನೆಯವರೆಗೂ ನಾನು ಕೇಶವನಾಗಿದ್ದೆ, ನಾಳೆ ಪರದೆಯ ಮೇಲೆ ಇನ್ಯಾರೋ, ಆದರೆ ಕೊನೆವರೆಗೂ ನಾನು ನಿಮ್ಮ ಯಶ್ವಂತ್’ ಎಂದು ಬರೆಯುವ ಮೂಲಕ ತಮ್ಮ ಪತ್ರವನ್ನು ಮುಗಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:19 am, Sat, 29 August 26




